ದೊಡ್ಡಬಳ್ಳಾಪುರ: ಬೆಳೆ ಉಳಿಸಿಕೊಳ್ಳಲು 12 ಬೋರ್ವೆಲ್ ಕೊರೆಯಿಸಿ ನೀರು ಸಿಗದೆ 40 ಲಕ್ಷ ರೂ. ನಷ್ಟ ಅನುಭವಿಸಿದ ರೈತನೋರ್ವ, ಛಲ ಬಿಡದೆ ತನ್ನ ತೋಟದಲ್ಲಿ 6 ಕೋಟಿ ಲೀ. ಮಳೆ ನೀರು ಸಂಗ್ರಹದ ಕೃಷಿ ಹೊಂಡ ನಿರ್ಮಿಸಿ ದಾಖಲೆ ಬರೆದಿದ್ದಾನೆ.
ತಾಲೂಕಿನ ದೊಡ್ಡ ಹೆಜ್ಜಾಜಿ ಗ್ರಾಮದ ರೈತ ರವಿಕುಮಾರ್, 8 ಎಕರೆ ವಿಸ್ತೀರ್ಣದ ಪಾಲಿಹೌಸ್ನಲ್ಲಿ ಗುಲಾಬಿ ಬೆಳೆಯುತ್ತಿದ್ದಾರೆ. ಗುಲಾಬಿ ವಿದೇಶ ಸೇರಿದಂತೆ ದೇಶದ ವಿವಿಧ ರಾಜ್ಯಗಳಿಗೆ ರಫ್ತಾಗುತ್ತಿದೆ. ಇದರಿಂದ ಲಕ್ಷಾಂತರ ರೂ. ಆದಾಯದ ಜೊತೆಗೆ ಸ್ಥಳೀಯ 150ಕ್ಕೂ ಹೆಚ್ಚು ಜನರಿಗೆ ಕೆಲಸ ಕೊಟ್ಟಿದ್ದಾರೆ. 20 ಎಕರೆ ಜಮೀನು ಹೊಂದಿರುವ ಇವರು 8 ಎಕರೆ ವಿಸ್ತೀರ್ಣದಲ್ಲಿ ಪಾಲಿಹೌಸ್ ನಿರ್ಮಾಣ ಮಾಡಿ 12 ವಿಧದ ಗುಲಾಬಿ ಹೂಗಳನ್ನು ಬೆಳೆಯುತ್ತಿದ್ದಾರೆ.
ಹೂವಿನ ಬೆಳೆಗಾಗಿ 12 ಬೋರ್ ಕೊರೆಸಲಾಗಿದ್ದು, 1,400 ಅಡಿ ಕೊರೆದ್ರೂ ನೀರು ಸಿಗದೆ 40 ಲಕ್ಷ ಹಣ ಕಳೆದುಕೊಂಡಿದ್ದಾರೆ. ಹೂವನ್ನು ಕಾಪಾಡಿಕೊಳ್ಳಲು ನೀರಿನ ಮೂಲ ಹುಡುಕುವ ಪ್ರಯತ್ನದಲ್ಲಿದ್ದವರಿಗೆ, ಕೃಷಿಹೊಂಡದಲ್ಲಿ ವ್ಯರ್ಥವಾಗಿ ಹೋಗುತ್ತಿದ್ದ ಮಳೆನೀರನ್ನು ಸಂಗ್ರಹಿಸಿ ಬೆಳೆಯನ್ನು ಕಾಪಾಡಿಕೊಳ್ಳುವ ಉಪಾಯ ಹೊಳೆಯಿತು. ಒಂದೂವರೆ ತಿಂಗಳ ಶ್ರಮದಿಂದ 10 ಮೀಟರ್ ಆಳದ ಬೃಹತ್ ಹೊಂಡ ನಿರ್ಮಿಸಿದರು. ಇದಕ್ಕಾಗಿ 32 ಲಕ್ಷ ರೂ. ಹಣ ಖರ್ಚು ಮಾಡಲಾಗಿದೆ.
ಪಾಲಿಹೌಸ್ ಮೇಲೆ ಬಿದ್ದ ಮಳೆ ನೀರು ಪೈಪ್ಗಳ ಮೂಲಕ ಚರಂಡಿ ಸೇರುತ್ತೆ, ಅಲ್ಲಿಂದ ಕಾಲುವೆಯ ಮೂಲಕ ಹೊಂಡಕ್ಕೆ ಹರಿದು ಬರುತ್ತೆ. ಇದರಲ್ಲಿ 6 ಕೋಟಿ ಲೀ. ನೀರು ಸಂಗ್ರಹವಾಗುತ್ತೆ. ಒಮ್ಮೆ ಹೊಂಡ ಭರ್ತಿಯಾದರೆ ಒಂದು ವರ್ಷದವರೆಗೂ ಬಳಕೆ ಮಾಡಬಹುದು. ಬೋರ್ವೆಲ್ ನೀರು ಹೆಚ್ಚಿನ ಲವಣಾಂಶ ಇರುವುದರಿಂದ ಬೆಳೆಗಳಿಗೆ ಸೂಕ್ತವಲ್ಲ ಆದರೆ ಮಳೆನೀರು ಪರಿಶುದ್ಧವಾಗಿದ್ದು ಹೂವಿನ ಬೆಳೆ ಚೆನ್ನಾಗಿ ಬರುತ್ತೆ ಎಂದು ರವಿಕುಮಾರ್ ಹೇಳುತ್ತಾರೆ.
ಇದನ್ನೂ ಓದಿ: ಕೋತಿಗಳಿಂದ ತಪ್ಪಿಸಿಕೊಳ್ಳಲು ಹೋಗಿ ಹಾಸ್ಟೆಲ್ ಕಟ್ಟಡದ ಮೇಲಿಂದ ಬಿದ್ದು ವಿದ್ಯಾರ್ಥಿನಿ ಸಾವು!