ಕರ್ನಾಟಕ

karnataka

ಕರ್ನಾಟಕದ 20 ಕ್ಷೇತ್ರಗಳಿಗೆ ಬಿಜೆಪಿ ಟಿಕೆಟ್​ ಘೋಷಣೆ: 9 ಹಾಲಿ ಸಂಸದರಿಗೆ ಕೊಕ್​, ಮೈಸೂರಿನಿಂದ ಯದುವೀರ್ ಒಡೆಯರ್ ಕಣಕ್ಕೆ

By ETV Bharat Karnataka Team

Published : Mar 13, 2024, 7:35 PM IST

Updated : Mar 14, 2024, 6:58 AM IST

BJP candidates list: ಕರ್ನಾಟಕದ 20 ಲೋಕಸಭೆ ಕ್ಷೇತ್ರಗಳಿಗೆ ಬಿಜೆಪಿ ಟಿಕೆಟ್​ ಘೋಷಣೆ ಮಾಡಲಾಗಿದೆ.

BJP released second list of candidates for the upcoming Lok Sabha elections
ಕರ್ನಾಟಕದ 20 ಕ್ಷೇತ್ರಗಳಿಗೆ ಬಿಜೆಪಿ ಟಿಕೆಟ್​ ಘೋಷಣೆ

ನವದೆಹಲಿ: ಲೋಕಸಭೆ ಚುನಾವಣೆಗೆ ಬಿಜೆಪಿ ತನ್ನ ಅಭ್ಯರ್ಥಿಗಳ ಎರಡನೇ ಪಟ್ಟಿ ಬಿಡುಗಡೆ ಮಾಡಿದೆ. ಕರ್ನಾಟಕದ 28 ಲೋಕಸಭಾ ಕ್ಷೇತ್ರಗಳ ಪೈಕಿ 20 ಕ್ಷೇತ್ರಗಳಿಗೆ ಟಿಕೆಟ್​ ಪ್ರಕಟಿಸಲಾಗಿದೆ. ಕೆಲ ಹಾಲಿ ಸಂಸದರಿಗೆ ಕೊಕ್ ಕೊಡಲಾಗಿದೆ. ಹೊಸಬರಿಗೆ ಅವಕಾಶ ನೀಡಲಾಗಿದೆ. ವಿರೋಧದ ನಡುವೆಯೂ ಕೆಲವರಿಗೆ ಮಣೆ ಹಾಕಲಾಗಿದ್ದು, ಬಿಜೆಪಿ ಸದಸ್ಯತ್ವ ಪಡೆಯದೇ ಇರುವ ಡಾ. ಮಂಜುನಾಥ್ ಅವರಿಗೂ ಟಿಕೆಟ್ ಪ್ರಕಟಿಸಲಾಗಿದ್ದು, ಮೈಸೂರು ಕ್ಷೇತ್ರದಿಂದ ಯದುವೀರ್ ಒಡೆಯರ್ ಅವರಿಗೆ ಮಣೆ ಹಾಕಲಾಗಿದೆ.

ಕಟೀಲ್, ಪ್ರತಾಪ್, ಡಿವಿಎಸ್​ಗೆ ಕೊಕ್:20 ಕ್ಷೇತ್ರಗಳ ಪೈಕಿ 9 ಜನ ಹಾಲಿ ಸಂಸದರಿಗೆ ಟಿಕೆಟ್​ ಕೈತಪ್ಪಿದೆ. ಇದರಲ್ಲಿ ಚಾಮರಾಜನಗರದ ವಿ ಶ್ರೀನಿವಾಸ್​ ಪ್ರಸಾದ್​, ತುಮಕೂರಿನ ಎಲ್​ ಬಸವರಾಜ್, ಹಾವೇರಿ ಶಿವಕುಮಾರ್ ಉದಾಸಿ ಈ ಹಿಂದೆಯೇ ತಾವು ಸ್ಪರ್ಧೆ ಮಾಡುವುದಿಲ್ಲವೆಂದು ಘೋಷಿಸಿದ್ದರು. ಅದರಂತೆಯೇ ಈ ಕ್ಷೇತ್ರಗಳಿಗೆ ಹೊಸಬರಿಗೆ ಮಣೆ ಹಾಕಲಾಗಿದೆ. ಹಾವೇರಿ ಕ್ಷೇತ್ರದಲ್ಲಿ ತಮ್ಮ ​ಪುತ್ರನಿಗೆ ಟಿಕೆಟ್ ನಿರೀಕ್ಷೆಯಲ್ಲಿದ್ದ ಹಿರಿಯ ನಾಯಕ ಕೆ.ಎಸ್.ಈಶ್ವರಪ್ಪ ಅವರಿಗೆ ನಿರಾಸೆ ಉಂಟಾಗಿದೆ. ಈ ಕ್ಷೇತ್ರದಲ್ಲಿ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಅವರನ್ನು ಕಣಕ್ಕೆ ಇಳಿಸಲಾಗಿದೆ.

