ETV Bharat / bharat

ಕಾಂಗ್ರೆಸ್​ ಬಜೆಟ್​ನಲ್ಲಿ ಶೇ. 15ರಷ್ಟು ಹಣವನ್ನು ಮುಸ್ಲಿಂ ಸಮುದಾಯಕ್ಕೆ ಮೀಸಲಿಡಲು ಯೋಜಿಸಿದೆ : ನರೇಂದ್ರ ಮೋದಿ - Prime Minister Modi

author img

By ETV Bharat Karnataka Team

Published : May 15, 2024, 8:28 PM IST

ಲೋಕಸಭಾ ಚುನಾವಣೆ ನಂತರ ನಕಲಿ ಶಿವಸೇನೆ, ನಕಲಿ ಎನ್‌ಸಿಪಿ ಕಾಂಗ್ರೆಸ್‌ನೊಂದಿಗೆ ವಿಲೀನವಾಗಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದ್ದಾರೆ.

prime-minister-modi
ಪ್ರಧಾನಿ ನರೇಂದ್ರ ಮೋದಿ (ETV Bharat)

ನಾಸಿಕ್ (ಮಹಾರಾಷ್ಟ್ರ) : ಕಾಂಗ್ರೆಸ್ ಧರ್ಮದ ಆಧಾರದಲ್ಲಿ ಬಜೆಟ್ ಅನ್ನು ವಿಭಜಿಸುವ ಕೆಲಸ ಮಾಡಿದ್ದು, ದೇಶದ ಬಜೆಟ್​ನಲ್ಲಿ ಶೇ. 15ರಷ್ಟು ಹಣವನ್ನು ಮುಸ್ಲಿಂ ಸಮುದಾಯಕ್ಕೆ ಮೀಸಲಿಡಲು ಯೋಜಿಸಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಆರೋಪಿಸಿದ್ದಾರೆ.

ಇಂದು ನಾಸಿಕ್ ಜಿಲ್ಲೆಯ ಪಿಂಪಲ್ಗಾಂವ್ ಬಸವಂತ್‌ನಲ್ಲಿ ಚುನಾವಣಾ ರ್‍ಯಾಲಿಯನ್ನುದ್ದೇಶಿಸಿ ಮಾತನಾಡಿದ ಅವರು, ಧರ್ಮದ ಆಧಾರದ ಮೇಲೆ ಬಜೆಟ್​​ನ್ನು ವಿಭಜಿಸುವುದು ಅಪಾಯಕಾರಿ. ಆದರೆ ಎಲ್ಲಿಯವರೆಗೆ ಮೋದಿ ಹಿಂದುಳಿದವರ ಕಾವಲುಗಾರನಾಗಿರುತ್ತಾರೋ, ಅಲ್ಲಿಯವರೆಗೆ ಮೀಸಲಾತಿಯನ್ನು ಯಾರೂ ಕಸಿದುಕೊಳ್ಳಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.

''ಎನ್‌ಡಿಎಯ ಮಹಾನ್ ಯಶಸ್ಸಿನ ಅರಿವು ಅದರ ಪ್ರಮುಖ ನಾಯಕರೊಬ್ಬರ ಹೇಳಿಕೆಯಿಂದ ತಿಳಿಯುತ್ತದೆ. ಇಂಡಿಯಾದ ಪ್ರಮುಖ ಪಕ್ಷವೇ ಕಾಂಗ್ರೆಸ್‌. ಹೀಗಾಗಿ ಅವರಿಗೆ ಯಶಸ್ಸು ಕಷ್ಟ. ಅದಕ್ಕಾಗಿಯೇ ಇಂಡಿಯಾ ಕೂಟದ ಪ್ರಮುಖ ನಾಯಕರೊಬ್ಬರು ಎಲ್ಲಾ ಸಣ್ಣ ಪಕ್ಷಗಳನ್ನು ಕಾಂಗ್ರೆಸ್‌ನೊಂದಿಗೆ ವಿಲೀನಗೊಳಿಸಬೇಕು ಎಂದು ಹೇಳಿದ್ದಾರೆ. ಇದರರ್ಥ ಅವರು ಒಟ್ಟಿಗೆ ಸೇರಿದರೆ ಅವರು ವಿರೋಧ ಪಕ್ಷವಾಗುತ್ತಾರೆ" ಎಂದು ಉದ್ಧವ್ ಠಾಕ್ರೆ ಅವರನ್ನು ನಕಲಿ ಶಿವಸೇನೆ ಎಂದು ಕರೆಯುವ ಮೂಲಕ ಮತ್ತೊಮ್ಮೆ ಅವರ ವಿರುದ್ಧ ಪ್ರಧಾನಿ ಮೋದಿ ವಾಗ್ದಾಳಿ ನಡೆಸಿದರು.

