ಕರ್ನಾಟಕ

karnataka

ಈಗಲೂ ಕಾಲ ಮಿಂಚಿಲ್ಲ, ನಮ್ಮ ಕುಟುಂಬಕ್ಕೆ ಟಿಕೆಟ್ ನೀಡಿದರೆ ಅಭ್ಯರ್ಥಿ ಗೆಲ್ಲಿಸುತ್ತೇವೆ: ಕೆ.ಹೆಚ್.ಮುನಿಯಪ್ಪ - Minister KH Muniyappa

By ETV Bharat Karnataka Team

Published : Mar 29, 2024, 2:42 PM IST

ಸಚಿವ ಕೆ.ಹೆಚ್.ಮುನಿಯಪ್ಪ ಮತ್ತೆ ಕೋಲಾರ ಲೋಕಸಭಾ ಕ್ಷೇತ್ರ ಟಿಕೆಟ್​ ಬಗ್ಗೆ ಮುನಿಸಿಕೊಂಡಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಿಸಲ್ಟ್​​ ಓರಿಯಂಟೆಡ್​​ ಅಭ್ಯರ್ಥಿಯನ್ನು ಆಯ್ಕೆ ಮಾಡಬೇಕು. ನಮ್ಮ ಕುಟುಂಬಕ್ಕೆ ಟಿಕೆಟ್ ನೀಡಿದರೆ ನಾವೆಲ್ಲರೂ ಸೇರಿ ಅಭ್ಯರ್ಥಿಯನ್ನು ಗೆಲ್ಲಿಸಿಕೊಂಡು ಬರುತ್ತೇವೆ ಎಂದು ಹೇಳಿದರು.

ಸಚಿವ ಕೆ.ಹೆಚ್.ಮುನಿಯಪ್ಪ
ಸಚಿವ ಕೆ.ಹೆಚ್.ಮುನಿಯಪ್ಪ

ಬೆಂಗಳೂರು:"ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಿಸಲ್ಟ್​​ ಓರಿಯಂಟೆಡ್​​ ಅಭ್ಯರ್ಥಿಯನ್ನು ಆಯ್ಕೆ ಮಾಡಬೇಕು. ಈಗಲೂ ಕಾಲ ಮಿಂಚಿಲ್ಲ. ನಮ್ಮ ಕುಟುಂಬಕ್ಕೆ ಟಿಕೆಟ್ ನೀಡಿದರೆ ನಾವೆಲ್ಲರೂ ಸೇರಿ ಅಭ್ಯರ್ಥಿಯನ್ನು ಗೆಲ್ಲಿಸಿಕೊಂಡು ಬರುತ್ತೇವೆ" ಎಂದು ಸಚಿವ ಕೆ.ಹೆಚ್. ಮುನಿಯಪ್ಪ ಪುನರುಚ್ಚರಿಸಿದ್ದಾರೆ.

ಬೆಂಗಳೂರಿನ ತಮ್ಮ ನಿವಾಸದಲ್ಲಿ ಮಾತನಾಡಿದ ಅವರು, "ಈ ಘಟನೆಗಳಿಂದ ಮನಸ್ಸಿಗೆ ಆಘಾತವಾಗಿದೆ‌. ಮುಖ್ಯಮಂತ್ರಿಗಳು ಸುಖಾ ಸುಮ್ಮನೆ ಯಾವುದೋ ಅಭ್ಯರ್ಥಿಯನ್ನು ಘೋಷಿಸಬಾರದು. ನಮ್ಮ ಕುಟುಂಬಕ್ಕೆ ಅವಕಾಶ ನೀಡಬೇಕು ಎಂದು ಹೈಕಮಾಂಡ್​ಗೆ ಮನವರಿಕೆ ಮಾಡಿದ್ದೇನೆ. ಕಾಲ ಮಿಂಚಿಲ್ಲ, ಯೋಚನೆ ಮಾಡಿ ಅಭ್ಯರ್ಥಿ ಘೋಷಿಸಿ. ಟಿಕೆಟ್​ ಘೋಷಣೆ ವಿಷಯದಲ್ಲಿ ಮಾಜಿ ಸಚಿವ ರಮೇಶ್​ ಕುಮಾರ್ ಅವರ ಪಾತ್ರ ಬಹಳ ಮುಖ್ಯವಾಗಿದೆ. ಅವರ ಅಭಿಪ್ರಾಯ ಪಡೆಯುವುದು ಸೂಕ್ತ" ಎಂದು ತಿಳಿಸಿದರು.

