ETV Bharat / entertainment

ಉ.ಕರ್ನಾಟಕದಿಂದ ಇನ್ನಷ್ಟು ಪ್ರತಿಭೆಗಳು ಚಿತ್ರರಂಗಕ್ಕೆ ಬರಲಿ: ಥಗ್ಸ್ ಆಫ್ ರಾಮಘಡ ಚಿತ್ರಕ್ಕೆ ಡಾಲಿ ಸಾಥ್

author img

By

Published : Dec 19, 2022, 3:52 PM IST

Dolly Dhananjaya released the trailer of Thugs of Ramghada
ಥಗ್ಸ್ ಆಫ್ ರಾಮಘಡ ಚಿತ್ರದ ಟ್ರೇಲರ್ ಬಿಡುಗಡೆ ಮಾಡಿದ ಡಾಲಿ ಧನಂಜಯ

ಭರವಸೆ ಹುಟ್ಟು ಹಾಕಿರುವ ‘ಥಗ್ಸ್ ಆಫ್ ರಾಮಘಡ’ ಚಿತ್ರದ ಟ್ರೇಲರ್ ಬಿಡುಗಡೆ ಮಾಡಿ ಡಾಲಿ ಧನಂಜಯ ಮೆಚ್ಚುಗೆ ವ್ಯಕ್ತಪಡಿಸಿದರು.

ಗಾಂಧಿನಗರಕ್ಕೆ ಹೊಸ ಟ್ಯಾಲೆಂಟ್‌ ಇರುವ ನಿರ್ದೇಶಕರು ಹಾಗೂ ಯುವ ನಟ,‌ ನಟಿಯರ ಆಗಮನ ಆಗುತ್ತಿದೆ. ಸದ್ಯ ಫಸ್ಟ್ ಲುಕ್ ಹಾಡಿನ ಮೂಲಕ ಗಮನ ಸೆಳೆದ ‘ಥಗ್ಸ್ ಆಫ್ ರಾಮಘಡ’ ಚಿತ್ರದ ಭರವಸೆ ಹೊತ್ತ ಟ್ರೇಲರ್ ಬಿಡುಗಡೆಯಾಗಿದೆ. ಕಾರ್ತಿಕ್ ಮಾರಲಭಾವಿ ಚೊಚ್ಚಲ ನಿರ್ದೇಶನದಲ್ಲಿ ಮೂಡಿ ಬಂದ ಈ ಚಿತ್ರದ ಟ್ರೇಲರ್ ನಟರಾಕ್ಷಸ ಡಾಲಿ ಧನಂಜಯ ಬಿಡುಗಡೆ ಮಾಡಿ ಮೆಚ್ಚುಗೆ ವ್ಯಕ್ತಪಡಿಸಿದರು.

ಟ್ರೇಲರ್ ಬಿಡುಗಡೆ ಮಾಡಿ ಮಾತನಾಡಿದ ಡಾಲಿ ಧನಂಜಯ, ಇಡೀ ತಂಡವನ್ನು ನೋಡಿ ತುಂಬಾ ಖುಷಿ ಆಯ್ತು. ನಿರ್ದೇಶಕ ಕಾರ್ತಿಕ್ ತುಂಬಾ ಒಳ್ಳೆ ಟೀಂ ಕಟ್ಟಿಕೊಂಡು, ಒಳ್ಳೆ ಒಳ್ಳೆ ಕಲಾವಿದರನ್ನು ಇಟ್ಟುಕೊಂಡು ನೈಜ ಘಟನೆ ಆಧರಿಸಿದ ಸಿನಿಮಾ ಮಾಡಿದ್ದಾರೆ. ಚಿತ್ರದ ಪ್ರಮೋಷನ್ ಕೂಡ ತುಂಬಾ ಕ್ರಿಯೇಟಿವ್ ಆಗಿ ಮಾಡುತ್ತಿದ್ದಾರೆ. ಇಡೀ ಚಿತ್ರತಂಡಕ್ಕೆ ಒಳ್ಳೆದಾಗಲಿ, ಉತ್ತರ ಕರ್ನಾಟಕ ಭಾಗದಿಂದ ಇನ್ನಷ್ಟು ನಿರ್ದೇಶಕರು, ಕಲಾವಿದರು ಚಿತ್ರರಂಗಕ್ಕೆ ಬಂದು ಆ ಭಾಗದ ಕಥೆಗಳನ್ನು ಹೇಳಲಿ ಎಂದರು.

  • " class="align-text-top noRightClick twitterSection" data="">

ನೈಜ ಘಟನೆ ಆಧಾರಿತ ಈ ಚಿತ್ರದಲ್ಲಿ ಚಂದನ್ ರಾಜ್, ಅಶ್ವಿನ್ ಹಾಸನ್, ಮಹಾಲಕ್ಷ್ಮೀ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದು, ಸೂರ್ಯ ಕಿರಣ್, ಪ್ರಭು ಹೊಸದುರ್ಗ, ಟೈಗರ್ ಗಂಗ, ಜಗದೀಶ್, ರಾಘವೇಂದ್ರ, ವಿಶಾಲ್ ಪಾಟೀಲ್, ರವಿ ಸಾಲಿಯನ್, ಲೋಕೇಶ್ ಗೌಡ, ಭೀಷ್ಮ, ಸುಧೀನ್ ನಾಯರ್ ಸೇರಿದಂತೆ ಸಾಕ ಸೇರಿದಂತೆ ಹಲವು ರಂಗಭೂಮಿ ಕಲಾವಿದರು ತಾರಾಬಳಗದಲ್ಲಿದ್ದಾರೆ.

