ETV Bharat / state

ಸ್ಲಂಗಳ ಬಳಿ ತೆರೆದಿರುವ ಎಂಎಸ್‍ಐಎಲ್ ಮದ್ಯದ ಮಳಿಗೆಗಳಿಂದ ಪ.ಜಾ/ಪ.ಪಂ ಜನರು ಮತ್ತಷ್ಟು ದುಸ್ಥಿತಿಗೆ: ಸಮಿತಿ ಆತಂಕ

author img

By ETV Bharat Karnataka Team

Published : Feb 22, 2024, 8:35 PM IST

P.M. Narendraswamy
ಪಿ.ಎಂ.ನರೇಂದ್ರಸ್ವಾಮಿ

ಇಂದು ವಿಧಾನಸಭೆಯಲ್ಲಿ ಸಮಿತಿಯ ವರದಿ ಮಂಡಿಸಿರುವ ಅಧ್ಯಕ್ಷ ಪಿ.ಎಂ. ನರೇಂದ್ರಸ್ವಾಮಿ ವರದಿಯಲ್ಲಿರುವ ಆತಂಕಕಾರಿ ಅಂಶಗಳ ಮೇಲೆ ಬೆಳಕು ಚೆಲ್ಲಿದರು.

ಬೆಂಗಳೂರು: "ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಜನರು ಹೆಚ್ಚಾಗಿ ವಾಸಿಸುತ್ತಿರುವ ಪ್ರದೇಶಗಳಲ್ಲಿ ಅಥವಾ ಸ್ಲಂಗಳ ಹತ್ತಿರ ಎಂಎಸ್‍ಐಎಲ್ ಮದ್ಯದ ಮಳಿಗೆಗಳನ್ನು ತೆರೆದಿರುವುದರಿಂದ ಈ ಜನಾಂಗದವರು ಮತ್ತಷ್ಟು ದುಸ್ಥಿತಿಗೆ ಹೋಗುತ್ತಿದ್ದಾರೆ" ಎಂದು ವಿಧಾನ ಮಂಡಲದ ಅನುಸೂಚಿತ ಜಾತಿ ಮತ್ತು ಅನುಸೂಚಿತ ಪಂಗಡಗಳ ಕಲ್ಯಾಣ ಸಮಿತಿ ಆತಂಕ ವ್ಯಕ್ತಪಡಿಸಿದೆ. ಸಮಿತಿಯ ಅಧ್ಯಕ್ಷ ಪಿ. ಎಂ. ನರೇಂದ್ರಸ್ವಾಮಿ ಇಂದು ವಿಧಾನಸಭೆಯಲ್ಲಿ ಸಮಿತಿಯ ವರದಿಯನ್ನು ಮಂಡಿಸಿದರು.

ಈ ಮಳಿಗೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಹೊರಗುತ್ತಿಗೆ ನೌಕರರು ಹಾಗೂ ಬಾಡಿಗೆಗೆ ಅಂಗಡಿಯನ್ನು ನೀಡಿರುವವರೇ ಮಾಲೀಕರಂತೆ ವರ್ತಿಸುತ್ತಿದ್ದಾರೆ. ಅಲ್ಲದೇ ಗರಿಷ್ಠ ಮಾರಾಟ ಬೆಲೆಗಿಂತ (ಎಂಆರ್​ಪಿ) ಹೆಚ್ಚಿನ ದರಕ್ಕೆ ಮದ್ಯ ಮಾರಾಟ ಮಾಡುತ್ತಿದ್ದಾರೆ ಎಂಬ ಅಂಶವನ್ನೂ ಸಮಿತಿ ಗುರುತಿಸಿದೆ.

