ETV Bharat / state

ಶೆಟ್ಟರ್ ಮತ್ತೆ ಬಿಜೆಪಿಗೆ ವಾಪಸ್ ಆಗಿರುವುದು ಅವರ ವೈಯಕ್ತಿಕ ನಿರ್ಧಾರ: ಸಂಸದ ವಿ ಶ್ರೀನಿವಾಸ್ ಪ್ರಸಾದ್

author img

By ETV Bharat Karnataka Team

Published : Jan 27, 2024, 7:47 AM IST

ಸಂಸದ ವಿ.ಶ್ರೀನಿವಾಸ್ ಪ್ರಸಾದ್
ಸಂಸದ ವಿ.ಶ್ರೀನಿವಾಸ್ ಪ್ರಸಾದ್

ಮಾಜಿ ಸಿಎಂ ಜಗದೀಶ್ ಶೆಟ್ಟರ್ ಅವರು ಮತ್ತೆ ಬಿಜೆಪಿಗೆ ಸೇರ್ಪಡೆಯಾಗಿರುವುದು ಪಕ್ಷಾಂತರ ಅಲ್ಲ ಎಂದು ಸಂಸದ ವಿ.ಶ್ರೀನಿವಾಸ್ ಪ್ರಸಾದ್ ತಿಳಿಸಿದ್ದಾರೆ.

ಸಂಸದ ವಿ.ಶ್ರೀನಿವಾಸ್ ಪ್ರಸಾದ್ ಹೇಳಿಕೆ

ಮೈಸೂರು : ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರು ಮತ್ತೆ ಬಿಜೆಪಿಗೆ ವಾಪಸ್ ಆಗಿರುವುದು, ಅವರ ವೈಯಕ್ತಿಕ ನಿರ್ಧಾರ ಎಂದು ಸಂಸದ ವಿ.ಶ್ರೀನಿವಾಸ್ ಪ್ರಸಾದ್ ಹೇಳಿದರು.

ನಗರದ ಜಯಲಕ್ಷ್ಮಿಪುರಂನಲ್ಲಿರುವ ತಮ್ಮ ನಿವಾಸದಲ್ಲಿ ಶುಕ್ರವಾರ ಮಾಧ್ಯಮದವರೊಂದಿಗೆ ಮಾತನಾಡಿದರು. ಜಗದೀಶ್ ಶೆಟ್ಟರ್ ಅವರದು ಪಕ್ಷಾಂತರ ಅಲ್ಲ. ಅವರು ಸಿಎಂ ಆಗಿದ್ದವರು ಯೋಚನೆ ಮಾಡಬೇಕಿತ್ತು. ಪಕ್ಷದಲ್ಲಿ ಎಲ್ಲವನ್ನು ಅನುಭವಿಸಿ ಟಿಕೆಟ್ ಕೊಡಲಿಲ್ಲ ಎಂದು ಕಾಂಗ್ರೆಸ್ ಸೇರಿದ್ದರು. ಕಾಂಗ್ರೆಸ್​ನವರು ಸ್ವಾಗತ ಮಾಡಿ ವಿಧಾನಸಭಾ ಚುನಾವಣೆಯಲ್ಲಿ ಟಿಕೆಟ್ ನೀಡಿದರು. ಚುನಾವಣೆಯಲ್ಲಿ ಸೋತರು ವಿಧಾನಪರಿಷತ್ ಸದಸ್ಯನ್ನಾಗಿ ಮಾಡಿದರು. ಪಕ್ಷದಲ್ಲಿ ನಿಷ್ಠೆಯಿಂದ ಇದ್ದರು. ಯಾರು ನನಗೆ ತೊಂದರೆ ಕೊಡಲಿಲ್ಲ ಎಂದು ಹೇಳಿದರು. ಬಿಜೆಪಿಯವರು ನನ್ನನ್ನ ಕರೆದರು. ರಾಷ್ಟ್ರ ನಿಷ್ಠೆಯಿಂದ ವಾಪಸ್ ಬಂದೆ ಅಂತ ಅವರೇ ಹೇಳಿದ್ದಾರೆ ಎಂದರು.

