ETV Bharat / bharat

ದಿನಗೂಲಿ ಕಾರ್ಮಿಕನ ಖಾತೆಗೆ ಬಂತು ₹221 ಕೋಟಿ: ಲೆಕ್ಕ ನೀಡಲು ಆದಾಯ ತೆರಿಗೆ ಇಲಾಖೆಯಿಂದ ನೋಟಿಸ್​ ಜಾರಿ

author img

By ETV Bharat Karnataka Team

Published : Oct 17, 2023, 8:02 PM IST

ದಿನಗೂಲಿ ಕಾರ್ಮಿಕನ ಖಾತೆಗೆ ಕೋಟಿ ಹಣ
ದಿನಗೂಲಿ ಕಾರ್ಮಿಕನ ಖಾತೆಗೆ ಕೋಟಿ ಹಣ

ದಿನಗೂಲಿ ಕಾರ್ಮಿಕನ ಖಾತೆಗೆ ಕೋಟ್ಯಂತರ ರೂಪಾಯಿ ಹಣ ಜಮೆಯಾಗಿದ್ದು, ಐಟಿ ಇಲಾಖೆ ನೋಟಿಸ್​ ಜಾರಿ ಮಾಡಿದೆ.

ಬಸ್ತಿ, ಉತ್ತರಪ್ರದೇಶ: ಹಣ ಯಾರಿಗೆ ತಾನೆ ಬೇಡ ಹೇಳಿ. ನಾವೇನೇ ಮಾಡಿದರೂ ಹಣ ಗಳಿಸುವುದೇ ಉದ್ದೇಶವಾಗಿರುತ್ತದೆ. ಹಾಗಂತ ಕೋಟಿಗಟ್ಟಲೆ ಹಣ ಧುತ್ತೆಂದು ಬಂದರೆ, ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಬಿಡ್ತಾರಾ?. ಅದರ ಮೂಲದ ಲೆಕ್ಕ ಕೇಳೇ ಕೇಳ್ತಾರೆ. ಉತ್ತರಪ್ರದೇಶದ ದಿನಗೂಲಿ ಕಾರ್ಮಿಕನಿಗೆ ಅದು ಹೇಗೋ 221 ಕೋಟಿ ರೂಪಾಯಿ ಹಣ ಖಾತೆಯಲ್ಲಿ ಜಮಾ ಆಗಿದೆ. ಇಷ್ಟೇ ತಡ ಐಟಿ ಇಲಾಖೆ, ದಿನಗೂಲಿ ವ್ಯಕ್ತಿಗೆ ನೋಟಿಸ್​ ನೀಡಿದೆ.

ವಿಚಿತ್ರ ಅಂದರೆ, ಹಣ ಎಲ್ಲಿಂದ ಬಂತು ಮತ್ತು ಎಷ್ಟು ಹಣ ತನ್ನ ಖಾತೆಯಲ್ಲಿ ಜಮಾ ಆಗಿದೆ ಅಂತ ಸ್ವತಃ ದಿನಗೂಲಿ ಕಾರ್ಮಿಕನಿಗೇ ಗೊತ್ತಿಲ್ಲ. ಐಟಿ ನೋಟಿಸ್​ ಕಂಡು ಬೆದರಿರುವ ಆತ ಕಚೇರಿ, ಬ್ಯಾಂಕ್​ಗಳಿಗೆ ಅಲೆದಾಡುವಂತಾಗಿದೆ. ಜೊತೆಗೆ ಇದೆಲ್ಲಾ ಕಿರಿಕಿರಿ ಬೇಡ ಅಂತ ಆತನೇ ಪೊಲೀಸ್​ ಠಾಣೆಗೆ ಹೋಗಿ ದೂರು ನೀಡಿದ್ದಾನೆ. ಬ್ಯಾಂಕ್​ ಅಧಿಕಾರಿಗಳು ಖಾತೆ ವಿವರ ಪರಿಶೀಲಿಸಿ ಮೇಲಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ.

ನಿಗೂಢವಾಗಿ ಖಾತೆ ಸೇರಿದ ಕೋಟ್ಯಂತರ ಹಣ: ಉತ್ತರ ಪ್ರದೇಶದ ಬಸ್ತಿ ಜಿಲ್ಲೆಯ ಬಟಾನಿಯಾ ಪ್ರದೇಶದ ನಿವಾಸಿ ಶಿವಪ್ರಸಾದ್​ ಕೋಟ್ಯಂತರ ರೂಪಾಯಿ ವ್ಯೂಹದಲ್ಲಿ ಸಿಲುಕಿಕೊಂಡವರು. ದೆಹಲಿಯಲ್ಲಿ ಮಾರ್ಬಲ್​ ಕಲ್ಲುಕುಟಿಕ ಕೆಲಸ ಮಾಡುವ ಈತನ ಖಾತೆಗೆ ಕೆಲ ದಿನಗಳ ಹಿಂದೆ ದಿಢೀರ್​ ಆಗಿ 221 ಕೋಟಿಗೂ ಅಧಿಕ ಹಣ ಬಂದು ಬಿದ್ದಿದೆ. ಕೂಲಿ ಕಾರ್ಮಿಕ ಶಿವಪ್ರಸಾದ್​ಗೆ ಇದರ ಅರಿವಿರಲಿಲ್ಲ. ಕೋಟಿಗಟ್ಟಲೆ ಹಣ ವರ್ಗವಾದ ಬಗ್ಗೆ ಆದಾಯ ತೆರಿಗೆ ಇಲಾಖೆಯಿಂದ ನೋಂದಾಯಿತ ಅಂಚೆ ಮೂಲಕ ಈತನ ಮನೆಗೆ ನೋಟಿಸ್ ರವಾನಿಸಲಾಗಿದೆ.