ಚುನಾವಣೆಯ ನಂತರ ನಕಲಿ ಶಿವಸೇನೆ, ನಕಲಿ ಎನ್‌ಸಿಪಿ ಕಾಂಗ್ರೆಸ್‌ನೊಂದಿಗೆ ವಿಲೀನವಾಗುವುದು ಖಚಿತ. ನಕಲಿ ಶಿವಸೇನೆಯು ಕಾಂಗ್ರೆಸ್‌ನೊಂದಿಗೆ ವಿಲೀನವಾದಾಗ ನಾನು ಬಾಳಾಸಾಹೇಬ್ ಠಾಕ್ರೆ ಅವರನ್ನು ಹೆಚ್ಚು ಕಳೆದುಕೊಳ್ಳುತ್ತೇನೆ. ಏಕೆಂದರೆ ಶಿವಸೇನೆಯನ್ನು ಕಾಂಗ್ರೆಸ್ ಎಂದು ಭಾವಿಸಿದ ದಿನ ಶಿವಸೇನೆಯನ್ನು ಕೊನೆಗೊಳಿಸುತ್ತೇನೆ ಎಂದು ಬಾಳಾಸಾಹೇಬ್ ಠಾಕ್ರೆ ಹೇಳುತ್ತಿದ್ದರು. ಇದರರ್ಥ ನಕಲಿ ಶಿವಸೇನೆಗೆ ಯಾವುದೇ ಸ್ಥಾನವಿಲ್ಲ. ಈ ವಿನಾಶವು ಬಾಳಾಸಾಹೇಬ್ ಠಾಕ್ರೆ ಅವರನ್ನು ಅತ್ಯಂತ ದುಃಖಿತರನ್ನಾಗಿ ಮಾಡುತ್ತಿದೆ ಎಂದು ಉದ್ಧವ್ ಠಾಕ್ರೆ ವಿರುದ್ಧ ನರೇಂದ್ರ ಮೋದಿ ಟೀಕಾ ಪ್ರಹಾರ ನಡೆಸಿದರು.

