ETV Bharat / technology

ಭಾರತೀಯರಲ್ಲಿ ಭಯ ಹುಟ್ಟಿಸಿದೆ ಜಾಗತಿಕ ತಾಪಮಾನ ಏರಿಕೆ: ಅಂತಾರಾಷ್ಟ್ರೀಯ ಮಟ್ಟದ ವರದಿ ಬಹಿರಂಗ - Global Warming

author img

By ETV Bharat Karnataka Team

Published : May 23, 2024, 7:57 PM IST

Climate Change In The Indian Mind 2023: ಹವಾಮಾನ ಬದಲಾವಣೆ ಕುರಿತು ಯೇಲ್ ಪ್ರೋಗ್ರಾಮ್ ಆನ್ ಕ್ಲೈಮೇಟ್ ಚೇಂಜ್ ಕಮ್ಯುನಿಕೇಶನ್ ಮತ್ತು ಸೀಟರ್ ಇಂಟರ್‌ನ್ಯಾಶನಲ್ ನಡೆಸಿದ ಸಮೀಕ್ಷೆ ಬಹಿರಂಗಗೊಂಡಿದ್ದು, 91 ಪ್ರತಿಶತ ಭಾರತೀಯರು ಜಾಗತಿಕ ತಾಪಮಾನದ ಬಗ್ಗೆ ಕಳವಳ ವ್ಯಕ್ತಪಡಿಸುತ್ತಿರುವುದಾಗಿ ಉಲ್ಲೇಖಿಸಿದೆ.

Global Warming Becoming Biggest Threat To India: Climate Change In Indian Mind 2023 Report
ಸಾಂದರ್ಭಿಕ ಚಿತ್ರ (ETV Bharat)

ಹೈದರಾಬಾದ್: ಹವಾಮಾನ ಬದಲಾವಣೆಯ ಬಗ್ಗೆ ಭಾರತೀಯರ ವರ್ತನೆಗಳ ಒಳನೋಟ ಕುರಿತು ವರದಿಯೊಂದು ಬಿಡುಗಡೆಯಾಗಿದೆ. ಇಲ್ಲಿನ ಶೇಕಡಾ 90 ರಷ್ಟು ಜನ ದೇಶದಲ್ಲಿ ಆಗುತ್ತಿರುವ ಜಾಗತಿಕ ತಾಪಮಾನ ಏರಿಕೆ ಬಗ್ಗೆ ತೀವ್ರತರ ತಲೆ ಬಿಸಿ ಮಾಡಿಕೊಂಡಿದ್ದಾರೆ ಈ ಸಮೀಕ್ಷೆ ಬಹಿರಂಗಪಡಿಸಿದೆ.

ಅಂತಾರಾಷ್ಟ್ರೀಯ ಮಟ್ಟದ ಯೇಲ್ ಪ್ರೋಗ್ರಾಮ್ ಆನ್ ಕ್ಲೈಮೇಟ್ ಚೇಂಜ್ ಕಮ್ಯುನಿಕೇಶನ್ ಮತ್ತು ಸೀಟರ್ ಇಂಟರ್‌ನ್ಯಾಷನಲ್ ನಡೆಸಿದ ಸಮೀಕ್ಷೆ ಇದಾಗಿದ್ದು, ತಾಪಮಾನ ಏರಿಕೆಗೆ ಅತಿವೃಷ್ಟಿ, ಅನಾವೃಷ್ಟಿ, ಆಲಿಕಲ್ಲು ಮಳೆ, ತೀವ್ರ ನೀರಿನ ಅಭಾವ, ಮಾಲಿನ್ಯ, ಪ್ರಾಣಿಜನ್ಯ ರೋಗಗಳು ಇವೆಲ್ಲವೂ ಕಾರಣ ಎಂದು ಸಮೀಕ್ಷೆಯಲ್ಲಿ ಪಾಲ್ಗೊಂಡಿದ್ದ ಜನ ಹೇಳಿರುವುದಾಗಿ ತಿಳಿಸಿದೆ.

