ETV Bharat / city

ಬಿಜೆಪಿ-ಆರ್​ಎಸ್​​ಎಸ್ ನಾಯಕರ ಚಿಂತನಾ ಸಭೆ: ಚುನಾವಣಾ ಅಜೆಂಡಾ ಫಿಕ್ಸ್ ಮಾಡುತ್ತಾ ಸಂಘ ಪರಿವಾರ?

author img

By

Published : Jul 14, 2022, 10:43 PM IST

Updated : Jul 15, 2022, 8:10 AM IST

ಬಿಜೆಪಿ
ಬಿಜೆಪಿ

ಆರ್​ಎಸ್​ಎಸ್​ ಮತ್ತು ಬಿಜೆಪಿ ನಾಯಕರ ಮೂರು ಹಂತದ ಚಿಂತನಾ ಸಭೆ ಶುಕ್ರವಾರ ನಡೆಯಲಿದೆ. ಇತ್ತೀಚಿನ ಚುನಾವಣಾ ಫಲಿತಾಂಶದ ಪರಿಣಾಮ, ಭವಿಷ್ಯದ ಚುನಾವಣೆಗಳಿಗೆ ಪಕ್ಷ ಸನ್ನದ್ದಗೊಳಿಸುವುದು ಸೇರಿದಂತೆ ಪ್ರಸಕ್ತ ರಾಜಕೀಯ ವಿದ್ಯಮಾನಗಳ ಕುರಿತು ಮಹತ್ವದ ಸಮಾಲೋಚನೆ ನಡೆಯಲಿದೆ.

ಬೆಂಗಳೂರು: ಚುನಾವಣೆಗೆ ಸಿದ್ಧತೆ ಆರಂಭಿಸಲು ಹೈಕಮಾಂಡ್​ನಿಂದ ನಿರ್ದೇಶನ ಬರುತ್ತಿದ್ದಂತೆ ಸಂಘ ಪರಿವಾರ ಮತ್ತು ರಾಜ್ಯ ಬಿಜೆಪಿ ನಾಯಕರ ಚಿಂತನಾ ಸಭೆ ನಡೆಯುತ್ತಿದೆ. ಶುಕ್ರವಾರ(ಜುಲೈ 15) ಮೂರು ಹಂತದ ಸಭೆ ನಡೆಯಲಿದೆ. ಬೆಳಗ್ಗೆ 9 ಗಂಟೆಗೆ ನಗರದ ಹೊರವಲಯದಲ್ಲಿರುವ ಜೆಡಬ್ಲ್ಯು ಮ್ಯಾರಿಯೆಟ್ ಪ್ರೆಸ್ಟೀಜ್ ಗಾಲ್ಫ್ ಶೈರ್ ರೆಸಾರ್ಟ್ ನಲ್ಲಿ ಬಿಜೆಪಿ ನಾಯಕರು ಮತ್ತು ಆರ್.ಎಸ್.ಎಸ್ ಪ್ರಮುಖರ ಮಹತ್ವದ ಸಭೆ ನಡೆಯಲಿದೆ.

ಬಿಜೆಪಿ ಕೋರ್ ಕಮಿಟಿ ಸಭೆ:ಮೊದಲಿಗೆ ಬಿಜೆಪಿ ಕೋರ್ ಕಮಿಟಿ ಸಭೆ ನಡೆಯಲಿದ್ದು, ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್ ಸಂತೋಷ್ ನೇತೃತ್ವದಲ್ಲಿ ನಡೆಯುವ ಸಭೆಯಲ್ಲಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್, ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪ ಸೇರಿದಂತೆ ಕೇಂದ್ರ ಸಚಿವರು, ಕೋರ್ ಕಮಿಟಿ ಸದಸ್ಯರು ಭಾಗವಹಿಸಲಿದ್ದಾರೆ. ಪಕ್ಷ ಹಾಗೂ ಸರ್ಕಾರದ ನಡುವಿನ ಸಮನ್ವಯತೆ, ಸರ್ಕಾರದ ಯೋಜನೆ ಜನರಿಗೆ ತಲುಪಿಸುವಲ್ಲಿ ಕಾರ್ಯಕರ್ತರ ಪಾತ್ರ, ಇತ್ತೀಚಿನ ಚುನಾವಣಾ ಫಲಿತಾಂಶದ ಪರಿಣಾಮ, ಭವಿಷ್ಯದ ಚುನಾವಣೆಗಳಿಗೆ ಪಕ್ಷ ಸನ್ನದ್ದಗೊಳಿಸುವುದು ಸೇರಿದಂತೆ ಪ್ರಸಕ್ತ ರಾಜಕೀಯ ವಿದ್ಯಮಾನಗಳ ಕುರಿತು ಮಹತ್ವದ ಸಮಾಲೋಚನೆ ನಡೆಯಲಿದೆ.