ಅನೇಕ ಎಂಎಸ್‍ಐಎಲ್ ಮಳಿಗೆಗಳನ್ನು ಅಬಕಾರಿ ಇಲಾಖೆಯ ಅಧಿಕಾರಿ ಮತ್ತು ನೌಕರರ ಅಥವಾ ಅವರ ಸಂಬಂಧಿಕರ ಹೆಸರುಗಳಲ್ಲಿ ಅಕ್ರಮವಾಗಿ ಮಂಜೂರು ಮಾಡಿಸಿಕೊಳ್ಳಲಾಗಿದೆ. ಹೀಗೆ ಮಳಿಗೆಗಳನ್ನು ನಡೆಸುತ್ತಿರುವವರ ವಿರುದ್ಧ ಕ್ರಮ ಕೈಗೊಳ್ಳಲಾಗಿಲ್ಲ ಎಂಬ ಲೋಪವನ್ನು ವರದಿ ಎತ್ತಿ ತೋರಿಸಿದೆ.

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಜನಸಂಖ್ಯೆ ಹೆಚ್ಚಾಗಿ ಇರುವ ಕಡೆಗಳಲ್ಲಿ ಹಾಗೂ ಬಡವರು ವಾಸಿಸುವ ಪ್ರದೇಶಗಳ ಸಮೀಪ ಜನೌಷಧ ಕೇಂದ್ರಗಳನ್ನು ತೆರೆಯದಿರುವುದರಿಂದ ಸಮಸ್ಯೆಯಾಗಿದೆ ಎಂದು ಸಮಿತಿ ಬೇಸರ ವ್ಯಕ್ತಪಡಿಸಿದೆ.

ಎಂಎಸ್‍ಐಎಲ್, ಕೆಎಐಎಡಿಬಿ ಮೊದಲಾದ ಸಂಸ್ಥೆಗಳಲ್ಲಿ ಗುತ್ತಿಗೆ ನೀಡುವಾಗ ಶೇ. 24ರ ಮೀಸಲಾತಿಯನ್ನು ಕಡ್ಡಾಯವಾಗಿ ಅನುಸರಿಸಬೇಕು. ಕೆಲವೆಡೆ ಈ ನಿಬಂಧನೆಯನ್ನು ಉಲ್ಲಂಘಿಸಲಾಗುತ್ತಿದೆ. ಕೂಡಲೇ ಇದನ್ನು ಸರಿಪಡಿಸಿಕೊಳ್ಳಬೇಕು ಎಂದು ಸಮಿತಿ ಸೂಚಿಸಿದೆ.

ಮೀಸಲಾತಿ ನೀಡುವ ಸಂದರ್ಭದಲ್ಲಿ ಯಾವ ಬ್ಲಾಕ್​ಗಳಲ್ಲಿ ಕಲ್ಲು ಮತ್ತು ಮರಳು ಕಡಿಮೆ ಪ್ರಮಾಣ ಇರುತ್ತದೆ ಅಂತಹ ಬ್ಲಾಕ್​ಗಳನ್ನು ಈ ವರ್ಗದವರಿಗೆ ಹಂಚಿಕೆ ಮಾಡಿ ಮೀಸಲಾತಿ ಪ್ರಕಾರ ನೀಡಲಾಗಿದೆ ಎಂದು ಬಿಂಬಿಸಲಾಗಿದೆ. 2013ರಲ್ಲಿ ಸಮಿತಿಯು ಶಿಫಾರಸ್ಸಿನ ಮೇರೆಗೆ ಕರ್ನಾಟಕ ಮೈನರ್ ಮಿನರಲ್ಸ್ ಕಾಯ್ದೆಗೆ ತಿದ್ದುಪಡಿ ಮಾಡಿ ಸರ್ಕಾರಿ ಏಜೆನ್ಸಿಗಳಿದ್ದರೂ ಶೇಕಡಾ 24.1 ರಷ್ಟು ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ಜನಾಂಗದವರಿಗೆ ಮೀಸಲಿಟ್ಟು ನಂತರ ಸರ್ಕಾರಿ ಉದ್ಯಮಿಗೆ ಕೊಡಬೇಕೆಂದು ಇದ್ದರೂ ಕೊಡದೆ ಮೀಸಲಿಡದೆ ಕೊಟ್ಟಿರುವುದು ಬೆಳಕಿಗೆ ಬಂದಿದೆ.

