ETV Bharat / city

ಜಲಾವೃತವಾದ ಬೆಂಗಳೂರು ಕೇಂದ್ರೀಯ ವಿಹಾರ ಅಪಾರ್ಟ್​ಮೆಂಟ್.. 3 ಸಾವಿರಕ್ಕೂ ಹೆಚ್ಚು ನಿವಾಸಿಗಳಿಗೆ 3 ದಿನದಿಂದ ನರಕಯಾತನೆ

author img

By

Published : Nov 23, 2021, 7:05 PM IST

rain water pouring in to the yelahanka apartment
ಕೇಂದ್ರೀಯ ವಿಹಾರ ಅಪಾರ್ಟ್​​ಮೆಂಟ್​ಗೆ ನುಗ್ಗಿದ ನೀರು

ಯಲಹಂಕ ಕೆರೆಯ ಕಟ್ಟೆಯೊಡೆದು ಪ್ರವಾಹದಂತೆ ಹರಿದು ಬಂದ ನೀರು ಕೆರೆಯ ಪಕ್ಕದಲ್ಲಿನ ತಗ್ಗು ಪ್ರದೇಶಗಳಿಗೆ ಮತ್ತು ಕೇಂದ್ರೀಯ ವಿಹಾರ ಅಪಾರ್ಟ್​​​ಮೆಂಟ್​ಗೆ ನುಗ್ಗಿ ಅವಾಂತರ ಸೃಷ್ಟಿಸಿದೆ. ಕಳೆದ ಮೂರು ದಿನಗಳಿಂದ ಇಲ್ಲಿನ ಮೂರು ಸಾವಿರಕ್ಕೂ ಹೆಚ್ಚು ನಿವಾಸಿಗಳು ಸಂಕಷ್ಟ ಅನುಭವಿಸುತ್ತಿದ್ದಾರೆ.

ಯಲಹಂಕ(ಬೆಂಗಳೂರು): ಭಾನುವಾರ ರಾತ್ರಿ ಸುರಿದ ಭಾರಿ ಮಳೆಯಿಂದ (138 ಮಿ.ಮೀ ಮಳೆ) ಯಲಹಂಕ ಕೆರೆಯ ಕಟ್ಟೆ ಒಡೆದು ತಗ್ಗು ಪ್ರದೇಶ ಮತ್ತು ಕೇಂದ್ರೀಯ ವಿಹಾರ ಅಪಾರ್ಟ್​​ಮೆಂಟ್​ಗೆ ಮಳೆ ನೀರು ನುಗ್ಗಿ ಅಲ್ಲಿನ ನಿವಾಸಿಗಳು ಅಕ್ಷರಶಃ ನಲುಗಿದ್ದಾರೆ. ಅಪಾರ್ಟ್​​ಮೆಂಟ್​ನಲ್ಲಿ 3000 ಸಾವಿರಕ್ಕೂ ಹೆಚ್ಚು ನಿವಾಸಿಗಳು ಮೂರು ದಿನಗಳೇ ಕಳೆದರೂ ಜಲಾವೃತವಾಗಿರುವ ಕಟ್ಟಡದ ಮಧ್ಯೆ ಕತ್ತಲು ಕವಿದು ಸಂಕಷ್ಟ ಅನುಭವಿಸುತ್ತಿದ್ದಾರೆ.

ಕೇಂದ್ರೀಯ ವಿಹಾರ ಅಪಾರ್ಟ್​​ಮೆಂಟ್ ಪರಿಸ್ಥಿತಿ

ಯಲಹಂಕ ಸುತ್ತಮುತ್ತ 11 ಕೆರೆಗಳಿದ್ದು, ಈ ಕೆರೆಗಳ ನೀರು ಸಹ ಯಲಹಂಕದ ಕೆರೆಗೆ ಹರಿದು ಬಂದಿದೆ. ಯಲಹಂಕ ಕೆರೆ ಕಟ್ಟೆ ಒಡೆದು ಪ್ರವಾಹದಂತೆ ಹರಿದು ಬಂದ ನೀರು ಕೆರೆಯ ಪಕ್ಕದಲ್ಲಿನ ತಗ್ಗು ಪ್ರದೇಶಗಳಿಗೆ ಮತ್ತು ಕೇಂದ್ರೀಯ ವಿಹಾರ ಅಪಾರ್ಟ್​​​ಮೆಂಟ್​ಗೆ ನುಗ್ಗಿದೆ. ಕೆರೆಯ ಕೋಡಿಯಿಂದ ನೀರು ಹರಿದು ಹೋಗಲಿಕ್ಕಿರುವ ರಾಜಕಾಲುವೆ ಕೇವಲ 8 ಅಡಿ ಅಗಲವಿದೆ. ಹಾಗಾಗಿ ನೀರು ಸರಾಗವಾಗಿ ಹೋಗಲು ಸಾಧ್ಯವಾಗದೇ ತಗ್ಗು ಪ್ರದೇಶಗಳಲ್ಲಿ 4 ರಿಂದ 5 ಅಡಿ ನೀರು ನಿಂತಿದೆ.

