ETV Bharat / bharat

ಡಿಎಂಕೆ ಸಂಸದ ಜಗತ್ ರಕ್ಷಕನ್​ ಸಂಸ್ಥೆಗಳ ಮೇಲೆ ಐಟಿ ದಾಳಿ.. ಇತ್ತ ಪಶ್ಚಿಮ ಬಂಗಾಳದ ಸಚಿವ ರಥಿನ್ ಘೋಷ್ ಮನೆ ಮೇಲೆ ಇಡಿ ದಾಳಿ

author img

By ETV Bharat Karnataka Team

Published : Oct 5, 2023, 10:37 AM IST

Updated : Oct 5, 2023, 11:19 AM IST

ಕೇಂದ್ರ ಮಾಜಿ ಸಚಿವ ಹಾಗೂ ಸಂಸದ ಜಗತ್ ರಕ್ಷಕನ್ ಅವರಿಗೆ ಸಂಬಂಧಿಸಿದ 40 ಸ್ಥಳಗಳಲ್ಲಿ ಇಂದು ಬೆಳಗ್ಗೆಯಿಂದ ಆದಾಯ ತೆರಿಗೆ ಇಲಾಖೆ ದಾಳಿ ನಡೆಸುತ್ತಿದ್ದರೆ, ಇನ್ನೊಂದೆಡೆ ಪಶ್ಚಿಮ ಬಂಗಾಳದ ಸಚಿವ ರಥಿನ್​ ಘೋಷ್​ ಮನೆ ಮೇಲೆ ಇಡಿ ದಾಳಿ ನಡೆಸಿದೆ.

ಡಿಎಂಕೆ ಜಗತ್ ರಕ್ಷಕನ್​,ರಥಿನ್​ ಘೋಷ್​
ಡಿಎಂಕೆ ಜಗತ್ ರಕ್ಷಕನ್​, ರಥಿನ್​ ಘೋಷ್​

ಚೆನ್ನೈ(ತಮಿಳುನಾಡು): ಸಂಸದ ಹಾಗೂ ಕೇಂದ್ರ ಮಾಜಿ ಸಚಿವ ಜಗತ್ ರಕ್ಷಕನ್ ಆಸ್ತಿ ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ಮಾಡಿದ್ದು ತನಿಖೆ ನಡೆಸುತ್ತಿದ್ದಾರೆ. ಇಂದು ಬೆಳಗ್ಗೆಯಿಂದ ಜಗತ್ ರಕ್ಷಕನ್ ಅವರಿಗೆ ಸಂಬಂಧಿಸಿದ 40 ಸ್ಥಳಗಳಲ್ಲಿ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದು, ತಪಾಸಣೆ ಮಾಡುತ್ತಿದ್ದಾರೆ.

ದಿ.ನಗರ, ಅಡ್ಯಾರ್, ಕ್ರೋಂಬೆಟ್ಟೈ, ತಾಂಬರಂ, ಪೂಂತಮಲ್ಲಿಗೆ ಸೇರಿದಂತೆ ಚೆನ್ನೈ ಹಾಗೂ ಉಪನಗರ ಪ್ರದೇಶಗಳಲ್ಲಿ ಸಂಸದರಿಗೆ ಸಂಬಂಧಿಸಿದ ಶಿಕ್ಷಣ ಸಂಸ್ಥೆಗಳು ಮತ್ತು ಕಚೇರಿಗಳ ಮೇಲೆ ಆದಾಯ ತೆರಿಗೆ ಅಧಿಕಾರಿಗಳು ದಾಳಿ ನಡೆಸುತ್ತಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಜೊತೆಗೆ ಅಡ್ಯಾರ್ ಪ್ರದೇಶದಲ್ಲಿ ಜಗತ್ರಾಜಕನ ವೇದಿಕೆ ಮತ್ತು ತಾಂಬರಂ ಪ್ರದೇಶದಲ್ಲಿ ಭಾರತ್ ವಿಶ್ವವಿದ್ಯಾಲಯ ಕಾಲೇಜು, ಪಲ್ಲವರಂನ ವೇಲಾ ಆಸ್ಪತ್ರೆ, ಪೂಂತಮಲ್ಲಿ ಸವಿತಾ ಆಸ್ಪತ್ರೆ, ಪಲ್ಲಿಕರಣೈ ಬಾಲಾಜಿ ವೈದ್ಯಕೀಯ ಕಾಲೇಜು, ಟಿ.ನಗರದ ಅಕಾರ್ಡ್ ನಕ್ಷತ್ರ ಹೋಟೆಲ್ ಸೇರಿದಂತೆ ಸ್ಥಳಗಳಲ್ಲಿ ಆದಾಯ ತೆರಿಗೆ ಅಧಿಕಾರಿಗಳು ಬೆಳಗ್ಗೆಯಿಂದಲೇ ತಪಾಸಣೆ ನಡೆಸುತ್ತಿದ್ದಾರೆ.