ಸಚಿವರ ಸಭೆ: ಮೊದಲ ಹಂತದ ಸಭೆ ನಂತರ ಎರಡನೇ ಹಂತದಲ್ಲಿ ಸಚಿವರ ಸಭೆ ನಡೆಯಲಿದೆ. ಬಿ.ಎಲ್ ಸಂತೋಷ್, ಅರುಣ್ ಸಿಂಗ್, ಕಟೀಲ್ ಸಮ್ಮುಖದಲ್ಲಿ ಸಿಎಂ ಬೊಮ್ಮಾಯಿ ನೇತೃತ್ವದಲ್ಲಿ ನಡೆಯಲಿರುವ ಸಚಿವರ ಸಭೆಯಲ್ಲಿ ಸಚಿವರ ವರ್ಷದ ಸಾಧನೆ, ಇಲಾಖೆಯಲ್ಲಿನ ಪ್ರಗತಿ, ಜನಪ್ರೀಯತೆ ಕುರಿತು ಚರ್ಚೆ ನಡೆಯಲಿದೆ, ಹೈಕಮಾಂಡ್​ನಿಂದ ಕೆಲವೊಂದು ಸಂದೇಶ ಹೊತ್ತು ಬಂದಿರುವ ಸಂತೋಷ್ ಸಚಿವರಿಗೆ ಕೆಲ ಟಾಸ್ಕ್ ನೀಡುವ ಸಾಧ್ಯತೆ ಇದೆ ಎನ್ನಲಾಗಿದೆ.

ಆರ್​ಎಸ್​ಎಸ್​​-ಬಿಜೆಪಿ ನಾಯಕರ ಸಭೆ: ಮೂರನೇ ಹಂತದಲ್ಲಿ ಆರ್.ಎಸ್.ಎಸ್ ಮತ್ತು ಬಿಜೆಪಿಯ ಆಯ್ದ ನಾಯಕರ ಮಹತ್ವದ ಸಭೆ ನಡೆಯಲಿದೆ. ಆರ್​ಎಸ್ಎಸ್​​ ಸಹ ಕಾರ್ಯವಾಹಕ ಮುಕುಂದ್‌, ಕ್ಷೇತ್ರೀಯ ಸಂಘ ಚಾಲಕ ವಿ.ನಾಗರಾಜ್, ಕ್ಷೇತ್ರೀಯ ಪ್ರಚಾರಕ ಸುಧೀರ್‌, ಕ್ಷೇತ್ರೀಯ ಕಾರ್ಯವಾಹ ತಿಪ್ಪೇಸ್ವಾಮಿ ಭಾಗವಹಿಸಲಿದ್ದು, ಬಿ.ಎಲ್ ಸಂತೋಷ್,ಅರುಣ್ ಸಿಂಗ್, ನಳಿನ್ ಕುಮಾರ್ ಕಟೀಲ್, ಸಿಎಂ ಬಸವರಾಜ ಬೊಮ್ಮಾಯಿ, ಸಿ.ಟಿ ರವಿ, ಪ್ರಹ್ಲಾದ್ ಜೋಷಿ ಸೇರಿ ಆಯ್ದ ನಾಯಕರು ಭಾಗವಹಿಸಲಿದ್ದಾರೆ.

ಇದನ್ನೂ ಓದಿ: ಚಿಂತನಾ ಶಿಬಿರಕ್ಕೂ ಮುನ್ನ ಜಗನ್ನಾಥ ಭವನದಲ್ಲಿ ಪೂರ್ವಭಾವಿ ಸಭೆ.. ಅರುಣ್ ಸಿಂಗ್, ಸಿಎಂ ಭಾಗಿ

ಭವಿಷ್ಯದ ಚುನಾವಣೆಗೆ ಯಾವ ರೀತಿ ಸಿದ್ಧತೆ ನಡೆಸಬೇಕು ಎನ್ನುವ ಕುರಿತು ಮಹತ್ವದ ಸಮಾಲೋಚನೆ ನಡೆಸಲಾಗುತ್ತದೆ. ಇತ್ತೀಚೆಗಿನ ಹಿಜಾಬ್ ವಿವಾದ, ಮಸೀದಿ ಆಜಾನ್ ವಿವಾದ, ದೇಗುಲ ಮಸೀದಿ ವಿಚಾರದಲ್ಲಿ ಪಕ್ಷ ಇಟ್ಟ ಹೆಜ್ಜೆ ಕುರಿತು ಅವಲೋಕನ ನಡೆಯಲಿದ್ದು, ಬಹುತೇಕ ಚುನಾವಣಾ ಅಜೆಂಡಾ ಸೆಟ್ ಮಾಡಲಾಗುತ್ತದೆ ಎನ್ನಲಾಗಿದೆ. ಇಡೀ ದಿನ ನಡೆಯಲಿರುವ ಚಿಂತನಾ ಸಭೆ 2023ರ ವಿಧಾನಸಭಾ ಚುನಾವಣೆಯನ್ನು ದೃಷ್ಟಿಯಲ್ಲಿರಿಸಿಕೊಂಡು ಸಂಘಟನಾತ್ಮಕವಾಗಿ ಯಾವ ರೀತಿ ಮುಂದೆ ಸಾಗಬೇಕು ಎನ್ನುವ ಸ್ಪಷ್ಟ ದಿಕ್ಸೂಚಿಯಾಗಲಿದೆ ಎನ್ನಲಾಗಿದೆ.

Last Updated :Jul 15, 2022, 8:10 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.