ಜಾಗತಿಕ ತಾಪಮಾನವನ್ನು ಕಡಿಮೆ ಮಾಡಲು ಸಾಂಪ್ರದಾಯಿಕವಲ್ಲದ ಇಂಧನ ಮೂಲಗಳನ್ನು ಬಳಸಬೇಕು ಎನ್ನುವುದು ಸೇರಿದಂತೆ ಇಂಗಾಲದ ಹೊರಸೂಸುವಿಕೆಯನ್ನು ಶೂನ್ಯಕ್ಕೆ ಇಳಿಸಬೇಕು ಎಂಬ ಅಭಿಪ್ರಾಯ ಹೊಂದಿದ್ದಾರೆ. ಅಲ್ಲದೇ 2070ರ ವೇಳೆಗೆ ಇಂಗಾಲದ ಹೊರಸೂಸುವಿಕೆಯನ್ನು ಶೂನ್ಯಕ್ಕೆ ತಗ್ಗಿಸಲು ಆಳುವ ಸರ್ಕಾರಗಳು ಹಾಕಿಕೊಂಡ ಗುರಿಯನ್ನು ತಲುಪಲು ಅವರು ಪ್ರಯತ್ನದಲ್ಲಿದ್ದಾರೆ ಎಂದು ವರದಿಯಲ್ಲಿ ತಿಳಿಸಿದೆ.

ಯೇಲ್ ಪ್ರೋಗ್ರಾಂ ಆನ್ ಕ್ಲೈಮೇಟ್ ಚೇಂಜ್ ಕಮ್ಯುನಿಕೇಶನ್ ಮತ್ತು ಸೀಟರ್ ಇಂಟರ್‌ನ್ಯಾಶನಲ್ ಜಂಟಿಯಾಗಿ 'ಕ್ಲೈಮೇಟ್ ಚೇಂಜ್ ಇನ್ ಇಂಡಿಯನ್ ಮೈಂಡ್-2023' ಎಂಬ ವರದಿಯನ್ನು ಅಮೆರಿಕದಲ್ಲಿ ಬಿಡುಗಡೆ ಮಾಡಿದೆ. ಈ ವರದಿಯಲ್ಲಿ ಹವಾಮಾನ ಬದಲಾವಣೆಯ ಬಗ್ಗೆ ಭಾರತೀಯರ ವರ್ತನೆಗಳ ಒಳನೋಟ ಕುರಿತು ಹೇಳಲಾಗಿದೆ.

ಹವಾಮಾನ ವೈಪರೀತ್ಯದಿಂದ ಜನರ ದೈನಂದಿನ ಜೀವನ ದುಸ್ತರವಾಗುತ್ತಿದೆ. ಹವಾಮಾನ ಬದಲಾವಣೆಯಿಂದ ಕುಟುಂಬಗಳಿಗೆ ಬರುವ ಆದಾಯ ಕೂಡ ಸಾಕಾಗುತ್ತಿಲ್ಲ. ಹಾಗಾಗಿ ಜಾಗತಿಕ ತಾಪಮಾನವನ್ನು ಕಡಿಮೆ ಮಾಡಲು ಎಲೆಕ್ಟ್ರಿಕ್ ವಾಹನಗಳನ್ನು ಖರೀದಿಸಲು ಮೊದಲ ಪ್ರಾಶಸ್ತ್ಯ ನೀಡಲಾಗುವುದು, ಇದಕ್ಕೆ ಎಷ್ಟು ಬೇಕಾದರೂ ಹಣ ಖರ್ಚು ಮಾಡಲು ದೇಶದ ಜನ ಸಿದ್ಧರಿರುವುದಾಗಿ ವರದಿಯಿಂದ ತಿಳಿದು ಬಂದಿದೆ.

ಹವಾಮಾನ ಬದಲಾವಣೆಯೊಂದಿಗೆ ವಿಪರೀತ ಪ್ರವಾಹ ಮತ್ತು ಚಂಡಮಾರುತಗಳು ಉದ್ಭವಿಸುತ್ತವೆ ಎಂದು ಯೇಲ್ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಡಾ.ಆಂಥೋನಿ ಲಿಸಿರೊವಿಟ್ಜ್ ತಮ್ಮ ಅಭಿಪ್ರಾಯ ತಿಳಿಸಿದ್ದಾರೆ. ಕ್ವೀನ್ಸ್‌ಲ್ಯಾಂಡ್ ವಿಶ್ವವಿದ್ಯಾಲಯದ ಪ್ರೊ.ಡಾ.ಜಗದೀಶ್ ಠಾಕರ್ ಮಾತನಾಡಿ, ಶುದ್ಧ ಇಂಧನವು ಭಾರತೀಯರಿಗೆ ಆರ್ಥಿಕ ಸ್ಥಿರತೆ ಮತ್ತು ಉತ್ತಮ ಆರೋಗ್ಯವನ್ನು ನೀಡುತ್ತದೆ ಎಂದಿದ್ದಾರೆ.

