ETV Bharat / bharat

ಪ್ರಸ್ತುತ ರಾಜಕೀಯದಲ್ಲಿ ಮತಪೆಟ್ಟಿಗೆ ತಿರುಚಿ ಯಾರು ಬೇಕಾದರೂ ಪ್ರಧಾನಿಯಾಗಬಹುದು: ಉದ್ಧವ್ ಠಾಕ್ರೆ

author img

By

Published : Jul 10, 2023, 7:55 PM IST

Shiv Sena chief Uddhav Thackeray
ಶಿವಸೇನೆ ಮುಖ್ಯಸ್ಥ ಉದ್ಧವ್ ಠಾಕ್ರೆ

ಮಹಾರಾಷ್ಟ್ರದ ಸದ್ಯದ ರಾಜಕೀಯ ಪರಿಸ್ಥಿತಿಯ ಬಗ್ಗೆ ಶಿವಸೇನೆ ಮುಖ್ಯಸ್ಥ ಉದ್ಧವ್​ ಠಾಕ್ರೆ ವಿಷಾದ ವ್ಯಕ್ತಪಡಿಸಿದ್ದಾರೆ.

ಅಮರಾವತಿ (ಮಹಾರಾಷ್ಟ್ರ): ಶಿವಸೇನೆ (ಯುಬಿಟಿ) ಮುಖ್ಯಸ್ಥ, ಮಾಜಿ ಸಿಎಂ ಉದ್ಧವ್ ಠಾಕ್ರೆ, ತಮ್ಮ ರಾಜಕೀಯ ಪ್ರತಿಸ್ಪರ್ಧಿಗಳ ವಿರುದ್ಧ ಪರೋಕ್ಷವಾಗಿ ವಾಗ್ದಾಳಿ ನಡೆಸಿದ್ದು, ಬ್ರಿಟಿಷರ ಗುಲಾಮಗಿರಿಯಿಂದ ಮುಕ್ತಿ ಪಡೆಯಲು ಅನೇಕರು ತಮ್ಮ ಪ್ರಾಣವನ್ನೇ ತ್ಯಾಗ ಮಾಡಿದ್ದಾರೆ. ಆದರೆ ಈಗ ಮತಪೆಟ್ಟಿಗೆಗಳನ್ನು ಟ್ಯಾಂಪರಿಂಗ್ ಮಾಡುವ ಮೂಲಕ ಯಾರು ಬೇಕಾದರೂ ಪ್ರಧಾನಿಯಾಗಬಹುದು ಎಂಬ ಪರಿಸ್ಥಿತಿ ಉದ್ಭವಿಸಿದೆ ಎಂದು ವಿಷಾದ ವ್ಯಕ್ತಪಡಿಸಿದ್ದಾರೆ.

ಅಮರಾವತಿಗೆ ಭೇಟಿ ನೀಡಿದ ಸಂದರ್ಭ ಮಾಧ್ಯಮದ ಜೊತೆ ಮಾತನಾಡಿದ ಅವರು, ಈಗ ಮಹಾರಾಷ್ಟ್ರದ ರಾಜಕೀಯ ಚಿತ್ರಣ ಸಾಕಷ್ಟು ಬದಲಾಗುತ್ತಿದೆ. ಒಂದು ಕಾಲದಲ್ಲಿ ಮತಪೆಟ್ಟಿಗೆಗಳ ಮೂಲಕ ಸರ್ಕಾರ ರಚನೆಯಾಗುತ್ತಿತ್ತು. ಆದರೆ ದುರದೃಷ್ಟವಶಾತ್ ಈಗ ಅಧಿಕಾರಕ್ಕೆ ಬರಬೇಕಾದ ಸರ್ಕಾರವನ್ನು ಮತಯಂತ್ರಗಳು ನಿರ್ಧರಿಸುತ್ತಿಲ್ಲ ಎಂದರು. ವಿದರ್ಭ ಪ್ರವಾಸದಲ್ಲಿರುವ ಉದ್ಧವ್ ಠಾಕ್ರೆ ಅವರು ಇಂದು ಅಮರಾವತಿಯಲ್ಲಿ ಅಮರಾವತಿ ಮತ್ತು ಅಕೋಲ್ಯದ ಅಧಿಕಾರಿಗಳು ಮತ್ತು ಕಾರ್ಯಕರ್ತರೊಂದಿಗೆ ಸಂವಾದ ನಡೆಸಲಿದ್ದಾರೆ. ಅದಕ್ಕೂ ಮುನ್ನ ಅವರು ಮಾಧ್ಯಮಗೋಷ್ಟಿ ನಡೆಸಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.

