ETV Bharat / sports

"ಆ ಫೋಟೋದಲ್ಲಿ ಯಾವುದೇ ಅಗೌರವ ಇಲ್ಲ" ವಿಶ್ವಕಪ್ ಮೇಲೆ ಕಾಲಿಟ್ಟ ನಡೆ ಸಮರ್ಥಿಸಿಕೊಂಡ ಮಿಚೆಲ್​ ಮಾರ್ಷ್

author img

By ETV Bharat Karnataka Team

Published : Dec 1, 2023, 8:09 PM IST

ವಿಶ್ವಕಪ್​ ಮೇಲೆ ಕಾಲಿಟ್ಟು ತೆಗೆಸಿಕೊಂಡ ಫೋಟೋದ ಬಗ್ಗೆ ಮಿಚೆಲ್​ ಮಾರ್ಷ್​ ಪ್ರತಿಕ್ರಿಯಿಸಿದ್ದು, ಅದರಲ್ಲಿ ಯಾವುದೇ ಅಗೌರವ ಇಲ್ಲ ಎಂದು ಸಮರ್ಥಿಸಿಕೊಂಡಿದ್ದಾರೆ.

Mitchell Marsh
Mitchell Marsh

ಪರ್ತ್ (ಆಸ್ಟ್ರೇಲಿಯಾ): 6ನೇ ಬಾರಿಗೆ ವಿಶ್ವಕಪ್​ ಗೆದ್ದ ನಂತರ ಆಸ್ಟ್ರೇಲಿಯಾ ಆಟಗಾರರ ಕೆಲ ನಡೆಗಳು ಚರ್ಚೆಗೆ ಕಾರಣವಾಯಿತು. ಪದಕ ಸ್ವೀಕರಿಸುವ ವೇಳೆ ಕೆಲ ಆಟಗಾರರು ವೇದಿಕೆಯಲ್ಲಿದ್ದ ಗಣ್ಯರ ಕೈಕುಲುಕದೇ ಅಗೌರವದಿಂದ ನಡೆದುಕೊಂಡಿದ್ದರು. ಇದಲ್ಲದೇ ಮಿಚೆಲ್​ ಮಾರ್ಷ್​​ ವಿಶ್ವಕಪ್​ ಟ್ರೋಫಿಯ ಮೇಲೆಯೇ ಕಾಲಿರಿಸಿ ದರ್ಪ ಮೆರೆದಿದ್ದರು. ಈಗ ಖಾಸಗಿ ಮಾಧ್ಯಮ ಒಂದಕ್ಕೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಮಾರ್ಷ್​ ಅವರ ನಡೆಯನ್ನು ಸಮರ್ಥಿಸಿಕೊಂಡಿದ್ದಾರೆ.

13ನೇ ಏಕದಿನ ವಿಶ್ವಕಪ್​ ಆವೃತ್ತಿಯಲ್ಲಿ ಭಾರತದ ವಿರುದ್ಧ ಗೆಲುವು ಸಾಧಿಸುವ ಮೂಲಕ ಆರನೇ ಬಾರಿಗೆ ಪ್ರಶಸ್ತಿಯನ್ನು ಆಸ್ಟ್ರೇಲಿಯಾ ಗೆದ್ದುಕೊಂಡಿತು. ನಂತರ ಡ್ರೆಸ್ಸಿಂಗ್​ ರೂಮ್​ನಲ್ಲಿ ನಡೆದ ಸಂಭ್ರಮಾಚರಣೆಯ ಫೋಟೋಗಳನ್ನು ಆಸೀಸ್​ ತಂಡದ ನಾಯಕ ಪ್ಯಾಟ್​ ಕಮಿನ್ಸ್​ ತಮ್ಮ ಸಮಾಜಿಕ ಜಾತಲಾಣವಾದ ಇನ್​ಸ್ಟಾಗ್ರಾಮ್ ಸ್ಟೋರಿಯಲ್ಲಿ ಹಂಚಿಕೊಂಡಿದ್ದರು. ಅದರಲ್ಲಿ ವಿಶ್ವಕಪ್​ ಟ್ರೋಫಿಯ ಮೇಲೆ ಮಾರ್ಷ್ ಕಾಲಿಟ್ಟು ಕುಳಿತ ಫೋಟೋ ವೈರಲ್​ ಆಗಿದ್ದಲ್ಲದೇ, ಕ್ರಿಕೆಟ್​ ಅಭಿಮಾನಿಗಳ ತೀವ್ರ ಟೀಕೆಗೆ ಕಾರಣವಾಯಿತು.

ಭಾರತ ವಿಶ್ವಕಪ್​ ತಂಡದಲ್ಲಿದ್ದ ವೇಗಿ ಮೊಹಮ್ಮದ್​ ಶಮಿ "ವಿಶ್ವದ ಎಲ್ಲ ತಂಡಗಳು ಹೋರಾಡುವ ಟ್ರೋಫಿ, ನಿಮ್ಮ ತಲೆಯ ಮೇಲೆ ಎತ್ತಲು ಬಯಸುವ ಟ್ರೋಫಿ, ಆ ಟ್ರೋಫಿಯ ಮೇಲೆ ಕಾಲು ಇಡುವುದು ನನಗೆ ಸಂತೋಷವನ್ನು ನೀಡಲಿಲ್ಲ" ಎಂದು ಹೇಳಿದ್ದರು.