ಮತ್ತೊಂದೆಡೆ, ತುಮಕೂರಿನಲ್ಲಿ ಹಿರಿಯ ನಾಯಕ ವಿ ಸೋಮಣ್ಣ ಅವರಿಗೆ ಟಿಕೆಟ್​ ಘೋಷಿಸಲಾಗಿದೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಸೋಮಣ್ಣ ಎರಡು ಕ್ಷೇತ್ರಗಳಲ್ಲಿ ಸ್ಪರ್ಧೆ ಮಾಡಿ ಸೋತಿದ್ದರು. ನಿರೀಕ್ಷೆಯಂತೆ ದಕ್ಷಿಣ ಕನ್ನಡದ ಸಂಸದ ನಳಿನ್ ಕುಮಾರ್ ಕಟೀಲ್, ಮೈಸೂರು ಸಂಸದ ಪ್ರತಾಪ್ ಸಿಂಹ, ಬೆಂಗಳೂರು ಉತ್ತರ ಕ್ಷೇತ್ರದ ಡಿ.ವಿ. ಸದಾನಂದ ಗೌಡ ಅವರಿಗೆ ಟಿಕೆಟ್​ ನಿರಾಕರಿಸಲಾಗಿದೆ. ಮೈಸೂರಿನಲ್ಲಿ ಪ್ರತಾಪ್​ ಸಿಂಹ ಬದಲಿಗೆ ಯದುವೀರ್ ಒಡೆಯರ್ ಅವರಿಗೆ ಅವಕಾಶ ನೀಡಲಾಗಿದೆ.

ಇದೇ ವೇಳೆ,ವಿರೋಧದ ನಡುವೆಯೂ ದಾವಣಗೆರೆ ಸಂಸದ ಜಿ.ಎಂ. ಸಿದ್ದೇಶ್ವರ್ ಕುಟುಂಬಕ್ಕೆ ಟಿಕೆಟ್ ನೀಡಲಾಗಿದೆ. ಉಡುಪಿ - ಚಿಕ್ಕಮಗಳೂರು ಕ್ಷೇತ್ರದಲ್ಲಿ ಶೋಭಾ ಕರಂದ್ಲಾಜೆ ಅವರಿಗೆ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಈ ಬಾರಿ ಬೆಂಗಳೂರು ಉತ್ತರ ಕ್ಷೇತ್ರದಿಂದ ಅವರನ್ನು ಕಣಕ್ಕೆ ಇಳಿಸಲಾಗಿದೆ. ಉಡುಪಿ - ಚಿಕ್ಕಮಗಳೂರು ಕ್ಷೇತ್ರದಲ್ಲಿ ಪರಿಷತ್ ಪ್ರತಿಪಕ್ಷ ನಾಯಕ ಕೋಟಾ ಶ್ರೀನಿವಾಸ ಪೂಜಾರಿ ಅವರಿಗೆ ಟಿಕೆಟ್ ನೀಡಲಾಗಿದೆ. ದಕ್ಷಿಣ ಕನ್ನಡ ಕ್ಷೇತ್ರದಿಂದ ಕಟೀಲ್​ ಬದಲಿಗೆ ಬ್ರಿಜೇಶ್​ ಚೌಟ ಅವರಿಗೆ ಟಿಕೆಟ್​ ಘೋಷಿಸಲಾಗಿದೆ.

