ETV Bharat / bharat

ದೇಶದ 147 ಭೂಕುಸಿತ ಅಪಾಯದ ಜಿಲ್ಲೆಗಳ ಪಟ್ಟಿ ಮಾಡಿದ ಇಸ್ರೋ.. ಕರ್ನಾಟಕದಲ್ಲಿ ಎಷ್ಟು ಸೂಕ್ಷ್ಮ ಜಿಲ್ಲೆಗಳಿವೆ ಗೊತ್ತಾ?

author img

By

Published : Mar 9, 2023, 9:30 PM IST

ದೇಶದಲ್ಲಿರುವ ಭೂಕುಸಿತದ 147 ಸೂಕ್ಷ್ಮ ಜಿಲ್ಲೆಗಳ ಕುರಿತು ಇಸ್ರೋದ ರಾಷ್ಟ್ರೀಯ ದೂರಸಂವೇದಿ ಕೇಂದ್ರವು ನಕ್ಷೆಗಳ ಅಟ್ಲಾಸ್​ ಬಿಡುಗಡೆ ಮಾಡಿದೆ.

rudraprayag-and-tehri-top-landslide-risk-districts-according-to-isro-survey
ದೇಶದ 147 ಭೂಕುಸಿತ ಅಪಾಯದ ಜಿಲ್ಲೆಗಳ ಪಟ್ಟಿ ಮಾಡಿದ ಇಸ್ರೋ... ಕರ್ನಾಟಕದಲ್ಲಿ ಎಷ್ಟು ಸೂಕ್ಷ್ಮ ಜಿಲ್ಲೆಗಳಿವೆ ಗೊತ್ತಾ?

ಹೈದರಾಬಾದ್​/ಡೆಹ್ರಾಡೂನ್: ದೇಶದ ಭೂಕುಸಿತ ಅಪಾಯದ ಪ್ರದೇಶಗಳ ಬಗ್ಗೆ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ)ದಿಂದ ಮತ್ತೊಂದು ಆಘಾತಕಾರಿ ಸುದ್ದಿ ಹೊರಬಿದ್ದಿದೆ. ಕರ್ನಾಟಕದ ಕೊಡಗು, ಹಾಸನ, ದಕ್ಷಿಣ ಕನ್ನಡ ಸೇರಿದಂತೆ ದೇಶದಲ್ಲಿರುವ ಭೂಕುಸಿತದ 147 ಸೂಕ್ಷ್ಮ ಜಿಲ್ಲೆಗಳ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ. ಈ ಪಟ್ಟಿಯಲ್ಲಿ ಉತ್ತರಾಖಂಡದ ಎರಡು ಜಿಲ್ಲೆಗಳು ಅಗ್ರಸ್ಥಾನದಲ್ಲಿದ್ದರೆ, ಕೊಡಗು 12ನೇ ಸ್ಥಾನದಲ್ಲಿದೆ.

ಇಸ್ರೋದ ರಾಷ್ಟ್ರೀಯ ದೂರಸಂವೇದಿ ಕೇಂದ್ರ (National Remote Sensing Centre - NRSC)ವು ಭೂಕುಸಿತದ ನಕ್ಷೆಗಳ ಅಟ್ಲಾಸ್​ ಬಿಡುಗಡೆ ಮಾಡಿದೆ. ಇದರಲ್ಲಿ 17 ರಾಜ್ಯಗಳಲ್ಲಿ ಭೂಕುಸಿತ ಪೀಡಿತ ಪ್ರದೇಶಗಳು ಮತ್ತು ಹಿಮಾಲಯ ಮತ್ತು ಪಶ್ಚಿಮ ಘಟ್ಟಗಳ ಎರಡು ಕೇಂದ್ರಾಡಳಿತ ಪ್ರದೇಶಗಳನ್ನು ಪಟ್ಟಿ ಮಾಡಲಾಗಿದೆ. ಕರ್ನಾಟಕದ ಎಂಟು ಜಿಲ್ಲೆಗಳು ಕೂಡ ಭೂಕುಸಿತ ಭೀತಿ ಪ್ರದೇಶಗಳನ್ನು ಒಳಗೊಂಡಿದೆ.

