ETV Bharat / bharat

ಹಿನ್ನೋಟ: 2023ರ ಅಂತ್ಯದಲ್ಲಿ ಬಲ ಹೆಚ್ಚಿಸಿಕೊಂಡ ಬಿಜೆಪಿ... ಹಿಂದಿ ರಾಜ್ಯಗಳಲ್ಲಿ ’ಕೈ’ಕೊಟ್ಟ ಗ್ಯಾರಂಟಿ!

author img

By ETV Bharat Karnataka Team

Published : Dec 22, 2023, 7:30 AM IST

Year ender 2023: ಗ್ಯಾರಂಟಿಗಳ ಘೋಷಣೆ ಮೂಲಕ ಕರ್ನಾಟಕದಲ್ಲಿ ಅಧಿಕಾರದ ಗದ್ದುಗೆ ಏರಿದ್ದ ಕಾಂಗ್ರೆಸ್​, ಇವೇ ಗ್ಯಾರಂಟಿಗಳು, ಕಲ್ಯಾಣದ ಭರವಸೆಗಳನ್ನು ಇಟ್ಟುಕೊಂಡು ಭರ್ಜರಿ ಪ್ರಚಾರ ನಡೆಸಿತ್ತು. ಆದರೆ ಅಧಿಕಾರ ಉಳಿಸಿಕೊಳ್ಳುವಲ್ಲಿ ಎಡವಿದೆ. ಅತ್ತ ಬಿಜೆಪಿ ಮೂರು ಪ್ರಮುಖ ರಾಜ್ಯಗಳಲ್ಲಿ ಅಧಿಕಾರಕ್ಕೆ ಮರಳುವ ಮೂಲಕ ತನ್ನ ಬಲವನ್ನು ಹೆಚ್ಚಿಸಿಕೊಂಡಿದೆ.

Year-ender 2023: BJP's 3-2 scoreline amps up Mission 2024 prospects
ಹಿನ್ನೋಟ: 2023ರ ಅಂತ್ಯದಲ್ಲಿ ಬಲ ಹೆಚ್ಚಿಸಿಕೊಂಡ ಬಿಜೆಪಿ... ಹಿಂದಿ ರಾಜ್ಯಗಳಲ್ಲಿ ಕೈಕೊಟ್ಟ ಗ್ಯಾರಂಟಿ!

ಹೈದರಾಬಾದ್: 2023ರ ಅಂತ್ಯದಲ್ಲಿ ನಡೆದ ಪಂಚರಾಜ್ಯಗಳ ಚುನಾವಣೆಯಲ್ಲಿ ಬಿಜೆಪಿ ಭರ್ಜರಿ ಕಮ್​ಬ್ಯಾಕ್ ಮಾಡಿದೆ. 2018 ರಲ್ಲಿ ಈ ಎಲ್ಲ ರಾಜ್ಯಗಳನ್ನು ಕಳೆದುಕೊಂಡಿದ್ದ ಬಿಜೆಪಿ, ಬಳಿಕ ಹಿಂದಿ ಭಾಷಿಕ ರಾಜ್ಯಗಳಲ್ಲಿ ಮೇಲುಗೈ ಸಾಧಿಸುವಲ್ಲಿ ಯಶಸ್ವಿಯಾಗಿದೆ. ಮಧ್ಯಪ್ರದೇಶ, ರಾಜಸ್ಥಾನ ಮತ್ತು ಛತ್ತೀಸ್‌ಗಢಗಳಲ್ಲಿ ಭಾರತೀಯ ಜನತಾ ಪಕ್ಷ ಕ್ಲೀನ್​ ಸ್ವೀಪ್​ ಮಾಡಿ ಅಧಿಕಾರದ ಗದ್ದುಗೆ ಏರಿದೆ.

