ETV Bharat / bharat

ಹವಾಮಾನ ಇಲಾಖೆಯಿಂದ ಸಿಹಿ ಸುದ್ದಿ! ಮೇ 31ಕ್ಕೆ ನೈರುತ್ಯ ಮುಂಗಾರು ಪ್ರವೇಶ; ವಾಡಿಕೆಗಿಂತ ಹೆಚ್ಚು ವರ್ಷಧಾರೆ ಸಾಧ್ಯತೆ - Southwest Monsoon

author img

By PTI

Published : May 16, 2024, 11:34 AM IST

ನೈರುತ್ಯ ಮುಂಗಾರು ಮೇ 31ಕ್ಕೆ ಕೇರಳ ಪ್ರವೇಶಿಸಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ನೈರುತ್ಯ ಮುಂಗಾರು
ನೈರುತ್ಯ ಮುಂಗಾರು (ANI)

ನವದೆಹಲಿ: ಕಳೆದ ವರ್ಷ ಮಳೆ ಕೊರತೆಯಿಂದ ಬರಗಾಲ ಎದುರಿಸುತ್ತಿರುವ ಜನರಿಗೆ ಹವಾಮಾನ ಇಲಾಖೆ ಸಿಹಿಸುದ್ದಿ ನೀಡಿದೆ. ಈ ಬಾರಿ ಮುಂಗಾರು ಮುಂಚಿತವಾಗಿಯೇ ಆಗಮಿಸಲಿದ್ದ ಸಮೃದ್ಧವಾಗಿ ಸುರಿಯಲಿದೆ ಎಂದು ಹೇಳಿದೆ.

ಭಾರತೀಯ ಹವಾಮಾನ ಇಲಾಖೆಯ ಪ್ರಕಾರ, ಈ ವರ್ಷ ಸಮಯಕ್ಕಿಂತ ಮುಂಚಿತವಾಗಿಯೇ ಮುಂಗಾರಿನ ಆಗಮನವಾಗಲಿದೆ. ನೈಋತ್ಯ ಮುಂಗಾರು ಮೇ 31ಕ್ಕೆ ಕೇರಳ ತಲುಪುವ ನಿರೀಕ್ಷೆಯಿದೆ. ಇದಕ್ಕೂ ಮುನ್ನ ಮೇ 19ರಂದು ಅಂಡಮಾನ್ ನಿಕೋಬಾರ್ ತಲುಪುವ ಸಾಧ್ಯತೆಯಿದೆ. ನಂತರ ದೇಶದ ಇತರ ಭಾಗಗಳತ್ತ ಸಾಗಲಿದೆ.

ಈ ಕುರಿತು ಬುಧವಾರ ರಾತ್ರಿ ಮಾಹಿತಿ ನೀಡಿರುವ ಇಲಾಖೆ, ಇದೇ 31ಕ್ಕೆ ಕೇರಳ ರಾಜ್ಯವನ್ನು ಮುಂಗಾರು ಪ್ರವೇಶಿಸಲಿದ್ದು, ನಾಲ್ಕು ದಿನ ಹೆಚ್ಚೂ ಕಡಿಮೆ ಆಗಬಹುದು. ಆದರೆ ಈ ಬಾರಿಯ ನಾಲ್ಕು ತಿಂಗಳ ಮಳೆಗಾಲ ಕೃಷಿ ಆಧಾರಿತ ಭಾರತದ ಆರ್ಥಿಕತೆಗೆ ಚೈತನ್ಯ ನೀಡಲಿದೆ ಎಂದು ಹೇಳಿದೆ.

