ETV Bharat / bharat

ಉಕ್ರೇನ್ ಯುದ್ಧ: ಭಾರತದಲ್ಲಿ ಅಡುಗೆ ಎಣ್ಣೆ, ರಸಗೊಬ್ಬರ ಬೆಲೆ ಏರಿಕೆ?

author img

By

Published : Mar 6, 2022, 12:41 PM IST

Updated : Mar 6, 2022, 3:49 PM IST

ಭಾರತವು ಶೇ.70ರಷ್ಟು ಸೂರ್ಯಕಾಂತಿ ಅಡುಗೆ ಎಣ್ಣೆಯನ್ನು ಉಕ್ರೇನ್​ನಿಂದಲೇ ಆಮದು ಮಾಡಿಕೊಳ್ಳುತ್ತಿದೆ. ಅದೇ ರೀತಿಯಾಗಿ ಶೇ.20ರಷ್ಟು ಅಡುಗೆ ಎಣ್ಣೆ ರಷ್ಯಾದಿಂದ ಆಮದು ಆಗುತ್ತದೆ. ಹೀಗಾಗಿಯೇ ಈ ಎರಡು ದೇಶಗಳ ಮೇಲೆ ಭಾರತ ಎಷ್ಟೊಂದು ಅವಲಂಬಿತವಾಗಿದೆ ಎಂಬುದು ಗೊತ್ತಾಗುತ್ತದೆ ಎಂದು ತಜ್ಞರು ಹೇಳಿದ್ದಾರೆ.

agriculture sector
ಭಾರತದ ಕೃಷಿ ವಲಯ

ರುದ್ರಾಪುರ (ಉತ್ತರಾಖಂಡ): ಉಕ್ರೇನ್​-ರಷ್ಯಾ ನಡುವಿನ ಯುದ್ಧದಿಂದ ಭಾರತದ ಕೃಷಿ ವಲಯದ ಮೇಲೆ ದುಷ್ಪರಿಣಾಮ ಬೀರಲಿದ್ದು, ಇದರಿಂದ ಆಹಾರ ಪದಾರ್ಥಗಳ ಬೆಲೆ ಏರಿಕೆಯಾಗಲಿದೆ ಎಂದು ಕೃಷಿ ತಜ್ಞರು ಎಚ್ಚರಿಸಿದ್ದಾರೆ.

ಭಾರತವು ಶೇ.70ರಷ್ಟು ಸೂರ್ಯಕಾಂತಿ ಅಡುಗೆ ಎಣ್ಣೆ ಮತ್ತು 235 ಮಿಲಿಯನ್ ಡಾಲರ್​ ಮೌಲ್ಯದ ರಸಗೊಬ್ಬರವನ್ನು ಉಕ್ರೇನ್‌ನಿಂದಲೇ ಆಮದು ಮಾಡಿಕೊಳ್ಳುತ್ತಿದೆ. ಸದ್ಯ ಉಕ್ರೇನ್​ ಮೇಲೆ ರಷ್ಯಾ ಯುದ್ಧ ಸಾರಿರುವುದರಿಂದ ಕೃಷಿ ಕ್ಷೇತ್ರದ ಮೇಲೆ ಪ್ರತಿಕೂಲ ಪರಿಣಾಮ ಬೀರಬಹುದು. ಇದೇ ಯುದ್ಧ ಮುಂದುವರಿದರೆ ಭಾರತವು ಬೆಲೆ ಏರಿಕೆ ಹೊರೆ ಹೊರಬೇಕಾಗುತ್ತದೆ ಎಂದು ಉತ್ತರಾಖಂಡದ ರುದ್ರಾಪುರ ಕೃಷಿ ಮತ್ತು ತಂತ್ರಜ್ಞಾನ ವಿಶ್ವವಿದ್ಯಾಲಯದ ಸಂಶೋಧನಾ ನಿರ್ದೇಶಕ ಡಾ.ಎ.ಎಸ್​.ನೈನ್​ ಕಳವಳ ವ್ಯಕ್ತಪಡಿಸಿದ್ದಾರೆ.

ಉಕ್ರೇನ್​-ರಷ್ಯಾ ನಡುವಿನ ಯುದ್ಧದಿಂದ ಭಾರತದ ಕೃಷಿ ವಲಯದ ಮೇಲಿನ ಪರಿಣಾಮದ ಬಗ್ಗೆ ಡಾ.ಎ.ಎಸ್​.ನೈನ್​ ವಿವರಿಸಿದ್ದಾರೆ.

