ಕರ್ನಾಟಕ

karnataka

ಮೂಲ ಸೌಕರ್ಯಗಳಿಲ್ಲದೆ ಬೆಳಗಾವಿಯ ಕೆಹೆಚ್​ಬಿ ಕಾಲೋನಿ ನಿವಾಸಿಗಳ ಗೋಳು.. ಪಾಲಿಕೆ ಆಯುಕ್ತರಿಂದ ಶೀಘ್ರ ಕ್ರಮದ ಭರವಸೆ

By ETV Bharat Karnataka Team

Published : Aug 22, 2023, 2:33 PM IST

Lack of basic facilities in KHB Colony: ಬೆಳಗಾವಿ ಜಿಲ್ಲೆಯ ಬಸವನ ಕುಡಚಿಯಲ್ಲಿರುವ ಕೆಹೆಚ್‌ಬಿ ಕಾಲೋನಿ ಹಲವು ಸಮಸ್ಯೆಗಳನ್ನು ಎದುರಿಸುತ್ತಿದ್ದು, ಗ್ರಾಮಸ್ಥರ ಗೋಳು ಕೇಳುವವರು ಯಾರೂ ಇಲ್ಲ ಎನ್ನುವಂತಾಗಿದೆ.

KHB Colony
ಕೆಹೆಚ್​ಬಿ ಕಾಲೋನಿ

ಮೂಲ ಸೌಕರ್ಯ ಒದಗಿಸುವಂತೆ ಗ್ರಾಮಸ್ಥರ ಆಗ್ರಹ..

ಬೆಳಗಾವಿ: ಮಹಾನಗರದ ಪಕ್ಕದಲ್ಲಿದ್ದರೂ ಈ ಬಡಾವಣೆ ಮಾತ್ರ ಮೂಲ ಸೌಕರ್ಯಗಳಿಂದ ವಂಚಿತವಾಗಿದೆ. ಕಣ್ಮುಂದೆಯೇ ಬೆಳಗಾವಿ ಮಹಾನಗರ ಕಾಣಿಸಿದರೂ, ಅದನ್ನು ತಲುಪಲು ಸುತ್ತಿಬಳಸಿ ಬರಬೇಕಾದ ಸಂದಿಗ್ಧತೆ ಎದುರಾಗಿದೆ. ಇದು ಬಸವನ ಕುಡಚಿಯಲ್ಲಿರುವ ಕೆಹೆಚ್‌ಬಿ ಕಾಲೋನಿ ಜನರಿಗೆ ಎದುರಾಗಿರುವ ಸಂಕಷ್ಟ.

ಕರ್ನಾಟಕ ಗೃಹ ಮಂಡಳಿ 2012ರಲ್ಲಿ ಈ ಬಡಾವಣೆಯನ್ನು ನಿರ್ಮಾಣ ಮಾಡಿದ್ದು, 137 ಎಕರೆ ಪ್ರದೇಶದಲ್ಲಿ ಹರಡಿಕೊಂಡಿದೆ. ವಿವಿಧ ಗಾತ್ರಗಳ 1,573 ನಿವೇಶನಗಳನ್ನು ರೂಪಿಸಿ, ಸರ್ಕಾರಿ ನಿಯಮಾನುಸಾರ ಜನರಿಗೆ ಹಂಚಲಾಗಿದೆ. 125 ನಿವೇಶನಗಳಲ್ಲಿ ಸರ್ಕಾರದಿಂದಲೇ ಮನೆ ಕಟ್ಟಿಕೊಡಲಾಗಿದೆ. ಒಟ್ಟಾರೆ 220ಕ್ಕೂ ಅಧಿಕ ಕುಟುಂಬಗಳು ಇಲ್ಲಿ ಮನೆ ನಿರ್ಮಿಸಿಕೊಂಡು ವಾಸಿಸುತ್ತಿವೆ. ಆದರೆ ಬಡಾವಣೆ ನಿರ್ಮಾಣವಾಗಿ 11 ವರ್ಷಗಳಾದರೂ ಬೇಡಿಕೆಯಂತೆ ಮೂಲ ಸೌಕರ್ಯ ಸಿಗದಿರುವುದು ಇಲ್ಲಿನ ಜನರಲ್ಲಿ ನಿರಾಸೆ ಮೂಡಿಸಿದೆ. ಕೆಹೆಚ್​​ಬಿ‌ ಕಾಲೋನಿಯಿಂದ ರಾಷ್ಟ್ರೀಯ ಹೆದ್ದಾರಿ-4ಕ್ಕೆ ನೇರ ಸಂಪರ್ಕವಿದೆ. ಆದರೆ ಈ ರಸ್ತೆ ಕಾಮಗಾರಿ ಜಾಗದ ಸಮಸ್ಯೆಯಿಂದಾಗಿ ಅರ್ಧಕ್ಕೆ ನಿಂತಿದೆ. ಇಷ್ಟೊಂದು ದೊಡ್ಡ‌ ಬಡವಾಣೆ ಇದ್ದರೂ ನೇರ ಸಂಪರ್ಕ ರಸ್ತೆ ಮತ್ತು ಸೌಕರ್ಯಗಳ ಕೊರತೆಯಿಂದಾಗಿ‌ ಇಲ್ಲಿ ಮನೆಗಳ ನಿರ್ಮಾಣಕ್ಕೆ ಜನ ಮನಸ್ಸು ಮಾಡುತ್ತಿಲ್ಲ.

