ETV Bharat / bharat

ಬದ್ರಿನಾಥ ಹೆದ್ದಾರಿಯಲ್ಲಿ ಬಿರುಕು: ಚಾರಧಾಮ ಯಾತ್ರೆಗೆ ಅಡ್ಡಿಯಾಗುವ ಆತಂಕ

author img

By

Published : Feb 20, 2023, 1:43 PM IST

ಉತ್ತರಾಖಂಡದ ಚಮೋಲಿ ಜಿಲ್ಲೆಯಲ್ಲಿನ ಜೋಶಿಮಠದಲ್ಲಿ ಭೂಕುಸಿತ ಸಮಸ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಭೂಕುಸಿತದಿಂದ ಮನೆಗಳಲ್ಲಿ ಮಾತ್ರವಲ್ಲದೇ ಈಗ ಹೆದ್ದಾರಿಗಳು ಸಹ ಬಿರುಕು ಬಿಡುತ್ತಿವೆ.

ಬದ್ರಿನಾಥ ಹೆದ್ದಾರಿಯಲ್ಲಿ ಬಿರುಕು: ಚಾರಧಾಮ ಯಾತ್ರೆಗೆ ಅಡ್ಡಿಯಾಗುವ ಆತಂಕ
Cracks on Badrinath Highway

ಜೋಶಿಮಠ (ಉತ್ತರಾಖಂಡ) : ಚಮೋಲಿ ಜಿಲ್ಲೆಯ ಜೋಶಿಮಠದಲ್ಲಿ ಭೂಮಿ ಕುಸಿಯುತ್ತಿದ್ದು ಹಲವಾರು ಮನೆಗಳು ಈಗಾಗಲೇ ಬಿರುಕು ಬಿಟ್ಟಿವೆ. ಇದರ ಮಧ್ಯೆ ಈಗ ಮತ್ತೊಂದು ಆತಂಕ ಶುರುವಾಗಿದೆ. ಬದ್ರಿನಾಥ ಹೆದ್ದಾರಿ ಕೂಡ ಅಲ್ಲಲ್ಲಿ ಬಿರುಕು ಬಿಟ್ಟು ಕುಸಿಯುತ್ತಿರುವುದು ಕಳವಳಕ್ಕೆ ಕಾರಣವಾಗಿದೆ. ಕಳೆದ ಕೆಲ ದಿನಗಳಲ್ಲಿ ಹೆದ್ದಾರಿಯಲ್ಲಿನ ಬಿರುಕುಗಳು ಅಗಲವಾಗುತ್ತ ಸಾಗಿವೆ. ಇನ್ನು ಜೋಶಿಮಠದಲ್ಲಿರುವ ಹಳೆಯ ಮನೆಗಳ ಗೋಡೆಗಳ ಬಿರುಕುಗಳು ದೊಡ್ಡದಾಗುತ್ತಿದ್ದು, ಹೊಸ ಮನೆಗಳು ಕೂಡ ಬಿರುಕು ಬಿಡಲಾರಂಭಿಸಿವೆ.

ಪ್ರಸ್ತುತ ದಿನಗಳಲ್ಲಿ ಬದ್ರಿನಾಥ ಹೆದ್ದಾರಿಯಲ್ಲಿ ವಾಹನ ಸಂಚಾರ ಇಲ್ಲವೇ ಇಲ್ಲ ಎನ್ನುವಷ್ಟು ವಿರಳವಾಗಿದೆ. ಬರುವ ಏಪ್ರಿಲ್ ತಿಂಗಳಿನಿಂದ ಬದ್ರಿನಾಥ ಯಾತ್ರೆ ಆರಂಭವಾಗಲಿದೆ. ಆಗ ಪ್ರತಿದಿನ ಸಾವಿರಾರು ಸಂಖ್ಯೆಯ ವಾಹನಗಳು ಈ ಹೆದ್ದಾರಿಯಲ್ಲಿ ಸಂಚರಿಸಲಿವೆ. ಆದರೆ, ಬಿರುಕು ಬಿಟ್ಟ ಸ್ಥಳಗಳಲ್ಲಿ ಹೆದ್ದಾರಿಯು ವಾಹನಗಳ ಭಾರ ತಾಳಿಕೊಳ್ಳುವುದೇ ಎಂಬ ಪ್ರಶ್ನೆ ಈಗ ಎದುರಾಗಿದೆ.