ಹೋರಾಟಕ್ಕೆ ಕರೆ: ನಿತೀಶ್ ಕುಮಾರ್, ಮಮತಾ ಬ್ಯಾನರ್ಜಿ ಮತ್ತು ಶರದ್ ಪವಾರ್ ಅವರಂತಹ ವಿರೋಧ ಪಕ್ಷದ ನಾಯಕರ ನಡುವಿನ ಏಕತೆಯ ಬಗ್ಗೆ ಕೇಳಿದಾಗ, ಎಲ್ಲಾ ಪ್ರಜಾಸತ್ತಾತ್ಮಕ ಶಕ್ತಿಗಳು ಒಗ್ಗೂಡಿ ತಮ್ಮ ಸ್ವಾತಂತ್ರ್ಯದ ಹಕ್ಕಿಗಾಗಿ ಹೋರಾಡುವಂತೆ ಉದ್ಧವ್​ ಠಾಕ್ರೆ ಮನವಿ ಮಾಡಿದರು. ದೇಶದಲ್ಲಿರುವ ಪ್ರಜಾಪ್ರಭುತ್ವ ವಿರೋಧಿ ಶಕ್ತಿಗಳ ವಿರುದ್ಧದ ಹೋರಾಟದಲ್ಲಿ ಜನರು ಮತ್ತು ಸಮಾನ ಮನಸ್ಕ ಸಂಘಟನೆಗಳು ಕೈಜೋಡಿಸುವಂತೆ ಕರೆ ನೀಡಿದರು.

ಹೊಸ ಉಪ ಮುಖ್ಯಮಂತ್ರಿ ಅಜಿತ್ ಪವಾರ್ ಹಾಗೂ ಇತರ 8 ಶಾಸಕರು ಪಕ್ಷಾಂತರ ಮಾಡಿರುವ ಸಂಪೂರ್ಣ ಪರಿಸ್ಥಿತಿಯ ಬಗ್ಗೆ ನಾನು ಅನೇಕ ಬಾರಿ ಯೋಚಿಸಿದ್ದೇನೆ ಎಂದು ಹೇಳಿದ ಉದ್ಧವ್, ತಮ್ಮ ಪಕ್ಷದ ಮಾಜಿ ಮುಖ್ಯಸ್ಥ ದಿವಂಗತ ಬಾಳಾಸಾಹೇಬ್ ಠಾಕ್ರೆ ಬಹಳ ಹಿಂದೆಯೇ ದೇಶದಲ್ಲಿ ಜನಪ್ರತಿನಿಧಿಗಳನ್ನು ಹಿಂಪಡೆಯುವ ಹಕ್ಕನ್ನು ಕೋರಿದ್ದರು. ಈ ರೈಟ್ ಟು ರಿಕಾಲ್ ಬೇಡಿಕೆ ದೇಶದ ಪ್ರಸ್ತುತ ರಾಜಕೀಯ ಪರಿಸ್ಥಿತಿಯಲ್ಲಿ ತುಂಬಾ ಸೂಕ್ತವೆಂದು ತೋರುತ್ತದೆ ಎಂದು ಪ್ರತಿಪಾದಿಸಿದರು.

