ETV Bharat / bharat

ತಿರುಪತಿ ದೇವಸ್ಥಾನದಲ್ಲಿ ಫೇಶಿಯಲ್ ರಿಕಗ್ನಿಶನ್ ಅಳವಡಿಕೆ: ಮತ್ತಷ್ಟು ಸುಲಭವಾಗಲಿದೆ ದೇವರ ದರ್ಶನ

author img

By

Published : Mar 2, 2023, 12:38 PM IST

ದೇಶದ ಅತ್ಯಂತ ಪವಿತ್ರ ದೇವಸ್ಥಾನಗಳಲ್ಲೊಂದಾಗಿರುವ ತಿರುಪತಿ ತಿರುಮಲ ದೇವಸ್ಥಾನದಲ್ಲಿ ಫೇಶಿಯಲ್ ರಿಕಗ್ನಿಶನ್ ತಂತ್ರಜ್ಞಾನ ಅಳವಡಿಸಲಾಗಿದೆ. ಸದ್ಯ ಇದನ್ನು ಪ್ರಾಯೋಗಿಕವಾಗಿ ಅಳವಡಿಸಲಾಗಿದ್ದು, ಮುಂದಿನ ದಿನಗಳಲ್ಲಿ ಇದನ್ನು ವಿಸ್ತರಣೆ ಮಾಡುವ ಯೋಜನೆ ಇದೆ.

Tirumala temple introduces facial recognition technology
Tirumala temple introduces facial recognition technology

ತಿರುಪತಿ : ತಿರುಪತಿ ತಿರುಮಲ ದೇವಸ್ಥಾನದಲ್ಲಿ ಫೇಶಿಯಲ್ ರಿಕಗ್ನಿಶನ್ ತಂತ್ರಜ್ಞಾನ (ಮುಖ ಗುರುತಿಸುವ ತಂತ್ರಜ್ಞಾನ) ವನ್ನು ಬುಧವಾರದಿಂದ ಪ್ರಾಯೋಗಿಕವಾಗಿ ಅಳವಡಿಸಲಾಗಿದೆ. ತಿಮ್ಮಪ್ಪನ ದರ್ಶನಕ್ಕೆ ಆಗಮಿಸುವ ಭಕ್ತಾದಿಗಳು ಇನ್ನು ಮುಂದೆ ಈ ಫೇಶಿಯಲ್ ರಿಕಗ್ನಿಶನ್ ಕ್ಯಾಮೆರಾಗಳ ಮೂಲಕ ಸುರಕ್ಷತಾ ತಪಾಸಣೆಗೆ ಒಳಗಾಗಲಿದ್ದಾರೆ. ಈ ತಂತ್ರಜ್ಞಾನವನ್ನು ಸದ್ಯ ವೈಕುಂಟಂ 2 ಮತ್ತು ವಸತಿ ನಿರ್ವಹಣಾ ವ್ಯವಸ್ಥೆಯಲ್ಲಿ ಅಳವಡಿಸಲಾಗಿದೆ. ಟೋಕನ್ ರಹಿತ ದರ್ಶನದಲ್ಲಿ ಪಾರದರ್ಶಕತೆ ಹೆಚ್ಚಿಸುವುದು ಮತ್ತು ಭೇಟಿ ನೀಡುವ ಯಾತ್ರಾರ್ಥಿಗಳಿಗೆ ಇನ್ನಷ್ಟು ಸರಳವಾಗಿ ಕೊಠಡಿಗಳನ್ನು ಹಂಚುವ ಉದ್ದೇಶದಿಂದ ಫೇಶಿಯಲ್ ರಿಕಗ್ನಿಶನ್ ಪರಿಚಯಿಸಲಾಗಿದೆ ಎಂದು ಟಿಟಿಡಿ ಅಧಿಕಾರಿಗಳು ಹೇಳಿದ್ದಾರೆ.

