ETV Bharat / entertainment

ಐಹೊಳೆ ಚಿತ್ರತಂಡಕ್ಕೆ ಶುಭ ಹಾರೈಸಿದ ಹಂಸಲೇಖ ಮತ್ತು ನಾಗತಿಹಳ್ಳಿ ಚಂದ್ರಶೇಖರ್

author img

By

Published : Nov 24, 2022, 1:31 PM IST

Hamsalekha and Nagatihalli Chandrasekhar wished the team of Aihole
ಐಹೊಳೆ ಚಿತ್ರತಂಡಕ್ಕೆ ಶುಭ ಹಾರೈಸಿದ ಹಂಸಲೇಖ ಮತ್ತು ನಾಗತಿಹಳ್ಳಿ ಚಂದ್ರಶೇಖರ್

ಐಹೊಳೆ ಚಿತ್ರದ ಹಾಡುಗಳನ್ನು ಮೆಚ್ಚಿಕೊಂಡಿರುವ ನಾದಬ್ರಹ್ಮ ಹಂಸಲೇಖ ಹಾಗೂ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ಚಿತ್ರತಂಡಕ್ಕೆ ಶುಭ ಹಾರೈಸಿದರು.

ಕನ್ನಡ ಚಿತ್ರರಂಗದಲ್ಲಿ ಹೊಸ ಪ್ರಯೋಗಾತ್ಮಕ ಸಿನಿಮಾಗಳು ನಿರ್ಮಾಣ ಆಗುತ್ತಿವೆ. ಇದೀಗ ರವೀಂದ್ರನಾಥ ಸಿರಿವರ ನಿರ್ದೇಶನದಲ್ಲಿ ಚಾಲುಕ್ಯರ ಪ್ರಥಮ ರಾಜಧಾನಿ ಎಂದೇ ಖ್ಯಾತವಾಗಿರುವ ಐಹೊಳೆಯ ಚರಿತ್ರೆಯನ್ನು ಸಾರುವ 'ಐಹೊಳೆ' ಎಂಬ ಚಿತ್ರ ತೆರೆ ಮೇಲೆ ಬರಲು ತಯಾರಾಗಿದೆ. ಬಹುತೇಕ ಚಿತ್ರೀಕರಣ ಮುಗಿಸಿರೋ ಚಿತ್ರತಂಡದಿಂದ ಹಾಡುಗಳು, ಟ್ರೇಲರ್ ಹಾಗೂ ಪೋಸ್ಟರ್ ಬಿಡುಗಡೆ ಸಮಾರಂಭ ಇತ್ತೀಚಿಗೆ ಜರುಗಿತು.

