ಕರ್ನಾಟಕ

karnataka

ಅಥಣಿ ತಾಲೂಕಿನಲ್ಲಿ ಅಕ್ರಮ ಮರಳು ಗಣಿಗಾರಿಕೆ ಆರೋಪ: ತನಿಖೆಗೆ ಸ್ಥಳೀಯರ ಆಗ್ರಹ

By

Published : Nov 21, 2021, 1:36 PM IST

ಅಥಣಿ ತಾಲೂಕಿನ ಅಗ್ರಾಣಿ ಹಳ್ಳದಲ್ಲಿ ಹಲವಾರು ವರ್ಷಗಳಿಂದ ಅಕ್ರಮ ಮರಳುಗಾರಿಕೆ (Illegal sand mining allegations) ನಡೆಯುತ್ತಿದ್ದರೂ ಅಧಿಕಾರಿಗಳು ಜಾಣ ಕುರುಡುತನ ಪ್ರದರ್ಶಿಸುತ್ತಿದ್ದಾರೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.

Athani
ಅಥಣಿ ತಾಲೂಕಿನ ಅಗ್ರಾಣಿ ಹಳ್ಳ

ಅಥಣಿ:ಮಹಾರಾಷ್ಟ್ರ ರಾಜ್ಯಕ್ಕೆ ಗಡಿ ಹೊಂದಿರುವ ಅಥಣಿ ತಾಲೂಕಿನ ಅಗ್ರಾಣಿ ಹಳ್ಳದಳ್ಳಿ ರಾಜಾರೋಷವಾಗಿ ಹಾಡಹಗಲಲ್ಲೇ ಅಕ್ರಮ ಮರಳುಗಾರಿಕೆ ನಡೆಯುತ್ತಿದೆ ಎಂಬ ಆರೋಪ ಕೇಳಿ ಬಂದಿದೆ.


ತಾಲೂಕಿನ ಅಬ್ಬಿಹಾಳ, ಮಾಯಣಟ್ಟಿ, ಶಿವನೂರ, ಸಂಬರಗಿ, ನಾಗನೂರ, ತಾಂವಶಿ, ಕಲ್ಲೂತಿ, ಶಿರೂರ, ಗ್ರಾಮಗಳಲ್ಲಿ ಹಾದುಹೋಗುವ 30 ಕಿ. ಮೀ ಅಗ್ರಾಣಿ ಹಳ್ಳದಲ್ಲಿ ಹಲವು ವರ್ಷಗಳಿಂದ ಅಕ್ರಮ ಮರಳುಗಾರಿಕೆ ನಡೆಯುತ್ತಿದ್ದರೂ ಅಧಿಕಾರಿಗಳು ಯಾವುದೇ ಕ್ರಮಕ್ಕೆ ಮುಂದಾಗುತ್ತಿಲ್ಲ ಎಂದು ಸ್ಥಳೀಯರು ದೂರಿದ್ದಾರೆ.

ದಂಧೆಕೋರರು ಅಕ್ರಮವಾಗಿ ಮರಳನ್ನು ದಾಸ್ತಾನು ಮಾಡುವುದಲ್ಲದೇ, ಪಕ್ಕದ ಮಹಾರಾಷ್ಟ್ರಕ್ಕೆ ಮಾರಾಟ ಮಾಡಿ ಲಾಭ ಪಡೆಯುತ್ತಿದ್ದಾರೆ. 1 ಬ್ರಾಸ್ ಮರಳಿಗೆ 4,000 ರೂ ದರ ನಿಗದಿಪಡಿಸಿ ಪ್ರತಿನಿತ್ಯ 200 ಬ್ರಾಸ್ ಮರಳನ್ನು ಮಹಾರಾಷ್ಟ್ರಕ್ಕೆ ರವಾನಿಸುತ್ತಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ.

ಅಕ್ರಮ ಮರುಳುಗಾರಿಕೆಗೆ ಕಡಿವಾಣ ಹಾಕಬೇಕಿದ್ದ ಅಧಿಕಾರಿಗಳು ಮೌನವಾಗಿರುವುದು ಹಲವಾರು ಅನುಮಾನಕ್ಕೆ ಎಡೆಮಾಡಿ ಕೊಟ್ಟಿದೆ. ಗಣಿ ಮತ್ತು ಭೂವಿಜ್ಞಾನ ಇಲಾಖೆ ಸಚಿವ ಹಾಲಪ್ಪ ಆಚಾರ್‌ ಅಥಣಿ ತಾಲೂಕಿಗೆ ಮೇಲಧಿಕಾರಿಗಳನ್ನು ಕಳುಹಿಸಿ ತನಿಖೆ ಮಾಡುವಂತೆ ಸ್ಥಳೀಯರು ಒತ್ತಾಯಿಸಿದ್ದಾರೆ.

ರೈತ ಮುಖಂಡ ಮಹದೇವ ಮಡಿವಾಳ ಮಾತನಾಡಿ, 'ಕೆಲವು ದಿನಗಳಿಂದ ಅಕ್ರಮ ಮರಳುಗಾರಿಕೆಯಿಂದ ಗಡಿ ಭಾಗದ ರಸ್ತೆಗಳು ಹಾಳಾಗುತ್ತಿದ್ದರೂ ತಾಲೂಕು ಆಡಳಿತ ಹಾಗು ಪೊಲೀಸ್ ಇಲಾಖೆ ಮೌನವಾಗಿದೆ. ಅಧಿಕಾರಿಗಳ ಗಮನಕ್ಕೆ ಬಾರದೇ ಯಾವುದೇ ಅಕ್ರಮ ಚಟುವಟಿಕೆಗಳು ನಡೆಯುವುದಕ್ಕೆ ಸಾಧ್ಯವಿಲ್ಲ. ಕರ್ನಾಟಕ ರಾಜಸ್ವ ಅಕ್ರಮವಾಗಿ ಇನ್ಯಾರದೋ ಪಾಲಾಗುತ್ತಿದ್ದದೆ. ಲೋಕೋಪಯೋಗಿ ಇಲಾಖೆ ಅಧಿಕಾರಿಗಳೇ ಇದರಲ್ಲಿ ಶಾಮೀಲಾಗಿರಬಹುದು' ಎಂದು ಅನುಮಾನ ವ್ಯಕ್ತಪಡಿಸಿದರು.

ABOUT THE AUTHOR

...view details