ಕರ್ನಾಟಕ

karnataka

ಆರ್​ಎಸ್​ಎಸ್​ ಎಡ- ಬಲವಲ್ಲ, ರಾಷ್ಟ್ರೀಯವಾದಿ: ಸರಕಾರ್ಯವಾಹ ದತ್ತಾತ್ರೇಯ ಹೊಸಬಾಳೆ

By

Published : Feb 2, 2023, 9:34 AM IST

Updated : Feb 2, 2023, 10:00 AM IST

ಸಂಘವು ಎಡಪಂಥೀಯವೂ ಅಲ್ಲ, ಬಲಪಂಥೀಯವೂ ಅಲ್ಲ - ಸಂಘದ ಕಾರ್ಯಕರ್ತರು ರಾಷ್ಟ್ರೀಯವಾದಿಗಳು - ಹಿಂದುತ್ವದ ನಿರಂತರ ಅಭಿವೃದ್ಧಿಯ ಆವಿಷ್ಕಾರವೇ ಆರ್​ಎಸ್​ಎಸ್ - ಸರ ಕಾರ್ಯವಾಹ ದತ್ತಾತ್ರೇಯ ಹೊಸಬಾಳೆ

sangh-is-neither-right-nor-left-wing-says-rss-general-secretary
ಸಂಘವು ಎಡಪಂಥೀಯವೂ ಅಲ್ಲ, ಬಲಪಂಥೀಯವೂ ಅಲ್ಲ :ಸರಕಾರ್ಯವಾಹ ದತ್ತಾತ್ರೇಯ ಹೊಸಬಾಳೆ

ಜೈಪುರ (ರಾಜಸ್ಥಾನ): ಆರ್​​ಎಸ್​ಎಸ್​​ ಅಂದರೆ ಪ್ರಖರ ಹಿಂದುತ್ವವನ್ನು ಪ್ರತಿಪಾದಿಸುವ ಬಲಪಂಥೀಯ ಚಿಂತನೆಗಳನ್ನೇ ಹೊಂದಿರುವ ಸಂಘಟನೆ ಎಂಬುದು ಸರ್ವವಿಧಿತ. ಆದರೆ, ಇದನ್ನು ನಿರಾಕರಿಸಿರುವ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸರಕಾರ್ಯವಾಹ(ಪ್ರಧಾನ ಕಾರ್ಯದರ್ಶಿ) ದತ್ತಾತ್ರೇಯ ಹೊಸಬಾಳೆ ಅವರು, "ಸಂಘ ಬಲಪಂಥೀಯ, ಎಡಪಂಥೀಯ ಸಿದ್ಧಾಂತಕ್ಕೆ ಅಂಟಿಕೊಂಡಿಲ್ಲ. ಅದು ರಾಷ್ಟ್ರೀಯವಾದವನ್ನು ಮಾತ್ರ ಬೆಂಬಲಿಸುತ್ತದೆ" ಎಂದು ಹೇಳಿದ್ದಾರೆ.

ಏಕಾತ್ಮ ಮಾನವದರ್ಶನ ಅನುಸಂಧಾನ ಏವಂ ವಿಕಾಸ್ ಪ್ರತಿಷ್ಠಾನ ಇಲ್ಲಿ ಆಯೋಜಿಸಿದ್ದ ದೀನದಯಾಳ್ ಸ್ಮಾರಕ ಉಪನ್ಯಾಸ ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘ: ನಿನ್ನೆ, ಇಂದು, ನಾಳೆ ವಿಷಯದ ಕುರಿತು ಮಾತನಾಡಿದ ಅವರು, "ನಾವು ಬಲಪಂಥೀಯರೂ ಅಲ್ಲ, ಎಡಪಂಥೀಯರೂ ಅಲ್ಲ. ಆರ್​ಎಸ್​ಎಸ್​ ರಾಷ್ಟ್ರೀಯವಾದಿ. ಸಂಘವು ರಾಷ್ಟ್ರದ ಹಿತಾಸಕ್ತಿಗಾಗಿ ಮಾತ್ರ ಕೆಲಸ ಮಾಡುತ್ತದೆ" ಎಂದರು.