ಜೋಶಿಮಠ ಪಟ್ಟಣದ 20ಕ್ಕೂ ಹೆಚ್ಚು ಸ್ಥಳಗಳಲ್ಲಿ ಭೂಕುಸಿತದಿಂದ ಬದರಿನಾಥ ಹೆದ್ದಾರಿ ಹಾಳಾಗಿದೆ. ಹೆದ್ದಾರಿಯಲ್ಲಿ ನಿರಂತರವಾಗಿ ಹೊಸ ಬಿರುಕುಗಳು ಕಾಣಿಸಿಕೊಳ್ಳುತ್ತಿವೆ. ಜೊತೆಗೆ ಹಳೆಯ ಬಿರುಕುಗಳ ಅಗಲ ಹೆಚ್ಚುತ್ತಿದೆ. ಈ ಹಿಂದೆ ಮಣ್ಣು, ಕಲ್ಲು ತುಂಬಿಸಿ ಬಿರುಕುಗಳನ್ನು ತುಂಬಿಸುತ್ತಿದ್ದರು. ಆದರೆ, ಈಗ ಬಿರುಕುಗಳ ಅಗಲ ಹೆಚ್ಚಾಗಿರುವುದರಿಂದ ಸಮಸ್ಯೆ ಉಂಟಾಗುತ್ತಿದೆ. ಬದರಿನಾಥ್ ಹೆದ್ದಾರಿಯ ಮಾರ್ವಾಡಿ ಪ್ರದೇಶದಲ್ಲಿ ಅತ್ಯಧಿಕ ಭೂಕುಸಿತ ಸಂಭವಿಸಿದೆ. ಹತ್ತಕ್ಕೂ ಹೆಚ್ಚು ಸ್ಥಳಗಳಲ್ಲಿ ರಸ್ತೆ ಹಾಳಾಗಿದೆ. ಜೆಪಿ ಕಾಲೋನಿ, ಮಾರ್ವಾಡಿ ಮತ್ತು ಬಾರ್ಡರ್ ರೋಡ್ಸ್ ಆರ್ಗನೈಸೇಶನ್ ಕ್ಯಾಂಪ್ ಆಫೀಸ್ ನಡುವೆ ಸುಮಾರು 400 ಮೀಟರ್ ವ್ಯಾಪ್ತಿಯಲ್ಲಿ ಹೊಸ ಬಿರುಕುಗಳು ಕಾಣಿಸಿಕೊಂಡಿವೆ.

ಚೌನಿ ಬಜಾರ್‌ನಲ್ಲಿರುವ ಲೋಕೋಪಯೋಗಿ ಇಲಾಖೆಯ ತಪಾಸಣಾ ಕಟ್ಟಡದ ಬಳಿ ರಸ್ತೆಯ ಬಿರುಕುಗಳ ಗಾತ್ರ ಹೆಚ್ಚಾಗಿದೆ. ಚಾರಧಾಮ್ ಯಾತ್ರೆ ಆರಂಭಕ್ಕೂ ಮುನ್ನ ಹೀಗಾಗಿರುವುದು ಆತಂಕಕ್ಕೆ ಕಾರಣವಾಗಿದೆ. ಬದರಿನಾಥ್ ಮತ್ತು ಹೇಮಕುಂಡ್ ಸಾಹಿಬ್ ಜೊತೆಗೆ, ಹೂವಿನ ಕಣಿವೆಗೆ ಸಾಗುವ ಪ್ರಯಾಣವು ಜೋಶಿಮಠದಿಂದಲೇ ಪ್ರಾರಂಭವಾಗುತ್ತದೆ. ಪ್ರತಿ ವರ್ಷ ದೇವಸ್ಥಾನದ ಬಾಗಿಲು ತೆರೆದಾಗ ಲಕ್ಷಾಂತರ ಭಕ್ತರು ಬದರಿನಾಥ ಧಾಮಕ್ಕೆ ಆಗಮಿಸುತ್ತಾರೆ ಮತ್ತು ಅವರೆಲ್ಲ ಇದೇ ಮಾರ್ಗದಲ್ಲಿ ಹಾದು ಹೋಗುತ್ತಾರೆ.