ಆದರೆ, ಈ ವರ್ಷ ದಕ್ಷಿಣ ಭಾರತದಲ್ಲಿ ಕಾಂಗ್ರೆಸ್​ ಅದ್ಬುತ ಸಾಧನೆ ಮಾಡಿದ್ದು, ತೆಲಂಗಾಣ ಮತ್ತು ಕರ್ನಾಟಕದಲ್ಲಿ ಕಾಂಗ್ರೆಸ್​​ ಅಧಿಕಾರ ಹಿಡಿದಿದ್ದು, ಪಕ್ಷ ಹೊಸ ಹುರುಪಿನೊಂದಿಗೆ ಲೋಕಸಭಾ ಚುನಾವಣೆಗೆ ಹೋಗಲು ಬಲ ಬಂದಂತಾಗಿದೆ. ಆದರೆ, ನಿರ್ಣಾಯಕ ಮೂರು ರಾಜ್ಯಗಳಲ್ಲಿ ಕಾಂಗ್ರೆಸ್ ಕಳೆದ ಬಾರಿಯ ಸಾಧನೆಯನ್ನು ಮಾಡಲು ಸಾಧ್ಯವಾಗಿಲ್ಲ. ಆದರೆ ಬಿಜೆಪಿ ಈ ಬಾರಿ ಈ ಮೂರು ಪ್ರಬಲ ರಾಜ್ಯಗಳಲ್ಲಿ ಅಧಿಕಾರಕ್ಕೆ ಬರುವ ಮೂಲಕ ಮುಂಬರುವ ಲೋಕ ಸಮರಕ್ಕೆ ಭರ್ಜರಿಯಾಗೇ ತಾಲಿಮು ಆರಂಭಿಸಿದೆ. ಕಾಂಗ್ರೆಸ್​​ನ ಗ್ಯಾರಂಟಿಗಳು ಹಿಂದಿ ಭಾಷಿಕ ರಾಜ್ಯಗಳಲ್ಲಿ ಕೈ ಹಿಡಿಯದೇ, ಮೋದಿ ಕಾ ಗ್ಯಾರಂಟಿ ಕಮಲವನ್ನು ಅರಳಿಸುವಲ್ಲಿ ಯಶಸ್ವಿಯಾಗಿದೆ.

ಮಧ್ಯಪ್ರದೇಶದಲ್ಲಿ ಬಿಜೆಪಿ 163 ಸ್ಥಾನಗಳನ್ನು ಪಡೆದುಕೊಂಡಿದ್ದು, 54 ಸ್ಥಾನಗಳನ್ನು ಹೆಚ್ಚಳ ಮಾಡಿಕೊಂಡಿದೆ. ಇನ್ನು ಕಾಂಗ್ರೆಸ್​​ 114 ರಿಂದ 66ಕ್ಕೆ ಕುಸಿದಿದ್ದು, ಒಟ್ಟಾರೆ 48 ಸ್ಥಾನಗಳನ್ನು ಕಳೆದುಕೊಂಡಿದೆ. ದಿಗ್ವಿಜಯ ಸಿಂಗ್ ಮತ್ತು ಕಮಲ್ ನಾಥ್ ಅವರ ಸಂಯೋಜನೆಯ 'ಜೈ-ವೀರು' ಶಿವರಾಜ್ ಸಿಂಗ್ ನೇತೃತ್ವದ ಬಿಜೆಪಿ ಸರ್ಕಾರವನ್ನು ಉರುಳಿಸುವಲ್ಲಿ ವಿಫಲವಾಗಿದೆ. ಈ ಮೂಲಕ ಮಧ್ಯಪ್ರದೇಶದಲ್ಲಿ ಇಬ್ಬರು ಹಿರಿಯ ಕಾಂಗ್ರೆಸ್​ ನೇತಾರರು ತೆರೆ ಮರೆಗೆ ಸರಿಯುವಂತಾಗಿದೆ.

ಕಳೆದ ಬಾರಿಯ ಚುನಾವಣೆಯಲ್ಲಿ ಮಧ್ಯಪ್ರದೇಶದಲ್ಲಿ ಯುವ ನಾಯಕ ಜ್ಯೋತಿರಾದಿತ್ಯ ಸಿಂಧಿಯಾ ಮೋಡಿ ಮಾಡಿದ್ದರಿಂದ ಕಾಂಗ್ರೆಸ್ ಹೆಚ್ಚು ಸ್ಥಾನಗಳಲ್ಲಿ ಗೆಲುವು ಸಾಧಿಸಿತ್ತು. ಆದರೆ ಅವರು ಬಿಜೆಪಿಗೆ ಬಂದಿದ್ದರಿಂದ ಅವರು ಪ್ರತಿನಿಧಿಸುವ ಗ್ವಾಲಿಯರ್​ ಸೇರಿದಂತೆ ಇತರ ಪ್ರದೇಶಗಳಲ್ಲಿ ಈ ಬಾರಿ ಬಿಜೆಪಿ ಅದ್ಬುತ ಸಾಧನೆ ಮಾಡಿದೆ. ಇನ್ನು ಈ ಹಿಂದಿನ ಸಿಎಂ ಶಿವರಾಜ್ ಸಿಂಗ್​ ಚೌಹಾಣ್​ ಅವರು ಜಾರಿಗೆ ತಂದ ಮಹಿಳಾಪರ ಯೋಜನೆಗಳು ಭರ್ಜರಿ ಯಶಸ್ಸು ತಂದುಕೊಟ್ಟಿವೆ. ಅವರ ಲಾಡ್ಲಿ ಬೆಹನಾ ಯೋಜನೆ ಬಿಜೆಪಿಯನ್ನು ಮತ್ತೆ ಅಧಿಕಾರದ ಗದ್ದುಗೆ ಏರುವಂತೆ ಮಾಡಿದೆ.

