ETV Bharat / state

ಬೆಳಗಾವಿ ಅಧಿವೇಶನದಲ್ಲಿ ಮತಾಂತರ ನಿಷೇಧ ಕಾಯ್ದೆ ಜಾರಿಗೆ ತರಲೇಬೇಕು: ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ

author img

By

Published : Dec 12, 2021, 12:44 PM IST

Shobha Karandlaje
ಶೋಭಾ ಕರಂದ್ಲಾಜೆ

ಜನರನ್ನು ಅವರ ಬಡತನ, ಅನಾರೋಗ್ಯವನ್ನು ಮುಂದಿಟ್ಟುಕೊಂಡು ಮತಾಂತರಗೊಳಿಸುವುದು ನಡೆಯುತ್ತಿದೆ. ಇದರ ಬಗ್ಗೆ ಸರ್ಕಾರ ಗಂಭೀರವಾಗಿ ಯೋಚನೆ ಮಾಡಬೇಕು ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಆಗ್ರಹಿಸಿದ್ದಾರೆ.

ಬಾಗಲಕೋಟೆ: ನಾಳೆಯಿಂದ ನಡೆಯಲಿರುವ ಬೆಳಗಾವಿ ಅಧಿವೇಶನದಲ್ಲಿ ಮತಾಂತರ ನಿಷೇಧ ಕಾಯ್ದೆ ಜಾರಿಗೆ ತರಲೇಬೇಕು ಎಂದು ಕೇಂದ್ರ ಕೃಷಿ ಸಚಿವೆ ಶೋಭಾ ಕರಂದ್ಲಾಜೆ ಹೇಳಿದರು.

ಮತಾಂತರ ನಿಷೇಧ ಕಾಯ್ದೆ ಜಾರಿ ವಿಚಾರ: ಸಚಿವೆ ಶೋಭಾ ಕರಂದ್ಲಾಜೆ ಪ್ರತಿಕ್ರಿಯೆ

ನಗರದಲ್ಲಿ ಮಾತನಾಡಿದ ಅವರು, ಮತಾಂತರ ಕಾಯ್ದೆ ವಿಚಾರದಲ್ಲಿ ಸರ್ಕಾರ ಒಂದು ನಿರ್ಧಾರ ತೆಗೆದುಕೊಳ್ಳಲೇಬೇಕು. ಮಂಗಳೂರು ಆತ್ಮಹತ್ಯೆ, ಲವ್ ಜಿಹಾದ್​​ ಪ್ರಕರಣಗಳ ನಂತರ, ದೇಶದಲ್ಲಿ ಮತಾಂತರ ಕಾಯ್ದೆ ಬಗ್ಗೆ ಹೆಚ್ಚು ಚರ್ಚೆಯಾಗುತ್ತಿದೆ. ದೊಡ್ಡ ಪ್ರಮಾಣದಲ್ಲಿ ಎಲ್ಲ ಜಾತಿ, ವರ್ಗದ ಜನರನ್ನು ಅವರ ಬಡತನ, ಅನಾರೋಗ್ಯವನ್ನು ಮುಂದಿಟ್ಟುಕೊಂಡು ಮತಾಂತರಗೊಳಿಸುವುದು ನಡೆಯುತ್ತಿದೆ. ಇದರ ಬಗ್ಗೆ ಸರ್ಕಾರ ಗಂಭೀರವಾಗಿ ಯೋಚನೆ ಮಾಡಬೇಕು ಎಂದು ಆಗ್ರಹಿಸಿದರು.

ಸಾಮಾಜಿಕ ಅಸಮತೋಲನೆ ನಿರ್ಮಾಣ ಆಗಬಾರದು. ನಮ್ಮ ಬಡತನ, ಅಸಹಾಯಕತೆಯನ್ನು ದುರುಪಯೋಗ ಪಡಿಸಿಕೊಳ್ಳಲು ಯಾರಿಗೂ ಅವಕಾಶ ಕೊಡಬಾರದು. ನಾವು ಕೂಡ ಸಮಾಜದ ಎಲ್ಲ ವರ್ಗದ ಜನರ ಅಭಿವೃದ್ಧಿ ಬಗ್ಗೆ ಯೋಚನೆ ಮಾಡಬೇಕು. ಯಾವ ಕಾರಣಕ್ಕೆ ಧರ್ಮವನ್ನು ಬಿಟ್ಟು ಹೋಗುತ್ತಿದ್ದಾರೆ?. ಇದಕ್ಕೆ ಜಾತಿ ಕಾರಣವೋ ಅಥವಾ ಆರೋಗ್ಯ, ಆರ್ಥಿಕ ಪರಿಸ್ಥಿತಿ ಕಾರಣವೋ ಎಂಬುದು ತಿಳಿಯಬೇಕಾಗಿದೆ ಎಂದರು.

