ETV Bharat / state

ತೀವ್ರಗೊಂಡ ಮಂಗನ ಕಾಯಿಲೆ: ಸಿದ್ದಾಪುರದಲ್ಲಿ ಮತ್ತೋರ್ವ ವೃದ್ಧೆ ಸಾವು

author img

By ETV Bharat Karnataka Team

Published : Feb 26, 2024, 3:26 PM IST

Updated : Feb 26, 2024, 10:56 PM IST

ಮಂಗನ ಕಾಯಿಲೆ
ಮಂಗನ ಕಾಯಿಲೆ

ಮಲೆನಾಡು ಭಾಗದಲ್ಲಿ ಭಯದ ವಾತಾವರಣ ಸೃಷ್ಟಿಸುತ್ತಿರುವ ಮಂಗನ ಕಾಯಿಲೆಯಿಂದ ಉತ್ತರ ಕನ್ನಡ ಜಿಲ್ಲೆಯಲ್ಲಿ ಮತ್ತೋರ್ವ ವೃದ್ಧೆ ಬಲಿಯಾಗಿದ್ದಾರೆ.

ಕಾರವಾರ (ಉತ್ತರಕನ್ನಡ ) : ಜಿಲ್ಲೆಯಲ್ಲಿ ಮಂಗನ ಕಾಯಿಲೆ (ಕೆಎಫ್​ಡಿ) ಹೆಚ್ಚಾಗಿದ್ದು, ಕಳೆದ 20 ದಿನಗಳ ಹಿಂದೆ ಜ್ವರಕ್ಕೆ ತುತ್ತಾಗಿದ್ದ ವೃದ್ಧೆ ಸೋಂಕಿನಿಂದ ಮೃತಪಟ್ಟಿದ್ದಾರೆ. ಈ ಮೂಲಕ ಮೃತರ ಸಂಖ್ಯೆ 2 ಕ್ಕೆ ಏರಿಕೆಯಾಗಿದೆ. ಮೃತರನ್ನು ಸಿದ್ದಾಪುರ ತಾಲೂಕಿನ ಕೂರ್ಲಕೈ ಗ್ರಾಮದ 60 ವರ್ಷದ ವೃದ್ಧೆ ಎಂದು ತಿಳಿದುಬಂದಿದೆ. ಇದಕ್ಕೂ ಮೊದಲು ಸಿದ್ದಾಪುರದ ಜಿಡ್ಡಿಯ 65 ವರ್ಷದ ವೃದ್ಧೆ ಮಂಗನ ಕಾಯಿಲೆಗೆ ಬಲಿಯಾಗಿದ್ದರು.

20 ದಿನಗಳ ಹಿಂದೆ ಮಂಗನ ಜ್ವರ ಕಾಣಿಸಿಕೊಂಡಿದ್ದು, ತೀವ್ರ ಜ್ವರದ ಲಕ್ಷಣಗಳಿಂದ ಬಳಲುತ್ತಿದ್ದರು. ಬಳಿಕ ಆಕೆಯನ್ನು ಸ್ಥಳೀಯ ಆಸ್ಪತ್ರೆಯಿಂದ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಿ ಮೂರು ದಿನಗಳಿಂದ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಭಾನುವಾರ ರಾತ್ರಿ ಮೃತಪಟ್ಟಿದ್ದಾರೆ. ಇನ್ನು ಸಿದ್ದಾಪುರ ತಾಲೂಕಿನಲ್ಲಿಯೇ ಮಂಗನ ಕಾಯಿಲೆಗೆ ತುತ್ತಾದ ಪ್ರಕರಣಗಳ ಸಂಖ್ಯೆ 43ಕ್ಕೆ ಏರಿಕೆಯಾಗಿದೆ.

