ಬೆಂಗಳೂರು : ನಗರದಲ್ಲಿ ಅಭಿವೃದ್ಧಿ ಹಾಗೂ ಕೊರೊನಾ ಕಾರಣದಿಂದಾಗಿ ನಡೆಯುತ್ತಿರುವ ಅನಾಹುತಗಳು, ಗುಂಡಿ ಬಿದ್ದ ರಸ್ತೆಗಳನ್ನು ಮುಚ್ಚಲು ಟಾಸ್ಕ್ ಫೋರ್ಸ್ ರಚನೆ ಮಾಡಲಾಗಿದೆ ಎಂದು ಬಿಬಿಎಂಪಿ ಆಯುಕ್ತ ಗೌರವ್ ಗುಪ್ತಾ ತಿಳಿಸಿದ್ದಾರೆ.
ರಸ್ತೆ ಗುಂಡಿಗಳನ್ನು ಮುಚ್ಚಲು ಟಾಸ್ಕ್ ಫೋರ್ಸ್ ರಚನೆ ವಿಚಾರಕ್ಕೆ ಸಂಬಂಧಿಸಿದಂತೆ ಮುಖ್ಯ ಆಯುಕ್ತ ಗೌರವ್ ಗುಪ್ತಾ ಪ್ರತಿಕ್ರಿಯಿಸಿ, ಆಯಾ ವಾರ್ಡ್ ಮಟ್ಟದಲ್ಲಿ ತಂಡ ರಚನೆ ಮಾಡಲಾಗಿದೆ. ಅಧಿಕಾರಿಗಳು ಯಾವುದೇ ಕಾರಣ ಕೊಡುವಂತಿಲ್ಲ. ಶೀಘ್ರವೇ ರಸ್ತೆ ಗುಂಡಿಗಳನ್ನು ಮುಚ್ಚುತ್ತೇವೆ. ಅಧಿಕಾರಿಗಳಿಗೆ ಕಾಲದ ಮಿತಿ ಕೊಟ್ಟಿಲ್ಲ. ಮಳೆಯಿದೆ, ಬಿಡುವು ಸಮಯದಲ್ಲಿ ಕೆಲಸ ಮಾಡಿ ಮುಗಿಸಲು ಹೇಳಿದ್ದೇನೆ ಎಂದರು.
ನಂತರ ಚಿಕ್ಕಬಾಣವಾರದ ಕಾಲೇಜಿನಲ್ಲಿ ಸೋಂಕು ಸ್ಫೋಟ ವಿಚಾರದ ಬಗ್ಗೆ ಮಾತನಾಡಿ, ಇತ್ತೀಚೆಗೆ ಒಂದೇ ಕಡೆ ಹೆಚ್ಚೆಚ್ಚು ಸೋಂಕು ಪತ್ತೆಯಾಗುತ್ತಿದೆ. ಇದರ ಬಗ್ಗೆ ಪಾಲಿಕೆ ತೀವ್ರಗತಿಯಲ್ಲಿ ಕೆಲಸ ಮಾಡುತ್ತಿದೆ. ಇನ್ನು, ಲಸಿಕೆ ಕಾರ್ಯಕ್ರಮ ಯಶಸ್ವಿಯಾಗಿ ನಡೆಯುತ್ತಿದೆ. ಸುರಕ್ಷತೆ ದೃಷ್ಟಿಯಿಂದ ಕೊರೊನಾ ಹೆಚ್ಚುತ್ತಿರುವ ಜಾಗಗಳನ್ನೆಲ್ಲಾ ಸೀಲ್ಡೌನ್ ಮಾಡಲಾಗುತ್ತಿದೆ ಎಂದರು.
ಇನ್ನು, ಸಾರ್ವಜನಿಕವಾಗಿ ಗಣೇಶ ಚತುರ್ಥಿ ಆಚರಣೆ ವಿಚಾರವಾಗಿ ಮಾತನಾಡಿದ ಅವರು, ಈ ಬಗ್ಗೆ ಸರ್ಕಾರವೇ ಆದೇಶ ಹೊರಡಿಸಲಿದೆ. ಪಾಲಿಕೆಗೆ ಅನುಮತಿ ಕೊಡಿ ಅಂತಾ ಈಗಾಗಲೇ ಹಲವು ಮನವಿಗಳು ಬಂದಿದೆ. ಆದರಿದು ಸೂಕ್ಷ್ಮ ವಿಚಾರವಾಗಿರುವ ಹಿನ್ನೆಲೆ ಸರ್ಕಾರವೇ ತಮ್ಮ ನಿರ್ಧಾರ ಪ್ರಕಟ ಮಾಡಲಿದೆ ಎಂದರು.