ETV Bharat / bharat

ಉಕ್ರೇನ್ ಬಿಕ್ಕಟ್ಟು ಇಡೀ ವಿಶ್ವಕ್ಕೆ ಪರಿಣಾಮ ಬೀರಲಿದೆ, ಭಾರತ-ರಷ್ಯಾ ಸಂಬಂಧವೂ ಇದಕ್ಕೆ ಹೊರತಲ್ಲ: ರಷ್ಯಾ

author img

By

Published : Mar 6, 2022, 8:05 AM IST

Ukraine crisis will have consequences for whole world, including for India-Russia ties: Envoy
ಭಾರತದ ಮೇಲೆ ಯಾವುದೇ ಒತ್ತಡ, ಷರತ್ತು ಹಾಕುವುದಿಲ್ಲ: ರಷ್ಯಾ ರಾಯಭಾರಿ

ಭಾರತ ಮತ್ತು ರಷ್ಯಾದ ಸಂಬಂಧವನ್ನು ತುಂಬಾ ಹತ್ತಿರದಿಂದ ನೋಡಬೇಕಿದೆ. ಯೂರೋಪಿಯನ್ ರಾಷ್ಟ್ರಗಳು ಈಗಾಗಲೇ ರಷ್ಯಾದೊಂದಿಗಿನ ಆರ್ಥಿಕ ಸಂಬಂಧವನ್ನು ಕಡಿದುಕೊಳ್ಳುತ್ತಿರುವ ಕಾರಣದಿಂದ ಭಾರತಕ್ಕೆ ಹೆಚ್ಚಿನ ಅವಕಾಶಗಳು ದೊರೆಯಲಿವೆ ಎಂದು ರಷ್ಯಾದ ರಾಯಭಾರಿ ಡೆನಿಸ್ ಅಲಿಪೋವ್ ಅಭಿಪ್ರಾಯಪಟ್ಟರು.

ನವದೆಹಲಿ: ಉಕ್ರೇನ್‌ನಲ್ಲಿನ ಪ್ರಸ್ತುತ ಬಿಕ್ಕಟ್ಟು ರಷ್ಯಾ-ಭಾರತ ಸಂಬಂಧವೂ ಸೇರಿದಂತೆ ಇಡೀ ಜಗತ್ತಿನ ಮೇಲೆ ಪರಿಣಾಮಗಳನ್ನು ಉಂಟುಮಾಡುತ್ತದೆ. ಅದು ಉಂಟುಮಾಡುವ ಪರಿಣಾಮಗಳನ್ನು ಈಗಲೇ ಊಹಿಸಲು ಸಾಧ್ಯವಿಲ್ಲ ಎಂದು ಭಾರತದಲ್ಲಿನ ರಷ್ಯಾದ ರಾಯಭಾರಿ ಡೆನಿಸ್ ಅಲಿಪೋವ್ ಶನಿವಾರ ಹೇಳಿದ್ದಾರೆ.

ಈ ಕುರಿತು ವಿಡಿಯೋ ಟ್ವೀಟ್ ಮಾಡಿರುವ ಅವರು ಯೂರೋಪಿಯನ್ ರಾಷ್ಟ್ರಗಳು ಈಗಾಗಲೇ ರಷ್ಯಾದೊಂದಿಗಿನ ಆರ್ಥಿಕ ಸಂಬಂಧವನ್ನು ಕಡಿದುಕೊಳ್ಳುತ್ತಿವೆ. ರಷ್ಯಾದೊಂದಿಗಿನ ಆರ್ಥಿಕ ಸಂಬಂಧವನ್ನು ಹೆಚ್ಚಿಸಲು ಭಾರತಕ್ಕಿದು ಒಳ್ಳೆಯ ಅವಕಾಶ ಎಂದು ಅವರು ತಿಳಿಸಿದರು.