ಮುಂದುವರಿದು ಮಾತನಾಡಿದ ಪ್ರಧಾನಿ ಮೋದಿ, "ನಕಲಿ ಶಿವಸೇನೆ ಬಾಳಾಸಾಹೇಬರ ಪ್ರತಿ ಕನಸನ್ನು 'ಒಡೆದು ಹಾಕಿದೆ'. ಬಾಳಾಸಾಹೇಬ್ ಠಾಕ್ರೆ ಅವರ ಕನಸು ಅಯೋಧ್ಯೆಯಲ್ಲಿ ಭವ್ಯವಾದ ರಾಮಮಂದಿರ ನಿರ್ಮಾಣವಾಗಿತ್ತು. ಜಮ್ಮು ಮತ್ತು ಕಾಶ್ಮೀರದಲ್ಲಿ 370 ನೇ ವಿಧಿಯನ್ನು ಹಿಂಪಡೆಯಬೇಕು ಎಂಬುದಾಗಿತ್ತು. ಈ ಕನಸುಗಳು ಈಗ ನನಸಾಗಿವೆ. ಆದರೆ ಶಿವಸೇನೆ ಕೂಡ ಅದೇ ಹಾದಿ ತುಳಿದಿದೆ. ಸ್ವಾತಂತ್ರ್ಯ ಹೋರಾಟಗಾರ ಸಾವರ್ಕರ್‌ರನ್ನು ಹಗಲಿರುಳು ನಿಂದಿಸುತ್ತಿರುವ ಕಾಂಗ್ರೆಸ್‌ನ ಮಡಿಲಲ್ಲಿ ಕುಳಿತಿರುವ ನಕಲಿ ಶಿವಸೇನೆ ಕಾಂಗ್ರೆಸ್ ಅನ್ನು ತಲೆಯ ಮೇಲೆ ಇಟ್ಟುಕೊಂಡು ತಿರುಗಾಡುತ್ತಿದೆ ಎಂದು ವಾಗ್ದಾಳಿ ನಡೆಸಿದರು.

60 ಸಾವಿರ ಮೆಟ್ರಿಕ್ ಟನ್ ಈರುಳ್ಳಿ ಖರೀದಿಸಿದ್ದೇವೆ : ಸ್ವಾರಸ್ಯವೆಂದರೆ ಎಂದಿನಂತೆ ಪ್ರಧಾನಿ ನರೇಂದ್ರ ಮೋದಿ ಮರಾಠಿಯಲ್ಲಿ ಭಾಷಣ ಆರಂಭಿಸಿದರು. ಈ ವೇಳೆ ಕೆಲವು ರೈತರು ಈರುಳ್ಳಿ ಬಗ್ಗೆ ಮಾತನಾಡಿ ಎಂದು ಮೋದಿ ವಿರುದ್ಧ ಘೋಷಣೆಗಳನ್ನು ಕೂಗಿದರು. ಇದಾದ ಬಳಿಕ ಈರುಳ್ಳಿ ಬಗ್ಗೆ ಪ್ರತಿಕ್ರಿಯಿಸಿದ ಅವರು, 60 ಸಾವಿರ ಮೆಟ್ರಿಕ್ ಟನ್ ಈರುಳ್ಳಿ ಖರೀದಿಸಿದ್ದೇವೆ. ಈರುಳ್ಳಿ ದಾಸ್ತಾನು ಆರಂಭಿಸಿದ್ದೇವೆ. ಈಗ ನಾವು 5 ಲಕ್ಷ ಮೆಟ್ರಿಕ್ ಟನ್​ ಈರುಳ್ಳಿಯನ್ನು ಮರುಸಂಗ್ರಹಿಸಲಿದ್ದೇವೆ. ನಮ್ಮ ಕಾಲದಲ್ಲಿ ಈರುಳ್ಳಿ ರಫ್ತು ಶೇ.35ರಷ್ಟು ಹೆಚ್ಚಾಗಿದೆ. ರಫ್ತಿಗೂ ಸಬ್ಸಿಡಿ ನೀಡಿದ್ದೇವೆ ಎಂದು ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ನಿಲುವನ್ನು ಸಮರ್ಥಿಸಿಕೊಂಡರು.

ಇದನ್ನೂ ಓದಿ : ಇಂದು ನಾಮಪತ್ರ ಸಲ್ಲಿಸಲಿರುವ ಪ್ರಧಾನಿ ಮೋದಿ: 12 ರಾಜ್ಯಗಳ ಸಿಎಂ, ಕೇಂದ್ರ ಸಚಿವರು ಭಾಗಿ ಸಾಧ್ಯತೆ - PM MODI NOMINATION

ETV Bharat Logo

Copyright © 2024 Ushodaya Enterprises Pvt. Ltd., All Rights Reserved.