ಕರ್ನಾಟಕ

karnataka

ನಿಕ್ಕಿ ಯಾದವ್​​ ಹತ್ಯೆಗೆ ಬಿಗ್​ ಟ್ವಿಸ್ಟ್​: ಲಿವ್​ ಇನ್ ಅಲ್ಲ, ವಿವಾಹಿತ ದಂಪತಿ.. ತಂದೆಗೆ ಗೊತ್ತಿತ್ತು ಮಗನ ಕೃತ್ಯ!

By

Published : Feb 18, 2023, 5:28 PM IST

nikki-yadav-murder
ನಿಕ್ಕಿ ಯಾದವ್​​ ಹತ್ಯೆಗೆ ಬಿಗ್​ ಟ್ವಿಸ್ಟ್

ನಿಕ್ಕಿ ಯಾದವ್​ ಹತ್ಯೆ ಕೇಸ್​- ಶ್ರದ್ಧಾ ಮಾದರಿ ನಿಕ್ಕಿ ಹತ್ಯೆ- ಲಿವ್​ಇನ್​ ಗೆಳತಿ ಕೊಲೆ ಪ್ರಕರಣಕ್ಕೆ ಬಿಗ್​ ಟ್ವಿಸ್ಟ್- ಲಿವ್​ಇನ್​ ಅಲ್ಲ ವಿವಾಹಿತ ದಂಪತಿ

ನವದೆಹಲಿ:ಶ್ರದ್ಧಾ ವಾಕರ್​ ಮಾದರಿ ದೆಹಲಿಯಲ್ಲಿ ನಡೆದ ಲಿವ್​ಇನ್​ ಗೆಳತಿ ಕೊಲೆ ಪ್ರಕರಣಕ್ಕೆ ಬಿಗ್​ ಟ್ವಿಸ್ಟ್​ ಸಿಕ್ಕಿದೆ. ಹತ್ಯೆ ಆರೋಪಿ ಸಾಹಿಲ್​ ಗೆಹ್ಲೋಟ್​ ಮತ್ತು ಮೃತ ನಿಕ್ಕಿ ಯಾದವ್​ ಲಿವ್​​ಇನ್​ ಮಾತ್ರವಲ್ಲ, 2020 ರಲ್ಲೇ ಮದುವೆಯಾಗಿದ್ದರು. ಇದಕ್ಕೆ ಸಾಹಿಲ್​ ಕುಟುಂಬದ ವಿರೋಧವಿತ್ತು. ಹೀಗಾಗಿ 2ನೇ ಮದುವೆ ಮಾಡುವ ಸಿದ್ಧತೆ ನಡೆದಿದ್ದವು. ನಿಕ್ಕಿ ಯಾದವ್​ ಹತ್ಯೆ ಬಗ್ಗೆ ಸಾಹಿಲ್​ ತಂದೆಗೆ ಗೊತ್ತಿತ್ತು ಎಂಬ ಅಚ್ಚರಿಯ ಮಾಹಿತಿ ವಿಚಾರಣೆಯಲ್ಲಿ ಹೊರಬಿದ್ದಿದೆ.

ಲಿವ್​ಇನ್​ ಅಲ್ಲ, ವಿವಾಹಿತ ದಂಪತಿ:ಫೆಬ್ರವರಿ 10 ರಂದು ಯುವತಿ ನಿಕ್ಕಿ ಯಾದವ್​ರನ್ನು ಕತ್ತು ಹಿಸುಕಿ ಹತ್ಯೆ ಮಾಡಿದ ಪ್ರಿಯತಮ ಸಾಹಿಲ್​ ಆಕೆಯ ದೇಹವನ್ನು ಢಾಬಾದ ಫ್ರಿಡ್ಜ್​ನಲ್ಲಿ ಬಚ್ಚಿಟ್ಟಿದ್ದ. ಬಳಿಕ ಪ್ರಕರಣ ಬೆಳಕಿಗೆ ಬಂದು ಆರೋಪಿ, ಆತನ ತಂದೆ ಸೇರಿ ಐವರನ್ನು ಬಂಧಿಸಲಾಗಿದೆ. ತೀವ್ರ ವಿಚಾರಣೆ ನಡೆಸುತ್ತಿರುವ ದೆಹಲಿ ಅಪರಾಧ ವಿಭಾಗದ ಪೊಲೀಸರು ಪ್ರಕರಣದ ಒಂದೊಂದೇ ರಹಸ್ಯವನ್ನು ಭೇದಿಸುತ್ತಿದ್ದಾರೆ.

