ಕರ್ನಾಟಕ

karnataka

ಸರ್ಕಾರಿ ಗೌರವದೊಂದಿಗೆ ಡಿ.ಬಿ. ಇನಾಮದಾರ್ ಅಂತ್ಯಕ್ರಿಯೆ: ಸಿಎಂ ಬೊಮ್ಮಾಯಿ

By

Published : Apr 25, 2023, 8:28 PM IST

ಮಾಜಿ ಸಚಿವ ಡಿ.ಬಿ. ಇನಾಮ​ದಾರ್​​ ಅವರ ಮನೆಗೆ ಸಿಎಂ ಬೊಮ್ಮಾಯಿ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು.

db-inamadar-cremated-with-government-honours-cm-bommai
ಸರ್ಕಾರಿ ಗೌರವದೊಂದಿಗೆ ಡಿ.ಬಿ.ಇನಾಮದಾರ್ ಅಂತ್ಯಕ್ರಿಯೆ: ಸಿಎಂ ಬೊಮ್ಮಾಯಿ

ಸರ್ಕಾರಿ ಗೌರವದೊಂದಿಗೆ ಡಿ.ಬಿ.ಇನಾಮದಾರ್ ಅಂತ್ಯಕ್ರಿಯೆ: ಸಿಎಂ ಬೊಮ್ಮಾಯಿ

ಬೆಳಗಾವಿ:ನಾಳೆ ನಡೆಯುವ ಡಿ.ಬಿ. ಇನಾಮದಾರ್ ಅವರ ಅಂತ್ಯಕ್ರಿಯೆಯನ್ನು ಸರ್ಕಾರಿ ಗೌರವದ ಮೂಲಕ ಮಾಡುವಂತೆ ಈಗಾಗಲೇ ಹೇಳಿದ್ದೇನೆ. ಈಗ ಕೆಲವೇ ಹೊತ್ತಿನಲ್ಲಿ ಆದೇಶ ಬರುವ ನಿರೀಕ್ಷೆಯಿದೆ. ಅವರ ಗೌರವಕ್ಕೆ ತಕ್ಕ ಹಾಗೆ ಅಂತ್ಯಕ್ರಿಯೆ ಆಗಬೇಕೆಂಬುದು ನಮ್ಮ ಇಚ್ಛೆ ಆಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು. ಬೈಲಹೊಂಗಲ ತಾಲೂಕಿನ ನೇಗಿನಹಾಳ ಗ್ರಾಮದ ಮಾಜಿ ಸಚಿವ ಡಿ.ಬಿ. ಇನಾಮದಾರ್ ಅವರ ಮನೆಗೆ ಭೇಟಿ ನೀಡಿ, ಕುಟುಂಬಸ್ಥರಿಗೆ ಸಿಎಂ ಬೊಮ್ಮಾಯಿ ಸಾಂತ್ವನ ಹೇಳಿದರು.

ಬಳಿಕ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ಡಿ.ಬಿ. ಇನಾಮದಾರ್ ಸರಳ ಸಜ್ಜನ ರಾಜಕಾರಣಿಯಾಗಿದ್ದರು. ಎಲ್ಲ ರಂಗಗಳಲ್ಲೂ ಪರಿಣಿತಿ ಹೊಂದಿದ್ದರು. ಪ್ರಗತಿಪರ ಚಿಂತಕರಾಗಿದ್ದರು. ದೂರದೃಷ್ಟಿ ಹೊಂದಿದ್ದರು. ಯಾವುದೇ ಖಾತೆ ಕೊಟ್ಟರು ಬಹಳ ಅಚ್ಚುಕಟ್ಟಾಗಿ ನಿಭಾಯಿಸುತ್ತಿದ್ದರು. ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಹಾಗೂ ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ಸಚಿವರಾಗಿದ್ದಾಗ ಬಹಳ ದಕ್ಷತೆಯಿಂದ ದೂರದೃಷ್ಟಿ ಇಟ್ಟುಕೊಂಡು ಕೆಲಸ ಮಾಡಿದ್ದರು. 1984ರಲ್ಲಿ ಡಿ.ಬಿ. ಇನಾಮದಾರ್ ಅವರನ್ನು ಕರೆದು ನಮ್ಮ ತಂದೆ ಮಂತ್ರಿ ಮಾಡಿದ್ದರು. ಒಂದು ರೀತಿಯಲ್ಲಿ ನಮಗೂ ಅವರಿಗೂ ಕೌಟುಂಬಿಕ ಸಂಬಂಧವಿತ್ತು ಎಂದು ಸ್ಮರಿಸಿದರು.

ಇತ್ತೀಚಿನ ದಿನಗಳಲ್ಲಿ ಕಿತ್ತೂರಿನಲ್ಲಿ ನಾನು ಡಿ.ಬಿ. ಇನಾಮದಾರ್ ಅವರನ್ನು ಭೇಟಿಯಾಗಿ, ಅವರ ಜೊತೆಗೆ ಊಟ ಮಾಡಿದ್ದೆ. ಆ ವೇಳೆ ಹಲವಾರು‌ ವಿಚಾರಗಳು ಚರ್ಚೆ ಆಗಿದ್ದವು. ಆದರೆ ಇಷ್ಟು ಬೇಗ ಅವರು ನಮ್ಮನ್ನು ಬಿಟ್ಟು ಹೋಗುತ್ತಾರೆ ಅಂದುಕೊಂಡಿರಲಿಲ್ಲ. ಕೋವಿಡ್ ಮತ್ತು ಹೊಸ ಕಾಯಿಲೆ ಎಚ್2ಎನ್3 ಆಗಿದ್ದು ನಿಜಕ್ಕೂ ಬಹಳ ಆಶ್ಚರ್ಯದ ಸಂಗತಿ. ಲಕ್ಷಕ್ಕೆ ಒಬ್ಬರಿಗೆ ಈ ಕಾಯಿಲೆ ಆಗುತ್ತಂತೆ. ಬಳಿಕ ನ್ಯುಮೋನಿಯಾ ಆಗಿ, ಸುಮಾರು 45 ದಿನ ಐಸಿಯುದಲ್ಲಿದ್ದು, ಇಂದು ನಮ್ಮನ್ನು ಬಿಟ್ಟು ಅಗಲಿದ್ದಾರೆ.