ಬೆಂಗಳೂರು ಕೇಂದ್ರದಿಂದ ಪಿ.ಸಿ.ಮೋಹನ್ ಅವರಿಗೆ ಟಿಕೆಟ್​ ಕೈ ತಪ್ಪಲಿದೆ ಎಂಬ ವದಂತಿ ನಡುವೆಯೂ ಅವರು ಟಿಕೆಟ್ ಗಿಟ್ಟಿಸಿಕೊಂಡಿದ್ದಾರೆ. ಚಿಕ್ಕೋಡಿ ಕ್ಷೇತ್ರದಲ್ಲಿ ರಮೇಶ್ ಕತ್ತಿ ಬಿಗಿ ಪಟ್ಟಿನ ನಡುವೆಯೂ ಅಣ್ಣಾಸಾಹೇಬ್ ಜೊಲ್ಲೆ ಅವರಿಗೆ ಟಿಕೆಟ್ ಸಿಕ್ಕಿದೆ. ಬೆಂಗಳೂರು ಗ್ರಾಮೀಣ ಕ್ಷೇತ್ರದಿಂದ ಜಯದೇವ ಆಸ್ಪತ್ರೆ ಮಾಜಿ ನಿರ್ದೇಶಕ ಡಾ.ಮಂಜುನಾಥ್ ಅವರಿಗೆ ಬಿಜೆಪಿ ಮಣೆ ಹಾಕಿದೆ.

ಕ್ಷೇತ್ರವಾರು ಅಭ್ಯರ್ಥಿಗಳ ಮಾಹಿತಿ ಈ ಕೆಳಗಿನಂತಿದೆ.

  • ಚಿಕ್ಕೋಡಿ - ಅಣ್ಣಾಸಾಹೇಬ್ ಜೊಲ್ಲೆ
  • ಬಾಗಲಕೋಟೆ - ಪಿ.ಸಿ. ಗದ್ದಿಗೌಡರ್
  • ವಿಜಯಪುರ - ರಮೇಶ ಜಿಗಜಿಣಗಿ
  • ಕಲಬುರಗಿ - ಉಮೇಶ್ ಜಾಧವ್
  • ಬೀದರ್ - ಭಗವಂತ್ ಖೂಬಾ
  • ಕೊಪ್ಪಳ - ಡಾ. ಬಸವರಾಜ್ ಕ್ಯಾವಟರ್​
  • ಬಳ್ಳಾರಿ - ಬಿ. ಶ್ರೀರಾಮುಲು
  • ಹಾವೇರಿ - ಬಸವರಾಜ ಬೊಮ್ಮಾಯಿ
  • ಧಾರವಾಡ - ಪ್ರಹ್ಲಾದ್ ಜೋಶಿ
  • ದಾವಣಗೆರೆ - ಗಾಯತ್ರಿ ಸಿದ್ದೇಶ್ವರ್
  • ಶಿವಮೊಗ್ಗ - ಬಿ.ವೈ. ರಾಘವೇಂದ್ರ
  • ಚಿಕ್ಕಮಗಳೂರು - ಉಡುಪಿ - ಕೋಟ ಶ್ರೀನಿವಾಸ್ ಪೂಜಾರಿ
  • ದಕ್ಷಿಣ ಕನ್ನಡ - ಬ್ರಜೇಶ್​ ಚೌಟ
  • ತುಮಕೂರು - ವಿ. ಸೋಮಣ್ಣ
  • ಮೈಸೂರು - ಯದುವೀರ್ ಒಡೆಯರ್
  • ಚಾಮರಾಜನಗರ - ಎಸ್. ಬಾಲರಾಜ್
  • ಬೆಂಗಳೂರು ಗ್ರಾಮೀಣ - ಡಾ.ಸಿ.ಎನ್​. ಮಂಜುನಾಥ್
  • ಬೆಂಗಳೂರು ಉತ್ತರ - ಶೋಭಾ ಕರಂದ್ಲಾಜೆ
  • ಬೆಂಗಳೂರು ದಕ್ಷಿಣ - ತೇಜಸ್ವಿ ಸೂರ್ಯ
  • ಬೆಂಗಳೂರು ಕೇಂದ್ರ - ಪಿ.ಸಿ.ಮೋಹನ್
Last Updated :Mar 14, 2024, 6:58 AM IST

ABOUT THE AUTHOR

...view details