ETV Bharat / state

ಕೆಎಸ್​ಡಿಎಲ್ ನಿಗಮದ ಅಧಿಕಾರಿಗಳ ವಿರುದ್ಧ ಒಂದು ತಿಂಗಳ ಹಿಂದೆಯೇ ದೂರು ದಾಖಲು: ತನಿಖೆ ಚುರುಕು

author img

By

Published : Mar 4, 2023, 12:11 PM IST

Updated : Mar 4, 2023, 12:30 PM IST

ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಪುತ್ರನ ಬಂಧನ ಪ್ರಕರಣಕ್ಕೆ ಸಂಬಂಧಿಸಿದಂತೆ ಲೋಕಾಯುಕ್ತ ಅಧಿಕಾರಿಗಳು ತನಿಖೆ ಚುರುಕುಗೊಳಿಸಿದ್ದಾರೆ.

ksdl_complaint photo credit- KSDL website
ದೂರು ದಾಖಲು ಫೋಟೋ ಕೃಪೆ(ಕೆಎಸ್​ಡಿಎಲ್​ ವೆಬ್​ಸೈಟ್​)

ಬೆಂಗಳೂರು : ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಗಮ (ಕೆಎಸ್​ಡಿಎಲ್) ಬ್ರಹ್ಮಾಂಡ ಭ್ರಷ್ಟಾಚಾರದ ಕೂಪವಾಗಿದೆಯಾ? ಎಂಬ ಅನುಮಾನ ಉಂಟಾಗಿದೆ. ಇದಕ್ಕೆ ಕಾರಣ ನಿಗಮದ ಅಧ್ಯಕ್ಷ, ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಅವರ ಪುತ್ರನ ಬಂಧನಕ್ಕೂ ಮುನ್ನವೇ ಲೋಕಾಯುಕ್ತದಲ್ಲಿ ದಾಖಲಾಗಿದ್ದ ದೂರು. ಟೆಂಡರ್ ವಿಚಾರದಲ್ಲಿ ಭಾರಿ ಪ್ರಮಾಣದ ಗೋಲ್ಮಾಲ್ ನಡೆದಿರುವುದು ಮಾತ್ರವಲ್ಲದೆ, ಕಿಕ್ ಬ್ಯಾಕ್ ಪಡೆಯಲಾಗಿದೆ ಎಂದು ನಿಗಮದ ಆರು ಜನ ಅಧಿಕಾರಿಗಳ ವಿರುದ್ಧ ಕೆಎಸ್​ಡಿಎಲ್ ನೌಕರರ ಸಂಘದ ಅಧ್ಯಕ್ಷ ಶಿವಶಂಕರ್ ಅವರು ಕಳೆದ ತಿಂಗಳ ಫೆ 21 ರಂದು ದೂರು ನೀಡಿದ್ದರು.

ಹೌದು, ಕೆಎಸ್​ಡಿಎಲ್​ಗೆ ಸಂಬಂಧಿಸಿದ ಟೆಂಡರ್ ವಿಚಾರದಲ್ಲಿ ಸರಿಯಾಗಿ ಕಾರ್ಯ ನಿರ್ವಹಿಸದ ಅಧಿಕಾರಿಗಳ ವಿರುದ್ಧ ನೌಕರರ ಸಂಘದ ಅಧ್ಯಕ್ಷ ಶಿವಶಂಕರ್ ಎಂಬುವರು ಒಂದು ತಿಂಗಳ ಹಿಂದೆಯೇ ದೂರು ನೀಡಿರುವುದು ಬಯಲಾಗಿದೆ. ಗುತ್ತಿಗೆದಾರರು ಕೇಳಿದ ಮೊತ್ತಕ್ಕೆ ಟೆಂಡರ್​ಗೆ ಅನುಮೋದನೆ ನೀಡಿ, ಕೋಟಿ ಕೋಟಿ ರೂ. ಹಣ ಕಿಕ್ ಬ್ಯಾಕ್ ಪಡೆದಿದ್ದಾರೆ ಎಂದು ಕೆಎಸ್​ಡಿಎಲ್ ವ್ಯವಸ್ಥಾಪಕ ನಿರ್ದೇಶಕ ಸೇರಿದಂತೆ 6 ಜನ ಅಧಿಕಾರಿಗಳ ವಿರುದ್ಧ ಶಿವಶಂಕರ್ ದೂರು ನೀಡಿದ್ದಾರೆ.

complaint copy
ದೂರು ಪ್ರತಿ

ಲೋಕಾಯುಕ್ತದಿಂದ ತನಿಖೆ ಚುರುಕು: ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಹಾಗೂ ಅವರ ಪುತ್ರ ಪ್ರಶಾಂತ್ ಮನೆ ಮೇಲೆ ದಾಳಿ ನಡೆಸಿದ್ದ ಲೋಕಾಯುಕ್ತ ಅಧಿಕಾರಿಗಳು ತನಿಖೆ ಚುರುಕುಗೊಳಿಸಿದ್ದಾರೆ. ದಾಳಿ ವೇಳೆ ವಶಕ್ಕೆ ಪಡೆದಿರುವ ಕಡತಗಳ ಪರಿಶೀಲನೆ ಆರಂಭಿಸಿದ್ದು, ವಿರೂಪಾಕ್ಷಪ್ಪ ಕೆಎಸ್​ಡಿಎಲ್ ಅಧ್ಯಕ್ಷರಾಗಿದ್ದ ಅವಧಿಯಲ್ಲಿನ ಎಲ್ಲಾ ಟೆಂಡರ್ ಕಡತಗಳ ಪರಿಶೀಲನೆ ಆರಂಭವಾಗಿದೆ.