ಹಾಗೆ ಪರೀಕ್ಷಾ ಕೇಂದ್ರಗಳಲ್ಲಿ ಸುಮಾರು 1,000 ಶಸ್ತ್ರಸಜ್ಜಿತ ಪೊಲೀಸರನ್ನು ಭದ್ರತೆಗಾಗಿ ನಿಯೋಜಿಸಲಾಗಿದೆ. ಅವರ ಕಚೇರಿಗಳು ಮತ್ತು ಶಿಕ್ಷಣ ಸಂಸ್ಥೆಗಳಿಗೆ ಸಂಬಂಧಿಸಿದ ಸ್ಥಳಗಳಲ್ಲಿ ಆದಾಯ ತೆರಿಗೆ ಅಧಿಕಾರಿಗಳು ಈಗಾಗಲೇ ದಾಳಿ ನಡೆಸಿದ್ದು, ಈ ಬೆನ್ನಲೆ ಇಂದು ಕೂಡ 40ಕ್ಕೂ ಹೆಚ್ಚು ಸ್ಥಳಗಳಲ್ಲಿ ತಪಾಸಣೆ ನಡೆಸುತ್ತಿದ್ದಾರೆ.

ಅಲ್ಲದೇ ಸಂಸದ ಜಗತ್ರಕ್ಷಕನ್​ ಹಲವು ಕಂಪನಿಗಳಲ್ಲಿ ಬಂಡವಾಳ ಹೂಡಿದ್ದು, ಸರಿಯಾಗಿ ತೆರಿಗೆ ಪಾವತಿಸದಿರುವ ಹಿನ್ನೆಲೆಯಲ್ಲಿ ಈ ತನಿಖೆ ನಡೆಸಲಾಗುತ್ತಿದೆ ಎಂಬ ಮಾಹಿತಿ ಅಧಿಕಾರಿಗಳಿಂದ ಹೊರ ಬಿದ್ದಿದೆ. ಹಾಗೆ, ಜಗತ್ರಕ್ಷಕನ್ ಅವರು ಡಿಎಂಕೆ ಮತ್ತು ಮಾಜಿ ಕೇಂದ್ರ ಕೈಗಾರಿಕಾ ಮತ್ತು ಮಾಹಿತಿ ಮತ್ತು ಪ್ರಸಾರ ಖಾತೆಯಲ್ಲಿ ವಿವಿಧ ಹುದ್ದೆಗಳನ್ನು ಅಲಂಕರಿಸಿದ್ದಾರೆ. ಅವರು ಅರಕ್ಕೋಣಂ ಸಂಸದೀಯ ಸ್ಥಾನಕ್ಕೆ ಮೂರು ಬಾರಿ ಸ್ಪರ್ಧಿಸಿ ಗೆದ್ದಿದ್ದಾರೆ. ಉತ್ತರಮೇರೂರು ವಿಧಾನಸಭಾ ಕ್ಷೇತ್ರಕ್ಕೂ ಸ್ಪರ್ಧಿಸಿ ಗೆದ್ದಿದ್ದಾರೆ. ಪ್ರಸ್ತುತ ಸಂಸದರಾಗಿ ಅವರು ಸೇವೆ ಸಲ್ಲಿಸುತ್ತಿದ್ದಾರೆ.