ನಾದಬ್ರಹ್ಮ ಹಂಸಲೇಖ, ಲತಾ ಹಂಸಲೇಖ, ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ಚಿತ್ರದ ಟ್ರೇಲರ್​ನ್ನು ಬಿಡುಗಡೆ ಮಾಡುವ ಮೂಲಕ ಮೆಚ್ಚುಗೆ ವ್ಯಕ್ತಪಡಿಸಿದರು. ಪ್ರವಾಸೋದ್ಯಮ ಇಲಾಖೆಯ ಅಧಿಕಾರಿ ಮನೋಜ್ ಕುಮಾರ್, ಮಾಜಿ ಶಾಸಕ ಲಕ್ಷ್ಮೀನಾರಾಯಣ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಚಿತ್ರದ ಕುರಿತು ಮಾತನಾಡಿದ ರವೀಂದ್ರನಾಥ ಸಿರಿ ಕರ್ನಾಟಕದ ಭವ್ಯ ಪರಂಪರೆಯನ್ನು ಬಿಂಬಿಸುವ, ಚಾಲುಕ್ಯರ ಮೊದಲ ರಾಜಧಾನಿ ಎಂದೇ ಖ್ಯಾತವಾಗಿರುವ ಸ್ಥಳ "ಐಹೊಳೆ". ಈ ಚಾರಿತ್ರಿಕ ಸ್ಥಳದ ಕುರಿತಾದ ಹಾಗೂ ಪ್ರವಾಸೋದ್ಯಮಕ್ಕೆ ಒತ್ತು ಕೊಡುವಂತಹ "ಐಹೊಳೆ" ಸಿನಿಮಾ ತೆರೆಗೆ ಬರಲು ಸಿದ್ಧವಾಗಿದ್ದು, ಸುಂದರವಾಗಿ ಮೂಡಿಬಂದಿದೆ. ನಾನೇ ಚಿತ್ರವನ್ನು ನಿರ್ದೇಶನ‌ ಮಾಡಿದ್ದು, ರೇವಂತ್ ಮಾಳಿಗೆ, ಪ್ರಗತಿ ಸುರ್ವೆ, ಬಿರಾದಾರ್, ಡ್ರಾಮ ಜ್ಯೂನಿಯರ್ ಮಂಜು ಸೇರಿದಂತೆ ಅನೇಕ ಕಲಾವಿದರು ಈ ಚಿತ್ರದಲ್ಲಿ ನಟಿಸಿದ್ದಾರೆ. ಪ್ರವಾಸೋದ್ಯಮದ ಕುರಿತಾಗಿರುವ ಈ ಚಿತ್ರದ ಬಗ್ಗೆ ಪ್ರವಾಸೋದ್ಯಮ ಸಚಿವರಾದ ಆನಂದ್ ಸಿಂಗ್ ಅವರ ಬಳಿ ಹೇಳಿದಾಗ ತುಂಬಾ ಖುಷಿಪಟ್ಟರು. ಸಮಾರಂಭಕ್ಕೆ ಅವರು ಬರಬೇಕಿತ್ತು. ಅನಿವಾರ್ಯ ಕಾರಣದಿಂದ ಅವರು ಬರುವುದಕ್ಕೆ ಆಗಿಲ್ಲ ಅಂದರು.

ಇನ್ನು, ನಾದ ಬ್ರಹ್ಮ ಹಂಸಲೇಖ ಮಾತನಾಡಿ, ನವೆಂಬರ್ ಕನ್ನಡ ಮಾಸ ಎಂದೇ ಖ್ಯಾತಿ ಪಡೆದಿದೆ. ಅಂತಹ ಮಾಸದಲ್ಲಿ ಸ್ನೇಹಿತ ರವೀಂದ್ರನಾಥ್ ಸಿರಿವರ ಒಳ್ಳೆಯ ಕೆಲಸ ಮಾಡಿದ್ದಾರೆ. ಕರ್ನಾಟಕ ಭವ್ಯ ಪರಂಪರೆಯನ್ನು ಸಾರುವ ಚಿತ್ರದ ಹಾಡುಗಳನ್ನು ಬಿಡುಗಡೆ ಮಾಡಿದ್ದಾರೆ. ಚಿತ್ರವನ್ನು ಸದ್ಯದಲ್ಲೇ ತೆರೆಗೆ ತರಲಿದ್ದು, ಈ ಚಿತ್ರಕ್ಕೆ ಹಾಡುಗಳನ್ನು ಬರೆದು, ಸಂಗೀತ ನೀಡಿದ್ದೀನಿ. ಐಹೊಳೆ ಸೇರಿದಂತೆ ಕರ್ನಾಟಕದ ಅನೇಕ ಐತಿಹಾಸಿಕ ಸ್ಥಳಗಳನ್ನು ಮತ್ತಷ್ಟು ಅಭಿವೃದ್ಧಿ ಮಾಡಿ, ಹೆಚ್ಚಿನ ಜನರು ಅಲ್ಲಿಗೆ ಬರುವ ಹಾಗೆ ಮಾಡಬೇಕೆಂದು ಸರ್ಕಾರವನ್ನು ವಿನಂತಿಸಿಕೊಳ್ಳುತ್ತೇನೆ ಎಂದು ತಿಳಿಸಿದರು.