ಸುಮಾರು 35 ವರ್ಷಗಳ ಸುದೀರ್ಘ ರಾಜಕಾರಣ ಮಾಡಿದ್ದರು. ಮಲಪ್ರಭಾ ಸಹಕಾರಿ ಸಕ್ಕರೆ ಕಾರ್ಖಾನೆ ಅಭಿವೃದ್ಧಿಯಲ್ಲಿ ಮಹತ್ತರ ಪಾತ್ರ ವಹಿಸಿದ್ದರು. ಹೀಗಾಗಿ ಅವರಿಗೆ ರೈತಾಪಿ ವರ್ಗದ ಬಹುದೊಡ್ಡ ಬೆಂಬಲವಿತ್ತು. ಆದರೆ ಅವರ ಆಚಾರಗಳು, ಯೋಜನೆಗಳು, ಪ್ರಗತಿಪರ ಚಿಂತನೆಗಳು ನಮಗೆ ಆದರ್ಶವಾಗಿವೆ ಎಂದು ಮುಖ್ಯಮಂತ್ರಿ ತಿಳಿಸಿದರು.

ಮುಂಬೈ ಕರ್ನಾಟಕಕ್ಕೆ ಕಿತ್ತೂರು ಕರ್ನಾಟಕ ನಾಮಕರಣ ಮಾಡಬೇಕೆಂದು ಡಿ.ಬಿ. ಇನಾಮದಾರ್ ಅವರು ಕೂಡ ಬಯಸಿದವರು. ನಾವು ಅದನ್ನು‌ ಘೋಷಣೆ ಮಾಡಿದಾಗ ನನಗೆ ಕರೆ ಮಾಡಿ ಬಹಳಷ್ಟು ಸಂತಸ ಪಟ್ಟಿದ್ದರು. ಬಹಳ ದಿನದ ಆಸೆ ಈಡೇರಿಸಿದ್ದಿರಿ ಎಂದಿದ್ದರು ಎಂದು ಸಿಎಂ ಬೊಮ್ಮಾಯಿ ಮೆಲುಕು ಹಾಕಿದರು. ಅಧಿಕಾರ ಇರಲಿ, ಇಲ್ಲದಿರಲಿ ಈ ರಾಜ್ಯ, ನಾಡು ವಿಶೇಷವಾಗಿ ಕಿತ್ತೂರು ಕರ್ನಾಟಕ ಅಭಿವೃದ್ಧಿಗೆ ಸದಾಕಾಲ ಚಿಂತನೆ ಮಾಡುತ್ತಿದ್ದರು ಎಂದು ಹೇಳಿದರು.

ಸ್ವಗ್ರಾಮ ನೇಗಿನಹಾಳದಲ್ಲಿ ನೀರವ ಮೌನ:ಮಾಜಿ ಸಚಿವ ಡಿ.ಬಿ. ಇನಾಮದಾರ ನಿಧನ ಹಿನ್ನೆಲೆಯಲ್ಲಿ ನೇಗಿನಹಾಳ ಗ್ರಾಮಕ್ಕೆ ಸಾವಿರಾರು ಜನರು ಹಾಗೂ ವಿವಿಧ ಪಕ್ಷಗಳ ನಾಯಕರು ದೌಡಾಯಿಸಿ ಕುಟುಂಬಸ್ಥರಿಗೆ ಸಾಂತ್ವನ ತಿಳಿಸುತ್ತಿದ್ದಾರೆ. ಇಡೀ ಗ್ರಾಮದಲ್ಲಿ ನೀರವ ಮೌನ ಆವರಿಸಿದ್ದು, ಹಲವು ವ್ಯಾಪಾರಸ್ಥರು ಸ್ವಯಂಪ್ರೇರಿತವಾಗಿ ತಮ್ಮ ಅಂಗಡಿ-ಮುಂಗಟ್ಟುಗಳನ್ನು ಬಂದ್ ಮಾಡಿ ಗೌರವ ಸಲ್ಲಿಸಿದರು. ಕುಟುಂಬಸ್ಥರು ಹಾಗೂ ಅಭಿಮಾನಿಗಳ ಆಕ್ರಂದನ ಈ ವೇಳೆ ಮುಗಿಲು ಮುಟ್ಟಿತ್ತು.

ಇದನ್ನೂ ಓದಿ:ಬೆಳಗಾವಿ: ಮಾಜಿ ಸಚಿವ ಡಿಬಿ ಇನಾಮದಾರ್ ಇನ್ನಿಲ್ಲ.. ಸಿಎಂ ಬೊಮ್ಮಾಯಿ‌ ರೋಡ್ ಶೋ ರದ್ದು

ABOUT THE AUTHOR

...view details