ಇದನ್ನೂ ಓದಿ: ಲಂಚ ಸ್ವೀಕಾರ ಪ್ರಕರಣದ ಬಗ್ಗೆ ಸಮಗ್ರ ತನಿಖೆ, ಯಾರನ್ನೂ ರಕ್ಷಿಸುವ ಪ್ರಶ್ನೆ ಇಲ್ಲ: ಬಿಎಸ್​​ವೈ

ನಿಗಮದಲ್ಲಿ ಭಾರಿ ಭ್ರಷ್ಟಾಚಾರ ನಡೆದಿದೆ ಎಂದು ನೌಕರರ ಸಂಘ ಸಹ ಆರೋಪಿಸಿರುವ ಹಿನ್ನೆಲೆಯಲ್ಲಿ ಕಳೆದ ಮೂರು ವರ್ಷಗಳ‌ ಕಡತಗಳ ಪರಿಶೀಲನೆಗೆ ಲೋಕಾಯುಕ್ತ ಅಧಿಕಾರಿಗಳು ಮುಂದಾಗಿದ್ದಾರೆ. ಈಗಾಗಲೇ ತಂದೆ ಹಾಗೂ ಮಗನ ಬ್ಯಾಂಕ್ ಖಾತೆಯ ಮಾಹಿತಿ ಕಲೆ ಹಾಕಿರುವ ಲೋಕಾಯುಕ್ತ ಟೀಂ ಮಾಡಾಳ್ ಪ್ರಶಾಂತ್​ರ ಈ ಹಿಂದಿನ ಸರ್ವಿಸ್ ಹಿಸ್ಟರಿ ಸಹ ಪಡೆದುಕೊಂಡಿದೆ. ಅಲ್ಲದೇ, ಶಾಸಕರು ಹಾಗೂ ಅವರ ಪುತ್ರನ ಆದಾಯದ ಮೂಲ, ಖರ್ಚಿನ ಮಾಹಿತಿ, ಸದ್ಯ ವಶಕ್ಕೆ ಪಡೆದಿರುವ 8 ಕೋಟಿ ಹಣ ಯಾರಿಂದ ಪಡೆದಿದ್ದಾರೆ ಎಂಬ ಮಾಹಿತಿಯನ್ನ ಕಲೆ ಹಾಕುತ್ತಿದೆ.

ಇದನ್ನೂ ಓದಿ: ಶಾಸಕ ಮಾಡಾಳ್ ವಿರೂಪಾಕ್ಷಪ್ಪ ನಿವಾಸದಲ್ಲಿ ಲೋಕಾಯುಕ್ತರಿಂದ ಲಕ್ಷಾಂತರ ನಗದು, ಚಿನ್ನಾಭರಣ ಜಪ್ತಿ

ಲೋಕಾಯುಕ್ತದಲ್ಲೇ ಉನ್ನತ ಅಧಿಕಾರಿಯಾಗಲು ಹರಸಾಹಸ ಮಾಡಿದ್ದ ಪ್ರಶಾಂತ್: ಈ ಹಿಂದೆ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ದಲ್ಲಿ ಹಣಕಾಸು ಸಲಹೆಗಾರನಾಗಿ ಕೆಲಸ ಮಾಡಿದ್ದ ಪ್ರಶಾಂತ್ ಮಾಡಾಳ್, ನಂತರ ಮರು ಸ್ಥಾಪನೆಯಾದ ಲೋಕಾಯುಕ್ತದಲ್ಲಿ ಅದೇ ಹುದ್ದೆ ಪಡೆಯಲು ಯತ್ನಿಸಿದ್ದರು ಎಂಬ ಮಾಹಿತಿ ಸಹ ತನಿಖೆ ವೇಳೆ ಬಹಿರಂಗವಾಗಿದೆ. ಹಿಂದೆ ಎಸಿಬಿಯಲ್ಲಿದ್ದ ಹಿರಿಯ ಅಧಿಕಾರಿಗಳ ಜೊತೆ ನಿಕಟ ಸಂಪರ್ಕದಲ್ಲಿದ್ದ ಪ್ರಶಾಂತ್ ಮಾಡಾಳ್, ಬೆಂಗಳೂರು ಜಲಮಂಡಳಿಯಲ್ಲಿ ಇದ್ದುಕೊಂಡೇ ಲೋಕಾಯುಕ್ತದಲ್ಲಿ ಹುದ್ದೆ ಪಡೆಯಲು ಹರಸಾಹಸ ನಡೆಸಿದ್ದರು ಎಂಬುದು ತನಿಖೆಯಿಂದ ಬಯಲಾಗಿದೆ.

Last Updated :Mar 4, 2023, 12:30 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.