"'ರವಿ ಕಾಣದ್ದನ್ನು ಕವಿ ಕಂಡ' ಎಂಬ ಗಾದೆ ಮಾತಿನಂತೆ ಕೋಲಾರ ಲೋಕಸಭಾ ಕ್ಷೇತ್ರದ ಬಿಕ್ಕಟ್ಟಿನ ಹಿಂದೆ ಯಾರಿದ್ದಾರೆ ಎಂಬುದನ್ನು ಮಾಧ್ಯಮದವರೇ ಹುಡುಕಬೇಕು. ನಾನು ಕೇಂದ್ರದಲ್ಲಿ 40 ವರ್ಷಗಳ ಕಾಲ ರಾಜಕೀಯ ಮಾಡಿರುವವನು. ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳು ನನಗೆ ತವರು ಮನೆ ಇದ್ದಂತೆ. ನಾನು ಮಾತು ಕೊಟ್ಟಿದ್ದೇನೆ. ಎರಡು ಕ್ಷೇತ್ರಗಳಲ್ಲಿ ನಾನು ಅಭ್ಯರ್ಥಿಗಳನ್ನು ಗೆಲ್ಲಿಸಿಕೊಂಡು ಬರುತ್ತೇನೆ ಎಂದಿದ್ದೇನೆ. ಆದರೆ, ಕಾಂಗ್ರೆಸ್​ ಗೆಲುವಿಗೆ ನಾವೆಲ್ಲರೂ ಒಗ್ಗಟ್ಟಿನಿಂದ ಕೆಲಸ ಮಾಡಬೇಕಾಗಿದೆ" ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಟಿಕೆಟ್​ ನೀಡದೇ ಇರುವುದು ನನ್ನ ಮನಸ್ಸಿಗೆ ನೋವುಂಟು ಮಾಡಿದೆ. ನಾನು ಕಾಂಗ್ರೆಸ್​ ಪಕ್ಷದ ಶಿಸ್ತಿನ ಸಿಪಾಯಿ. ನಮಗೆ ಪಕ್ಷವೇ ದೊಡ್ಡದು. ಪಕ್ಷ ನನಗೆ ಎಲ್ಲ ಅಧಿಕಾರವನ್ನು ಕಲ್ಪಿಸಿದ್ದು, ನಾನು ಹೈಕಮಾಂಡ್ ನಿರ್ಧಾರಕ್ಕೆ ಬದ್ಧನಾಗಿದ್ದೇನೆ. ಕೋಲಾರ ‌ಲೋಕಸಭಾ ಕ್ಷೇತ್ರದಲ್ಲಿ ಈ ಬಾರಿ ನಾವು ಜಯಗಳಿಸಬೇಕಾಗಿರುವ ಅನಿವಾರ್ಯತೆ ಇರುವುದರಿಂದ ನಮ್ಮ ಕುಟುಂಬದ ಚಿಕ್ಕ ಪೆದ್ದಣ್ಣ ಅವರಿಗೆ ಟಿಕೆಟ್ ಕೇಳಿದ್ದೆ. ಹೈಕಮಾಂಡ್ ನೀಡುವ ಆಶಾಭಾವನೆಯಲ್ಲಿದ್ದೇನೆ" ಎಂದರು.

