ETV Bharat / bharat

ದಲಿತ ಎಂಬ ಕಾರಣಕ್ಕೆ ನನಗೆ ಮಾತನಾಡಲು ಅವಕಾಶ ಸಿಗುತ್ತಿಲ್ಲ ಎನ್ನಬೇಕೇ?: ಮಲ್ಲಿಕಾರ್ಜುನ್ ಖರ್ಗೆ

author img

By PTI

Published : Dec 20, 2023, 9:25 PM IST

Should I say I am not allowed to speak in Parliament because I am Dalit: Kharge
ರಾಜ್ಯಸಭಾ ಸಭಾಪತಿಯ ಅಣಕ ವಿವಾದ: ಪ್ರತಿಯೊಂದರಲ್ಲೂ ಜಾತಿ ಎಳೆದು ತರುವುದು ಸರಿಯಲ್ಲ ಎಂದ ಖರ್ಗೆ

Mallikarjun Kharge reaction on row over the mimicry of Jagdeep Dhankhar: ರಾಜ್ಯಸಭಾ ಸಭಾಪತಿ ಜಗದೀಪ್​ ಧನಕರ್​ ಅವರನ್ನು ಅಣಕ ಮಾಡಿರುವ ವಿವಾದದ ಬಗ್ಗೆ ಕಾಂಗ್ರೆಸ್​ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ, ಪಕ್ಷದ ನಾಯಕರಾದ ಅಧೀರ್ ರಂಜನ್ ಚೌಧರಿ, ರಾಹುಲ್​ ಗಾಂಧಿ ಪ್ರತಿಕ್ರಿಯಿಸಿದ್ದಾರೆ.

ನವದೆಹಲಿ: ರಾಜ್ಯಸಭಾ ಸಭಾಪತಿ ಜಗದೀಪ್​ ಧನಕರ್​ ಅವರನ್ನು ತೃಣಮೂಲ ಕಾಂಗ್ರೆಸ್​ ಸಂಸದ ಕಲ್ಯಾಣ್ ಬ್ಯಾನರ್ಜಿ ಅಣಕ ಮಾಡಿರುವುದು ಸಾಕಷ್ಟು ವಿವಾದಕ್ಕೆ ಕಾರಣವಾಗಿದೆ. ಈ ವಿಷಯದಲ್ಲಿ ಜಗದೀಪ್​ ಧನಕರ್ ಜಾತಿಯನ್ನೂ ಮುನ್ನೆಲೆಗೆ ತರಲಾಗಿದ್ದು, ಜಾಟ್ ಸಮುದಾಯ ಹಾಗೂ ರೈತರಿಗೆ ಮಾಡಿದ ಅಪಮಾನ ಎಂದು ಬಿಜೆಪಿ ಆರೋಪಿಸಿದೆ. ಇದಕ್ಕೆ ಕಾಂಗ್ರೆಸ್​ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ತೀಕ್ಷ್ಣವಾದ ಪ್ರತಿಕ್ರಿಯಿಸಿ, ಪ್ರತಿಯೊಂದು ವಿಷಯದಲ್ಲೂ ಜಾತಿಯನ್ನು ಎಳೆದು ತರಬಾರದು. ರಾಜ್ಯಸಭೆಯಲ್ಲಿ ನನಗೆ ಮಾತನಾಡಲು ಅವಕಾಶ ಸಿಗದಿದ್ದಾಗ ಪ್ರತಿ ಬಾರಿಯೂ ದಲಿತ ಮೂಲವನ್ನು ನಾನು ಕೆಣಕಬೇಕೇ ಎಂದು ಪ್ರಶ್ನಿಸಿದರು.

ರಾಜ್ಯಸಭೆ ವಿರೋಧ ಪಕ್ಷದ ನಾಯಕರಾದ ಖರ್ಗೆ ಸುದ್ದಿಗಾರರೊಂದಿಗೆ ಮಾತನಾಡಿ, ''ಸದನದ ಸದಸ್ಯರಿಗೆ ರಕ್ಷಣೆ ನೀಡುವುದು ಸಭಾಪತಿಯವರ ಕರ್ತವ್ಯ. ಆದರೆ, ಅವರೇ ಇಂತಹ ಹೇಳಿಕೆ ನೀಡುತ್ತಿದ್ದಾರೆ. ರಾಜ್ಯಸಭೆಯಲ್ಲಿ ಆಗಾಗ್ಗೆ ಮಾತನಾಡಲು ನನಗೆ ಅವಕಾಶ ಸಿಗಲ್ಲ. ನಾನು ದಲಿತ ಎಂಬ ಕಾರಣಕ್ಕೆ ಮಾತನಾಡಲು ಅವಕಾಶ ಸಿಗುತ್ತಿಲ್ಲ ಎಂದು ಹೇಳಬಹುದೇ?. ಒಳಗೊಳಗೆ ಮಾತನಾಡಿಕೊಂಡು ಜಾತಿಯ ಹೆಸರಿನಲ್ಲಿ ಹೊರಗಿನವರನ್ನು ಪ್ರಚೋದಿಸಬಾರದು'' ಎಂದು ಅಸಮಾಧಾನ ಹೊರಹಾಕಿದರು.

