ETV Bharat / state

ಬಜೆಟ್​ ಭಾಷಣದಲ್ಲಿ ಕೇಂದ್ರ ಸರ್ಕಾರದ ವಿರುದ್ಧ ಟೀಕೆ ; ಕಾಂಗ್ರೆಸ್​ಗೆ ಪ್ರತಾಪ್ ಸಿಂಹ ನಾಯಕ್​ ತಿರುಗೇಟು

author img

By ETV Bharat Karnataka Team

Published : Feb 20, 2024, 4:56 PM IST

ಬಜೆಟ್​ನಲ್ಲಿ ಕೇಂದ್ರದ ಟೀಕೆಗೆ ಕಾಂಗ್ರೆಸ್​ಗೆ ಪ್ರತಾಪ್ ಸಿಂಹ ನಾಯಕ್​ ತಿರುಗೇಟು
ಬಜೆಟ್​ನಲ್ಲಿ ಕೇಂದ್ರದ ಟೀಕೆಗೆ ಕಾಂಗ್ರೆಸ್​ಗೆ ಪ್ರತಾಪ್ ಸಿಂಹ ನಾಯಕ್​ ತಿರುಗೇಟು

ಬಜೆಪ್​ ಪುಸ್ತಕದಲ್ಲಿ ಅನುದಾನ ವಿಚಾರದಲ್ಲಿ ಕೇಂದ್ರವನ್ನು ಟೀಕಿಸಿದ್ದ ಕಾಂಗ್ರೆಸ್ ಸರ್ಕಾರಕ್ಕೆ ಪ್ರತಾಪ್​ ಸಿಂಹ ನಾಯಕ್​ ತಿರುಗೇಟು ನೀಡಿದ್ದಾರೆ.

ಬೆಂಗಳೂರು: ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಗಳು ಎಲ್ಲರಿಗೂ ಅಗತ್ಯವಿಲ್ಲ, ಅವಶ್ಯಕತೆ ಇರುವವರಿಗೆ ಕೊಡಬೇಕಿತ್ತು ಎಂದು ಸರ್ಕಾರದ ಗ್ಯಾರಂಟಿ ಯೋಜನೆಗಳನ್ನು ಟೀಕಿಸುತ್ತಲೇ ಬಜೆಟ್ ಪುಸ್ತಕದಲ್ಲಿ ಅನುದಾನ ವಿಚಾರದಲ್ಲಿ ಕೇಂದ್ರವನ್ನು ಟೀಕಿಸಿದ್ದ ಕಾಂಗ್ರೆಸ್ ಸರ್ಕಾರಕ್ಕೆ ಬಿಜೆಪಿ ಸದಸ್ಯ ಪ್ರತಾಪ್ ಸಿಂಹ ನಾಯಕ ತಿರುಗೇಟು ನೀಡಿದರು.

ವಿಧಾನ ಪರಿಷತ್ ಕಲಾಪದಲ್ಲಿ ಬಜೆಟ್ ಮೇಲಿನ ಸಾಮಾನ್ಯ ಚರ್ಚೆಯಲ್ಲಿ ಮಾತನಾಡಿದ ಅವರು, ರಾಜ್ಯದ ಕಾಂಗ್ರೆಸ್ ನಾಯಕರು ಗ್ಯಾರಂಟಿ ಯೋಜನೆಗಳನ್ನು ಕೇಂದ್ರವನ್ನು ಕೇಳಿ ಮಾಡಿಲ್ಲ, ಈಗ ತಮಗೆ ಆಗುತ್ತಿರುವ ಆರ್ಥಿಕ ಭಾರಕ್ಕೆ ಕೇಂದ್ರದ ಕಡೆ ಬೆರಳು ತೋರುತ್ತಿದ್ದಾರೆ. ನಾವು ಗ್ಯಾರಂಟಿ ಯೋಜನೆಗಳ ವಿರೋಧಿಗಳಲ್ಲ, ಉಚಿತ ಅಕ್ಕಿ ಎಲ್ಲರಿಗೂ ಅಗತ್ಯವಿಲ್ಲ, ಅಗತ್ಯ ಇರುವವರಿಗೆ ನಿಜಕ್ಕೂ ಬೇಕು. ಅದೇ ರೀತಿ ಉಚಿತ ಬಸ್ ಪ್ರಯಾಣ, ಉಚಿತ ವಿದ್ಯುತ್, ಎರಡು ಸಾವಿರ ಹಣ ಎಲ್ಲರಿಗೂ ಬೇಡ. ಆದರೆ ಅವಶ್ಯಕತೆ ಇರುವವರಿಗೆ ಬೇಕು. ಹಾಗಾಗಿ ಯಾರಿಗೆ ಅಗತ್ಯವಿದೆಯೋ ಅವರಿಗೆ ಗ್ಯಾರಂಟಿ ಯೋಜನೆಗಳನ್ನು ಕೊಡಬೇಕಿತ್ತು. ಆದರೆ ಸರ್ಕಾರ ಎಲ್ಲರಿಗೂ ನೀಡಿದೆ ಎಂದರು.