ಸೋಂಕಿತ ಮಂಗನ ರಕ್ತ ಹೀರುವ ಉಣ್ಣೆಗಳು ಈ ವೈರಸ್​ ಅನ್ನು ಮನುಷ್ಯರಿಗೆ ತಗುಲಿಸಿದಾಗ ಮೂರು-ನಾಲ್ಕು ದಿನಗಳ ನಂತರ ಇದ್ದಕ್ಕಿದ್ದಂತೆ ಜ್ವರ, ದೃಷ್ಟಿದೋಷ, ತಲೆನೋವು, ಮಾನಸಿಕ ಅಸಮತೋಲನ, ಮೈ ಕೈ ನೋವು, ವಾಂತಿ, ಅತಿಸಾರ ಮತ್ತು ಪ್ಲೆಟ್ಲೇಟ್ ಸಂಖ್ಯೆಯಲ್ಲಿ ಇಳಿಕೆ ಮತ್ತು ಒಸಡಿನಲ್ಲಿನ ರಕ್ತಸ್ರಾವ ಹೀಗೆ ಆರಂಭಿಕ ರೋಗ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ. ಈವರೆಗೆ ಇದಕ್ಕೆ ನಿಖರ ಔಷಧಿ ಇಲ್ಲ. ಆದರೆ ಜಿಲ್ಲೆಯಲ್ಲಿ ಸದ್ಯ ಕಾಡಿನೊಂದಿಗೆ ಸಂಪರ್ಕ ಹೊಂದಿರುವ ಕೆಲ ಭಾಗದಲ್ಲಿ ಮತ್ತು ಮಂಗನ‌ ಕಾಯಿಲೆ ಕಾಣಿಸಿಕೊಂಡ ಪ್ರದೇಶದಲ್ಲಿ ತೈಲವನ್ನು ನೀಡಲಾಗುತ್ತಿದೆ.

ಮುನ್ನೆಚ್ಚರಿಕಾ ಕ್ರಮಗಳೇನು?: ಕಾಡು ಅಥವಾ ಇಂತಹ ಉಣ್ಣೆಗಳಿರುವ ಪ್ರದೇಶಕ್ಕೆ ಪ್ರವೇಶಿಸುವಾಗ ರಕ್ಷಣಾತ್ಮಕ ಬಟ್ಟೆಗಳನ್ನು ಅಥವಾ ಇಪಿಎ ಅನುಮೋದಿತ ನಿವಾರಕ ಬಳಕೆ ಸೂಕ್ತ. ಲಸಿಕೆ ಕೂಡ ಲಭ್ಯವಿದೆ. ಬೂಸ್ಟರ್​ ಡೋಸ್​ ಪಡೆಯಬಹುದು. ಸೋಂಕಿಗೆ ತುತ್ತಾದ ಒಂದೆರಡು ವಾರದಲ್ಲಿ ಚೇತರಿಕೆ ಕಾಣಬಹುದು. ಆದಾಗ್ಯೂ ಕೆಲವರಲ್ಲಿ ಮೂರು ವಾರಕ್ಕೂ ಹೆಚ್ಚು ಕಾಲ ಜ್ವರ, ಬ್ರೈನ್​ ಫಾಗಿಂಗ್‌ನಂತಹ ನರ ಸಮಸ್ಯೆ ಲಕ್ಷಣಗಳು ಕಾಣಿಸಿಕೊಳ್ಳಬಹುದು.

ಇದಕ್ಕೆ ನಿರ್ದಿಷ್ಟವಾದ ಚಿಕಿತ್ಸೆ ಇಲ್ಲ. ಹೀಗಾಗಿ ವೈದ್ಯರು ಸೋಂಕಿನ ಲಕ್ಷಣ ಆಧರಿಸಿ ಚಿಕಿತ್ಸೆ ನೀಡುತ್ತಾರೆ. ಹೈಡ್ರೇಟ್​ ಆಗಿರುವ ಜೊತೆಗೆ ಇತರೆ ಅಗತ್ಯ ಮುನ್ನೆಚ್ಚರಿಕೆ ವಹಿಸುವ ಮೂಲಕ ಹೆಮರಾಜಿಕ್ ರಕ್ತಸ್ರಾವವನ್ನು ನಿಯಂತ್ರಿಸಬಹುದು.

ಇದನ್ನೂ ಓದಿ : ಮಂಗನ ಕಾಯಿಲೆ ನಿಯಂತ್ರಣ ಕುರಿತು ಮಲೆನಾಡು ಶಾಸಕರೊಂದಿಗೆ ಸಚಿವ ಗುಂಡೂರಾವ್ ಸಭೆ

Last Updated :Feb 26, 2024, 10:56 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.