ಸಮಿತಿಯ ಶಿಫಾರಸ್ಸು: ಮಳಿಗೆಗಳಲ್ಲಿ ಹೊರಗುತ್ತಿಗೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ವರ್ಗದ ಜನರಿಗೆ ನೀಡಲಾಗುತ್ತಿರುವ ವೇತನ, ಇಎಸ್ಐ, ಪಿಎಫ್ ಮುಂತಾದವುಗಳು ಕ್ರಮವಾಗಿ ನೀಡಲಾಗುತ್ತಿದೆಯೇ ಎಂದು ಸರ್ಕಾರದ ಇಲಾಖೆ ಅಧಿಕಾರಿಗಳು ಆಗಿಂದಾಗ್ಗೆ ಪರಿಶೀಲಿಸುತ್ತಿರಬೇಕೆಂದು ಸಮಿತಿ ಶಿಫಾರಸ್ಸು ಮಾಡಿದೆ.

ಕೆಲವು ಪ್ರದೇಶಗಳಲ್ಲಿ ಊರಿನ ಮಧ್ಯೆ ಎಂಎಸ್ಐಎಲ್ ಮಳಿಗೆಗಳು ಇರುವುದರಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತಿದ್ದು, ಅಂಥವುಗಳನ್ನು ಸ್ಥಳಾಂತರಿಸಬೇಕೆಂದು ಮತ್ತು ರಾಜ್ಯದ ಗಡಿಭಾಗದಲ್ಲಿ ಅಂದರೆ ತೆಲಂಗಾಣ ಮತ್ತು ಆಂಧ್ರಪ್ರದೇಶದ ಗಡಿಗಳಲ್ಲಿ ಸ್ಥಳೀಯರು ಸೇಂದಿ ಕುಡಿದು ತಮ್ಮ ಆರೋಗ್ಯ ಹಾಳು ಮಾಡಿಕೊಳ್ಳುತ್ತಿರುವುದರಿಂದ ಅಂತಹ ಬೇಡಿಕೆ ಇರುವ ಕಡೆಗಳಲ್ಲಿ ಇಲಾಖೆಯ ಮಳಿಗೆಗಳನ್ನು ತೆರೆಯಬೇಕೆಂದು ಸಮಿತಿ ಸೂಚಿಸಿದೆ.

ಎಂಆರ್​ಪಿ ಮಳಿಗೆಗಳನ್ನು ತೆರೆಯುವ ಮತ್ತು ಸ್ಥಳಾಂತರಿಸುವ ಕುರಿತು ಸ್ಥಳೀಯ ಶಾಸಕರು ನೀಡುವ ಶಿಫಾರಸ್ಸಿನ ಆಧಾರದ ಮೇಲೆ ಕ್ರಮ ಕೈಗೊಳ್ಳಬೇಕೆಂದು ಸಮಿತಿಯು ಶಿಫಾರಸು ಮಾಡಿದೆ. ಸಂಸ್ಥೆಯಡಿ ನಡೆಯುತ್ತಿರುವ ಎಲ್ಲಾ ಘಟಕಗಳಲ್ಲಿ ಹೊರಗುತ್ತಿಗೆಯಲ್ಲಿ ಮಾನವ ಸಂಪನ್ಮೂಲ ಪಡೆಯುತ್ತಿದ್ದು, ಏಜೆನ್ಸಿಯವರಿಗೆ ಕಡ್ಡಾಯವಾಗಿ ಮೀಸಲಾತಿ ಅನುಸರಿಸಲು ಸೂಚಿಸಲು ಸಮಿತಿ ಶಿಫಾರಸು ಮಾಡಿದೆ.

