ಪೂರ್ವಜರ ಕಾಲದ ಸಮಾಧಿಗಳು ಧ್ವಂಸ; ಗ್ರಾಮಸ್ಥರ ಪ್ರತಿಭಟನೆ
Published : Mar 19, 2024, 8:33 PM IST
ಮಧುಗಿರಿ (ತುಮಕೂರು): 'ಪೂರ್ವಜರ ಕಾಲದಿಂದಲೂ ಶವ ಹೂಳುತಿದ್ದ ಗ್ರಾಮದ ಸ್ಮಶಾನದ ಜಾಗವನ್ನು ತನ್ನದೆಂದು ವ್ಯಕ್ತಿಯೊಬ್ಬ ಅಲ್ಲಿದ್ದ ಗೋರಿಗಳನ್ನು ಜೆಸಿಬಿ ಬಳಸಿ ಧ್ವಂಸಗೊಳಿಸಿರುವುದಾಗಿ' ಸ್ಥಳೀಯರು ಆರೋಪಿಸಿದ್ದಾರೆ. ತಾಲೂಕಿನ ಚಿಕ್ಕದಾಳವಟ್ಟ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಓಬಳಾಪುರದಲ್ಲಿ ಇಂತಹದ್ದೊಂದು ಸುದ್ದಿ ವರದಿಯಾಗಿದ್ದು, 'ವ್ಯಕ್ತಿಯು ಸದರಿ ಜಾಗ ತನ್ನದು ಎಂದು ಏಕಾಏಕಿ ಜೆಸಿಬಿ ಯಂತ್ರಗಳನ್ನು ಬಳಿಸಿ ಅಲ್ಲಿದ್ದ 19 ಗೋರಿಗಳನ್ನು ಧ್ವಂಸ ಮಾಡಿದ್ದಾನೆ' ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
'ನೂರಾರು ವರ್ಷಗಳಿಂದ ಪೂರ್ವಜರ ಅನುಮತಿ ಮೇರೆಗೆ ಗ್ರಾಮದ ಸರ್ವೆ ನಂ. 4/1 ರಲ್ಲಿ ಸುಮಾರು 10 ಗುಂಟೆ ಜಾಗದಲ್ಲಿ ಅಂತ್ಯ ಸಂಸ್ಕಾರ ಮಾಡಿಕೊಂಡು ಬರಲಾಗುತ್ತಿದೆ. ಆದರೆ, ವ್ಯಕ್ತಿಯೊಬ್ಬ ಇದೀಗ ಏಕಾಏಕಿ ಬಂದು ಗೋರಿಗಳನ್ನು ಕೆಡವಿಸಿದ್ದಾನೆ. ಪ್ರತಿ ವರ್ಷ ಯುಗಾದಿ ಹಬ್ಬ ಆಗಮಿಸುತ್ತಿದ್ದಂತೆ ಇಲ್ಲಿರುವ ಸಮಾಧಿಗಳಿಗೆ ಸುಣ್ಣ-ಬಣ್ಣ ಮಾಡಿಸಿ ಪೂಜೆ ಮಾಡುತ್ತಿದ್ದೆವು. ಆದರೆ, ಇದೀಗ ಸಮಾಧಿಗಳೇ ಇಲ್ಲದ ಕಾರಣ ಯಾರಿಗೆ ಪೂಜೆ ಸಲ್ಲಿಸಬೇಕು ಅಂತ ದಿಕ್ಕು ತೋಚದಂತಾಗಿದೆ' ಎಂದು ಗ್ರಾಮಸ್ಥರು ಸಮಾಧಿಗಳ ಕಲ್ಲುಗಳ ಮೇಲೆ ಗೋಳಾಡುತ್ತಾ ಕಣ್ಣೀರಿಟ್ಟ ಘಟನೆ ಮನಕಲಕುವಂತಿತ್ತು. ಸಂಬಂಧಪಟ್ಟ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡುವಂತೆ ಇದೇ ವೇಳೆ ಅವರು ಪ್ರತಿಭಟನೆ ಸಹ ಮಾಡಿದರು.
'ಈ ಬಗ್ಗೆ ಕೊಡಿಗೇನಹಳ್ಳಿ ಪೊಲೀಸ್ ಠಾಣೆಗೆ ದೂರು ನೀಡಿಲಾಗಿದೆ. ಆದರೂ ನಮಗೆ ನ್ಯಾಯ ಸಿಕ್ಕಿಲ್ಲ. ಸದರಿ ವಿಚಾರವನ್ನು ಸಚಿವರ ಗಮನಕ್ಕೂ ತರಲಾಗುತ್ತದೆ. ಅಲ್ಲದೇ ಈ ಬಗ್ಗೆ ತಾಲೂಕು ದಂಡಾಧಿಕಾರಿಗಳಿಗೂ ದೂರು ನೀಡಲಾಗಿದೆ' ಎಂದು ಗ್ರಾಮಸ್ಥರು ತಮ್ಮ ಅಸಹಾಯಕತೆ ಹೊರಹಾಕಿದ್ದಾರೆ.
ಇದನ್ನೂ ಓದಿ: ಸ್ಮಶಾನ ಇಲ್ಲದೇ ಅಂತ್ಯಕ್ರಿಯೆಗೆ ಪರದಾಟ: ಕೆಸರು ತುಂಬಿದ ಗುಂಡಿಯಲ್ಲೇ ಸಮಾಧಿ!!