ETV Bharat / state

ರೈತನಿಗೆ ಪ್ರವೇಶ ನಿರಾಕರಣೆ ಪ್ರಕರಣ: ನಮ್ಮ ಮೆಟ್ರೋ, ರಾಜ್ಯ ಸರ್ಕಾರಕ್ಕೆ ಎನ್​ಹೆಚ್​ಆರ್​ಸಿ ನೋಟಿಸ್

author img

By ETV Bharat Karnataka Team

Published : Feb 29, 2024, 6:35 AM IST

metro
ಮೆಟ್ರೋ

ಕೊಳಕು ಬಟ್ಟೆ ಧರಿಸಿದ ರೈತನ ಪ್ರವೇಶಕ್ಕೆ ಅವಕಾಶ ನಿರಾಕರಿಸಿದ ಪ್ರಕರಣದ ಬಗ್ಗೆ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ ನೋಟಿಸ್ ಜಾರಿ ಮಾಡಿದೆ.

ಬೆಂಗಳೂರು: ರಾಜಾಜಿನಗರ ಮೆಟ್ರೋ ನಿಲ್ದಾಣದಲ್ಲಿ ಕೊಳಕು ಬಟ್ಟೆ ಧರಿಸಿದ ರೈತನ ಪ್ರವೇಶಕ್ಕೆ ಅವಕಾಶ ನಿರಾಕರಿಸಿ, ಅವಮಾನಿಸಿದ ಪ್ರಕರಣದ ಬಗ್ಗೆ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್​ಹೆಚ್​ಆರ್​ಸಿ) ನಮ್ಮ ಮೆಟ್ರೋ ಆಡಳಿತ ಮಂಡಳಿ ಮತ್ತು ರಾಜ್ಯ ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿದೆ.

ಮೆಟ್ರೋ ನಿಲ್ದಾಣದಲ್ಲಿ ರೈತನ ಪ್ರವೇಶ ನಿರಾಕರಿಸಿದ ಘಟನೆ ಬಗ್ಗೆ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗವು ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡಿದೆ. ಈ ಪ್ರಕರಣ ಮಾನವ ಹಕ್ಕುಗಳ ಸ್ಪಷ್ಟ ಉಲ್ಲಂಘನೆ ಎನ್ನುವ ಆರೋಪಗಳ ಹಿನ್ನೆಲೆಯಲ್ಲಿ ಎನ್​ಹೆಚ್​ಆರ್​ಸಿ ದೂರು ದಾಖಲು ಮಾಡಿಕೊಂಡು, ಪ್ರಕರಣದ ಬಗ್ಗೆ ವರದಿ ನೀಡುವಂತೆ ಬಿಎಂಆರ್​​ಸಿಎಲ್ ವ್ಯವಸ್ಥಾಪಕರಿಗೆ ಸೂಚಿಸಿದೆ.

ರಾಜಾಜಿನಗರದ ಮೆಟ್ರೋ ನಿಲ್ದಾಣದಲ್ಲಿ ಕಳೆದ ಸೋಮವಾರದಂದು ಘಟನೆ ನಡೆದಿತ್ತು. ಮೆಟ್ರೋ ರೈಲಿನತ್ತ ಪ್ರವೇಶಿಸಲು ರೈತ ಮುಂದಾದಾಗ ಅಲ್ಲಿನ ಸಿಬ್ಬಂದಿ ರೈತ ಕೊಳಕು ಉಡುಪು ಧರಿಸಿದ ಹಾಗೂ ಮಾಸಿದ ಬಟ್ಟೆಯ ಗಂಟು ಇರುವುದನ್ನು ಗಮನಿಸಿ, ರೈಲಿನ ರಕ್ಷಣಾ ಸಿಬ್ಬಂದಿ ಪ್ರವೇಶ ನಿರಾಕರಿಸಿದ್ದರು. ಈ ಪ್ರಕರಣ ಸಾಕಷ್ಟು ಸದ್ದು ಮಾಡಿತ್ತು. ಸಾಮಾಜಿಕ ಮಾಧ್ಯಮದಲ್ಲಿ ಸಾಕಷ್ಟು ಚರ್ಚೆಗೆ ಕಾರಣವಾಗಿತ್ತು.

ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ ಈ ಪ್ರಕರಣವನ್ನು ಗಮನಿಸಿ, ಮೆಟ್ರೋ ನಿಗಮಕ್ಕೆ ನೋಟಿಸ್ ನೀಡಿದೆ. ನಾಲ್ಕು ವಾರಗಳಲ್ಲಿ ಘಟನೆ ಕುರಿತು ವರದಿ ನೀಡುವಂತೆ ಸೂಚಿಸಲಾಗಿದೆ.

ಮೆಟ್ರೋದಿಂದ ತನಿಖೆ ಚುರುಕು: ರೈತನ ಪ್ರವೇಶ ನಿರಾಕರಣೆ ಪ್ರಕರಣದಲ್ಲಿ ವ್ಯಾಪಕ ಟೀಕೆಗಳು ವ್ಯಕ್ತವಾದಾಗ ಸಂಬಂಧಿತ ಸಿಬ್ಬಂದಿಯನ್ನು ಸೇವೆಯಿಂದ ವಜಾಗೊಳಿಸಿದ ಮೆಟ್ರೋ ಆಡಳಿತ ಮಂಡಳಿಯು ತಾಂತ್ರಿಕ ತಂಡದಿಂದ ತನಿಖೆ ಚುರುಕುಗೊಳಿಸಿದೆ. ಸದ್ಯದ ಮಾಹಿತಿ ಪ್ರಕಾರ ರೈತನಿಗೆ ಪ್ರವೇಶ ನಿರಾಕರಿಸಿದ್ದಿಲ್ಲ. ಟಿಕೆಟ್ ಇಲ್ಲದ್ದಕ್ಕೆ ಟಿಕೆಟ್ ತರುವಂತೆ ಸಿಬ್ಬಂದಿ ಸೂಚಿಸಿದ್ದರು ಎಂದು ಮೆಟ್ರೋ ಹಿರಿಯ ಅಧಿಕಾರಿ ಶಂಕರ್ ಅವರು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ. ಅಂತಿಮ ವರದಿ ಇನ್ನೂ ಕೈಸೇರಿಲ್ಲ, ಆಗ ಪ್ರಕರಣದ ಬಗ್ಗೆ ಸಂಪೂರ್ಣ ಮಾಹಿತಿ ಗೊತ್ತಾಗಲಿದೆ ಎಂದು ಅವರು ತಿಳಿಸಿದ್ದಾರೆ.

ಇದನ್ನೂ ಓದಿ: ಹಳೆ ಬಟ್ಟೆ ಹಾಕಿದ್ದಾನೆ ಎಂದು ರೈತನನ್ನು ತಡೆದ ಮೆಟ್ರೋ ಸಿಬ್ಬಂದಿ: ಸಾರ್ವಜನಿಕರಿಂದ ಆಕ್ರೋಶ, ಸಿಬ್ಬಂದಿ ವಜಾ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.