ETV Bharat / state

ಪ್ರಜಾತಂತ್ರ ವ್ಯವಸ್ಥೆ ಬುಡಮೇಲು ಮಾಡಿದ ಕೇಂದ್ರಕ್ಕೆ ಕಾಲವೇ ಉತ್ತರಿಸಲಿದೆ: ಬಿ.ಕೆ ಹರಿಪ್ರಸಾದ್

author img

By

Published : Dec 8, 2022, 7:40 PM IST

b-k-hariprasad-tweet-against-bjp
ಪ್ರಜಾತಂತ್ರ ವ್ಯವಸ್ಥೆ ಬುಡಮೇಲು ಮಾಡಿದ ಕೇಂದ್ರಕ್ಕೆ ಕಾಲವೇ ಉತ್ತರಿಸಲಿದೆ: ಹರಿಪ್ರಸಾದ್

ಗುಜರಾತ್ ಚುನಾವಣೆಯ ಫಲಿತಾಂಶ ಮಾತ್ರವೇ ಕರ್ನಾಟಕದ ಮೇಲೆ ಪ್ರಭಾವ ಬೀರುವುದಾದರೆ ಹಿಮಾಚಲ ಪ್ರದೇಶದ ಫಲಿತಾಂಶ ಯಾಕೆ ಪ್ರಭಾವ ಬೀರುವುದಿಲ್ಲ ಎಂದು ಬಿ.ಕೆ ಹರಿಪ್ರಸಾದ್ ಪ್ರಶ್ನಿಸಿದ್ದಾರೆ.

ಬೆಂಗಳೂರು: ದೇಶದ ಪ್ರಜಾತಂತ್ರ ವ್ಯವಸ್ಥೆಯನ್ನು ಬುಡಮೇಲು ಮಾಡಿರುವ ಕೇಂದ್ರ ಸರ್ಕಾರಕ್ಕೆ ಕಾಲವೇ ಉತ್ತರ ನೀಡಲಿದೆ ಎಂದು ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಬಿ.ಕೆ ಹರಿಪ್ರಸಾದ್ ಹೇಳಿದ್ದಾರೆ. ಈ ಸಂಬಂಧ ಟ್ವೀಟ್ ಮಾಡಿರುವ ಅವರು, ಚುನಾವಣಾ ಪ್ರಜಾಪ್ರಭುತ್ವ ಪ್ರಕ್ರಿಯೆಯಲ್ಲಿ ಪ್ರಜೆಗಳ ತೀರ್ಪಿಗೆ ತಲೆಬಾಗಬೇಕಿದೆ. ಗುಜರಾತ್ ಚುನಾವಣೆಯಲ್ಲಿ ನಮ್ಮ ಪಕ್ಷದ ನಿರೀಕ್ಷೆ ಹುಸಿಯಾಗಿದೆ. ಜನತೆ ಮಾಡಿದ ನಿರ್ಧಾರವನ್ನು ಸ್ವಾಗತಿಸುತ್ತೇವೆ. ಸಾಲು ಸಾಲು ಅಕ್ರಮಗಳು, ಆಡಳಿತ ಯಂತ್ರದ ದುರ್ಬಳಕೆ, ಪ್ರಜಾತಂತ್ರ ವ್ಯವಸ್ಥೆಯನ್ನೇ ಬುಡಮೇಲು ಮಾಡಿದ ಕೇಂದ್ರದ ಪ್ರಭುತ್ವಕ್ಕೆ ಕಾಲ ಉತ್ತರಿಸಲಿದೆ ಎಂದಿದ್ದಾರೆ.

ಪ್ರತಿಪಕ್ಷಗಳ ಹಾಲಿ ಶಾಸಕ ಅಭ್ಯರ್ಥಿಗಳ ಮೇಲೆಯೇ ಬಿಜೆಪಿ ಪಕ್ಷದ ಕಾರ್ಯಕರ್ತರು ನಡೆಸಿದ ಹಲ್ಲೆ, ನಾಮಪತ್ರ ಸಲ್ಲಿಸುವಾಗ ಅಭ್ಯರ್ಥಿಯನ್ನೇ ಅಪಹರಣ ಮಾಡಿದ ಘಟನೆ, ಪ್ರಧಾನಿ ಮೋದಿಯವರ ಚುನಾವಣೆ ಯಾತ್ರೆಗೆ ಸಹಕಾರ, ಚುನಾವಣೆ ದಿನವೂ ರೋಡ್ ಶೋ ಸೇರಿದಂತೆ ಅನೇಕ ಘಟನೆಗಳಿಗೆ ಚುನಾವಣೆ ಆಯೋಗ ತೋರಿದ ಅಸಹಾಯಕತೆಯ ಸಾಕ್ಷಿಯೇ ಗುಜರಾತಿನ ಫಲಿತಾಂಶ.