ಸಮೀಕ್ಷೆಯ ಫಲಿತಾಂಶಗಳು:

  • 86 ರಷ್ಟು ಜನರು 2070 ರ ವೇಳೆಗೆ ಭಾರತದ ಇಂಗಾಲದ ಮಾಲಿನ್ಯವನ್ನು ಬಹುತೇಕ ಶೂನ್ಯಕ್ಕೆ ತಗ್ಗಿಸುವ ಭಾರತ ಸರ್ಕಾರದ ಬದ್ಧತೆಯ ಪರವಾಗಿದ್ದಾರೆ.
  • 61 ಪ್ರತಿಶತ ಜನರು ಭಾರತವು ನವೀಕರಿಸಬಹುದಾದ ಇಂಧನ ಮೂಲಗಳ ಬಳಕೆಯನ್ನು ಹೆಚ್ಚಿಸಬೇಕು ಎಂದು ಭಾವಿಸಿದರೆ, ಕೇವಲ 14 ಪ್ರತಿಶತದಷ್ಟು ಜನರು ಭಾರತವು ಪಳೆಯುಳಿಕೆ ಇಂಧನಗಳ ಬಳಕೆಯನ್ನು ಹೆಚ್ಚಿಸಬೇಕು ಎಂದು ಭಾವಿಸುತ್ತಾರೆ.
  • 78 ರಷ್ಟು ಜನರು ಜಾಗತಿಕ ತಾಪಮಾನವನ್ನು ನಿಭಾಯಿಸಲು ಭಾರತ ಸರ್ಕಾರವು ಹೆಚ್ಚು ಒತ್ತು ನೀಡಬೇಕು ಎಂದು ಹೇಳುತ್ತಾರೆ.
  • ಜಾಗತಿಕ ತಾಪಮಾನ ಏರಿಕೆಗೆ ಮಾನವನ ದೋಷವೇ ಕಾರಣ ಎಂದು ಶೇ. 52ರಷ್ಟು ಮಂದಿ ನಂಬಿದರೆ, ಶೇ. 38ರಷ್ಟು ಮಂದಿ ಪರಿಸರದಲ್ಲಿನ ನೈಸರ್ಗಿಕ ಬದಲಾವಣೆಯೇ ಈ ಪರಿಸ್ಥಿತಿಗೆ ಕಾರಣ ಎಂದು ಹೇಳಿದ್ದಾರೆ.
  • 84 ಪ್ರತಿಶತ ಜನರು ಕಲ್ಲಿದ್ದಲು ಆಧಾರಿತ ವಿದ್ಯುತ್ ಸ್ಥಾವರಗಳನ್ನು ನಿಷೇಧಿಸುವುದು, ಅಸ್ತಿತ್ವದಲ್ಲಿರುವವುಗಳನ್ನು ಮುಚ್ಚುವುದು ಮತ್ತು ಅವುಗಳ ಸ್ಥಳದಲ್ಲಿ ಸೌರ ಮತ್ತು ಪವನ ವಿದ್ಯುತ್ ಸ್ಥಾವರಗಳನ್ನು ಸ್ಥಾಪಿಸುವ ಬಗ್ಗೆ ತಮ್ಮ ಸಕಾರಾತ್ಮಕ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.
  • ಜಾಗತಿಕ ತಾಪಮಾನವನ್ನು ಕಡಿಮೆ ಮಾಡಲು ತೆಗೆದುಕೊಂಡ ಕ್ರಮಗಳು ಆರ್ಥಿಕ ಬೆಳವಣಿಗೆ ಮತ್ತು ಹೊಸ ಉದ್ಯೋಗಗಳನ್ನು ತರುತ್ತವೆ ಎಂದು 74 ಪ್ರತಿಶತದಷ್ಟು ಜನರು ನಂಬಿದ್ದರೆ, ಆರ್ಥಿಕ ಕುಸಿತದ ಜೊತೆಗೆ ಉದ್ಯೋಗಗಳಲ್ಲಿ ಕಡಿತವಿದೆ ಎಂದು 21 ಪ್ರತಿಶತದಷ್ಟು ಜನರು ಹೇಳಿದ್ದಾರೆ.