ಬಳಿಕ ನಾಗತಿಹಳ್ಳಿ ಚಂದ್ರಶೇಖರ್ ಕೂಡ ಸ್ನೇಹಿತ ರವೀಂದ್ರನಾಥ ದೂರದ ಪ್ರಯಾಣವೊಂದರಲ್ಲಿ ನನಗೆ ಈ ಕಥೆ ಹೇಳಿದಾಗ ಇಷ್ಟವಾಯಿತು. ಕನ್ನಡ ಹಾಗೂ ರಾಜ್ಯೋತ್ಸವ ಅಂದರೆ ಕೇವಲ ಸಾಹಿತ್ಯ ಮತ್ತು ಪುಸ್ತಕ ಪ್ರಪಂಚ ಅಷ್ಟೇ ಅಲ್ಲ. ಕನ್ನಡದಲ್ಲಿ ಸಾವಿರಾರು ಸಂಗತಿಗಳು ಅಂತರ್ಗತವಾಗಿವೆ. ಅದರಲ್ಲಿ ಶಿಲ್ಪಕಲೆಯೂ ಒಂದು. ಸಾವಿರಾರು ವರ್ಷಗಳ ಐತಿಹ್ಯವಿರುವ "ಐಹೊಳೆ" ಚಿತ್ರವನ್ನು ರವೀಂದ್ರನಾಥ ಸಿರಿವರ ಚೆನ್ನಾಗಿ ಮಾಡಿರುತ್ತಾರೆ ಎಂಬ ಭರವಸೆ ನನಗಿದೆ. ಹಂಸಲೇಖ ಅವರು ಹೇಳಿದಂತೆ ಸಾವಿರಾರು ವರ್ಷಗಳ ಇತಿಹಾಸವಿರುವ ನಮ್ಮ ಐತಿಹಾಸಿಕ ಪ್ರವಾಸಿ ಸ್ಥಳಗಳು ಮತ್ತಷ್ಟು ಅಭಿವೃದ್ಧಿ ಹೊಂದಲಿ. ಸಾಕಷ್ಟು ಜನರು ಅಲ್ಲಿಗೆ ಬರುವಂತಾಗಲಿ ಎಂದರು.

ಈ ಚಿತ್ರಕ್ಕೆ ಹಂಸಲೇಖ ಅವರ ಸಾಹಿತ್ಯ ಹಾಗೂ ಸಂಗೀತ ನೀಡಿದ್ದು, ಗುರುಕಿರಣ್, ಅಂಕಿತ ಹಾಡುಗಳನ್ನ ಹಾಡಿದ್ದಾರೆ. ಮನೋಜ್ ಕುಮಾರ್ ಛಾಯಾಗ್ರಹಣ ಹಾಗೂ ಸಂಕಲನವಿರುವ ಈ ಚಿತ್ರದ ಕಥೆಯನ್ನು ಮಂಜುನಾಥ್ ಬರೆದಿದ್ದಾರೆ. ಪತ್ರಕರ್ತ ಹಾಗೂ ಮಾಧ್ಯಮ ಸಲಹೆಗಾರ ಶಂಕರ್ ಪಾಗೋಜಿ ಈ ಸಿನಿಮಾಗೆ ಸಂಭಾಷಣೆ ಬರೆದಿದ್ದಾರೆ. ಸಿರಿವರ ಕ್ರಿಯೇಷನ್ಸ್ ಅರ್ಪಿಸುವ ಹಾಗೂ ಎಂ.ಕೆ.ಬಿ ಸ್ಟುಡಿಯೋ ಮೂಲಕ ನಾನು ಸೇರಿದಂತೆ ಎಂಟು ಜನ ಮಿತ್ರರು ಸೇರಿಕೊಂಡು ಈ ಸಿನಿಮಾವನ್ನು ನಿರ್ಮಾಣ ಮಾಡಿದ್ದೇವೆ. ಸದ್ಯ ಟೈಟಲ್ ನಿಂದಲೇ ಗಮನ ಸೆಳೆಯುತ್ತಿರೋ ಐಹೊಳೆ ಚಿತ್ರ ಸದ್ಯದಲ್ಲೇ ತೆರೆಗೆ ಬರಲಿದೆ ಎಂದು ಹೇಳಿದರು.

ಇದನ್ನೂ ಓದಿ :ಸಂಬಂಧಗಳನ್ನು ಗಟ್ಟಿಗೊಳಿಸುವ ತಿಮ್ಮಯ್ಯ ಆ್ಯಂಡ್ ತಿಮ್ಮಯ್ಯ ಟ್ರೈಲರ್ ರಿಲೀಸ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.