'ಈಟಿವಿ ಭಾರತ'ದೊಂದಿಗೆ ಮಾತನಾಡಿದ ಇಲ್ಲಿನ ನಿವಾಸಿ ಪ್ರವೀಣ ತುಳಸಿಗೇರಿ "ನಾವು ಶಿಕ್ಷಣ, ಉದ್ಯೋಗ, ಮಾರುಕಟ್ಟೆ ಸೇರಿದಂತೆ ಎಲ್ಲದಕ್ಕೂ ಬೆಳಗಾವಿಯನ್ನೇ ಅವಲಂಬಿಸಿದ್ದೇವೆ. ಇಲ್ಲಿಂದ ಬೆಳಗಾವಿ ನಗರಕ್ಕೆ ಹೋಗಲು ನೇರವಾದ ರಸ್ತೆ ಮಾರ್ಗ ಇದೆ. ಆದರೆ ಆ ಮಾರ್ಗದ ರಸ್ತೆ ನಿರ್ಮಾಣ ಕಾಮಗಾರಿ ಹಲವು ವರ್ಷಗಳಿಂದ ಸ್ಥಗಿತವಾಗಿದೆ. ಹಾಗಾಗಿ 5 ಕಿ.ಮೀ ದೂರದಲ್ಲಿ ಬೆಳಗಾವಿಗೆ ಹೋಗಬೇಕಿದ್ದವರು‌ 8 ಕಿ.ಮೀ ಕ್ರಮಿಸಿ ಹೋಗುವಂತಾಗಿದೆ" ಎಂದು ಸಂಕಷ್ಟ ತೋಡಿಕೊಂಡರು.

ಸಮಸ್ಯೆ ಪರಿಹರಿಸುವಂತೆ ಆಗ್ರಹ: ಈ ಬಡಾವಣೆ ಒಳಹೊಕ್ಕರೆ ಸಾಕು. ಜನರು ಸಮಸ್ಯೆಗಳ ಸರಮಾಲೆಯ ಪಟ್ಟಿಯನ್ನೇ ತೆರೆದಿಡುತ್ತಾರೆ. ಬೆಳಗಾವಿಗೆ ಹೋಗಲು ನೇರವಾಗಿ ರಸ್ತೆ ಇಲ್ಲ, ಶುದ್ಧ ಕುಡಿಯುವ ನೀರು ಇಲ್ಲ, ಅಂಗನವಾಡಿ ಕೇಂದ್ರ, ಆಟದ ಮೈದಾನ, ಸರ್ಕಾರಿ ಆಸ್ಪತ್ರೆ ಇಲ್ಲ.. ಹೀಗೆ ವಿವಿಧ ಸಮಸ್ಯೆಗಳನ್ನು ವಿವರಿಸಿ ಪರಿಹರಿಸುವಂತೆ ಆಗ್ರಹಿಸಿದ್ದಾರೆ. ಈ ಸಂಬಂಧ ಮಾತನಾಡಿದ ಕಾಲೋನಿಯ ಯುವಕ ವೀರೇಂದ್ರ ಅಲ್ಲಯ್ಯನವರ, 'ಹೆಸರಿಗಷ್ಟೇ ಬಡಾವಣೆಯ ಒಳ ರಸ್ತೆಗಳನ್ನು ಮಾಡಿದ್ದಾರೆ. ಕೆಲ ಬೀದಿ ದೀಪಗಳು ಹಾಳಾಗಿದ್ದರಿಂದ ಕುಡುಕರ ಹಾವಳಿ ಹೆಚ್ಚಾಗಿದೆ. ಮಹಿಳೆಯರು, ಮಕ್ಕಳು ಓಡಾಡದ ಸ್ಥಿತಿಯಿದೆ. ಕಳ್ಳರ ಕಾಟದಿಂದ ಭೀತಿ ಹುಟ್ಟಿಕೊಂಡಿದೆ. ಇನ್ನು‌ ಆರೋಗ್ಯ ಸೇವೆ ಇಲ್ಲದ್ದರಿಂದ ಬಹಳಷ್ಟು ಸಮಸ್ಯೆಯಾಗುತ್ತಿದೆ' ಎಂದು ದೂರಿದರು.