ಶಿವರಾಜ್​ ಸಿಂಗ್​ ಚೌಹಾಣ್ ಹಾಗೂ ಸಿಂಧಿಯಾ ಜೋಡಿ, ದಿಗ್ವಿಜಯ್​ ಮತ್ತು ಕಮಲ್​ನಾಥ್​ ಜೋಡಿ ನಿವೃತ್ತಿಯಾಗುವಂತೆ ಮಾಡಿದೆ. ಮಧ್ಯಪ್ರದೇಶದ ಜನಾದೇಶವು ಬಿಜೆಪಿಗೆ ಆಡಳಿತ ವಿರೋಧಿ ಅಲೆಯನ್ನು ಮರೆಯುವಂತೆ ಮಾಡಿದರೆ. ರಾಜಸ್ಥಾನದಲ್ಲಿ ಆಡಳಿತ ವಿರೋಧಿ ಅಲೆ ಬಿಜೆಪಿ ಅಧಿಕಾರಕ್ಕೆ ಬರುವಂತೆ ಮಾಡಿದೆ. ಅಷ್ಟೇ ಅಲ್ಲ ಮೋದಿ ಕಾ ಗ್ಯಾರಂಟಿ, ಕಾಂಗ್ರೆಸ್​ ಗ್ಯಾರಂಟಿಗಳನ್ನು ಕಿತ್ತೊಗೆದು ಹೊಸ ಸರ್ಕಾರದ ರಚನೆಗೆ ಕಾರಣವಾಗಿದೆ. ರಾಜಸ್ಥಾನದಲ್ಲಿ ಕಾಂಗ್ರೆಸ್​​​​​​​ ಅಧಿಕಾರ ಕಳೆದುಕೊಂಡರೆ, ಬಿಜೆಪಿ ಈ ಬಾರಿ 42 ಸ್ಥಾನಗಳನ್ನು ಏರಿಕೆ ಮಾಡಿಕೊಳ್ಳುವ ಮೂಲಕ 115 ಸ್ಥಾನಗಳೊಂದಿಗೆ ಬಹುಮತದ ಸರ್ಕಾರ ರಚನೆ ಮಾಡುವಲ್ಲಿ ಸಫಲವಾಗಿದೆ.

ಮುಳುವಾದ ಆಂತರಿಕ ಕಚ್ಚಾಟ: ಇನ್ನು ಕಾಂಗ್ರೆಸ್​​​​, ಸಚಿನ್​ ಪೈಲಟ್​ಹಾಗೂ ಸಿಎಂ ಗೆಹ್ಲೋಟ್​ ಅವರ ಆಂತರಿಕ ಕಚ್ಚಾಟದಿಂದ ಸೊರಗಿದೆ. ಅಂತಿಮವಾಗಿ ಪಕ್ಷ ಅಧಿಕಾರ ಕಳೆದುಕೊಂಡಿದೆ. ಕಳೆದ ಬಾರಿಗಿಂತ 30 ಸ್ಥಾನಗಳನ್ನು ಕಳೆದುಕೊಂಡು ಅಧಿಕಾರದಿಂದಲೂ ವಂಚಿತವಾಗಿದೆ. 2018ರಲ್ಲಿ ಎದುಸಿರು ಬಿಟ್ಟು ಸರಳ ಬಹುಮತ ಪಡೆದಿದ್ದ ಪಕ್ಷ , ಈ ಬಾರಿ ಆಡಳಿತ ವಿರೋಧಿ ಅಲೆಯಲ್ಲಿ ತೇಲಿ ಹೋಗಿದೆ.

