ETV Bharat / city

ಬನ್ನೇರುಘಟ್ಟದಲ್ಲಿ ಹುಲಿ 'ಶಿವ' ಇನ್ನಿಲ್ಲ.. ಅಪೌಷ್ಠಿಕತೆಯಿಂದ ಸಾವು ಶಂಕೆ

author img

By

Published : May 14, 2022, 7:37 AM IST

ಹಲವು ದಿನಗಳಿಂದ ಚಿಕಿತ್ಸೆ ಪಡೆಯುತ್ತಿದ್ದ ಹುಲಿ 'ಶಿವ' ಕಳೆದ ನಾಲ್ಕು ದಿನಗಳ ಹಿಂದೆ ಸಾವನ್ನಪ್ಪಿರುವುದು ತಡವಾಗಿ ಬೆಳಕಿಗೆ ಬಂದಿದೆ.

ಬನ್ನೇರುಘಟ್ಟದಲ್ಲಿ ಹುಲಿ ಶಿವ ಸಾವು
ಬನ್ನೇರುಘಟ್ಟದಲ್ಲಿ ಹುಲಿ ಶಿವ ಸಾವು

ಆನೇಕಲ್(ಬೆಂಗಳೂರು): ಪ್ರಾಣಿಗಳ ಜೀವತಾಣ ಬನ್ನೇರುಘಟ್ಟ ಜೈವಿಕ ಉದ್ಯಾನವನದ ಸಫಾರಿಯಲ್ಲಿ ಬೆಂಗಾಲ್ ಹುಲಿ ಸಾವನ್ನಪ್ಪಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಐದು ವರ್ಷ ಆರು ತಿಂಗಳ‌ ವಯಸ್ಸಿನ 'ಶಿವು' ಮೃತ ಹುಲಿಯಾಗಿದ್ದು, ಚರ್ಮ ಮತ್ತು ಎಲುಬಿಗೆ ಸಂಬಂಧಿಸಿದ ಕಾಯಿಲೆಯಿಂದ ನರಳುತಿತ್ತು ಎಂದು ತಿಳಿದುಬಂದಿದೆ.

ಇತ್ತೀಚೆಗೆ ಗೋಮಾಂಸ ನಿಷೇಧ ಹಿನ್ನೆಲೆ ಪ್ರಾಣಿಗಳಿಗೆ ಮಾಂಸ ನೀಡುವುದನ್ನು ನಿಲ್ಲಿಸಲಾಗಿತ್ತು. ಇದರಿಂದ ಹುಲಿ ಅಶಕ್ತವಾಗಿತ್ತಂತೆ. ಇದನ್ನು ಗಮನಿಸಿದ್ದ ಪಶು ವೈದ್ಯರು ಮತ್ತೆ ಗೋ ಮಾಂಸ ನೀಡುವುದನ್ನು ಆರಂಭಿಸಿದ್ದರು. ಆದರೂ ವರ್ಷಗಳ ಕಾಲ ಪೌಷ್ಠಿಕ ಮಾಂಸ ನೀಡದ ಕಾರಣ ಹುಲಿ ನಿತ್ರಾಣಗೊಂಡಿತ್ತು. ಜೊತೆಗೆ ಆಗಾಗ ಕೋಳಿ ಮಾಂಸ ನೀಡುತ್ತಿದ್ದದ್ದೂ ಕೂಡ ಹುಲಿ ಅನಾರೋಗ್ಯಕ್ಕೆ ಕಾರಣ ಎಂದು ಪ್ರಾಣಿಪ್ರಿಯರು ಶಂಕಿಸಿದ್ದಾರೆ.

ಇಂತಹದ್ದೇ ರೋಗಕ್ಕೆ ಈ ಹಿಂದೆ ಹುಲಿಯೊಂದು ಮೃತಪಟ್ಟಿತ್ತು. ಆದ್ರೆ ಮಾಧ್ಯಮಗಳಿಗೆ ಎಲ್ಲ ಸುದ್ದಿ ಕೊಡುವ ಅಧಿಕಾರಿಗಳು ಈ ಸುದ್ದಿಯನ್ನು ಕೊಟ್ಟಿರಲಿಲ್ಲ. ಈಗ ಹುಲಿ 'ಶಿವ' ಸಾವನ್ನಪ್ಪಿ ನಾಲ್ಕು ದಿನವಾದರೂ ಈ ಕುರಿತು ಯಾವುದೇ ಮಾಹಿತಿ ನೀಡಿಲ್ಲದಿರುವುದು ಅನುಮಾನಕ್ಕೆ ಎಡೆ ಮಾಡಿ ಕೊಟ್ಟಿದೆ.

ಬನ್ನೇರುಘಟ್ಟ
ಬನ್ನೇರುಘಟ್ಟ

ವನ್ಯ ಜೀವಿ ಕಾಯ್ದೆಯಂತೆ ಹುಲಿಯ ಅಂತ್ಯ ಸಂಸ್ಕಾರ ನಡೆದಿದ್ದು, ಮರಣೋತ್ತರ ಪರೀಕ್ಷೆಯಲ್ಲಿ ಅಂಗಾಂಗ ಮಾದರಿಗಳನ್ನು ಹೆಚ್ಚಿನ ತನಿಖೆಗೆ ಹೆಬ್ಬಾಳ ಪಶು ವೈದ್ಯಕೀಯ ವಿಭಾಗಕ್ಕೆ ಕಳುಹಿಸಲಾಗಿದೆ. ಮುನ್ನೆಚ್ಚರಿಕಾ ಕ್ರಮಗಳಾಗಿ ಎಲ್ಲಾ ಪ್ರಾಣಿಗಳ ಕೊಠಡಿಗಳಿಗೆ ರೋಗನಿರೋಧಕ ರಸಾಯನ ಸಿಂಪಿಡಿಸಿ ಬೆಂಕಿ ಝಳ ನೀಡಲು ಅಧಿಕಾರಿಗಳು ಆರಂಭಿಸಿದ್ದಾರೆ.

(ಓದಿ: ಯುದ್ಧಪೀಡಿತ ಉಕ್ರೇನ್​ನಲ್ಲಿರುವ ಪ್ರಾಣಿಗಳಿಗೆ ಆಶ್ರಯ ನೀಡಲು ಮೈಸೂರು ಮೃಗಾಲಯ ಸಜ್ಜು)

ETV Bharat Logo

Copyright © 2024 Ushodaya Enterprises Pvt. Ltd., All Rights Reserved.