ಶುದ್ಧ ನೀರು ಬರುತ್ತಿಲ್ಲ. ಕಲುಷಿತ ನೀರು ಕುಡಿದು ಮಕ್ಕಳೆಲ್ಲ ಅನಾರೋಗ್ಯ ಪೀಡಿತರಾಗುತ್ತಿದ್ದಾರೆ. ಸಮರ್ಪಕ ಬೀದಿ ದೀಪದ ವ್ಯವಸ್ಥೆ ಇಲ್ಲದ್ದರಿಂದ ರಾತ್ರಿ ಹೊತ್ತು ಜೀವ ಕೈಯಲ್ಲಿ ಹಿಡಿದುಕೊಂಡು ಓಡಾಡಬೇಕಾಗಿದೆ. ಚುನಾವಣೆ ಸಮಯದಲ್ಲಿ ಮಾತ್ರ ರಾಜಕಾರಣಿಗಳು ಬರುತ್ತಾರೆ. ಆ ವೇಳೆ ಏನೇನೋ ಭರವಸೆ ಕೊಟ್ಟು ವೋಟ್ ಹಾಕಿಸಿಕೊಂಡು ಹೋಗುತ್ತಾರೆ. ಬಳಿಕ ನಮ್ಮತ್ತ ತಿರುಗಿಯೂ ನೋಡುವುದಿಲ್ಲ ಎಂದು ಕಾಲೋನಿಯ ಸರೋಜಾ ಹಲಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

"ನಾವು ಇಲ್ಲಿಗೆ ಬಂದು 3 ವರ್ಷವಾಯ್ತು. ಅವತ್ತಿನಿಂದ ಬೆಳಗಾವಿಗೆ ನೇರ ಸಂಪರ್ಕ ರಸ್ತೆ ಮಾಡುತ್ತೇವೆಂದು ಹೇಳುತ್ತಿದ್ದಾರೆ. ಆದರೆ ಅದು ಈವರೆಗೂ ಈಡೇರಿಲ್ಲ. ಬಸವನ ಕುಡಚಿಯಲ್ಲಿ ದೇವಸ್ಥಾನವಿದೆ. ಅಲ್ಲಿ ಸದಾ ವಾಹನ ದಟ್ಟಣೆ ಇರುತ್ತದೆ. ಬೆಳಗಾವಿ–ಬಾಗಲಕೋಟೆ ರಾಜ್ಯ ಹೆದ್ದಾರಿಯೂ ವಾಹನಗಳಿಂದಲೇ ತುಂಬಿರುತ್ತದೆ. ಒಂದು ವೇಳೆ ನೇರ ಮಾರ್ಗ ಸಿದ್ಧವಾದರೆ, ನಾವು ಸುಗಮವಾಗಿ ಪ್ರಯಾಣಿಸಿ ಬೆಳಗಾವಿ ತಲುಪಬಹುದು"- ಕಾಲೋನಿಯ ನಿವಾಸಿ ವಿಜಯಲಕ್ಷ್ಮೀ ಖಡಬಡಿ.

ಈ ಬಗ್ಗೆ ಮಹಾನಗರ ಪಾಲಿಕೆ ಆಯುಕ್ತ ಅಶೋಕ ದುಡಗುಂಟಿ‌ ಅವರನ್ನು 'ಈಟಿವಿ ಭಾರತ' ಪ್ರತಿನಿಧಿ ಸಂಪರ್ಕಿಸಿದಾಗ 'ಶೀಘ್ರವೇ ಪಾಲಿಕೆಯಿಂದ ತಂಡವೊಂದನ್ನು ಸ್ಥಳ‌ ಪರಿಶೀಲನೆಗೆ ಕಳಿಸಿಕೊಡುತ್ತೇನೆ. ಸಮಸ್ಯೆ ತಿಳಿದುಕೊಂಡು ಮುಂದಿನ ಕ್ರಮ ತೆಗೆದುಕೊಳ್ಳುತ್ತೇನೆ' ಎಂದು ತಿಳಿಸಿದ್ದಾರೆ.

ಇದನ್ನೂ ಓದಿ:ಚಿಕ್ಕಮಗಳೂರು: ಮೂಲಭೂತ ಸೌಕರ್ಯಗಳಿಲ್ಲದೆ ಕಾರ್ಲೆ ಗ್ರಾಮಸ್ಥರ ಪರದಾಟ

ABOUT THE AUTHOR

...view details