ಶ್ರೀನಿವಾಸ ಪುರದ ಮಾಜಿ ಸಚಿವ ರಮೇಶ್ ಕುಮಾರ್ ಅವರ ಮನೆಗೆ ನಾನೇ ಖುದ್ದಾಗಿ ಭೇಟಿ ನೀಡಿದ್ದು, ಅವರು ಅನಾರೋಗ್ಯದ ಕಾರಣ ನಮ್ಮ ಸಂಪರ್ಕಕ್ಕೆ ಸಿಕ್ಕಿಲ್ಲ. ರಮೇಶ್​ ಕುಮಾರ್ ಅವರನ್ನು ಕೇಳಿ ನಿರ್ಧಾರ ಮಾಡಲಿ. ಅವರಿಗೂ ಬೇಡ ಇವರಿಗೂ ಬೇಡ ಎಂದರೆ ಅಭ್ಯರ್ಥಿಯ ಗೆಲುವು ಕಷ್ಟಕರವಾಗಲಿದೆ. ನಾನು ಯಾವ ನಾಯಕರ ವಿರುದ್ಧವೂ ಕೆಲಸ ಮಾಡಿಲ್ಲ. ಸಚಿವಗಿರಿಗೆ ವಿರೋಧಿಸಿಲ್ಲ. ಶಾಸಕರಾಗಲು ಸಹಕರಿಸಿದ್ದೇನೆ. ರಾಜ್ಯದ ಎಲ್ಲ ಜಿಲ್ಲೆಗಳಲ್ಲಿಯೂ ಸಮಸ್ಯೆ ಬಗೆಹರಿಸುತ್ತಾರೆ. ಕೋಲಾರದ ಬಿಕ್ಕಟ್ಟು ಬಗೆಹರಿಸಲು ಸಾದ್ಯವಿಲ್ಲವೇ? ಬಗೆ ಹರಿಸುವವರು ದೊಡ್ಡ ಮನಸ್ಸು ಮಾಡಬೇಕು" ಎಂದು ತಿಳಿಸಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಮನಸ್ಸು ಮಾಡಿದರೆ ಉತ್ತಮ ಫಲಿತಾಂಶ ನಮ್ಮ ಪರವಾಗುತ್ತದೆ, ಕಾದು ನೋಡೋಣ. ಕಾಂಗ್ರೆಸ್ ಪಕ್ಷದಲ್ಲಿ ಸಮಸ್ಯೆಗಳು ಸಹಜವಾಗಿಯೇ ಬರುತ್ತೆ, ಹೋಗುತ್ತದೆ. ನಾವು ನಮ್ಮ ಸ್ವಪ್ರತಿಷ್ಠೆಗಳನ್ನು ಬದಿಗಿಟ್ಟು ಎಲ್ಲರೂ ಕೆಲಸ ಮಾಡಬೇಕು. ಹೈಕಮಾಂಡ್ ಇದನ್ನೂ ಗಮನಿಸುತ್ತಿದೆ. ನಾನು ಕಾಂಗ್ರೆಸ್ ಪಕ್ಷದ ಶಿಸ್ತಿನ ಸಿಪಾಯಿ ಆಗಿ ಪಕ್ಷವನ್ನು ಕಟ್ಟುತ್ತಿದ್ದೇನೆ. ನಮಗೆಲ್ಲಾ ತಾಯಿ ಸಮಾನವಾಗಿ ಪಕ್ಷ ಇರುವುದರಿಂದ ನಾವು ಒಗ್ಗಟ್ಟಾಗಿ ಹೋಗೋಣ" ಎಂದರು.

ಇದನ್ನೂ ಓದಿ:ಕೋಲಾರ ಟಿಕೆಟ್​ ಹಂಚಿಕೆ ಗೊಂದಲ: ಸಿಎಂ, ಡಿಸಿಎಂ ಭೇಟಿಯಾದ ಸಚಿವ ಕೆ.ಹೆಚ್.ಮುನಿಯಪ್ಪ - Minister KH Muniyappa

ABOUT THE AUTHOR

...view details