"ಆ ಫೋಟೋದಲ್ಲಿ ನಿಸ್ಸಂಶಯವಾಗಿ ಯಾವುದೇ ಅಗೌರವ ಇರಲಿಲ್ಲ. ನಾನು ಅದರ ಬಗ್ಗೆ ಹೆಚ್ಚು ಯೋಚಿಸಿಲ್ಲ, ಅದು ಚರ್ಚೆ ಆಗುತ್ತಿದೆ ಎಂದು ಎಲ್ಲರೂ ಹೇಳುತ್ತಿದ್ದರೂ ನಾನು ಸಾಮಾಜಿಕ ಮಾಧ್ಯಮದಲ್ಲಿ ಬಹಳಷ್ಟು ನೋಡಿಲ್ಲ. ಅದರಲ್ಲಿ ಏನೂ ಇಲ್ಲ" ಎಂದು ಆ ಘಟನೆ ಬಗ್ಗೆ ಹೇಳಿಕೊಂಡಿದ್ದಾರೆ.

ಸಂಭ್ರಮಾಚರಣೆಗೆ ಆಟಗಾರರು ಅರ್ಹರು: ವಿಶ್ವಕಪ್​ ಮುಗಿದ ನಾಲ್ಕು ದಿನದ ಅಂತರದಲ್ಲಿ ಆಸ್ಟ್ರೇಲಿಯಾ ಮತ್ತು ಭಾರತದ ನಡುವೆ 5 ಪಂದ್ಯಗಳ ಟಿ20 ಸರಣಿಯನ್ನು ಆಯೋಜಿಸಲಾಗಿತ್ತು. ಈ ಬಗ್ಗೆಯೂ ಮಾತನಾಡಿದ ಮಾರ್ಷ್ ಜಾಗತಿಕ ಈವೆಂಟ್ ಆಡಿದ ಸ್ವಲ್ಪ ಸಮಯದ ನಂತರ ದ್ವಿಪಕ್ಷೀಯ ಪಂದ್ಯಾವಳಿಯನ್ನು ನಿಗದಿಪಡಿಸಬೇಕು ಎಂದಿದ್ದಾರೆ. ಏಕೆಂದರೆ ಆಟಗಾರರು ಗೆಲುವನ್ನು ಸಂಭ್ರಮಿಸಲು ಅವಕಾಶ ಮಾಡಿಕೊಡಬೇಕು ಎಂದಿದ್ದಾರೆ.

​​"ಗೆದ್ದ ನಂತರವೂ ಅಲ್ಲೇ ಉಳಿಯ ಬೇಕಾದದ್ದು ಬೇಸರದ ಸಂಗತಿ, ಭಾರತದ ವಿರುದ್ಧ ಆಡುತ್ತಿರುವುದರಿಂದ ಈ ಸರಣಿಗೆ ಮಹತ್ವ ನೀಡಲೇ ಬೇಕು. ಹೀಗಾಗಿ ಹೆಚ್ಚಿನ ಆಟಗಾರರು ಅಲ್ಲೇ ಉಳಿಯ ಬೇಕಾಯಿತು. ಕ್ರಿಕೆಟ್​ ಆಸ್ಟ್ರೇಲಿಯಾದ ನಿರ್ಧಾರವನ್ನು ಆಟಗಾರರು ಕಡೆಗಣಿಸುವಂತಿಲ್ಲ. ಆದರೆ, ಅದರಲ್ಲಿ ಮಾನವೀಯ ಅಂಶವೂ ಇದೆ, ಹುಡುಗರು ಈಗಷ್ಟೇ ವಿಶ್ವಕಪ್ ಗೆದ್ದಿದ್ದಾರೆ. ಸ್ವಲ್ಪ ಸಮಯದವರೆಗೆ ಆಚರಿಸಲು ಮತ್ತು ಅವರ ಕುಟುಂಬಗಳಿಗೆ ಮನೆಗೆ ಹೋಗಲು ಅರ್ಹರಾಗಿದ್ದಾರೆ. ಹೀಗಾಗಿ ಮತ್ತೆ ದೊಡ್ಡ ಪಂದ್ಯಾವಳಿಗಳ ನಂತರ ಅಂತರದಲ್ಲಿ ಈ ಸರಣಿಗಳನ್ನು ನಡೆಸ ಬೇಕು ಎಂದು ಭಾವಿಸುತ್ತೇನೆ" ಎಂದು ಹೇಳಿದರು.

ಸ್ಟೀವ್ ಸ್ಮಿತ್, ಆಡಮ್ ಝಂಪಾ, ಗ್ಲೆನ್ ಮ್ಯಾಕ್ಸ್‌ವೆಲ್, ಮಾರ್ಕಸ್ ಸ್ಟೊಯಿನಿಸ್, ಜೋಶ್ ಇಂಗ್ಲಿಸ್ ಮತ್ತು ಸೀನ್ ಅಬಾಟ್ ಮೊದಲ ಮೂರು ಟಿ20 ಪಂದ್ಯಗಳಲ್ಲಿ ಭಾಗವಹಿಸಿದ ನಂತರ ತವರಿಗೆ ಮರಳಿದ್ದಾರೆ. ಆಸ್ಟ್ರೇಲಿಯಾ ಸರಣಿಯಲ್ಲಿ 2-1 ಹಿನ್ನಡೆಯಲ್ಲಿದೆ ಮತ್ತು ಟ್ರಾವಿಸ್ ಹೆಡ್ ಭಾರತದಲ್ಲಿ ಉಳಿದಿರುವ ವಿಶ್ವಕಪ್ ವಿಜೇತ ತಂಡದ ಏಕೈಕ ಸದಸ್ಯರಾಗಿದ್ದಾರೆ.

ಇದನ್ನೂ ಓದಿ: ಟಾಸ್​ ಗೆದ್ದ ಆಸೀಸ್​ ಬೌಲಿಂಗ್​ ಆಯ್ಕೆ, ಸರಣಿ ಗೆಲುವಿನತ್ತ ಸೂರ್ಯ ಚಿತ್ತ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.