ಹವಾಮಾನ ಬದಲಾವಣೆಯ ಸಂವಹನದ ಕುರಿತು ಯೇಲ್ ಪ್ರೋಗ್ರಾಂ ನಡೆಸಿದ ಅಧ್ಯಯನವು ದೇಶಾದ್ಯಂತ ಹರಡಿರುವ 2,178 ಜನರ ಸಮೀಕ್ಷೆಯನ್ನು ಆಧರಿಸಿದೆ. ಜೊತೆಗೆ ವಿವಿಧ ತಲೆಮಾರುಗಳನ್ನು ಪ್ರತಿನಿಧಿಸುವ ವಿವಿಧ ವಯಸ್ಸಿನ ಪ್ರತಿಸ್ಪಂದಕರನ್ನು ಸಹ ಒಳಗೊಂಡಿದೆ. ಸೆಪ್ಟೆಂಬರ್ ಮತ್ತು ನವೆಂಬರ್ 2023 ರಲ್ಲಿ ನಡೆಸಿದ ಸಮೀಕ್ಷೆಯನ್ನು ಕನ್ನಡ, ಮಲಯಾಳಂ, ತಮಿಳು, ಬಂಗಾಳಿ ಮತ್ತು ಇಂಗ್ಲಿಷ್ ಸೇರಿದಂತೆ 12 ಭಾಷೆಗಳಿಗೆ ಅನುವಾದಿಸಲಾಗಿದೆ.

ಭಾರತವು ಈಗಾಗಲೇ ಹವಾಮಾನ ಪರಿಣಾಮಗಳನ್ನು ಎದುರಿಸುತ್ತಿರುವು ದೇಶಗಳಲ್ಲಿ ಒಂದು. ಈ ದೇಶದಲ್ಲಿರುವ ಅನೇಕ ಜನರಿಗೆ ಜಾಗತಿಕ ತಾಪಮಾನದ ಬಗ್ಗೆ ಹೆಚ್ಚು ತಿಳಿವಳಿಕೆ ಇಲ್ಲ. ಆದರೂ ಬದಲಾಗುತ್ತಿರುವ ಹವಾಮಾನದ ಬಗ್ಗೆ ಕಾಳಜಿ ವಹಿಸುತ್ತಿರುವುದು ಕಂಡು ಬಂದಿದೆ. ಇದರ ಹೊರತು 53 ರಷ್ಟು ಜನರು ಭಾರತದಲ್ಲಿ ಈಗಾಗಲೇ ಜಾಗತಿಕ ತಾಪಮಾನದಿಂದ ನಲುಗುತ್ತಿರುವುದು ಬೇಸರದ ಸಂಗತಿ ಎಂದು ಯೇಲ್ ವಿಶ್ವವಿದ್ಯಾನಿಲಯದ ಆಂಥೋನಿ ಲೀಸೆರೊವಿಟ್ಜ್ ಅಭಿಪ್ರಾಯ ಪಟ್ಟಿದ್ದಾರೆ.

ಇದನ್ನೂ ಓದಿ: ಭೂ ಗ್ರಹದತ್ತ ದಶಕದಲ್ಲೇ ಬಹು ದೊಡ್ಡ ಜ್ವಾಲೆ ಹೊರಹಾಕಿದ ಸೂರ್ಯ! ಸೌರ ವಿದ್ಯಮಾನ ಸೆರೆ ಹಿಡಿದ ಇಸ್ರೋ ನೌಕೆ; ಈ ಬಾರಿ ಭೂಮಿ ಸೇಫ್‌ - Solar Storm

ETV Bharat Logo

Copyright © 2024 Ushodaya Enterprises Pvt. Ltd., All Rights Reserved.