ಸರ್ವ ದರ್ಶನ (ಉಚಿತ ದರ್ಶನ) ಸಂಕೀರ್ಣದಲ್ಲಿ ಮತ್ತು ಮುಂಗಡ ಠೇವಣಿ ಮರುಪಾವತಿ ಕೌಂಟರ್‌ಗಳಲ್ಲಿ ಒಬ್ಬನೇ ವ್ಯಕ್ತಿಯು ಹೆಚ್ಚಿನ ಟೋಕನ್‌ಗಳನ್ನು ಸಂಗ್ರಹಿಸುವುದನ್ನು ತಡೆಯಲು ಈ ಹೊಸ ತಂತ್ರಜ್ಞಾನ ವ್ಯವಸ್ಥೆಯನ್ನು ಬಳಸಲಾಗುತ್ತದೆ. ಈ ತಂತ್ರಜ್ಞಾನದ ಬಳಕೆಯು ಪದೇ ಪದೆ ಬರುವ ಜನರಿಗೆ ದರ್ಶನವನ್ನು ನಿರಾಕರಿಸಲು ಸಹಾಯ ಮಾಡುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಒಬ್ಬರೇ ವ್ಯಕ್ತಿ ಪದೇ ಪದೆ ದರ್ಶನ ಪಡೆಯಲು ಹೋದರೆ ಇತರ ಭಕ್ತರು ದರ್ಶನಕ್ಕಾಗಿ ಬಹಳ ಸಮಯ ಕಾಯಬೇಕಾಗುತ್ತದೆ. ಹೀಗಾಗಿ ಒಬ್ಬ ಭಕ್ತನಿಗೆ ತಿಂಗಳಿಗೆ ಒಂದಕ್ಕಿಂತ ಹೆಚ್ಚು ಬಾರಿ ಉಚಿತ ದರ್ಶನಕ್ಕೆ ಅವಕಾಶವಿರುವುದಿಲ್ಲ.

ಸಬ್ಸಿಡಿ ದರದ ಬಾಡಿಗೆಯಲ್ಲಿ ನಿಜವಾಗಿಯೂ ಅಗತ್ಯವಿರುವ ಭಕ್ತರಿಗೆ ಕೊಠಡಿಗಳನ್ನು ನೀಡಲು ಫೇಶಿಯಲ್ ರೆಕಗ್ನಿಷನ್ ಟೆಕ್ನಾಲಜಿ (ಎಫ್‌ಆರ್‌ಟಿ) ಟಿಟಿಡಿಗೆ ಸಹಾಯಕಾರಿಯಾಗಲಿದೆ. ಸಬ್ಸಿಡಿ ಬಾಡಿಗೆಯಲ್ಲಿ ಕೊಠಡಿಗಳನ್ನು ಕಾಯ್ದಿರಿಸುವ ಮತ್ತು ನಂತರ ಹೆಚ್ಚಿನ ಬೆಲೆಗೆ ಅದೇ ಕೊಠಡಿಗಳನ್ನು ಬೇರೆಯವರಿಗೆ ನೀಡುವ ಮಧ್ಯವರ್ತಿಗಳ ಪಾತ್ರವನ್ನು ನಿಗ್ರಹಿಸಲು ಹೊಸ ತಂತ್ರಜ್ಞಾನ ಸಹಾಯ ಮಾಡಲಿದೆ. ಎಫ್​ಆರ್​ಟಿ ಇದು ಯಾವುದೇ ಒಂದು ಮುಖವನ್ನು ಲಿಂಗ, ವಯಸ್ಸು, ಭಾವನೆಗಳು ಮತ್ತು ವೈಶಿಷ್ಟ್ಯಗಳ ಆಧಾರದ ಮೇಲೆ ಗುರುತಿಸುವ ಸಾಫ್ಟ್‌ವೇರ್ ಆಧರಿಸಿ ಕೆಲಸ ಮಾಡುತ್ತದೆ. ಇದು ಎರಡು ಮುಖಗಳ ನಡುವಿನ ಹೋಲಿಕೆಯನ್ನು ಮೌಲ್ಯಮಾಪನ ಮಾಡುತ್ತದೆ.