ಮೃತ ನಿಕ್ಕಿ ಯಾದವ್‌ ಮತ್ತು ಆರೋಪಿ ಸಾಹಿಲ್‌ ಗೆಹ್ಲೋಟ್‌ ಇದುವರೆಗೂ ಲಿವಿಂಗ್‌ ಇನ್‌ ರಿಲೇಷನ್​ಶಿಪ್​ ಹೊಂದಿದ್ದಾಗಿ ನಂಬಲಾಗಿತ್ತು. ಆದರೆ, ಅವರಿಬ್ಬರೂ 2020 ರ ಅಕ್ಟೋಬರ್‌ನಲ್ಲಿ ನೋಯ್ಡಾದ ದೇವಸ್ಥಾನವೊಂದರಲ್ಲಿ ಮದುವೆಯಾಗಿದ್ದರು. ಆದರೆ, ಇದು ಸಾಹಿಲ್​ರ ಕುಟುಂಬಕ್ಕೆ ಇಷ್ಟವಿರಲಿಲ್ಲ. ಅಲ್ಲದೇ ಸ್ವತಃ ಸಾಹಿಲ್​ ಕೂಡ ಮದುವೆಯಿಂದ ಅಸಂತುಷ್ಟನಾಗಿದ್ದ ಎಂಬುದು ವಿಚಾರಣೆಯಲ್ಲಿ ಬೆಳಕಿಗೆ ಬಂದಿದೆ.

ಮದುವೆ ಪ್ರಮಾಣಪತ್ರ ವಶ:ನಿಕ್ಕಿ ಮತ್ತು ಸಾಹಿಲ್​ ಮದುವೆಯಾದ ಬಗ್ಗೆ ಅಧಿಕೃತ ದಾಖಲೆ ಲಭ್ಯವಾಗಿದೆ. 2020 ರಲ್ಲಿ ಇಬ್ಬರೂ ಮದುವೆಗಾಗಿ ಮಾಡಿಸಿದ್ದ ಮದುವೆ ಪ್ರಮಾಣಪತ್ರವನ್ನು ದೆಹಲಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಮದುವೆಯ ಬಳಿಕ ಸಾಹಿಲ್​ ಕುಟುಂಬಸ್ಥರು ಇದನ್ನು ವಿರೋಧಿಸಿದ್ದರು. ಇದು ಜಗಳಕ್ಕೆ ಕಾರಣವಾಗಿತ್ತು. ಬಳಿಕ ಸಾಹಿಲ್​ ಕೂಡ ನಿಕ್ಕಿ ಜೊತೆಗಿನ ವೈವಾಹಿಕ ಜೀವನದಿಂದ ದೂರವಾಗಲು ಬಯಸಿದ್ದ ಎಂಬುದು ತಿಳಿದುಬಂದಿದೆ.

2ನೇ ಮದುವೆಗೆ ಸಿದ್ಧತೆ:ಇನ್ನೊಂದೆಡೆ ಸಾಹಿಲ್​ಗೆ 2ನೇ ಮದುವೆ ಮಾಡಿಸಲು ಅವರ ಕುಟುಂಬಸ್ಥರು ತಯಾರಿ ನಡೆಸಿದ್ದರು. ಬೇರೊಂದು ಹುಡುಗಿಯ ಜೊತೆಗೆ ನಿಶ್ಚಿತಾರ್ಥ ಕೂಡ ಮಾಡಲಾಗಿತ್ತು. ಈ ವಿಚಾರ ನಿಕ್ಕಿಗೆ ಕೆಲ ದಿನಗಳ ಬಳಿಕ ತಿಳಿಯಿತು. ಇದು ಇಬ್ಬರ ಮಧ್ಯೆ ಕಿತ್ತಾಟಕ್ಕೆ ಕಾರಣವಾಯಿತು.