ಪಶ್ಚಿಮ ಬಂಗಾಳ ಆಹಾರ ಸಚಿವ ರಥಿನ್ ಘೋಷ್ ಮನೆ ಮೇಲೆ ಇಡಿ ದಾಳಿ: ಪಾಲಿಕೆ ನೇಮಕಾತಿ ಭ್ರಷ್ಟಾಚಾರಕ್ಕೆ ಸಂಬಂಧಿಸಿದಂತೆ ಮಮತಾ ಬ್ಯಾನರ್ಜಿ ಸರ್ಕಾರದ ಆಹಾರ ಸಚಿವ ರಥಿನ್ ಘೋಷ್ ಮನೆ ಮೇಲೆ ಇಡಿ ದಾಳಿ ನಡೆಸಿದೆ. ಇಂದು ಬೆಳಗ್ಗೆಯೆ ಮಧ್ಯಗ್ರಾಮ್‌ನ ಮೈಕೆಲ್ ನಗರದಲ್ಲಿರುವ ಘೋಷ್ ಮನೆಯಲ್ಲಿ ಕೇಂದ್ರ ತನಿಖಾ ಸಂಸ್ಥೆ ಶೋಧ ನಡೆಸುತ್ತಿದೆ. ಪ್ರಥಮ ಬಾರಿಗೆ ಸಚಿವರೊಬ್ಬರ ಮೇಲೆ ದಾಳಿ ನಡೆಸಿರುವ ಇಡಿ ಪರಿಶೀಲನೆ ನಡೆಸುತ್ತಿದ್ದು, ಘೋಷ್​ ಮನೆಯನ್ನು ಸಿಆರ್‌ಪಿಎಫ್ ಯೋಧರು ಸುತ್ತುವರೆದಿದ್ದಾರೆ. ಪಾಲಿಕೆ ನೇಮಕಾತಿ ಭ್ರಷ್ಟಾಚಾರದಲ್ಲಿ ಅಯನ್ ಶೀಲ್ ಎನ್ನುವಾತ ಸಿಕ್ಕಿಬಿದ್ದಿದ್ದು, ಆತನ ವಿಚಾರಣೆ ವೇಳೆ ಪದೇ ಪದೇ ಸಚಿವ ರಥಿನ್ ಘೋಷ್ ಹೆಸರು ಕೇಳಿ ಬರುತ್ತಿರುವುದರಿಂದ ಇಡಿ ದಾಳಿ ನಡೆಸಿದೆ. ಇಡಿ ತಂಡದಲ್ಲಿ 10 ಅಧಿಕಾರಿಗಳು ಇದ್ದು ತೀವ್ರ ಶೋಧ ನಡೆಸುತ್ತಿದ್ದಾರೆ. ರಥಿನ್ ಘೋಷ್ ಸಚಿವರಾಗುವ ಮೊದಲು 2014-18ರಲ್ಲಿ ಮಧ್ಯಮಗ್ರಾಮ ಪುರಸಭೆಯ ಅಧ್ಯಕ್ಷರಾಗಿದ್ದರು.

ಬಿಆರ್‌ಎಸ್ ಶಾಸಕ ಮಾಗಂಟಿ ಗೋಪಿನಾಥ್ ಮನೆ ಮೇಲೆ ಐಟಿ ದಾಳಿ: ಅತ್ತ ತೆಲಂಗಾಣದ ಆಡಳಿತ ಪಕ್ಷವಾದ ಭಾರತ್ ರಾಷ್ಟ್ರ ಸಮಿತಿಯ ಶಾಸಕ ಮಾಗಂಟಿ ಗೋಪಿನಾಥ್ ಅವರಿಗೆ ಸಂಬಂಧಿಸಿದ ಮನೆಯ ಮೇಲೆ ಆದಾಯ ತೆರಿಗೆ ಇಲಾಖೆ ದಾಳಿ ನಡೆಸಿದೆ. ಜೊತೆಗೆ ಹೈದರಾಬಾದ್​ನಲ್ಲಿರುವ ಬೇರೆ ಬೇರೆ ಆಸ್ತಿಗಳ ಕುರಿತು ತನಿಖೆ ನಡೆಸುತ್ತಿದ್ದಾರೆ. ಅಲ್ಲದೆ, ಶಾಸಕ ಗೋಪಿನಾಥ್ ಸಂಬಂಧಿಕ ಉದ್ಯಮಿಗಳಾದ ಪ್ರಸಾದ್, ಕೋಟೇಶ್ವರ ರಾವ್, ರಘುವೀರ್ ಮತ್ತು ವಜ್ರನಾಥ್ ಅವರ ನಿವಾಸ ಮತ್ತು ಕಚೇರಿಗಳಲ್ಲಿಯೂ ತೀವ್ರ ಶೋಧ ನಡೆಸಲಾಗುತ್ತಿದೆ.

ಇದನ್ನೂ ಓದಿ: ಬೆಳ್ಳಂಬೆಳಗ್ಗೆ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಮಂಜುನಾಥ ಗೌಡ ಮನೆಗಳ ಮೇಲೆ ಇಡಿ ದಾಳಿ: ಪರಿಶೀಲನೆ

Last Updated :Oct 5, 2023, 11:19 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.