ಅಕ್ಕಿ ಯಾರು ಕೊಡುತ್ತಾರೆ ಎಂದು ಜನರಿಗೆ ಗೊತ್ತಿರಲಿಲ್ಲ. ಇವರು ಬಂದ ನಂತರವೇ ಕೇಂದ್ರ ಉಚಿತ ಅಕ್ಕಿ ಕೊಡುತ್ತಿದೆ ಎನ್ನುವುದು ಜನರಿಗೆ ಗೊತ್ತಾಯಿತು. 10 ಕೆಜಿ ಉಚಿತ ಅಕ್ಕಿ ಎಂದು ಹೇಳಿ ನಂತರ ಕೇಂದ್ರದ ಐದು ಕೆಜಿ ಜೊತೆ ನಮ್ಮದು ಐದು ಕೆಜಿ ಎಂದರು. ಆದರೆ ಆ ಐದು ಕೆಜಿ ಕೊಡಲೂ ಆಗಿಲ್ಲ ಎಂದು ಟೀಕಿಸಿದರು.

ಮಾತೆತ್ತಿದರೆ ಕೇಂದ್ರ ಅನುದಾನ ಕೊಡಲಿಲ್ಲ, ಕೇಂದ್ರ ಹಣ ಕೊಡಲಿಲ್ಲ ಎನ್ನುತ್ತಾರೆ. 15ನೇ ಹಣಕಾಸು ಆಯೋಗ ಆದಾಗ ರಾಜ್ಯದಲ್ಲಿ ಇದ್ದದ್ದು, ಜೆಡಿಎಸ್ ಕಾಂಗ್ರೆಸ್ ಮೈತ್ರಿ ಸರ್ಕಾರ ಆಗ ಯಾಕೆ ನೀವು ಕೇಳಲಿಲ್ಲ. ಈಗ ಸಚಿವರಾದವರೇ ಐದಾರು ಪ್ರಬಲ ನಾಯಕರೇ ಅಂದೂ ಸಚಿವರಾಗಿದ್ದರು, ಅವರು ಯಾಕೆ ಮಾತನಾಡಿಲ್ಲ, ಹಣಕಾಸು ಆಯೋಗದ ಮಧ್ಯಂತರ ವರದಿಯನ್ನ ಮೊದಲ ವರದಿ ಎನ್ನುತ್ತಾರೆ. ಆದರೆ ಮೊದಲ ವರದಿ ಎನ್ನುವುದೇ ಇರಲ್ಲ, ಮಧ್ಯಂತರ ವರದಿಯಲ್ಲಿ ಅಭಿಪ್ರಾಯ ಇರಲಿದೆ. ಅಂತಿಮ ವರದಿಯಲ್ಲಿ ಅನುದಾನ ಶಿಫಾರಸು ಮಾಡಲಾಗಿರುತ್ತದೆ. ಇವರು ಮಧ್ಯಂತರ ವರದಿ ಉಲ್ಲೇಖಿಸಿ ಕೇಂದ್ರದಿಂದ ಅನ್ಯಾಯ ಎನ್ನುವ ಆರೋಪ ಮಾಡುತ್ತಾರೆ ಎಂದು ಚಾಟಿ ಬೀಸಿದರು.

ಭದ್ರಾ ಮೇಲ್ದಂಡೆ ಅನುದಾದ ವಿಚಾರ ಪ್ರಸ್ತಾಪ ಮಾಡುತ್ತಿದ್ದಂತೆ ಸಚಿವ ಶಿವಾನಂದ ಪಾಟೀಲ್ ಪಾಯಿಂಟ್ ಆಫ್ ಆರ್ಡರ್ ಎತ್ತಿದರು, ಈ ಹಿಂದೆ ಬೊಮ್ಮಾಯಿ ಅವರು ಬಜೆಟ್​ನಲ್ಲಿ ಭದ್ರಾ ಮೇಲ್ದಂಡೆ ಅನುದಾನದ ಕುರಿತು ಪ್ರಸ್ತಾಪಿಸಿದ್ದರು ಕೇಂದ್ರದಿಂದ ಅನುದಾನ ತರುವುದಾಗಿಯೂ ಹೇಳಿದ್ದರು. ಆದರೆ ಜಾರಿ ಮಾಡಿಲ್ಲವಲ್ಲ ಎಂದು ಪ್ರಸ್ತಾಪಿಸಿದರು ಇದಕ್ಕೆ ಸಚಿವ ಎಂಬಿ ಪಾಟೀಲ್ ಸಹಮತ ವ್ಯಕ್ತಪಡಿಸಿದರು. ಆದರೆ ಇದು ಪಾಯಿಂಟ್ ಆಫ್ ಆರ್ಡರ್ ವ್ಯಾಪ್ತಿಗೆ ಬರಲ್ಲ ಇದನ್ನು ನಂತರ ನೋಡೋಣ ಎನ್ನುತ್ತಾ ಉಪಸಭಾಪತಿ ಪ್ರಾಣೇಶ್ ಬಜೆಟ್ ಭಾಷಣ ಮುಂದುವರೆಸಲು ಸೂಚಿಸಿದರು.