ಸಾಹಿಲ್‌ಗೆ ಬೇರೊಬ್ಬಳೊಂದಿಗೆ ವಿವಾಹಕ್ಕೆ ಮುಂದಾಗಿದ್ದು, ತೀವ್ರ ವಾಗ್ವಾದಕ್ಕೆ ಕಾರಣವಾಯಿತು. ಇದರಿಂದ ಸಾಹಿಲ್ ತನ್ನ ಕಾರಿನಲ್ಲಿರುವ ಡೇಟಾ ಕೇಬಲ್‌ನಿಂದ ಆಕೆಯ ಕತ್ತು ಹಿಸುಕಿ ಸಾಯಿಸಿದ್ದ. ಬಳಿಕ ಆಕೆಯ ದೇಹವನ್ನು ಕಾರಿನ ಮುಂಭಾಗದ ಸೀಟಿನಲ್ಲಿಟ್ಟುಕೊಂಡೇ 40 ಕಿ.ಮೀ ದೂರ ಚಲಾಯಿಸಿಕೊಂಡು ಹೋಗಿದ್ದ. ಬಳಿಕ ತನ್ನ ಸಂಬಂಧಿಕರು ಮತ್ತು ಸ್ನೇಹಿತರ ಸಹಾಯದಿಂದ ಢಾಬಾದ ಫ್ರಿಡ್ಜ್‌ನಲ್ಲಿ ಇಟ್ಟಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಅಪ್ಪನಿಗೆ ಗೊತ್ತಿತ್ತು ಮಗ ಮಾಡಿದ್ದ ಹತ್ಯೆ:ಇನ್ನೊಂದು ಅಚ್ಚರಿಯ ಸಂಗತಿಯೆಂದರೆ, ಮಗ ಸಾಹಿಲ್​ ನಿಕ್ಕಿಯನ್ನು ಕೊಲೆ ಮಾಡಿದ್ದ ವಿಷಯ ತಂದೆ ವೀರೇಂದ್ರ ಗೆಹ್ಲೋಟ್​ಗೆ ತಿಳಿದಿತ್ತು. ಆದರೆ, ಈ ಬಗ್ಗೆ ಎಲ್ಲೂ ಬಾಯ್ಬಿಟ್ಟಿರಲಿಲ್ಲ. ಈತನನ್ನೂ ಬಂಧಿಸಿ ವಿಚಾರಣೆ ನಡೆಸಿದಾಗ ಮೊದಲು ಅಲ್ಲಗಳೆದಿದ್ದ ಬಳಿಕ, ಮಗ ಹತ್ಯೆ ಮಾಡಿದ್ದು ತನಗೆ ತಿಳಿದಿತ್ತು ಎಂದು ಒಪ್ಪಿಕೊಂಡಿದ್ದಾರೆ.

ನಿಕ್ಕಿಯ ಶವವನ್ನು ಫ್ರಿಡ್ಜ್‌ನಲ್ಲಿ ಮರೆಮಾಡಿ ಇಡಲು ಸಹಾಯ ಮಾಡಿದ ಸಾಹಿಲ್‌ನ ಸ್ನೇಹಿತರು ಮತ್ತು ಸಂಬಂಧಿಕರು ಸೇರಿ ಐವರನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳ ವಿರುದ್ಧ ಕ್ರಿಮಿನಲ್ ಪಿತೂರಿ, ಕೊಲೆ ಮರೆಮಾಚುವ ಆರೋಪದಡಿ ಪ್ರಕರಣ ದಾಖಲಿಸಲಾಗಿದೆ ಎಂದು ವಿಶೇಷ ಪೊಲೀಸ್ ಆಯುಕ್ತ ಪಿ ರವೀಂದರ್ ಯಾದವ್ ಹೇಳಿದ್ದಾರೆ.

ಏನಿದು ಕೇಸ್​:ಶ್ರದ್ಧಾ ವಾಕರ್ ಕೊಲೆ ಪ್ರಕರಣವನ್ನೇ ಹೋಲುವಂತೆ ಫೆ.13ರಂದು ದೆಹಲಿಯ ಹರಿದಾಸ್ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಿಕ್ಕಿ ಯಾದವ್​ ಎಂಬಾಕೆಯ ಹತ್ಯೆ ನಡೆದಿತ್ತು. ಪ್ರಿಯಕರ ತನ್ನ ಪ್ರೇಯಸಿಯನ್ನು ಕತ್ತು ಹಿಸುಕಿ ಕೊಂದು ಢಾಬಾದ ಫ್ರಿಡ್ಜ್​​​ನಲ್ಲಿಟ್ಟಿದ್ದ. ನಿಕ್ಕಿ ಯಾದವ್ ಮತ್ತು ಸಾಹಿಲ್ ಗೆಹ್ಲೋಟ್ ಇಬ್ಬರೂ ಪ್ರೇಮ ಸಂಬಂಧ ಹೊಂದಿದ್ದರು. ಆದರೆ, ಇಬ್ಬರ ನಡುವೆ ಆಗಾಗ ಜಗಳ ನಡೆಯುತ್ತಿತ್ತು. ಬಳಿಕ ದೆಹಲಿ ಅಪರಾಧ ವಿಭಾಗದ ಪೊಲೀಸರ ತಂಡವು ಪಶ್ಚಿಮ ಹರಿದಾಸ್ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿರುವ ಢಾಬಾದಿಂದ ಯುವತಿಯ ಶವವನ್ನು ವಶಪಡಿಸಿಕೊಂಡಿದ್ದರು.

ಓದಿ:ನಿಕ್ಕಿ ಯಾದವ್ ಹತ್ಯೆ ಪ್ರಕರಣ: ಕೊಲೆಗೆ ಸಂಚು ರೂಪಿಸಿದ್ದಕ್ಕಾಗಿ ಸಾಹಿಲ್ ತಂದೆ ಸೇರಿ ಐವರ ಬಂಧನ

ABOUT THE AUTHOR

...view details