ಕಾಂಗ್ರೆಸ್ ಪಕ್ಷ ಚುನಾವಣೆಯಲ್ಲಿ ಸೋತಿದೆ, ಸತ್ತಿಲ್ಲ. ನಮ್ಮ ಪಕ್ಷದ ಬೆನ್ನೆಲುಬಾಗಿರುವ ಕಾರ್ಯಕರ್ತರ ಜೊತೆಗೆ ಪಕ್ಷ ಬಲವಾಗಿ ನಿಲ್ಲಲಿದೆ. ಕೋಮು ಅಜೆಂಡಾಗಳು,ಮತೀಯ ಭಾವನೆಗಳು, ಹುಸಿ ಭರವಸೆಗಳು, ಕಾರ್ಯಕರ್ತರ ಕುಟುಂಬಗಳಿಗೆ ಹುಟ್ಟಿಸಿದ ಭಯದ ವಾತಾವರಣವನ್ನೂ ಮೀರಿಯೂ ಗುಜರಾತ್ ಜನತೆ ನಮಗೆ ಮತ ನೀಡಿದ್ದಾರೆ. ಅವರೆಲ್ಲರಿಗೂ ನನ್ನ ಕೃತಜ್ಞತೆಗಳು ಎಂದಿದ್ದಾರೆ.

ಬಿದ್ದರೂ ಮೀಸೆ ಮಣ್ಣಾಗಿಲ್ಲ ಎಂಬಂತೆ ಪ್ರಧಾನಿ ಮೋದಿಯ ವರ್ಚಸ್ಸಿನ ಬಗ್ಗೆ ಗೋದಿ ಮೀಡಿಯಾ ಭಜನೆ ಮಾಡುತ್ತಿದೆ. ಹದಿನೈದು ವರ್ಷದ ದೆಹಲಿಯ ಪಾಲಿಕೆ ಬಿಜೆಪಿ ಕೈ ತಪ್ಪಿದೆ. ಅಧಿಕಾರದಲ್ಲಿದ್ದರೂ ಹಿಮಾಚಲ ಪ್ರದೇಶದಲ್ಲಿ ಸೋತು ಸುಣ್ಣವಾಗಿದ್ದರೂ ಪ್ರಧಾನಿಯ ಸುನಾಮಿ ಯಾವ ದಿಕ್ಕಿನಲ್ಲಿ ಎದ್ದಿರುವುದನ್ನು ದುರ್ಭೀನ್​ ಹಾಕಿ ನೋಡಬೇಕಿದೆ.

ಗುಜರಾತ್ ಚುನಾವಣೆಯ ಫಲಿತಾಂಶ ಮಾತ್ರವೇ ಕರ್ನಾಟಕದ ಮೇಲೆ ಪ್ರಭಾವ ಬೀರುವುದಾದರೆ ಹಿಮಾಚಲ ಪ್ರದೇಶದ ಫಲಿತಾಂಶ ಯಾಕೆ ಪ್ರಭಾವ ಬೀರುವುದಿಲ್ಲ? ರಾಷ್ಟ್ರ ರಾಜಧಾನಿಯಲ್ಲೇ ಮತದಾರರು ಮಣ್ಣು‌ ಮುಕ್ಕಿಸಿರುವುದು ಅಧಿಕಾರದಲ್ಲಿದ್ದ ಯಾವ ಪಕ್ಷಕ್ಕೆ? ಪ್ರಧಾನಿಗಳ ಸುನಾಮಿ, ಬಿರುಗಾಳಿ ದೆಹಲಿ ಮತ್ತು ಹಿಮಾಚಲದ ಜನರತ್ತ ಬೀಸಲಿಲ್ವಾ? ಎಂದು ಪ್ರಶ್ನಿಸಿದ್ದಾರೆ.

ಕರ್ನಾಟಕದ ಭ್ರಷ್ಟ ಬಿಜೆಪಿ ಸರ್ಕಾರವನ್ನು ಕಿತ್ತೊಗೆಯಲು ಜನತೆ ನಿರ್ಧಾರ ಮಾಡಿಯಾಗಿದೆ. ಅದರಿಂದ ಪಾರಾಗಲು ಕರ್ನಾಟದ ಬಿಜೆಪಿ ಗುಜರಾತ್ ಫಲಿತಾಂಶದ ಬಿಲದಲ್ಲಿ ನುಸುಳುತ್ತಿದೆ. ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರಲು ಜನ ತೀರ್ಮಾನಿಸಿದ್ದಾರೆ. ಚುನಾವಣೆಯಿಂದ ಪಾಠ ಕಲಿತಿದ್ದೇವೆ.ನಾವು ಮತ್ತೆ ಅದುಮಿದಷ್ಟು ಎದ್ದು ಬರುತ್ತೇವೆ ಎಂದಿದ್ದಾರೆ.

ಇದನ್ನೂ ಓದಿ:ರಾವಣ, ಭಸ್ಮಾಸುರ ಎಂದು ಟೀಕಿಸಿದ ಪ್ರತಿಪಕ್ಷಗಳಿಗೆ ಗುಜರಾತ್ ಜನತೆಯಿಂದ ಪಾಠ: ಕಟೀಲ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.