ರುದ್ರಪ್ರಯಾಗ - ತೆಹ್ರಿ ಅಪಾಯದ ಅಗ್ರ ಪ್ರದೇಶಗಳು: ಇಸ್ರೋದ ಬಿಡುಗಡೆ ಮಾಡಿರುವ ಈ ಪಟ್ಟಿಯಲ್ಲಿ ದೇಶದ 147 ಸೂಕ್ಷ್ಮ ಜಿಲ್ಲೆಗಳ ಪೈಕಿ ಉತ್ತರಾಖಂಡದ ಎರಡು ಜಿಲ್ಲೆಗಳು ಅಪಾಯದ ಪ್ರದೇಶದ ಅಗ್ರಸ್ಥಾನದಲ್ಲಿವೆ. ಈ ಹಿಂದೆ ಕಾರ್ಟೊಸ್ಯಾಟ್ - 2ಎಸ್ ಉಪಗ್ರಹದ ಚಿತ್ರಗಳನ್ನು ಬಿಡುಗಡೆ ಮಾಡಿದ್ದಾಗ ಜೋಶಿಮಠ ನಗರದ ಬಗ್ಗೆ ಎಚ್ಚರಿಕೆ ನೀಡಲಾಗಿತ್ತು. ಇತ್ತೀಚಿನ ಇಸ್ರೋ ಸಮೀಕ್ಷೆಯ ಪ್ರಕಾರ, ರುದ್ರಪ್ರಯಾಗ ಮತ್ತು ತೆಹ್ರಿ ಜಿಲ್ಲೆಗಳು ಉತ್ತರಾಖಂಡದಲ್ಲಿ ಮಾತ್ರವಲ್ಲದೇ ಇಡೀ ಭಾರತದಲ್ಲೇ ಭೂಕುಸಿತದ ಅಪಾಯದಲ್ಲಿವೆ.

ರುದ್ರಪ್ರಯಾಗ ಜಿಲ್ಲೆ ಕೇದಾರನಾಥ ಮತ್ತು ಬದರಿನಾಥ ಧಾಮಕ್ಕೆ ಹೆಬ್ಬಾಗಿಲು ಆಗಿದೆ. ಇದರೊಂದಿಗೆ ರುದ್ರಪ್ರಯಾಗ ಜಿಲ್ಲೆ ಭಾರತದಲ್ಲಿ ಅತಿ ಹೆಚ್ಚು ಭೂಕುಸಿತ ಸಾಂದ್ರತೆಯನ್ನು ಹೊಂದಿದೆ. ಇದು ಅತ್ಯಧಿಕ ಒಟ್ಟು ಜನಸಂಖ್ಯೆ, ದುಡಿಯುವ ಜನಸಂಖ್ಯೆ, ಸಾಕ್ಷರತೆ ಮತ್ತು ಮನೆಗಳ ಸಂಖ್ಯೆಯನ್ನು ಹೊಂದಿದೆ. ಇದೀಗ ಇಸ್ರೋ ವಿಜ್ಞಾನಿಗಳು 17 ರಾಜ್ಯಗಳ 147 ಜಿಲ್ಲೆಗಳು ಮತ್ತು ಎರಡು ಕೇಂದ್ರಾಡಳಿತ ಪ್ರದೇಶಗಳಲ್ಲಿ 1988 ಮತ್ತು 2022ರ ನಡುವೆ ದಾಖಲಾದ 80,933 ಭೂ ಕುಸಿತಗಳ ಆಧಾರದ ಮೇಲೆ ಭೂಕುಸಿತದ ಅಪಾಯದಲ್ಲಿರುವ ಪ್ರದೇಶಗಳ ಮೌಲ್ಯಮಾಪನ ಕೈಗೊಂಡಿದ್ದಾರೆ.