ಸರ್ವ ದರ್ಶನ ಮತ್ತು ವಸತಿ ನಿರ್ವಹಣಾ ವ್ಯವಸ್ಥೆಯಲ್ಲಿನ ಅಳವಡಿಸಲಾದ ಎಫ್​ಆರ್​ಟಿ ಅನುಷ್ಠಾನದ ಫಲಿತಾಂಶಗಳನ್ನು ಅವಲಂಬಿಸಿ, ಟಿಟಿಡಿ ಇದನ್ನು ಇತರ ವಿಭಾಗಗಳಿಗೆ ವಿಸ್ತರಿಸುವ ಯೋಜನೆ ಹೊಂದಿದೆ. ಫೆಬ್ರವರಿ 27 ರಂದು ಒಟ್ಟು 71,387 ಭಕ್ತರು ದರ್ಶನ ಪಡೆದಿದ್ದು, ಒಟ್ಟು 5.71 ಕೋಟಿ ಹುಂಡಿ ಸಂಗ್ರಹವಾಗಿದೆ ಎಂದು ಟಿಟಿಡಿ ತಿಳಿಸಿದೆ. ತಿರುಪತಿ ತಿಮ್ಮಪ್ಪನ ದರ್ಶನಕ್ಕೆ ಪ್ರತಿದಿನ 50,000 ರಿಂದ ಒಂದು ಲಕ್ಷ ಯಾತ್ರಾರ್ಥಿಗಳು ಆಗಮಿಸುತ್ತಾರೆ. ವಾರ್ಷಿಕ ಬ್ರಹ್ಮೋತ್ಸವ ಮತ್ತು ಉತ್ಸವಗಳಂತಹ ವಿಶೇಷ ಸಂದರ್ಭಗಳಲ್ಲಿ ಈ ಸಂಖ್ಯೆ 4 ರಿಂದ 5 ಲಕ್ಷಕ್ಕೆ ಏರುತ್ತದೆ.

ಪ್ರತಿ ವರ್ಷ ಹುಂಡಿ ಸಂಗ್ರಹ ಅಥವಾ ಭಕ್ತರ ಕಾಣಿಕೆಯಿಂದ ದೇವಾಲಯದಲ್ಲಿ 1,000 ದಿಂದ 1,200 ಕೋಟಿ ರೂ. ಕಾಣಿಕೆ ಸಂಗ್ರಹವಾಗುತ್ತದೆ. ದೇವಸ್ಥಾನವು 10.25 ಟನ್ ಚಿನ್ನ ಸೇರಿದಂತೆ 2.5 ಲಕ್ಷ ಕೋಟಿ ರೂಪಾಯಿಗೂ ಹೆಚ್ಚು ಆಸ್ತಿ ಹೊಂದಿದೆ ಎಂದು ಕಳೆದ ವರ್ಷ ನವೆಂಬರ್‌ನಲ್ಲಿ ಘೋಷಿಸಲಾಗಿತ್ತು. ಆಸ್ತಿಗಳಲ್ಲಿ ಭಕ್ತರು ನೀಡಿದ ಕಾಣಿಕೆಯಾಗಿ ನೀಡಿದ ಭೂಮಿ, ಕಟ್ಟಡಗಳು, ನಗದು ಮತ್ತು ಚಿನ್ನದ ಠೇವಣಿ ಸೇರಿವೆ.

ಇದನ್ನೂ ಓದಿ : ತಿರುಮಲ ದೇಶದಲ್ಲೇ ಅತೀ ಹೆಚ್ಚು ಭಕ್ತರು ಭೇಟಿ ನೀಡಿದ ಎರಡನೇ ದೇವಸ್ಥಾನ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.