ಬಜೆಟ್ ಮೇಲೆ ಮಾತು ಮುಂದುವರೆಸಿದ ಪ್ರತಾಪ್ ಸಿಂಹ ನಾಯಕ್, ರಾಜ್ಯ ಸರ್ಕಾರದಿಂದ ನಿರ್ವಹಿಸಬೇಕಾದ ಸಂಗತಿ ನಿರ್ವಹಿಸಿಲ್ಲ, ಎನ್ನುವುದನ್ನು ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ ಎನ್ನುವ ಆರೋಪ ಮಾಡಿದರು. ಇದಕ್ಕೆ ಆಡಳಿತ ಪಕ್ಷದ ಸದಸ್ಯರು ಆಕ್ಷೇಪಿಸಿದರು. ಇದಕ್ಕೆ ವಿಚಲಿತರಾಗದ ಸದಸ್ಯ ಪ್ರತಾಪ್ ಸಿಂಹ ನಾಯಕ್, ಇವರ ಸತ್ಯಕ್ಕೆ ದೂರವಾದ ಸಂಗತಿಯನ್ನು ಬಿಚ್ಚಿಡುತ್ತಿರುವುದನ್ನು ಜೀರ್ಣ ಮಾಡಿಕೊಳ್ಳಲಾಗದೆ ನನ್ನ ಮಾತಿನ ನಡುವೆ ಪ್ರವೇಶಿಸಿ, ಆಕ್ಷೇಪಿಸುತ್ತಿದ್ದಾರೆ. ನಾನು ಸತ್ಯಕ್ಕೆ ದೂರವಾದ ಮಾತು ಹೇಳಿದ್ದರೆ ಅವರ ಉತ್ತರದಲ್ಲಿ ನೀಡಲಿ ಎಂದರು.

ಕೋವಿಡ್ ವೇಳೆ ಕೇಂದ್ರ ತನ್ನ ಅನುದಾನವನ್ನು ಕೊಟ್ಟಿದೆ. ಯಾವುದೇ ಬಾಕಿ ಉಳಿಸಿಕೊಂಡಿಲ್ಲ, ಜಿಎಸ್​ಟಿ ಪರಿಹಾರದ ಹಣವನ್ನು ಸಾಲದ ರೂಪದಲ್ಲಿ ಕೊಡಿಸಿದೆ ಅದರ ಸಾಲ ಕೇಂದ್ರವೇ ತೀರಿಸಲಿದೆಯೇ ಹೊರತು ರಾಜ್ಯವಲ್ಲ, ಕೆಂಪೇಗೌಡ ಎರಡನೇ ಟರ್ಮಿನಲ್ ರಾಜ್ಯದಿಂದ ಆಯ್ತಾ? ಕೇಂದ್ರದಿಂದಲಾ? ರಾಷ್ಟ್ರೀಯ ಹೆದ್ದಾರಿ, ಬಂದರು, ವಿಮಾನ ನಿಲ್ದಾಣ ಯಾರು ಮಾಡಿದ್ದು? ಎಂದು ಕೇಂದ್ರದಿಂದ ಅನ್ಯಾಯ ಎನ್ನುವ ಕಾಂಗ್ರೆಸ್ ನಾಯಕರಿಗೆ ತಿರುಗೇಟು ನೀಡಿದರು.