ಮುಂಗಾರು ಮುಗಿಯುತ್ತಿದ್ದಂತೆಯೇ ದೇಶದಲ್ಲಿ ಚುನಾವಣಾ ಕದನ ಆರಂಭವಾಗಲಿದೆ. ಈ ಹಿನ್ನೆಲೆಯಲ್ಲಿ ಯಾವಾಗಲೂ ನನ್ನೊಂದಿಗೆ ಇರುವ ಶಿವಸೇನೆಯನ್ನು ನಿಜವಾಗಿ ಪ್ರೀತಿಸುವ, ಶಿವಸೈನಿಕರನ್ನು ಭೇಟಿ ಮಾಡಲು ಇಡೀ ಮಹಾರಾಷ್ಟ್ರ ಪ್ರವಾಸ ಕೈಗೊಂಡಿದ್ದೇನೆ. ಪ್ರತಿಸ್ಪರ್ಧಿ ರಾಜಕೀಯ ಪಕ್ಷವನ್ನು ಒಡೆಯುವ ರಾಜಕಾರಣ ರಾಜ್ಯ ಮತ್ತು ದೇಶದಲ್ಲಿ ಹಿಂದಿನಿಂದಲೂ ನಡೆಯುತ್ತಿದ್ದು, ಈಗ ನೇರವಾಗಿ ಬೇರೆ ಪಕ್ಷಗಳಿಂದ ಚುನಾಯಿತ ಪ್ರತಿನಿಧಿಗಳನ್ನು ಕದಿಯುತ್ತಿದ್ದಾರೆ ಎಂದು ಉದ್ಧವ್ ಠಾಕ್ರೆ ಕಿಡಿಕಾರಿದರು.

ಉದ್ಧವ್ ಠಾಕ್ರೆ ಅವರು ಅಮರಾವತಿಗೆ ಆಗಮಿಸುತ್ತಿದ್ದಂತೆ ನಗರದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದ್ದು, ಅವರನ್ನು ಸ್ವಾಗತಿಸಲು ನಗರದಾದ್ಯಂತ ಹಾಕಲಾಗಿದ್ದ ಶಿವಸೇನೆ ಪೋಸ್ಟರ್‌ಗಳನ್ನು ಪ್ರತಿಸ್ಪರ್ಧಿ ಪಕ್ಷದ ಬೆಂಬಲಿಗರು ಧ್ವಂಸಗೊಳಿಸಿದ್ದಾರೆ. ಈ ಬಗ್ಗೆ ಉದ್ಧವ್ ಠಾಕ್ರೆ ಅವರನ್ನು ಕೇಳಿದಾಗ ಅವರು ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ. ಕಳೆದ ಚುನಾವಣೆಯಲ್ಲಿ ಅಮರಾವತಿ ಲೋಕಸಭಾ ಕ್ಷೇತ್ರದಲ್ಲಿ ಶಿವಸೇನೆ ಸೋಲನುಭವಿಸಿದ್ದರೂ ಅದಕ್ಕೂ ಮುನ್ನ ಸತತವಾಗಿ ಹಲವು ಬಾರಿ ಗೆಲುವು ಸಾಧಿಸಿತ್ತು. ಆದರೆ, ಕಳೆದ ಬಾರಿ ಆಯ್ಕೆಯಾದವರು ಹೆಚ್ಚು ಕಾಲ ಉಳಿಯುವುದಿಲ್ಲ ಎಂದು ಉದ್ಧವ್ ಠಾಕ್ರೆ ಭವಿಷ್ಯ ನುಡಿದರು.

ಇದನ್ನೂ ಓದಿ: ಸಿಂಧಿಯಾ ಭದ್ರಕೋಟೆಯಲ್ಲಿ ರ್‍ಯಾಲಿ ನಡೆಸಲಿರುವ ಪ್ರಿಯಾಂಕಾ ಗಾಂಧಿ.. ಕಾವೇರಿದ ಚುನಾವಣಾ ಕಾವು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.