ಗ್ಯಾರಂಟಿಗಳ ಘೋಷಣೆ ಮೂಲಕ ಕರ್ನಾಟಕದಲ್ಲಿ ಅಧಿಕಾರದ ಗದ್ದುಗೆ ಏರಿದ್ದ ಕಾಂಗ್ರೆಸ್​, ಇವೇ ಗ್ಯಾರಂಟಿಗಳು, ಕಲ್ಯಾಣದ ಭರವಸೆಗಳನ್ನು ಇಟ್ಟುಕೊಂಡು ಭರ್ಜರಿ ಪ್ರಚಾರ ನಡೆಸಿದರು, ಅಧಿಕಾರ ಉಳಿಸಿಕೊಳ್ಳುವಲ್ಲಿ ಎಡವಿದೆ.

230 ಸ್ಥಾನಗಳನ್ನು ಹೊಂದಿರುವ ಮಧ್ಯಪ್ರದೇಶದಲ್ಲಿ ಬಿಜೆಪಿ 156 ಸ್ಥಾನಗಳಲ್ಲಿ ಗೆಲ್ಲುವ ಮೂಲಕ 20 ವರ್ಷಗಳ ಹಿಂದೆ ಮಾಡಿದ್ದ ಬಹುದೊಡ್ಡ ಗೆಲುವನ್ನು ಮರುಕಳಿಸುವಂತೆ ಮಾಡಿದ್ದಲ್ಲದೆ ಮೂರನೇ ಎರಡರಷ್ಟು ಬಹುಮತ ಪಡೆದುಕೊಂಡಿದೆ. ಉತ್ತರಪ್ರದೇಶದ ನಂತರದ ಎರಡನೇ ಬಹುದೊಡ್ಡ ರಾಜ್ಯ ಇದಾಗಿದೆ.

ಹುಸಿಯಾದ ನಿರೀಕ್ಷೆ: ಇನ್ನೊಂದೆಡೆ ಬಿಜೆಪಿ, ಮಧ್ಯಪ್ರದೇಶದಂತೆಯೇ, ರಾಜಸ್ಥಾನದಲ್ಲಿಯೂ ಆಕ್ರಮಣಕಾರಿ ಚುನಾವಣಾ ಪ್ರಚಾರ ನಡೆಸಿ 'ಅಚ್ಛೇ ದಿನ್' ಭರವಸೆಗಳನ್ನು ಜನರಲ್ಲಿ ಮೂಡಿಸುವಲ್ಲಿ ಯಶಸ್ವಿಯಾಗಿದ್ದು, ಯುವಕರು, ಮಹಿಳೆಯರು ಮತ್ತು ಹಿರಿಯ ಪುರುಷ ಮತದಾರರನ್ನು ಆಕರ್ಷಿಸುವಲ್ಲು ಯಶ ಕಂಡಿದೆ. ಅತ್ತ ಕಾಂಗ್ರೆಸ್​ ತೆಲಂಗಾಣ ಹೊರತು ಪಡಿಸಿ ಇನ್ನುಳಿದ ನಾಲ್ಕು ರಾಜ್ಯಗಳಲ್ಲಿ ಗ್ಯಾರಂಟಿ ಹಾಗೂ ಕಲ್ಯಾಣ ರಾಜ್ಯದ ಭರವಸೆ ಮೂಲಕ ಮತದಾರರ ಮನಸ್ಸನ್ನು ಗೆಲ್ಲುವಲ್ಲಿ ವಿಫಲವಾಗಿದೆ.

ಛತ್ತೀಸ್‌ಗಢದ ಸೋಲು ಕಾಂಗ್ರೆಸ್‌ಗೆ ನಿಜವಾದ ಹೊಡೆತ ನೀಡಿದೆ. ಕಳೆದ ಬಾರಿ ಅಧಿಕಾರ ಕಳೆದುಕೊಂಡು ಸೊರಗಿದ್ದ ಬಿಜೆಪಿ 54 ಸ್ಥಾನಗಳಲ್ಲಿ ಗೆದ್ದು ಅಧಿಕಾರದ ಚುಕ್ಕಾಣಿ ಹಿಡಿದಿದೆ. ಮತ್ತೊಂದು ಕಡೆ ಇಲ್ಲಿ ಮತ್ತೊಮ್ಮೆ ಅಧಿಕಾರಕ್ಕೆ ಬಂದೇ ಬರುತ್ತದೆ ಎಂಬ ಹುಮ್ಮಸ್ಸಿಲ್ಲಿದ್ದ ಸಿಎಂ ಬಘೇಲ್​​​​​​​​​ ಅಧಿಕಾರಕ್ಕೆ ಮರಳುವಲ್ಲಿ ವಿಫಲರಾಗಿದ್ದಾರೆ. ಪಕ್ಷದಲ್ಲಿನ ಆಂತರಿಕ ಕಚ್ಚಾಟ ಬಘೇಲ್​​ಗೆ ಮುಳುವಾಗಿದ್ದು, 33 ಸ್ಥಾನಗಳನ್ನು ಕಳೆದುಕೊಂಡ ಪಕ್ಷ 39ಕ್ಕೆ ಕುಸಿತ ಕಂಡಿದೆ.