ಕರ್ನಾಟಕದ ಯಾವೆಲ್ಲ ಜಿಲ್ಲೆಗಳು?: ಉತ್ತರಾಖಂಡ ನಂತರದಲ್ಲಿ ಕೇರಳ, ಜಮ್ಮು ಮತ್ತು ಕಾಶ್ಮೀರ, ಸಿಕ್ಕಿಂ ಹಾಗೂ ಮಣಿಪುರದ ಜಿಲ್ಲೆಗಳ ಈ ಭೂ ಕುಸಿತದ ಅಪಾಯದ ಪಟ್ಟಿಯಲ್ಲಿವೆ. ಇದರ ಬಳಿಕ ಕರ್ನಾಟಕ ಕೂಡ ಇಂತಹ ಅಪಾಯ ಎದುರಿಸುತ್ತಿದೆ ಎಂದು ಇಸ್ರೋಂದ ಭೂಕುಸಿತದ ನಕ್ಷೆಗಳ ಅಟ್ಲಾಸ್ ಬಹಿರಂಗ ಪಡಿಸಿದೆ. ಅದರಲ್ಲೂ, ಕೊಡುಗು ದೇಶದ 147 ಸೂಕ್ಷ್ಮ ಜಿಲ್ಲೆಗಳ ಪಟ್ಟಿಗಳಲ್ಲಿ 12ನೇ ಸ್ಥಾನದಲ್ಲಿದೆ. ನಂತರದಲ್ಲಿ ಹಾಸನ ಜಿಲ್ಲೆ - 53, ದಕ್ಷಿಣ ಕನ್ನಡ ಜಿಲ್ಲೆ - 54, ಉಡುಪಿ ಜಿಲ್ಲೆ - 77, ಚಿಕ್ಕಮಗಳೂರು ಜಿಲ್ಲೆ - 92, ಶಿವಮೊಗ್ಗ ಜಿಲ್ಲೆ - 103, ಉತ್ತರ ಕನ್ನಡ ಜಿಲ್ಲೆ - 116 ಹಾಗೂ ಹಾವೇರಿ ಜಿಲ್ಲೆ - 124ನೇ ಸ್ಥಾನದಲ್ಲಿದೆ ಎಂದು ಉಲ್ಲೇಖಿಸಲಾಗಿದೆ.

ಇಸ್ರೋದ ರಾಷ್ಟ್ರೀಯ ದೂರಸಂವೇದಿ ಕೇಂದ್ರದ ವಿಜ್ಞಾನಿಗಳು ಮೊದಲ ಬಾರಿಗೆ 147 ಜಿಲ್ಲೆಗಳಲ್ಲಿ 1988 ಮತ್ತು 2022ರ ನಡುವೆ ದಾಖಲಾದ ಭೂಕುಸಿತಗಳ ಆಧಾರದ ಮೇಲೆ ಈ ಅಧ್ಯಯನ ಮಾಡಿದ್ದಾರೆ. ಈ ಭೂಕುಸಿತ ಅಪಾಯದ ವಿಶ್ಲೇಷಣೆಯು ಮಾನವ ಹಾಗೂ ಜಾನುವಾರುಗಳ ಜನಸಂಖ್ಯಾ ಸಾಂದ್ರತೆಯನ್ನು ಆಧರಿಸಿದ್ದು, ಇದು ಜನರ ಮೇಲೆ ಬೀರುವ ಪರಿಣಾಮವನ್ನು ಸೂಚಿಸುವುದರೊಂದಿಗೆ ದೇಶದಲ್ಲಿ ಹೆಚ್ಚು ಭೂ ಕುಸಿತದ ದುರ್ಬಲ ಸ್ಥಳಗಳನ್ನು ಪಟ್ಟಿ ಮಾಡಲಾಗಿದೆ.

ಇದನ್ನೂ ಓದಿ: ಬದ್ರಿನಾಥ ಹೆದ್ದಾರಿಯಲ್ಲಿ ಬಿರುಕು: ಚಾರಧಾಮ ಯಾತ್ರೆಗೆ ಅಡ್ಡಿಯಾಗುವ ಆತಂಕ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.