ರಷ್ಯಾ ಮತ್ತು ಭಾರತದ ಸಂಬಂಧಗಳು ಉಭಯ ದೇಶಗಳ ಅಭಿವೃದ್ಧಿ ಹಿತಾಸಕ್ತಿಯನ್ನು ಹೊಂದಿವೆ. ಭಾರತ ಮತ್ತು ರಷ್ಯಾದ ಸಂಬಂಧವನ್ನು ತುಂಬಾ ಹತ್ತಿರದಿಂದ ನೋಡಬೇಕಿದೆ. ಯೂರೋಪಿಯನ್ ರಾಷ್ಟ್ರಗಳ ನಿರ್ಬಂಧದ ಹಿನ್ನೆಲೆಯಲ್ಲಿ ಭಾರತ ಮತ್ತು ರಷ್ಯಾದ ಕರೆನ್ಸಿಗಳ ವ್ಯವಹಾರ ಹೆಚ್ಚಾಗಬಹುದು ಎಂದು ಭವಿಷ್ಯ ನುಡಿದರು.

ಭಾರತದ ವಿದೇಶಾಂಗ ನೀತಿಗೆ ಶ್ಲಾಘನೆ: ಉಕ್ರೇನ್ ವಿಚಾರವಾಗಿ ಸ್ವತಂತ್ರ ನಿರ್ಧಾರವನ್ನು ತೆಗೆದುಕೊಂಡ ಭಾರತದ ವಿದೇಶಾಂಗ ನೀತಿಯನ್ನು ನಾವು ಸ್ವಾಗತಿಸುತ್ತೇವೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತದ ವಿದೇಶಾಂಗ ನೀತಿಯ ಪಾತ್ರ ಮತ್ತು ಪ್ರಭಾವವನ್ನು ಬಲಪಡಿಸುತ್ತೇವೆ. ನಾವು ಭಾರತದ ಮೇಲೆ ಎಂದಿಗೂ ಯಾವುದೇ ಒತ್ತಡವನ್ನು ಹಾಕುವುದಿಲ್ಲ ಮತ್ತು ಯಾವುದೇ ಷರತ್ತುಗಳನ್ನು ಹಾಕುವುದಿಲ್ಲ. ಆದರೆ ಭಾರತೀಯರು ಈಗ ಅಮೆರಿಕದಲ್ಲಿ ತೀವ್ರ ಒತ್ತಡದಲ್ಲಿದ್ದಾರೆ ಎಂದಿದ್ದಾರೆ.

ಭಾರತೀಯರ ಸ್ಥಳಾಂತರಕ್ಕೆ ಪ್ರಯತ್ನ: ಉಕ್ರೇನ್‌ನ ಸಂಘರ್ಷ ವಲಯಗಳಲ್ಲಿ ಸಿಕ್ಕಿಬಿದ್ದಿರುವ ಭಾರತೀಯ ವಿದ್ಯಾರ್ಥಿಗಳ ಸ್ಥಳಾಂತರ ಕುರಿತು ಮಾತನಾಡಿದ ಅಲಿಪೋವ್, ತಮ್ಮ ಸರ್ಕಾರವು ಪೂರ್ವ ಉಕ್ರೇನ್ ನಗರಗಳಾದ ಖಾರ್ಕಿವ್, ಸುಮಿ ಮತ್ತು ಪಿಸೊಚಿನ್‌ನಿಂದ ವಿದ್ಯಾರ್ಥಿಗಳನ್ನು ಹೊರಗೆ ಕರೆದೊಯ್ಯಲು ಪ್ರಯತ್ನಿಸುತ್ತಿದೆ. ಭಾರತದ ಸುಮಾರು 3,000 ಖಾರ್ಕಿವ್‌, 900 ಮಂದಿ ಪಿಸೋಚಿನ್‌ ಮತ್ತು 670 ಮಂದಿ ಸುಮಿಯಲ್ಲಿ ಸಿಲುಕಿಕೊಂಡಿದ್ದಾರೆ ಎಂದು ಮಾಹಿತಿ ನೀಡಿದರು.