ಬಡವರು ಹಾಗೂ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಜನಾಂಗದವರು ಯಾವ ಸ್ಥಳಗಳಲ್ಲಿ ಹೆಚ್ಚು ವಾಸಿಸುತ್ತಿದ್ದಾರೆಯೋ ಅಂತಹ ಸ್ಥಳಗಳಲ್ಲಿ ಕಡ್ಡಾಯವಾಗಿ ಜನಔಷಧ ಕೇಂದ್ರಗಳನ್ನು ತೆರೆಯಬೇಕೆಂದು ಸಮಿತಿಯು ಶಿಫಾರಸು ಮಾಡಿದೆ.

ಕಲ್ಲು ಗಣಿ ಅಥವಾ ಮರಳು ಗಣಿ ಹಂಚಿಕೆ ಮಾಡುವ ಸಂದರ್ಭದಲ್ಲಿ ಹೆಚ್ಚಿನ ಉತ್ಪನ್ನಗಳು ಸಿಗುವ ಬ್ಲಾಕ್​ಗಳಲ್ಲಿ ಇತರೆ ಸಮುದಾಯದವರಿಗೆ ನೀಡಿ ಕಡಿಮೆ ಪ್ರಮಾಣ ಲಭಿಸುವ ಬ್ಲಾಕ್​ಗಳನ್ನು ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಜನಾಂಗಕ್ಕೆ ಹಂಚಿಕೆ ಮಾಡಿ ಮೀಸಲಾತಿಯನ್ನು ನೀಡಲಾಗುತ್ತಿರುವುದನ್ನು ಗಮನಿಸಲಾಗಿದೆ. ಈ ರೀತಿಯ ತಾರತಮ್ಯವನ್ನು ಮಾಡುವುದು ಸಾಮಾಜಿಕ ನ್ಯಾಯದ ವಿರುದ್ಧ ಆಗಿರುವುದರಿಂದ ಕಡ್ಡಾಯವಾಗಿ ರೋಸ್ಟರ್ ಮಾದರಿಯಲ್ಲಿ ಹಂಚಿಕೆ ಮಾಡಬೇಕೆಂದು ಸಮಿತಿಯು ಶಿಫಾರಸ್ಸು ಮಾಡಿದೆ.

ಇಲಾಖೆಯಿಂದ ಗಣಿಗೆ ಸಂಬಂಧಿಸಿದ ಟೆಂಡರ್ ಮತ್ತು ಲೀಸ್ ಎರಡರಲ್ಲಿಯೂ ಕಡ್ಡಾಯವಾಗಿ ಮೀಸಲಾತಿಯನ್ನು ಅನುಸರಿಸಬೇಕು. ಇಲಾಖೆಯಲ್ಲಿ ಮುಂಬಡ್ತಿ ನೀಡುವಾಗ ಬ್ಯಾಕ್ ಲಾಗ್ ಹುದ್ದೆಗಳನ್ನು ಮೀಸಲಾತಿ ಬಿಂದುಗಳೊಂದಿಗೆ ಸೇರಿಸಿಕೊಳ್ಳದೇ, ಬ್ಯಾಕ್ ಲಾಗ್ ಮತ್ತು ಬಡ್ತಿ ಎರಡನ್ನು ನೀಡಬೇಕೆಂದು ಸಮಿತಿಯು ಶಿಫಾರಸ್ಸು ಮಾಡಿದೆ.

ಇದನ್ನೂ ಓದಿ: ಬೆಂಗಳೂರು: 110 ಗ್ರಾಮಗಳಿಗೆ ಮೇ ತಿಂಗಳ ವೇಳೆ ಕುಡಿಯಲು ಕಾವೇರಿ ನೀರು ಪೂರೈಕೆ: ಡಿಸಿಎಂ ಡಿಕೆ ಶಿವಕುಮಾರ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.