ಕರ್ನಾಟಕ

karnataka

ಹೊರ ರಾಜ್ಯದಿಂದ ಬಂದ ಉದ್ಯೋಗಿಗಳು ಕನ್ನಡ ಕಲಿಯದಿದ್ರೇ ಅಗತ್ಯ ಕ್ರಮಕೈಗೊಳ್ಳಿ : ಟಿ.ಎಸ್.ನಾಗಾಭರಣ ಸೂಚನೆ

By

Published : Apr 8, 2022, 10:03 AM IST

ಬ್ಯಾಂಕ್​ಗಳಲ್ಲಿ ಕನ್ನಡ ಭಾಷೆಗೆ ಹೆಚ್ಚಿನ ಪ್ರಾಶಸ್ತ್ಯ ನೀಡಬೇಕು. ಅರ್ಜಿ, ಚಲನ್, ನಾಮ ಫಲಕಗಳು, ಜಾಹೀರಾತುಗಳು, ನಮೂನೆ, ಚೆಕ್, ರಸೀದಿ ಸೇರಿದಂತೆ ಇತ್ಯಾದಿಗಳು ಕನ್ನಡದಲ್ಲೇ ಮುದ್ರಿತಗೊಂಡು ಗ್ರಾಹಕರ ಕೈಸೇರಬೇಕು. ಹಿಂದಿ-ಇಂಗ್ಲಿಷ್ ಭಾಷೆಗೆ ನೀಡುವ ಸ್ಥಾನಮಾನ ಕನ್ನಡ ಭಾಷೆಗೂ ದೊರಕಬೇಕು ಎಂದು ಟಿ.ಎಸ್​.ನಾಗಾಭರಣ ಸೂಚನೆ ನೀಡಿದ್ದಾರೆ..

Meeting held in Bank Of Baroda Hall
ಬ್ಯಾಂಕ್ ಆಫ್ ಬರೋಡಾದ ಸಭಾಂಗಣದಲ್ಲಿ ಸಭೆ ನಡೆಯಿತು.

ಮಂಗಳೂರು :ಹೊರ ರಾಜ್ಯಗಳಿಂದ ಬರುವ ಉದ್ಯೋಗಿಗಳು ಕನ್ನಡವನ್ನು ಕಡ್ಡಾಯವಾಗಿ ಕಲಿಯಬೇಕು ಹಾಗೂ ಅವರಿಗೆ ಅದಕ್ಕೆ ಅನುಕೂಲವಾಗುವಂತಹ ತರಬೇತಿಗಳನ್ನು ಆಯೋಜಿಸಬೇಕು. ಒಂದು ವೇಳೆ ಅವರು ಕನ್ನಡವನ್ನು ಕಲಿಯದೇ, ಕನ್ನಡವನ್ನು ಬಳಸದೇ ಹೋದಲ್ಲಿ ಅಂತಹ ಉದ್ಯೋಗಿಗಳ ವಿರುದ್ದ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಟಿ.ಎಸ್ ನಾಗಾಭರಣ ಅವರು ಹೇಳಿದ್ದಾರೆ.

ಅವರು ಬ್ಯಾಂಕ್ ಆಫ್ ಬರೋಡಾದ ಸಭಾಂಗಣದಲ್ಲಿ ನಡೆದ ಕನ್ನಡ ಅನುಷ್ಠಾನದ ಕುರಿತು ಹಮ್ಮಿಕೊಳ್ಳಲಾದ ಸಭೆಯಲ್ಲಿ ಮಾತನಾಡಿದರು. ಬ್ಯಾಂಕ್​ಗಳಲ್ಲಿ ಕನ್ನಡ ಭಾಷೆಗೆ ಹೆಚ್ಚಿನ ಪ್ರಾಶಸ್ತ್ಯವನ್ನು ನೀಡಬೇಕು. ಅರ್ಜಿ, ಚಲನ್, ನಾಮ ಫಲಕಗಳು, ಜಾಹೀರಾತುಗಳು, ನಮೂನೆ, ಚೆಕ್, ರಸೀದಿ ಸೇರಿದಂತೆ ಇತ್ಯಾದಿಗಳು ಕನ್ನಡದಲ್ಲೇ ಮುದ್ರಿತಗೊಂಡು ಗ್ರಾಹಕರ ಕೈಸೇರಬೇಕು. ಹಿಂದಿ-ಇಂಗ್ಲಿಷ್ ಭಾಷೆಗೆ ನೀಡುವ ಸ್ಥಾನಮಾನ ಕನ್ನಡ ಭಾಷೆಗೂ ದೊರಕಬೇಕು ಎಂದು ಸೂಚಿಸಿದರು.

ರೈತರಿಗೆ ಮತ್ತು ಗ್ರಾಮೀಣ ಭಾಗದ ಜನರಿಗೆ ಸುಲಭವಾಗಿ ಅರ್ಥವಾಗಲು ಬ್ಯಾಂಕ್​ನ ಅಧಿಕೃತ ವೆಬ್‍ಸೈಟ್ ಹಾಗೂ ಮೊಬೈಲ್ ಬ್ಯಾಂಕಿಂಗ್​ನಲ್ಲಿ ಕನ್ನಡ ಭಾಷೆಯನ್ನು ಅನುಷ್ಠಾನಕ್ಕೆ ತರಬೇಕು. ಬ್ಯಾಂಕ್​ಗಳಲ್ಲಿರುವ ಕನ್ನಡ ಘಟಕಗಳಲ್ಲಿ ಕನ್ನಡ ಭಾಷೆಗೆ ಸಂಬಂಧಿಸಿದ ಎಲ್ಲಾ ಆಚರಣೆಗಳನ್ನು ನಡೆಸಬೇಕು ಹಾಗೂ ಬ್ಯಾಂಕ್​ಗಳ ಮಾಸಪತ್ರಿಕೆಗಳಲ್ಲಿಯೂ ಕನ್ನಡ ಭಾಷೆಯ ಲೇಖನಗಳಿರಬೇಕು, ಕರ್ನಾಟಕದಲ್ಲಿ ವ್ಯವಹರಿಸುವ ಭಾಷೆಗಳೇ ಕನ್ನಡವನ್ನು ಬಳಸದೆ ಇತರೆ ಭಾಷೆಗಳಿಗೆ ಹೆಚ್ಚಿನ ಪ್ರಾಶಸ್ತ್ಯ ನೀಡಿದರೆ ಮುಂದೆ ಕನ್ನಡವನ್ನು ಹುಡುಕುವ ಪರಿಸ್ಥಿತಿ ಎದುರಾಗಬಹುದು ಎಂದು ಕಳವಳ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಬ್ಯಾಂಕ್​ನ ವಲಯ ಮಹಾ ಪ್ರಬಂಧಕರಾದ ಗಾಯತ್ರಿ, ಉಪ ಮಹಾ ಪ್ರಬಂಧಕ ಗೋಪಾಲಕೃಷ್ಣ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಸದಸ್ಯ ರಮೇಶ್ ಗುಬ್ಬಿಗೂಡು, ಕಾರ್ಯದರ್ಶಿ ಡಾ.ಸಂತೋಷ್, ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ರಾಜೇಶ್ ಸೇರಿದಂತೆ ಇತರೆ ಬ್ಯಾಂಕ್ ಅಧಿಕಾರಿಗಳು ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.

ABOUT THE AUTHOR

...view details