ಲೋಕಸಭೆಯಲ್ಲಿ ಕಾಂಗ್ರೆಸ್ ಸಂಸದೀಯ ನಾಯಕರಾದ ಅಧೀರ್ ರಂಜನ್ ಚೌಧರಿ ಪ್ರತಿಕ್ರಿಯಿಸಿ, ''ಸಾಂವಿಧಾನಿಕ ಸ್ಥಾನದಲ್ಲಿರುವವರು ತಮ್ಮ ಜಾತಿಗಳ ಬಗ್ಗೆ ಮಾತನಾಡುವುದು ಅತ್ಯಂತ ದುಃಖಕರ ಸಂಗತಿ. ಇಂತಹ ವಿಷಯಗಳನ್ನು ಮುನ್ನಲೆಗೆ ತರುವ ಮೂಲಕ ಸಂಸತ್ತಿನ ಭದ್ರತಾ ಲೋಪದ ಘಟನೆ ವಿಷಯದ ಬಗ್ಗೆ ಸರ್ಕಾರ ತನ್ನ ಕೈ ತೊಳೆಯಲು ಪ್ರಯತ್ನಿಸುತ್ತಿದೆ. ಎಲ್ಲರೂ ಈಗ ತಮ್ಮ ಜಾತಿಯನ್ನು ಘೋಷಿಸುವ ಹಣೆಪಟ್ಟಿ ಹಾಕಿಕೊಂಡು ತಿರುಗಾಡಬೇಕೇ'' ಎಂದು ವಿಷಾದ ವ್ಯಕ್ತಪಡಿಸಿದರು.

150 ಸಂಸದರ ಹೊರಹಾಕಿದ ಬಗ್ಗೆ ಚರ್ಚೆ ಯಾಕಿಲ್ಲ?- ರಾಹುಲ್​: ಇದೇ ವಿಷಯವಾಗಿ ಕಾಂಗ್ರೆಸ್​ ನಾಯಕ ರಾಹುಲ್​ ಗಾಂಧಿ ಮಾತನಾಡಿ, ''ಅಣಕ ಮಾಡಿರುವುದು ಮಾತ್ರ ಸುದ್ದಿಯಾಗುತ್ತಿದೆ. ಆದರೆ, 150 ಸಂಸದರನ್ನು ಸದನದಿಂದ ಹೊರಹಾಕಿರುವ ಬಗ್ಗೆ ಯಾಕೆ ಯಾರೂ ಚರ್ಚೆ ಮಾಡುತ್ತಿಲ್ಲ'' ಎಂದು ಬೇಸರ ವ್ಯಕ್ತಪಡಿಸಿದರು. ''ಮಾಧ್ಯಮಗಳು ತೋರಿಸಬೇಕಾದ ಕೆಲವು ಸುದ್ದಿಗಳನ್ನು ತೋರಿಸಬೇಕು. ಅದು ಮಾಧ್ಯಮಗಳ ಜವಾಬ್ದಾರಿ'' ಎಂದು ತಿಳಿಸಿದರು.

ಸಭಾಪತಿಗಳನ್ನು ಅಣಕ ಮಾಡಿರುವ ಬಗ್ಗೆ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ರಾಹುಲ್​, ''ಯಾರು, ಹೇಗೆ ಅವಮಾನ ಮಾಡಿದ್ದಾರೆ?, ಸಂಸದರು ಹೊರಗೆ ಕುಳಿತಿದ್ದರು. ಇವರ ವಿಡಿಯೋ ತೆಗೆದಿದ್ದು ನನ್ನ ಫೋನ್‌ನಲ್ಲಿ ಉಳಿದಿದೆ. ಮಾಧ್ಯಮಗಳು ಅದನ್ನು ತೋರಿಸುತ್ತಲೇ ಇವೆ. ಟೀಕೆ ಮಾಡುತ್ತಿವೆ. ಮೋದಿ ಅವರೂ ಟೀಕೆಗಳನ್ನು ಮಾಡುತ್ತಿದ್ದಾರೆ. ಯಾರೂ ಹೇಳಬೇಕಾಗಿದ್ದನ್ನು ಹೇಳಿಲ್ಲ'' ಎಂದರು.

''ನಮ್ಮ 150 ಸಂಸದರನ್ನು ಹೊರಹಾಕಲಾಗಿದೆ. ಅದರ ಬಗ್ಗೆ ಮಾಧ್ಯಮಗಳಲ್ಲಿ ಯಾವುದೇ ಚರ್ಚೆ ಇಲ್ಲ. ಅದಾನಿ ಮತ್ತು ರಫೇಲ್ ಬಗ್ಗೆ ಯಾವುದೇ ಚರ್ಚೆ ಆಗುತ್ತಿಲ್ಲ. ರಫೇಲ್ ಕುರಿತು ತನಿಖೆಗೆ ಅವಕಾಶ ನೀಡುತ್ತಿಲ್ಲ ಎಂದು ಫ್ರಾನ್ಸ್ ಹೇಳಿದೆ. ಅದರ ಬಗ್ಗೆ ಯಾವುದೇ ಚರ್ಚೆ ನಡೆಯುತ್ತಿಲ್ಲ. ನಿರುದ್ಯೋಗದ ಬಗ್ಗೆ ಚರ್ಚೆ ಇಲ್ಲ. ನಮ್ಮ ಸಂಸದರು ದುಃಖಿತರಾಗಿದ್ದಾರೆ. ಆದರೆ, ಇಲ್ಲಿ ಕುಳಿತು ನೀವು ಅದರ ಬಗ್ಗೆ ಮಾತ್ರ ಚರ್ಚಿಸುತ್ತಿದ್ದೀರಿ'' ಎಂದು ಕಿಡಿಕಾರಿದರು.

ಇದನ್ನೂ ಓದಿ: ರಾಜ್ಯಸಭಾ ಸಭಾಪತಿಯಂತೆ ಅಣಕ ಪ್ರದರ್ಶನ ಮಾಡಿದ ಟಿಎಂಸಿ ಸದಸ್ಯ: ಸ್ವೀಕಾರಾರ್ಹವಲ್ಲ ಎಂದ ಧನಕರ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.