ಹೀಗಿರುವಾಗ ಬದರಿನಾಥ ಹೆದ್ದಾರಿಯಲ್ಲಿ ಪ್ರಯಾಣಿಸುವುದು ಹೇಗೆ ಎಂಬ ಪ್ರಶ್ನೆ ಎಲ್ಲರ ಮನದಲ್ಲಿ ಮೂಡುತ್ತಿದೆ. ಮತ್ತೊಂದೆಡೆ ಜೋಶಿಮಠದಲ್ಲಿ ಭೂಕುಸಿತದಿಂದ ಜನರು ತಾತ್ಕಾಲಿಕ ಪರಿಹಾರ ಶಿಬಿರಗಳಲ್ಲಿ ವಾಸಿಸುತ್ತಿದ್ದಾರೆ. ಇವರಿಗೆ ಸರ್ಕಾರ ಅಗತ್ಯ ಸೌಲಭ್ಯಗಳನ್ನು ಒದಗಿಸುತ್ತಿದೆ.

ಚಮೋಲಿ ಜಿಲ್ಲೆಯ ಜಿಲ್ಲಾಧಿಕಾರಿ ಹಿಮಾಂಶು ಖುರಾನಾ ಅವರು ಭಾನುವಾರ ಬಹುಗುಣ ನಗರ, ಸುಭಾಷ್ ನಗರ ಮತ್ತು ಕರ್ಣಪ್ರಯಾಗದ ಮೇಲಿನ ಬಜಾರ್‌ನಲ್ಲಿ ಭೂಕುಸಿತದಿಂದ ಹಾನಿಗೊಳಗಾದ ಪ್ರದೇಶಗಳ ಪರಿಶೀಲನೆ ನಡೆಸಿದರು ಮತ್ತು ಸಂತ್ರಸ್ತ ಜನರೊಂದಿಗೆ ಚರ್ಚೆ ನಡೆಸಿದರು. ಸಂತ್ರಸ್ತ ಕುಟುಂಬಗಳಿಗೆ ಎಲ್ಲ ರೀತಿಯ ನೆರವು ನೀಡಲಾಗುವುದು ಎಂದು ಖುರಾನಾ ಹೇಳಿದ್ದಾರೆ. ಭೂಕುಸಿತದಿಂದ ವಿಪರೀತ ಬಿರುಕು ಬಿಟ್ಟಿರುವ ಕಟ್ಟಡಗಳನ್ನು ತೆರವು ಮಾಡಿ ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸುವಂತೆ ಜಿಲ್ಲಾಧಿಕಾರಿಗಳು ಸೂಚಿಸಿದರು. ಬಾಡಿಗೆ ಮನೆಗೆ ಹೋಗಲು ಬಯಸುವವರಿಗೆ ಸರ್ಕಾರದ ವತಿಯಿಂದ 6 ತಿಂಗಳ ಬಾಡಿಗೆಯನ್ನು ಸಹ ನೀಡಲಾಗುತ್ತದೆ.

ಇದನ್ನೂ ಓದಿ: ಜಮ್ಮು ಕಾಶ್ಮೀರ: 15 ಮನೆಗಳಲ್ಲಿ ಬಿರುಕು, ಸುರಕ್ಷತಾ ಸ್ಥಳಗಳಿಗೆ ತೆರಳಿದ ನಿವಾಸಿಗಳು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.