ಭಾರತೀಯರೆಲ್ಲರೂ ಹಿಂದೂಗಳೇ: "ಭಾರತದಲ್ಲಿ ವಾಸಿಸುವ ಎಲ್ಲರೂ ಹಿಂದೂಗಳು. ನಮ್ಮ ಪೂರ್ವಜರು ಹಿಂದೂಗಳಾಗಿದ್ದರು. ನಮ್ಮ ಆರಾಧನೆ, ಆಚರಣೆ ವಿಧಾನದಿಂದಾಗಿ ನಾವು ಬದಲಾಗಿದ್ದೇವೆ. ವಿಭಿನ್ನ ಪದ್ಧತಿಗಳಿಂದಾಗಿ ನಾವು ಬೇರೆ ಬೇರೆ ರೀತಿಯಾಗಿ ಗುರುತಿಸಿಕೊಂಡಿದ್ದೇವೆ. ನಮ್ಮೆಲ್ಲರಲ್ಲಿ ಒಂದೇ ಡಿಎನ್ಎ ಇದೆ" ಎಂದು ಹೊಸಬಾಳೆ ಹೇಳಿದರು.

"ಸಂಘವು ದೇಶದುದ್ದಲ ಶಾಖೆಯನ್ನು ಸ್ಥಾಪಿಸುತ್ತದೆ. ಸಂಘಕ್ಕೆ ಸೇರಿದ ಸ್ವಯಂಸೇವಕರು ದೇಶಕ್ಕಾಗಿ ಎಲ್ಲಾ ಕೆಲಸಗಳನ್ನು ಮಾಡುತ್ತಾರೆ. ಸಾಮೂಹಿಕ ಪ್ರಯತ್ನದಿಂದ ಮಾತ್ರ ಭಾರತವು ವಿಶ್ವ ಗುರುವಾಗುವ ಮೂಲಕ ಜಗತ್ತನ್ನು ಮುನ್ನಡೆಸಲು ಸಾಧ್ಯ. ಸಂಘವು ಎಲ್ಲರನ್ನೂ ಪರಿಗಣನೆಗೆ ತೆಗೆದುಕೊಳ್ಳುತ್ತದೆ. ಭಾರತದ ಧರ್ಮಗಳು ಮತ್ತು ಪಂಗಡಗಳು ಎಲ್ಲಾ ಒಂದೇ" ಎಂದು ಪ್ರತಿಪಾದಿಸಿದರು.

"ಜನರು ತಮ್ಮ ಧರ್ಮಾಚರಣೆಗಳನ್ನು ಉಳಿಸಿಕೊಂಡು ದೇಶದ ಒಕ್ಕೂಟ ವ್ಯವಸ್ಥೆಯಡಿ ಕೆಲಸ ಮಾಡಬಹುದು. ಸಂಘದ ಸಿದ್ಧಾಂತಗಳು ಕಷ್ಟಕರವಾಗಿಲ್ಲ. ಅವನ್ನು ಅರಿಯಲು ಮನಸ್ಸು, ಹೃದಯ ಬೇಕಿಲ್ಲ. ಅರಿತುಕೊಂಡರೆ ಸಾಕು. ಮನಸ್ಸು, ಹೃದಯವನ್ನು ವಿಶಾಲವನ್ನಾಗಿ ಬೆಳೆಸುವುದೇ ಸಂಘದ ಕೆಲಸ. ಜೀವನ ಅಂದರೇನು? ಗುರಿ, ಧ್ಯೇಯೋದ್ದೇಶಗಳ ಬಗ್ಗೆ ಸಂಘ ಅರಿವು ಮೂಡಿಸುತ್ತದೆ" ಎಂದು ಅಭಿಪ್ರಾಯಪಟ್ಟರು.

ಸಂವಿಧಾನ ಒಳ್ಳೆಯದೇ, ಪಾಲನೆ ಸರಿ ಇರಲಿ: "ದೇಶದ ಸಂವಿಧಾನ ಉತ್ತಮವಾಗಿದ್ದು, ಅದನ್ನು ನಡೆಸಿ, ಪಾಲಿಸಬೇಕಾದವರು ಕೆಟ್ಟವರಾಗಿದ್ದರೆ ಸಂವಿಧಾನವೂ ಏನೂ ಮಾಡಲು ಸಾಧ್ಯವಿಲ್ಲ. ನಮ್ಮ ಮುಂದಿನ ಪೀಳಿಗೆಯು ಸಾಮಾಜಿಕ ಕಳಂಕದಿಂದ ನರಳಬಾರದು ಎಂದರೆ ಅದನ್ನು ನಾವು ಕಾಪಾಡಬೇಕು. ಇದನ್ನು ಮನಸ್ಸಿನಲ್ಲಿಟ್ಟುಕೊಂಡು ಸಾಗಬೇಕು. ಪರಿಸರ ಸಂರಕ್ಷಣೆಗಾಗಿ ಜಲ, ನೆಲ, ಅರಣ್ಯವನ್ನು ಕಾಪಾಡಬೇಕು" ಎಂದು ಹೊಸಬಾಳೆ ಸಲಹೆ ನೀಡಿದರು.