ಡಾ.ನೈನ್​ ಹೇಳುವ ಪ್ರಕಾರ, ಉಕ್ರೇನ್​ನಿಂದ 2.5 ಮಿಲಿಯನ್​ ಟನ್​ನಷ್ಟು ಸೂರ್ಯಕಾಂತಿ ಅಡುಗೆ ಎಣ್ಣೆಯನ್ನು ಭಾರತ ಆಮದು ಮಾಡಿಕೊಳ್ಳುತ್ತಿದೆ. ಅಂದರೆ, ಶೇ.70ರಷ್ಟು ಎಣ್ಣೆ ಉಕ್ರೇನ್​ನಿಂದಲೇ ಭಾರತ ಪಡೆಯುತ್ತಿದೆ. ಅದೇ ರೀತಿಯಾಗಿ ಶೇ.20ರಷ್ಟು ಎಣ್ಣೆ ರಷ್ಯಾದಿಂದ ಆಮದಾಗುತ್ತದೆ.

ಅಲ್ಲದೇ, 235 ಮಿಲಿಯನ್ ಡಾಲರ್​ ಮೌಲ್ಯದ ರಸಗೊಬ್ಬರ ಕೂಡ ಉಕ್ರೇನ್​ನಿಂದಲೇ ಆಮದು ಆಗುತ್ತದೆ. ಇದರಲ್ಲಿ ಮುಖ್ಯವಾಗಿ ಪೊಟ್ಯಾಸಿಕ್ (ಯೂರಿಯಾ), ಎನ್​ಪಿಕೆ ಸೇರಿದಂತೆ ಸಾವಯವ ಗೊಬ್ಬರವನ್ನು ಆಮದು ಮಾಡಿಕೊಳ್ಳಲಾಗುತ್ತಿದೆ. ಈಗ ಉಕ್ರೇನ್​ನಲ್ಲಿ ಯುದ್ಧ ಪರಿಣಾಮ ಇವುಗಳ ಉತ್ಪಾದನೆ ಮತ್ತು ಸರಬರಾಜು ಸ್ಥಗಿತಗೊಂಡಿದೆ. ಇದರಿಂದ ಆಮದು ಮೇಲೆಯೂ ಪರಿಣಾಮ ಬೀರಿದ್ದು, ದೇಶದಲ್ಲಿ ಇವುಗಳ ಕೊರತೆ ಉಂಟಾಗುವ ಸಾಧ್ಯತೆಯಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಇದನ್ನೂ ಓದಿ: ಉಕ್ರೇನ್ ಬಿಕ್ಕಟ್ಟು ಇಡೀ ವಿಶ್ವಕ್ಕೆ ಪರಿಣಾಮ ಬೀರಲಿದೆ, ಭಾರತ-ರಷ್ಯಾ ಸಂಬಂಧವೂ ಇದಕ್ಕೆ ಹೊರತಲ್ಲ: ರಷ್ಯಾ

ಇತ್ತ, ಭಾರತದಿಂದ ರಷ್ಯಾ ಮತ್ತು ಉಕ್ರೇನ್‌ಗೆ ಟೀ ಪುಡಿ, ಔಷಧಗಳು ಮತ್ತು ವೈದ್ಯಕೀಯ ಉಪಕರಣಗಳನ್ನು ಹೆಚ್ಚಿನ ಪ್ರಮಾಣದಲ್ಲಿ ರಫ್ತು ಮಾಡಲಾಗುತ್ತದೆ. ಈ ಯುದ್ಧ ದೀರ್ಘಕಾಲಿಕವಾದಲ್ಲಿ ಪೂರೈಕೆಯ ಸರಪಳಿ ಮೇಲೆ ಭಾರಿ ದುಷ್ಪರಿಣಾಮ ಉಂಟಾಗುತ್ತದೆ. ರೈತರ ಬೇಡಿಕೆಯಷ್ಟು ರಸಗೊಬ್ಬರ ಪೂರೈಸಲು ಕಷ್ಟವಾಗುತ್ತದೆ. ಇದು ಬೆಲೆಗೆ ಏರಿಕೆಗೆ ಕಾರಣವಾಗಬಹುದು. ಜತೆಗೆ ದೇಶದ ಕೃಷಿ ಉತ್ಪಾದಕತೆಯ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ ಎಂದಿದ್ದಾರೆ.

Last Updated :Mar 6, 2022, 3:49 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.