ಗ್ಯಾರಂಟಿಗಳಿಗೆ ಜನರಲ್ಲಿ ವಿಶ್ವಾಸ ತುಂಬಿಸಲು ಕೊಟ್ಟ ಭರವಸೆ ಕ್ಯಾಪಿಟಲ್ ಎಕ್ಸ್​ಪೆಂಡಿಚರ್​ನಲ್ಲಿ ಬರಲಿದೆಯೋ ರೆವೆನ್ಯೂ ಎಕ್ಸ್ ಪೆಂಡಿಚರ್​ನಲ್ಲಿ ಬರಲಿದೆಯಾ? ಪ್ರತಿವರ್ಷ ರೆವಿನ್ಯೂ ಎಕ್ಸ್​ಪೆಂಡಿಚರ್ ನಲ್ಲಿಯೇ ಬರಲಿದೆ, ಇದಕ್ಕಾಗಿ 1,05,000 ಕೋಟಿ ಸಾಲ ಮಾಡಬೇಕಿದೆ ಇದನ್ನು ಯಾವುದಕ್ಕೆ ಬಳಸಲಾಗುತ್ತದೆ, ಕ್ಯಾಪಿಟಲ್ ಇನ್ವೆಸ್ಟ್​ಮೆಂಟ್​ಗೆ ಹಣ ಇಲ್ಲದಂತಾಗಿದೆ ಹಾಗಾಗಿ ಇದು ಅಭಿವೃದ್ಧಿ ಶೂನ್ಯ ಬಜೆಟ್, 15 ಬಜೆಟ್ ಕೊಟ್ಟವರ ಅನುಭವ ಇಲ್ಲಿ ಇಲ್ಲದೆ ರಾಜಕೀಯ ದೃಷ್ಟಿಕೋನದಿಂದ ಕೂಡಿದೆ ಎಂದು ಟೀಕಿಸಿದರು.

ಈ ವೇಳೆ ಮಾತನಾಡಿದ ಸಚಿವ ಎಂಬಿ ಪಾಟೀಲ್, ವಿಮಾನ ನಿಲ್ದಾಣ, ಮೆಟ್ರೋ, ರೈಲು, ಏರ್​ಪೋರ್ಟ್ ಟರ್ಮಿನಲ್​ನಲ್ಲಿ ರಾಜ್ಯದ ಪಾಲು ಇರಲಿದೆ. ಶೇ.75 ರಷ್ಟು ಹಣ ರಾಜ್ಯದ್ದಾಗಿರಲಿದೆ, ಮಂಗಳೂರು ವಿಮಾನ ನಿಲ್ದಾಣ ಅದಾನಿಗೆ ಕೊಡಲಾಗಿದೆ ಎಂದು ಟೀಕಿಸಿದರು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಪ್ರತಿಪಕ್ಷ ನಾಯಕ ಕೋಟಾ ಶ್ರೀನಿವಾಸ ಪೂಜಾರಿ, ಅದಾನಿಗೆ ಕೊಟ್ಟರೆ ವಿಮಾನ ನಿಲ್ದಾಣದಿಂದ ಹೋಗುವವರು ನಿಂತಿದ್ದಾರಾ?, ಹೋಗುವವರು ಹೋಗುತ್ತಿದ್ದಾರೆ, ಅದಕ್ಕೂ ನಮಗೂ ಏನು ಸಂಬಂಧ, ಶಿವಮೊಗ್ಗ ವಿಮಾನ ನಿಲ್ದಾಣ ಯಾರು ಮಾಡಿದ್ದು ನಾವಲ್ಲವೇ? ಎಂದರು.

ಇದಕ್ಕೆ ಉತ್ತರಿಸಿದ ಸಚಿವ ಎಂಬಿ ಪಾಟೀಲ್, ರಾಜ್ಯ ಸರ್ಕಾರದ್ದು ಎನ್ನುತ್ತಾ ಬಿಜೆಪಿಗೆ ಕ್ರೆಡಿಟ್ ಕೊಡಲು ನಿರಾಕರಿಸಿದರು. ಈ ವೇಳೆ ಮಾತಿಗೆ ಮಾತು ಬೆಳೆಯಿತು. ಆಗ ಮಧ್ಯಪ್ರವೇಶ ಮಾಡಿದ ಉಪ ಸಭಾಪತಿ ಪ್ರಾಣೇಶ್ ವಿಷಯಾಂತರ ಬೇಡ, ಉತ್ತರದ ವೇಳೆ ಸರ್ಕಾರದಿಂದ ವಿವರಣೆ ನೀಡಲಿ ಎಂದು ಸೂಚಿಸಿ ಚರ್ಚೆಗೆ ತೆರೆ ಎಳೆದರು.

ಇದನ್ನೂ ಓದಿ: ಸದನದಲ್ಲಿ ಹೆಚ್​ಡಿ ಕುಮಾರಸ್ವಾಮಿ ಬಿಜೆಪಿ ಪರ ವಕಾಲತ್ತು: ಸಿಎಂ ಸಿದ್ದರಾಮಯ್ಯ ತಿರುಗೇಟು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.