ಆಗಸ್ಟ್-ಸೆಪ್ಟೆಂಬರ್ ತಿಂಗಳಲ್ಲಿ ವಾಡಿಕೆಗಿಂತ ಹೆಚ್ಚು ಮಳೆ: ಹವಾಮಾನ ಇಲಾಖೆಯ ಮಹಾನಿರ್ದೇಶಕ ಮೃತ್ಯುಂಜಯ ಮೊಹಾಪಾತ್ರ ಪ್ರತಿಕ್ರಿಯಿಸಿ, "ಕೇರಳದಲ್ಲಿ ಮಾನ್ಸೂನ್ ಪ್ರಾರಂಭವಾಗುವ ಸಾಮಾನ್ಯ ದಿನಾಂಕ ಜೂನ್ 1 ಆಗಿರುವುದರಿಂದ ಇದು ಆ ದಿನಕ್ಕೆ ಹತ್ತಿರವಾಗಿದೆ. ಅಲ್ಲದೇ ಈ ಬಾರಿ ಆಗಸ್ಟ್-ಸೆಪ್ಟೆಂಬರ್ ತಿಂಗಳಲ್ಲಿ ವಾಡಿಕೆಗಿಂತ ಹೆಚ್ಚು ಮಳೆ ದಾಖಲಾಗಬಹುದು ಎಂದು ಕಳೆದ ತಿಂಗಳು ನಮ್ಮ ಇಲಾಖೆ ಹೇಳಿತ್ತು. ಅದಕ್ಕೆ ಪೂರಕವಾಗಿ ಮುಂಗಾರು ಚಲನೆ ಕಂಡುಬಂದಿದೆ" ಎಂದು ತಿಳಿಸಿದ್ದಾರೆ.

ಕೇರಳದಲ್ಲಿ ಮುಂಗಾರು ಪ್ರವೇಶದ ಸಮಯವು ಕಳೆದ 150 ವರ್ಷಗಳಿಂದ ಬದಲಾಗುತ್ತಿದೆ. 1918ರಲ್ಲಿ ಮುಂಗಾರು ಮೇ 11ರಂದು ರಾಜ್ಯ ಪ್ರವೇಶಿಸಿತ್ತು. ನಂತರದಲ್ಲಿ 1972 ಜೂನ್ 18, 2020ರ ಜೂನ್ 1, 2021ರ ಜೂನ್ 3, 2022ರಲ್ಲಿ ಮೇ 29, ಕಳೆದ ವರ್ಷ ಜೂನ್ 8ರಂದು ಮುಂಗಾರು ಮಳೆಯ ಪ್ರವೇಶವಾಗಿತ್ತು. ಈ ಬಾರಿ ಮುಂಚಿತವಾಗಿಯೇ ಮುಂಗಾರಿನ ಆಗಮನದಿಂದ ಈ ವರ್ಷ ವಾಡಿಕೆಗಿಂತ ಹೆಚ್ಚಿನ ಮಳೆಯಾಗಲಿದೆ. ದೀರ್ಘಾವಧಿಯ ಸರಾಸರಿಗೆ ಹೋಲಿಸಿದರೆ ಈ ಋತುವಿನಲ್ಲಿ ಹೆಚ್ಚಿನ ಮಳೆಯನ್ನು ಭಾರತ ದಾಖಲಿಸುವ ಸಾಧ್ಯತೆ ಇದೆ. ವಾಯುವ್ಯ, ಪೂರ್ವ ಮತ್ತು ಈಶಾನ್ಯ ರಾಜ್ಯಗಳ ಕೆಲವು ಭಾಗಗಳನ್ನು ಹೊರತುಪಡಿಸಿ ದೇಶದ ಬಹುತೇಕ ಭಾಗಗಳಲ್ಲಿ ವಾಡಿಕೆಗಿಂತ ಹೆಚ್ಚಿನ ಮಳೆಯಾಗುವ ಸಾಧ್ಯತೆಯಿದೆ ಎಂದು ಇಲಾಖೆ ಹೇಳಿದೆ.

ಇದನ್ನೂ ಓದಿ: ಅರಬ್ಬಿ ಸಮುದ್ರದಲ್ಲಿ ವಾಯುಭಾರ ಕುಸಿತ: ರಾಜ್ಯದಲ್ಲಿ 5 ದಿನ ಮಳೆ ಮುನ್ಸೂಚನೆ - Karnataka Rain Forecast

ETV Bharat Logo

Copyright © 2024 Ushodaya Enterprises Pvt. Ltd., All Rights Reserved.