ನಿರ್ದೇಶಕ ಕಾರ್ತಿಕ್ ಮಾರಲಭಾವಿ ಮಾತನಾಡಿ ಚಿತ್ರಕ್ಕಾಗಿ ಒಂದೂವರೆ ವರ್ಷದಿಂದ ಇಡೀ ತಂಡ ಕಷ್ಟ ಪಟ್ಟಿದ್ದೀವಿ. ಸಿನಿಮಾ ಜನವರಿ 6ಕ್ಕೆ ಬಿಡುಗಡೆಯಾಗುತ್ತಿದೆ, ಟ್ರೇಲರ್ ನೋಡಿ ಯಾಕಿಷ್ಟು ವೈಲೆನ್ಸ್ ಎನ್ನೋರಿಗೆ ಸಿನಿಮಾ ನೋಡಿದ ಮೇಲೆ ವೈಲೆನ್ಸ್ ಯಾಕೆ ಎಂದು ಅರ್ಥವಾಗುತ್ತೆ. ನಾನು ಯಾದಗಿರಿಯ ಪುಟ್ಟ ಹಳ್ಳಿಯಿಂದ ಬಂದವನು. ಧನಂಜಯ್ ಅವರ ಜಯನಗರ 4th ಬ್ಲಾಕ್ ಕಿರುಚಿತ್ರ ನೋಡಿ ಸ್ಪೂರ್ತಿ ಪಡೆದು ಚಿತ್ರರಂಗಕ್ಕೆ ಬಂದೆ. ನಾನು ಕಿರುಚಿತ್ರ ನಿರ್ದೇಶನ ಮಾಡೋಕೆ ಆರಂಭಿಸಿದ್ದು, ಇದು ನನ್ನ ಮೊದಲ ನಿರ್ದೇಶನದ ಸಿನಿಮಾ. ಟ್ರೇಲರ್ ಧನಂಜಯ್ ಸರ್ ಬಿಡುಗಡೆ ಮಾಡಿದ್ದು ತುಂಬಾ ಖುಷಿ ಕೊಟ್ಟಿದೆ ಎಂದು ಸಂತಸ ಹಂಚಿಕೊಂಡರು. ಊರಿನಲ್ಲಿ ನಮ್ಮ ಹಿರಿಯರು ಹಿಂದೆ ನಡೆದ ಘಟನೆ ಬಗ್ಗೆ ಕಥೆ ಹೇಳುತ್ತಿದರು. ಆ ಘಟನೆ ಆಧಾರವಾಗಿಟ್ಟುಕೊಂಡು ಕಥೆ ಹೆಣೆದು ಅದಕ್ಕೊಂದಿಷ್ಟು ಸಿನಿಮ್ಯಾಟಿಕ್ ಟಚ್ ಕೊಟ್ಟಿದ್ದೇನೆ ಎಂದು ಹೇಳಿದರು.

ಚಿತ್ರದ ನಾಯಕ ನಟ ಚಂದನ್ ರಾಜ್ ಮಾತನಾಡಿ, ಚಿತ್ರದ ಹಿಂದೆ ಇಡೀ ಚಿತ್ರತಂಡದ ಪರಿಶ್ರಮವಿದೆ, ಎಲ್ಲರೂ ಸಿನಿಮಾ ನೋಡಿ ಪ್ರೋತ್ಸಾಹಿಸಿ, ಸಿನಿಮಾ ಗೆದ್ದರೆ ನಮ್ಮೆಲ್ಲರ ಕನಸು ನನಸಾಗುತ್ತೆ ಎಂದರು. ಈ ಚಿತ್ರವನ್ನು ಭಾರತ್ ಟಾಕೀಸ್ ನಡಿ ಜೈ ಕುಮಾರ್, ಕೀರ್ತಿ ರಾಜ್ ನಿರ್ಮಾಣ ಮಾಡಿದ್ದಾರೆ. ಚಿತ್ರದಲ್ಲಿ ನಾಲ್ಕು ಹಾಡುಗಳಿದ್ದು, ರಾಜೇಶ್ ಕೃಷ್ಣನ್, ಶಶಾಂಕ್ ಶೇಷಗಿರಿ, ಅನುರಾಧ ಭಟ್ ಚಿತ್ರದ ಹಾಡುಗಳಿಗೆ ದನಿಯಾಗಿದ್ದಾರೆ. ಮನು ದಾಸಪ್ಪ ಛಾಯಾಗ್ರಹಣ, ಶ್ರೀಧರ್ ಸಂಕಲನ, ವಿವೇಕ್ ಚಕ್ರವರ್ತಿ ಸಂಗೀತ ನಿರ್ದೇಶನ ಚಿತ್ರಕ್ಕಿದೆ. ಹೊಸ ವರ್ಷಕ್ಕೆ ಬಿಡುಗಡೆ ಆಗುತ್ತಿರುವ ಮೊದಲ ಸಿನಿಮಾ ಇದಾಗಲಿದೆ.

ಇದನ್ನೂ ಓದಿ : ಸ್ಟೈಲಿಷ್ ಸ್ಟಾರ್ ಪುಷ್ಪ 2 ಸಿನಿಮಾದಲ್ಲಿ ಜಾಲಿ ರೆಡ್ಡಿಯಾಗಿ ಅಬ್ಬರಿಸಲು ಡಾಲಿಗೆ ಬುಲಾವ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.