ಮುಳುಗಿಸಿದ ಮಹಾದೇವ: ಭ್ರಷ್ಟಾಚಾರ ಆರೋಪಗಳಿಗೆ ಕಡಿವಾಣ ಹಾಕುವುದಾಗಿ ಮೋದಿ ನೀಡಿದ ಭರವಸೆ ಛತ್ತೀಸ್​ಗಢದಲ್ಲಿ ಮತದಾರರ ಮನಗೆದ್ದಿದೆ. "ಅವರು ಮಹಾದೇವನನ್ನು ಸಹ ಬಿಡಲಿಲ್ಲ" - ಮಹದೇವ್ ಆಪ್ ಬೆಟ್ಟಿಂಗ್ ಹಗರಣದ ಉಲ್ಲೇಖ ಮಾಡಿದ್ದ ಪ್ರಧಾನಿ ಇದನ್ನ ಪ್ರಸ್ತಾಪಿಸಿ ಮತದಾರರನ್ನು ಬಡೆದೆಬ್ಬಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇನ್ನು ಮಿಜೋರಾಂನಲ್ಲಿ ಲಾಲ್ದು ಹೋಮ್​ ನೇತೃತ್ವದ ​​​​​ ಝಡ್​ಎಂಪಿ ಅಧಿಕಾರಕ್ಕೆ ಬಂದಿದೆ. ಝೋರಂತಂಗ ಅವರ ಮಿಜೋ ನ್ಯಾಷನಲ್​ ಫ್ರಂಟ್ ಅಧಿಕಾರ ಕಳೆದುಕೊಂಡಿದೆ.

ಇನ್ನು ತೆಲಂಗಾಣದಲ್ಲಿ ಮಾತ್ರ ಕಾಂಗ್ರೆಸ್ ಕಮಾಲ್ ಮಾಡಿದೆ. ಅನಿರೀಕ್ಷಿತ ಎಂಬಂತೆ ಎಲ್ಲ ಮುಗಿದೇ ಹೋಗಿದೆ ಎಂಬಂತಹ ಪರಿಸ್ಥಿತಿಯಲ್ಲಿದ್ದ ಕಾಂಗ್ರೆಸ್​​​​ ಫಿನಿಕ್ಸ್ ಪಕ್ಷಿಯಂತೆ ಮೇಲೆ ಎದ್ದು ಬಂದಿದೆ. ಸತತ ಎರಡು ಬಾರಿ ಅಧಿಕಾರಕ್ಕೆ ಏರಿದ್ದ ಬಿಆರ್​ಎಸ್​ ಅಧಿಕಾರ ಕಳೆದುಕೊಂಡು ಮನೆಯ ದಾರಿ ಹಿಡಿದಿದೆ. ರೇವಂತ್ ರೆಡ್ಡಿ ನೇತೃತ್ವದಲ್ಲಿ ಕಾಂಗ್ರೆಸ್​​ ಅಧಿಕಾರ ಹಿಡಿದಿದೆ.

ಇದನ್ನು ಓದಿ: ಪ್ರಧಾನಿ ಮೋದಿ ಭೇಟಿಯಾದ ಹೆಚ್.ಡಿ. ದೇವೇಗೌಡ, ಹೆಚ್.ಡಿ. ಕುಮಾರಸ್ವಾಮಿ

ದಲಿತ ಎಂಬ ಕಾರಣಕ್ಕೆ ನನಗೆ ಮಾತನಾಡಲು ಅವಕಾಶ ಸಿಗುತ್ತಿಲ್ಲ ಎನ್ನಬೇಕೇ?: ಮಲ್ಲಿಕಾರ್ಜುನ್ ಖರ್ಗೆ

ಬ್ರಿಟಿಷರ ಕಾಲದ ಕ್ರಿಮಿನಲ್​ ಕಾನೂನುಗಳಿಗೆ ವಿದಾಯ: ಹೊಸ 3 ಮಸೂದೆಗಳು ಲೋಕಸಭೆಯಲ್ಲಿ ಪಾಸ್​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.