"ವಿಶ್ವದಲ್ಲಿ ಭಾರತ ಗುರುತಿಸಿಕೊಳ್ಳಬೇಕಾದರೆ, ನಮ್ಮ ಸಮಾಜ ಸಕ್ರಿಯವಾಗಿರಬೇಕು. ದೇಶದ ಅಸ್ತಿತ್ವಕ್ಕಾಗಿ ನಾವು ಹೊಸ ಹೊಸ ವಿಚಾರಗಳನ್ನು ಅರಿಯಬೇಕು. ದೇಶದಲ್ಲಿ ಪ್ರಜಾಪ್ರಭುತ್ವ ಸ್ಥಾಪನೆಯಲ್ಲಿ ಆರ್‌ಎಸ್‌ಎಸ್‌ನ ಪಾತ್ರ ದೊಡ್ಡದಿದೆ ಈ ಸಂಗತಿಯನ್ನು ವಿದೇಶಿ ಪತ್ರಕರ್ತರೇ ಬರೆದಿದ್ದಾರೆ. ತಮಿಳುನಾಡಿನಲ್ಲಿ ಮತಾಂತರದ ವಿರುದ್ಧ ಹಿಂದೂ ಜಾಗೃತಿಯ ಕಹಳೆ ಮೊಳಗಿಸಿದ್ದೇ ಸಂಘ. ಸಂಘವು ದೇಶದ ಸಾಮಾಜಿಕ ಜೀವನದ ಎಲ್ಲಾ ಕ್ಷೇತ್ರಗಳಲ್ಲಿ ಸಕ್ರಿಯವಾಗಿದೆ. ಯಾವುದೇ ಕಹಿ-ಸಿಹಿ ಘಟನೆಗಳಿಗೆ ಮೊದಲು ನೆನಪಾಗುವುದೇ ಸಂಘದ ಸ್ವಯಂಸೇವಕರು. ಸಂಘವು ಪ್ರತಿ ನೋವನ್ನು ಸಹಿಸಿಕೊಳ್ಳುತ್ತದೆ. ಕಷ್ಟವನ್ನು ನಾವು ಆನಂದಿಸಬೇಕು" ಎಂದು ಹೇಳಿದರು.

"ಇಂದು ಸಂಘವು ಸಾಮಾಜಿಕ ಜೀವನದ ಕೇಂದ್ರಬಿಂದುವಾಗಿದೆ. ಸಂಘವು ವ್ಯಕ್ತಿಗತ ಮತ್ತು ಸಮಾಜ ನಿರ್ಮಾಣದ ಕೆಲಸವನ್ನು ಮುಂದುವರೆಸುತ್ತದೆ. ಜನರನ್ನು ಸಂಪರ್ಕಿಸುವ ಮೂಲಕ ಸಮಾಜಕ್ಕಾಗಿ ಕೆಲಸ ಮಾಡುತ್ತದೆ. ಸಂಘದಿಂದ ಒಂದು ಲಕ್ಷಕ್ಕೂ ಅಧಿಕ ಸೇವಾ ಕಾರ್ಯಗಳು ಸಾಗುತ್ತಿವೆ. ಸಂಘವೆಂದರೆ ಒಂದು ಜೀವನ ವಿಧಾನ ಮತ್ತು ಕೆಲಸ ಮಾಡುವ ವಿಧಾನವಾಗಿದೆ. ಅದೊಂದು ಜೀವನಶೈಲಿ, ಚಳವಳಿಯಾಗಿದೆ. ಹಿಂದುತ್ವದ ಅಭಿವೃದ್ಧಿಯ ನಿರಂತರ ಆವಿಷ್ಕಾರದ ಹೆಸರೇ ಆರ್​ಎಸ್​ಎಸ್​" ಎಂದು ದತ್ತಾತ್ರೇಯ ಹೊಸಬಾಳೆ ಹೇಳಿದರು.

ಇದನ್ನೂ ಓದಿ :ಬುದ್ಧನ ಬಗ್ಗೆ ಪ್ರಭಾವಿತರಾಗಿ ಲೇಖನ ಬರೆದ ಮುಸ್ಲಿಂ ಕುಟುಂಬದ ಅಣ್ಣ-ತಂಗಿ

Last Updated :Feb 2, 2023, 10:00 AM IST

ABOUT THE AUTHOR

...view details