ಕೆಲವು ಪ್ರದೇಶಗಳಲ್ಲಿ ಹೋರಾಟ ಮುಂದುವರೆದಿದೆ. ಉಕ್ರೇನ್​ನಲ್ಲಿ ಸಿಲುಕಿರುವ ಭಾರತೀಯರನ್ನು ಸಾಗಿಸಲು ರಷ್ಯಾ ತನ್ನ ಗಡಿಯಲ್ಲಿ ನೂರಾರು ಬಸ್‌ಗಳನ್ನು ಸಿದ್ಧಪಡಿಸಿದೆ. ಉಕ್ರೇನ್​ನಿಂದ ಗುಂಡಿನ ದಾಳಿಗೆ ಒಳಗಾದ ಕೆಲವು ಪ್ರದೇಶಗಳಲ್ಲಿ ಪರಿಶೀಲನೆ ನಡೆಸಬೇಕಿದೆ ಎಂದು ಅಲಿಪೋವ್ ಹೇಳಿದ್ದಾರೆ.

ಇದನ್ನೂ ಓದಿ: ರಷ್ಯಾದಲ್ಲಿ ಹಣಕಾಸು ಸೇವೆ ಸ್ಥಗಿತಗೊಳಿಸಿದ ಅಮೆರಿಕದ ವೀಸಾ, ಮಾಸ್ಟರ್​ಕಾರ್ಡ್

ಈ ಕುರಿತು ಶನಿವಾರ ಪ್ರತಿಕ್ರಿಯೆ ನೀಡಿದ್ದ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ಅರಿಂದಮ್ ಬಾಗ್ಚಿ, ಖಾರ್ಕಿವ್ ಮತ್ತು ಪಿಸೋಚಿನ್‌ ನಗರಗಳಿಂದ ಭಾರತೀಯರ ವಿದ್ಯಾರ್ಥಿಗಳ ಸ್ಥಳಾಂತರ ಬಹುತೇಕ ಪೂರ್ಣಗೊಂಡಿದೆ ಎಂದು ಹೇಳಿದ್ದಾರೆ.

ವಿಶೇಷ ಗುಂಪುಗಳ ರಚನೆ: ರಷ್ಯಾದ ಗಡಿಯಿಂದ ಸುಮಾರು 60 ಕಿಮೀ ದೂರದಲ್ಲಿರುವ ಪೂರ್ವ ಉಕ್ರೇನ್‌ನಲ್ಲಿರುವ ಸುಮಿ ನಗರದಿಂದ ಸುಮಾರು 700 ಭಾರತೀಯ ವಿದ್ಯಾರ್ಥಿಗಳನ್ನು ಸ್ಥಳಾಂತರಿಸಲು ಭಾರತವು ಈಗ ಗಮನಹರಿಸುತ್ತಿದೆ ಎಂದು ಬಾಗ್ಚಿ ಇದೇ ವೇಳೆ ಹೇಳಿದ್ದರು. ಭಾರತೀಯರನ್ನು ರಷ್ಯಾದ ಪ್ರದೇಶಕ್ಕೆ ಕರೆದೊಯ್ಯಲು ಮತ್ತು ನಂತರ ಅವರನ್ನು ಭಾರತಕ್ಕೆ ಸಾಗಿಸಲು ವಿಶೇಷ ಗುಂಪುಗಳನ್ನು ರಚಿಸಿದ್ದೇವೆ ಎಂದು ಸ್ಪಷ್ಟನೆ ನೀಡಿದ್ದಾರೆ.

ಈ ಕುರಿತು ಉಕ್ರೇನ್​ನಲ್ಲಿರುವ ಭಾರತೀಯ ರಾಯಭಾರ ಕಚೇರಿ ಟ್ವೀಟ್ ಮಾಡಿ, ಪಿಸೋಚಿನ್​​ ನಗರದಲ್ಲಿರುವ ಎಲ್ಲಾ ಭಾರತೀಯ ನಾಗರಿಕರನ್ನು ಸ್ಥಳಾಂತರ ಮಾಡಲಾಗಿದೆ. ಅವರ ಪ್ರಯಾಣ ಪೂರ್ಣಗೊಳ್ಳುವವರೆಗೆ ಅವರೊಂದಿಗೆ ಸಂಪರ್ಕದಲ್ಲಿ ಭಾರತದ ರಾಯಭಾರ ಕಚೇರಿ ಇರುತ್ತದೆ ಎಂದು ಶನಿವಾರ ಸಂಜೆ ಟ್ವೀಟ್ ಮಾಡಿತ್ತು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.