ನೋಟಿಸ್​ ಕಂಡು ಕಾರ್ಮಿಕನ ಕುಟುಂಬ ಬೆಚ್ಚಿಬಿದ್ದಿದೆ. ದೆಹಲಿಯಲ್ಲಿ ಕೂಲಿ ಕೆಲಸ ಮಾಡುತ್ತಿದ್ದ ಶಿವಪ್ರಸಾದ್​ಗೆ ಮನೆಗೆ ಆದಾಯ ತೆರಿಗೆ ನೋಟಿಸ್ ಬಂದಿರುವ ಬಗ್ಗೆ ಮಾಹಿತಿ ನೀಡಲಾಗಿದೆ. ಇದಾದ ಬಳಿಕ ಕಾರ್ಮಿಕ ಗ್ರಾಮಕ್ಕೆ ಮರಳಿದ್ದಾನೆ. ನೋಟಿಸ್‌ನಲ್ಲಿ, ನಿಮ್ಮ ಚಾಲ್ತಿ ಬ್ಯಾಂಕ್ ಖಾತೆಯಲ್ಲಿ 221 ಕೋಟಿ ರೂಪಾಯಿ ನಗದು ಜಮಾ ಆಗಿದೆ. ನಿರ್ಮಾಣ ಕಾಮಗಾರಿ ಪಾವತಿಗಾಗಿ 4 ಲಕ್ಷ 58 ಸಾವಿರದ 715 ರೂಪಾಯಿ ಟಿಡಿಎಸ್ ಕಡಿತವಾಗಿರುವ ಬಗ್ಗೆಯೂ ಮಾಹಿತಿ ನೀಡಲಾಗಿದೆ. ಈ ಬಗ್ಗೆ ಮಾಹಿತಿ ಒದಗಿಸಿ ಎಂದು ಸೂಚನೆ ನೀಡಲಾಗಿದೆ.

ಇದನ್ನು ಕಂಡ ಶಿವಪ್ರಸಾದ್ ತನ್ನ ಹೆಸರಿನಲ್ಲಿ ಚಾಲ್ತಿ ಖಾತೆಯೇ ಇಲ್ಲ, ಅದು ಹೇಗೆ ಇಷ್ಟು ಪ್ರಮಾಣದ ಹಣ ಜಮೆಯಾಗಿದೆ ಎಂಬುದು ಅರ್ಥವಾಗುತ್ತಿಲ್ಲ. ನೋಟಿಸ್​ ಬಗ್ಗೆ ತಲೆಕೆಡಿಸಿಕೊಂಡ ಕಾರ್ಮಿಕ, ಇದರ ಸಹವಾಸವೇ ಬೇಡ ಅಂತ ಲಾಲ್‌ಗಂಜ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಇದರೊಂದಿಗೆ ಖಾತೆಯ ವಿವರಗಳ ಬಗ್ಗೆ ಅಧಿಕಾರಿಗಳಿಗೂ ಮಾಹಿತಿ ನೀಡಿದ್ದಾರೆ.

ಪಾನ್​ ಕಾರ್ಡ್​ ನಾಪತ್ತೆ ಕೇಸ್​: ಮಾರ್ಬಲ್ ಪುಡಿ ಮಾಡುವ ಕಾರ್ಮಿಕ ಶಿವಪ್ರಸಾದ್, 2019 ರಲ್ಲಿ ತನ್ನ ಪಾನ್ ಕಾರ್ಡ್ ನಾಪತ್ತೆಯಾಗಿದೆ ಎಂದು ದೂರು ನೀಡಿದ್ದ. ಅದನ್ನು ಪಡೆದುಕೊಂಡವರು ಹಣ ವಂಚಿಸಲು ಕಾರ್ಮಿಕನ ಹೆಸರಿನಲ್ಲಿ ಖಾತೆ ತೆರೆದಿರಬಹುದು. ಆ ಖಾತೆಗೆ ಈಗ ಹಣ ಜಮಾ ಮಾಡಲಾಗಿದೆಯೇ ಎಂಬ ಬಗ್ಗೆ ತನಿಖೆ ನಡೆಸಲಾಗುತ್ತಿದೆ.

ಇದನ್ನೂ ಓದಿ: 20 ವರ್ಷಗಳ ಹಿಂದೆ 'ಮೃತಪಟ್ಟಿದ್ದ' ನೌಕಾಪಡೆ ಮಾಜಿ ಸಿಬ್ಬಂದಿ ದೆಹಲಿಯಲ್ಲಿ ಪತ್ತೆ, ತ್ರಿವಳಿ ಕೊಲೆ ಕೇಸಲ್ಲಿ ಬಂಧನ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.