Kendriya Vihar apartment; ಕೇಂದ್ರೀಯ ವಿಹಾರ ಅಪಾರ್ಟ್​​ಮೆಂಟ್​ನಲ್ಲಿ 600ಕ್ಕೂ ಹೆಚ್ಚು ಫ್ಲ್ಯಾಟ್​ಗಳಿವೆ. ಬೆಂಗಳೂರು ಸುರಕ್ಷಿತ ನಗರ ಮತ್ತು ಉದ್ಯೋಗಾವಕಾಶಗಳ ತವರಾಗಿರುವ ಕಾರಣಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಉತ್ತರ ಭಾರತೀಯರು ಇಲ್ಲಿ ವಾಸವಾಗಿದ್ದಾರೆ. ಹೆಚ್ಚಿನ ಫ್ಲ್ಯಾಟ್​ಗಳಲ್ಲಿ ಹಿರಿಯ ನಾಗರಿಕರು ವಾಸವಾಗಿದ್ದು, ಅವರ ಮಕ್ಕಳು ವಿದೇಶಗಳಲ್ಲಿ ನೆಲೆಸಿದ್ದಾರೆ. ಬಹುತೇಕ ಹಿರಿಯರು ಸಕ್ಕರೆ ಕಾಯಿಲೆ, ರಕ್ತದೊತ್ತಡದಿಂದ ಬಳಲುತ್ತಿರುವುದು ವಿದೇಶದಲ್ಲಿರುವ ಮಕ್ಕಳ ಚಿಂತೆಗೆ ಕಾರಣವಾಗಿದೆ.

ಅಪಾರ್ಟ್​​ಮೆಂಟ್​ಗೆ ನೀರು ನುಗ್ಗಿದ ನಂತರ ಯಾವುದೇ ರೀತಿಯ ಅನಾಹುತ ನಡೆಯಬಾರದೆಂಬ ಕಾರಣಕ್ಕೆ ವಿದ್ಯುತ್ ಸಂಪರ್ಕ ಕಡಿತಗೊಳಿಸಲಾಗಿದೆ. ಇದರಿಂದ ಲ್ಯಾಪ್​ಟಾಪ್, ಮೊಬೈಲ್​ಗಳು, ಪವರ್ ಬ್ಯಾಂಕ್​ಗಳು ಬಂದ್​ ಆಗಿವೆ. ವಿದ್ಯುತ್​​ ಇಲ್ಲದೇ ಹೊರಗಿನ ಪ್ರಪಂಚದ ಸಂಪರ್ಕವನ್ನೇ ಕಳೆದುಕೊಂಡಿದ್ದಾರೆ. ಪರೀಕ್ಷೆ ಬರೆಯಬೇಕಾದ ವಿದ್ಯಾರ್ಥಿಗಳು ಪಕ್ಕದಲ್ಲಿನ ಗ್ರಾಮಗಳ ಟ್ರ್ಯಾಕ್ಟರ್ ಮತ್ತು ಎನ್​​ಡಿಆರ್​ಎಫ್ ಸಹಾಯ ಪಡೆದು ಹೋಗಿ ಪರೀಕ್ಷೆ ಬರೆಯುತ್ತಿದ್ದಾರೆ.

ಇದನ್ನೂ ಓದಿ: Bengaluru rains: ಜೆಎನ್​ಸಿಎಎಸ್​ಆರ್​ಗೆ ಭೇಟಿ ನೀಡಿದ ಸಿಎಂ ಬೊಮ್ಮಾಯಿ

ಅಪಾರ್ಟ್​​ಮೆಂಟ್​ನಲ್ಲಿದ್ದ 90 ಕಾರುಗಳು, 200 ಬೈಕ್​ಗಳು ಸಹ ನೀರಿನಲ್ಲಿ ಮುಳುಗಿವೆ. ಪರಿಸ್ಥಿತಿ ತಕ್ಷಣಕ್ಕೆ ಸುಧಾರಿಸುವುದಿಲ್ಲ ಎಂಬ ಕಾರಣಕ್ಕೆ ಬಹುತೇಕ ನಿವಾಸಿಗಳು ನಗರದಲ್ಲಿನ ಸಂಬಂಧಿಕರ ಮನೆಗಳಿಗೆ ತೆರಳುತ್ತಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.