ಕೊಚ್ಚಿ (ಕೇರಳ): ಎಲ್ಲ ರೀತಿಯ ಕೋಮುವಾದ ಮತ್ತು ಹಿಂಸಾಚಾರ ಒಂದೇ. ಅವು ಎಲ್ಲಿಂದ ಬಂದರೂ ಒಂದೇ ಆಗಿರುತ್ತವೆ. ಅದರ ವಿರುದ್ಧ ಹೋರಾಡಬೇಕು. ಶೂನ್ಯ ಸಹಿಷ್ಣುತೆ ಇರಬೇಕೆಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ. ಪಿಎಫ್ಐ ಕಚೇರಿಗಳು ಮತ್ತು ಅದರ ನಾಯಕರ ಮೇಲೆ ಎನ್ಐಎ ದಾಳಿ ಕುರಿತಾದ ಪ್ರಶ್ನೆಗೆ ರಾಹುಲ್ ಈ ಉತ್ತರ ನೀಡುವ ಮೂಲಕ ಪರೋಕ್ಷವಾಗಿ ಎನ್ಐಎ ದಾಳಿಯನ್ನು ಬೆಂಬಲಿಸಿದ್ದಾರೆ.
ಭಾರತ್ ಜೋಡೋ ಯಾತ್ರೆ ಭಾಗವಾಗಿ ಕೇರಳದ ಕೊಚ್ಚಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ದೇಶದ ಸಾಂಸ್ಥಿಕ ಚೌಕಟ್ಟನ್ನು ಹಿಡಿದಿಟ್ಟುಕೊಂಡಿರುವ ಯಂತ್ರದೊಂದಿಗೆ ನಾವು ಹೋರಾಡುತ್ತಿದ್ದೇವೆ. ಅದು ಅನಿಯಮಿತ ಹಣದ ಮೂಲಕ ಜನರನ್ನು ಖರೀದಿಸುವ ಹಾಗೂ ಒತ್ತಡ ಹೇರಿ ಬೆದರಿಸುವ ಕೆಲಸ ಮಾಡುತ್ತಿದೆ. ಅದರ ಫಲಿತಾಂಶವನ್ನು ನೀವು ಗೋವಾದಲ್ಲಿ ನೋಡಿದ್ದೀರಿ ಎಂದು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.
ಇದನ್ನೂ ಓದಿ:ದೇಶಾದ್ಯಂತ ಎನ್ಐಎ ದಾಳಿ: 100ಕ್ಕೂ ಹೆಚ್ಚು ಪಿಎಫ್ಐ ಕಾರ್ಯಕರ್ತರ ಬಂಧನ
ಇದೇ ವೇಳೆ, ಕಾಂಗ್ರೆಸ್ ಅಧ್ಯಕ್ಷ ಸ್ಥಾನ ಹಾಗೂ ಚುನಾವಣೆಗೆ ಬಗ್ಗೆ ಮಾತನಾಡಿದ ರಾಹುಲ್, ಕಾಂಗ್ರೆಸ್ ಅಧ್ಯಕ್ಷ ಹುದ್ದೆಯು ಭಾರತದ ನಿರ್ದಿಷ್ಟ ದೃಷ್ಟಿಕೋನವನ್ನು ವ್ಯಾಖ್ಯಾನಿಸುವ ಐತಿಹಾಸಿಕ ಸ್ಥಾನ. ಅಲ್ಲದೇ, ಅದು ಒಂದು ಸೈದ್ಧಾಂತಿಕ ಹುದ್ದೆ. ಜೊತೆಗೆ ಒಂದು ನಂಬಿಕೆ ವ್ಯವಸ್ಥೆ ಮತ್ತು ಭಾರತದ ದೃಷ್ಟಿಕೋನ. ಅದರ ಆಲೋಚನೆಗಳನ್ನು ಕಾಂಗ್ರೆಸ್ ಅಧ್ಯಕ್ಷ ಸ್ಥಾನ ಪ್ರತಿನಿಧಿಸುತ್ತದೆ ಎಂದರು.
ಜೊತೆಗೆ ಉದಯಪುರದಲ್ಲಿ ನಡೆದ ಸಭೆಯಲ್ಲಿ ಒಬ್ಬ ವ್ಯಕ್ತಿ, ಒಂದು ಹುದ್ದೆ ಎಂಬುವುದು ಕಾಂಗ್ರೆಸ್ನ ಬದ್ಧತೆ ಘೋಷಿಸಿದ್ದೇವೆ. ಆ ಬದ್ಧತೆಯನ್ನು ಪಕ್ಷದ ಅಧ್ಯಕ್ಷ ಸ್ಥಾನದ ವಿಷಯದಲ್ಲೂ ಉಳಿಸಿಕೊಳ್ಳುವ ನಿರೀಕ್ಷೆ ಇದೆ ಎಂದೂ ರಾಹುಲ್ ಗಾಂಧಿ ತಿಳಿಸಿದರು.
ಇದನ್ನೂ ಓದಿ:ದೆಹಲಿ ಮಸೀದಿಯಲ್ಲಿ ಮುಖ್ಯ ಇಮಾಮ್ರನ್ನು ಭೇಟಿಯಾದ ಆರೆಸ್ಸೆಸ್ ಮುಖ್ಯಸ್ಥ ಭಾಗವತ್