ನನ್ನದು 50 ವರ್ಷಗಳ ಹೋರಾಟದ ರಾಜಕಾರಣ : ಸುದೀರ್ಘವಾಗಿ ರಾಜಕಾರಣ ಮಾಡಿಕೊಂಡು ಬಂದಿದ್ದೇನೆ. ರಾಜಕಾರಣ ಅಂದರೆ ಸುಮ್ಮನೆ ಅಲ್ಲ. ರಾಜಕಾರಣ ಮಾಡಿ ಸಾಕಾಗಿದೆ. ಈಗ ವಿಶ್ರಾಂತಿಯ ಅವಶ್ಯಕತೆ ಇದೆ. ಕೇಂದ್ರ ಮತ್ತು ರಾಜ್ಯದ ಮಂತ್ರಿಯಾಗಿ ಕೆಲಸ ಮಾಡಿದ್ದೇನೆ. ಎಲ್ಲಾ ಪಕ್ಷಗಳಿಗೂ ದುಡಿದಿದ್ದೇನೆ. ನನ್ನದು ಹೋರಾಟದ ರಾಜಕಾರಣ. 1970 ರಲ್ಲಿ ನಾನು ರಾಜಕೀಯ ಪ್ರಾರಂಭ ಮಾಡಿದೆ. ಈ ವರ್ಷ ಮಾರ್ಚ್ 17ಕ್ಕೆ ರಾಜಕಾರಣಕ್ಕೆ ಬಂದು 50 ವರ್ಷವಾಗುತ್ತದೆ. ನನ್ನ 50 ವರ್ಷಗಳ ರಾಜಕೀಯ ಜೀವನದ ನೆನಪುಗಳ ಪುಸ್ತಕ ಬರೆದಿದ್ದೇನೆ. ಅಭಿನಂದನಾ ಗ್ರಂಥ ಬಿಡುಗಡೆ ಕಾರ್ಯಕ್ರಮ ಮಾಡಲಿದ್ದೇನೆ. ಅನೇಕರು ಲೇಖನಿಗಳನ್ನು ಬರೆದಿದ್ದಾರೆ. ಪಾರ್ಲಿಮೆಂಟ್​ನಲ್ಲಿ ನಾನು ಮಾತನಾಡಿರುವ ವಿಚಾರಗಳನ್ನು ಸಹ ಬರೆಯಲಾಗಿದೆ ಎಂದು ಶ್ರೀನಿವಾಸ್ ಪ್ರಸಾದ್ ರಾಜಕೀಯ ನಿವೃತ್ತಿ ಬಗ್ಗೆ ತಿಳಿಸಿದರು.

ಚಾಮರಾಜನಗರ ಜಿಲ್ಲೆಗೂ ನನಗೂ ಅವಿನಾಭಾವ ಸಂಬಂಧವಿದೆ. ಜನ ನನಗೆ ಸಾಕಷ್ಟು ಆಶೀರ್ವಾದ ಮಾಡಿದ್ದಾರೆ. ನಾನು ಯಾರಿಗೆ ಸಪೋರ್ಟ್ ಮಾಡಿದೆ, ಅವರೆಲ್ಲರೂ ಚುನಾವಣೆಯಲ್ಲಿ ಗೆದ್ದಿದ್ದಾರೆ. ಈ ಹಿಂದೆ ಧ್ರುವನಾರಾಯಣ್ ಅವರನ್ನು ನಾನೇ ಕ್ಯಾಂಡಿಡೇಟ್ ಮಾಡಿ ಗೆಲ್ಲಿಸಿದ್ದೆ ಎಂದು ಶ್ರೀನಿವಾಸ್ ಪ್ರಸಾದ್ ಸ್ಮರಿಸಿದರು.

ಸಂಸದರಿಗೆ ಪ್ರತಿ ವರ್ಷ 5ಕೋಟಿ ರೂ. ಅನುದಾನ ಬರುತ್ತದೆ. ಆದರೆ, ಕೋವಿಡ್ ಕಾರಣದಿಂದ ಎರಡು ವರ್ಷ ಅನುದಾನ ಬರಲಿಲ್ಲ. ನನ್ನ ಅವಧಿಯಲ್ಲಿ 17.50 ಕೋಟಿ ಅನುದಾನ ಬಿಡುಗಡೆಯಾಗಿದೆ. 137 ಕಾಮಗಾರಿಗಳಿಗೆ ಅನುದಾನ ಹಾಕಿದ್ದೆವು. ಯಾವ್ಯಾವ ಕ್ಷೇತ್ರಕ್ಕೆ ಎಷ್ಟು ಅನುದಾನ ಬಿಡುಗಡೆ ಮಾಡಿದೆವು ಎಂಬುದನ್ನ ಪರಿಶೀಲನೆ ಮಾಡಿದ್ದೇನೆ. ಕಾಮಗಾರಿ ಬಗ್ಗೆ ಅಧಿಕಾರಿಗಳ ಬಳಿ ಮಾಹಿತಿ ಪಡೆದಿದ್ದೇನೆ ಎಂದು ಶ್ರೀನಿವಾಸ್ ಪ್ರಸಾದ್ ವಿವರಿಸಿದರು.

ಇದನ್ನೂ ಓದಿ : ಚುನಾವಣೆಯಲ್ಲಿ ಶೆಟ್ಟರ್ ಸೋತರೂ ಎಂಎಲ್​ಸಿ ಮಾಡಿದ್ವಿ: ಸಚಿವ ಡಾ.ಶರಣಪ್ರಕಾಶ್ ಪಾಟೀಲ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.