ಮತಾಂತರ ನಿಷೇಧ ಕಾಯ್ದೆಗೆ ಕಾಂಗ್ರೆಸ್ ವಿರೋಧ ವಿಚಾರವಾಗಿ ಪ್ರತಿಕ್ರಿಯಿಸಿ, ನಾನು ಹೆಚ್ಚಾಗಿ ಮಾತನಾಡುವುದಿಲ್ಲ. ಚುನಾವಣೆ ನೀತಿ ಸಂಹಿತೆ ಮತ್ತು ನಾನು ಕೇಂದ್ರ ಸಚಿವೆ ಆಗಿದ್ದೇನೆ. ವಿವಾದಾತ್ಮಕ ಹೇಳಿಕೆ ನೀಡುವುದಿಲ್ಲ. ನಾನೇ ಕೆಲವು ಕೇಸ್​​ಗಳಿಗೆ ಅಟೆಂಡ್ ಆಗಿದ್ದೇನೆ. ಪಶ್ಚಿಮ ಬಂಗಾಳ, ಅಸ್ಸೋಂ, ಬಾಂಗ್ಲಾದೇಶದಿಂದ ಬರುವಂತ ಒಂದು ಸಮಾಜದ ಮಕ್ಕಳನ್ನು ಹೇಗೆ ಇಲ್ಲಿ ರಕ್ಷಣೆ ಮಾಡಲಾಗುತ್ತದೆ. ಅವರಿಗೆ ವೋಟರ್ ಐಡಿ ಕೊಟ್ಟು ಮುಂದೆ ಅವರನ್ನು ಮತದಾರನಾಗಿ ಮಾಡಲಾಗುತ್ತದೆ. ಈ ಬಗ್ಗೆ ನಾವು ತನಿಖೆ ಮಾಡಬೇಕು ಎಂದು ಹೇಳಿದರು.

ಸಿಡಿಎಸ್ ರಾವತ್ ಸಾವಿನ ಸಂಭ್ರಮಾಚರಣೆ ವಿಚಾರವಾಗಿ ಮಾತನಾಡಿ, ಕೆಲವು ವಿಕೃತ ಮನಸ್ಸುಗಳು ಸಂಭ್ರಮಿಸಿದ್ದಾರೆ. ಅವರು ದೇಶದ್ರೋಹಿಗಳು. ಕೇಂದ್ರ ಗೃಹ ಇಲಾಖೆ ಮತ್ತು ರಾಜ್ಯ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಬೇಕು. ಇಂಥವರಿಗೆ ಕಠಿಣ ಶಿಕ್ಷೆ ವಿಧಿಸಬೇಕು ಎಂದರು.

ಈ ವಿಚಾರದಲ್ಲಿ ರಾಜಕೀಯವಿಲ್ಲ. ಕೆಲವರು ದೇಶಕ್ಕಾಗಿ ವಿರೋಧ ಮಾಡುವವರು ವಿರೋಧಿಗಳಾಗಿಯೇ ಇರ್ತಾರೆ. ಅಂತವರಿಗೆ ಪಕ್ಷ, ಪಂಗಡ, ಜಾತಿ ಮತ್ತು ಪಂಥ ಇಲ್ಲ. ಅಂಥವರ ಮೇಲೆ ಕಠಿಣ ಕ್ರಮ ಕೈಗೊಳ್ಳಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಬದ್ಧವಾಗಿವೆ ಎಂದು ಸಚಿವೆ ಕರಂದ್ಲಾಜೆ ತಿಳಿಸಿದರು.

ಇದನ್ನೂ ಓದಿ: ಮತಾಂತರ ನಿಷೇಧ ಕಾಯ್ದೆ ಜಾರಿಗೊಳಿಸದಿದ್ದರೆ ಸಿಎಂಗೆ ಘೇರಾವ್​ : ಮುತಾಲಿಕ್ ಎಚ್ಚರಿಕೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.