ETV Bharat / state

ವಿಜಯಪುರ ಲೋಕಸಭಾ ಅಭ್ಯರ್ಥಿ ರಾಜು ಆಲಗೂರ ಪರ ಸಚಿವ ರಾಮಲಿಂಗಾರೆಡ್ಡಿ ಪ್ರಚಾರ - Ramalinga Reddy Press Meet

author img

By ETV Bharat Karnataka Team

Published : May 1, 2024, 1:19 PM IST

MINISTER RAMALINGA REDDY  CAMPAIGN FOR RAJU ALAGUR  VIJAYAPURA
ಸಚಿವ ರಾಮಲಿಂಗಾರೆಡ್ಡಿ ಹೇಳಿಕೆ

ಸಚಿವ ರಾಮಲಿಂಗಾರೆಡ್ಡಿ ಅವರು ವಿಜಯಪುರ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ರಾಜು ಆಲಗೂರ ಪರ ಪ್ರಚಾರ ನಡೆಸಿದರು.

ಸಚಿವ ರಾಮಲಿಂಗಾರೆಡ್ಡಿ ಹೇಳಿಕೆ

ವಿಜಯಪುರ: ಲೋಕಸಭಾ ಚುನಾವಣೆ ಹಿನ್ನೆಲೆ ಇಂದು ವಿಜಯಪುರ ಜಿಲ್ಲೆಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ರಾಜು ಆಲಗೂರ ಪರವಾಗಿ ಸಚಿವ ರಾಮಲಿಂಗಾರೆಡ್ಡಿ ಪ್ರಚಾರ ಕೈಗೊಂಡಿದ್ದಾರೆ. ಇದಕ್ಕೂ ಮುನ್ನ ವಿಜಯಪುರ ನಗರದ ಬಿಎಲ್‌ಡಿಈ ಸಂಸ್ಥೆಯ ಎನ್‌ಆರ್‌ಐ ಗೆಸ್ಟ್‌ಹೌಸ್​​ನಲ್ಲಿ ಸುದ್ದಿಗೋಷ್ಠಿ ನಡೆಸಿದ್ದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ‌ ಭಾಗದಲ್ಲಿ ಎಂಬಿ ಪಾಟೀಲ್ ಜಲ‌ಸಂಪನ್ಮೂಲ‌ ಸಚಿವರಾಗಿ ಉತ್ತಮ ಕೆಲಸ ಮಾಡಿದ್ದರು. ಈ ಭಾಗದಲ್ಲಿ ಅಭಿವೃದ್ಧಿಯಾಗಿದೆ. ಇದು ಲೋಕಸಭಾ ಚುನಾವಣೆಯಲ್ಲಿ ವಿಜಯಪುರ ಅಭ್ಯರ್ಥಿ ರಾಜೂ ಆಲಗೂರ ಗೆಲುವಿಗೆ ಅನುಕೂಲವಾಗುತ್ತದೆ ಎಂದರು.

ಕೇಂದ್ರದಿಂದ ಮಲತಾಯಿ ಧೋರಣೆ ಆಗುತ್ತಿದೆ. ಬರಗಾಲ ಘೋಷಣೆ ವಿಚಾರವಾಗಿ ಕೇಂದ್ರ ತಾರತಮ್ಯ ಮಾಡಿದೆ. ಏಳು ತಿಂಗಳಾದರೂ ಬರ ಪರಿಹಾರ ನೀಡಲಿಲ್ಲ. ಮೋದಿ ಮತ್ತು ಅಮಿತ್ ಶಾ ಅವರು ರಾಜ್ಯದ ಬಗ್ಗೆ ಅಸಡ್ಡೆ ಮಾಡುತ್ತಾರೆ ಎಂದರು.

ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಸೋತಿದ್ದೇ ಅವರಿಗೆ ಸಿಟ್ಟು. ಈ ಕೋಪವನ್ನು ರೈತರ ಮೇಲೆ ತೋರಿಸಿಕೊಳ್ಳುತ್ತಿದ್ದಾರೆ. 4.34 ಲಕ್ಷ ಕೋಟಿ ಟ್ಯಾಕ್ಸ್ ಕೇಂದ್ರಕ್ಕೆ ರಾಜ್ಯದಿಂದ ಕಟ್ಟುತ್ತೇವೆ. ಆದರೆ, ರೂಪಾಯಿಯಲ್ಲಿ 13 ಪೈಸೆ ಮಾತ್ರ ಬರುತ್ತಿದೆ. ಈ ವಿಚಾರ ಸಿಎಂ ಜನರಿಗೆ ತಿಳಿಸಿದರು. ಕೇಂದ್ರಕ್ಕೆ ಮನವಿ ಪತ್ರ ಸಲ್ಲಿಸಿ ಭೇಟಿ ಮಾಡಿದರೂ ಹಣ ರಾಜ್ಯಕ್ಕೆ ನೀಡಿಲ್ಲ. ಉತ್ತರ ಭಾರತದ ರಾಜ್ಯಗಳಿಗೆ ಹೆಚ್ಚು ಹಣ ನೀಡುತ್ತಾರೆ. 44,000 ಕೋಟಿ ನಮ್ಮ ರಾಜ್ಯಕ್ಕೆ ನೀಡುತ್ತಾರೆ. ಉತ್ತರ ಭಾಗದ ರಾಜ್ಯಗಳಿಗೆ ಹೆಚ್ಚು ಹಣ ಬಿಡುಗಡೆ ಮಾಡುತ್ತಾರೆ ಎಂದು ವಾಗ್ದಾಳಿ ನಡೆಸಿದರು.

ಮುಂದುವರೆದು ಮಾತನಾಡುತ್ತಾ, ಹತ್ತು ವರ್ಷದಿಂದ ಮೋದಿ ಸುಳ್ಳು ಹೇಳುತ್ತಿದ್ದಾರೆ ಎಂದು ಚಿಕ್ಕ ಮಕ್ಕಳಿಗೆ ಸಹ ಗೊತ್ತಾಗಿದೆ. ಕೃಷ್ಣಾ ನದಿ ನೀರಿನ ಗೆಜೆಟ್ ಮಾಡಿಲ್ಲ. ಬರ ಸೇರಿದಂತೆ ಟ್ಯಾಕ್ಸ್ ಅನುಪಾತ ತಾರತಮ್ಯ ಮಾಡುತ್ತಿದೆ. ಈ‌ ವಿಚಾರವನ್ನು ರಾಜ್ಯದ ಸಂಸದರು ಮಾತನಾಡಲ್ಲ. ಬಿಜೆಪಿ ಸರ್ಕಾರ ಇದ್ದಾಗ ಕೇಂದ್ರದ ಮೇಲೆ ಹಣಕ್ಕೆ ಒತ್ತಾಯ ಮಾಡಿಲ್ಲ ಕೇಳಿಲ್ಲ. ಟ್ಯಾಕ್ಸ್ ಹಣ ಕೊಟ್ಟಿದ್ದರೆ ಜನರಿಗೆ ಅನುಕೂಲವಾಗುತ್ತಿತ್ತು. ಆದರೆ‌ ಜನರಿಗೆ ಅನುಕೂಲ ಕೇಂದ್ರ ಮಾಡಿಲ್ಲ. ರಾಜ್ಯದ ಸಂಸದರು ಮೌನವಾಗಿದ್ದಾರೆ. ಇಂಥ ಸಂಸದರು‌ ನಮಗೆ ಬೇಕಿಲ್ಲ. ಹಾಗಾಗಿ‌ ಕಾಂಗ್ರೆಸ್​ನ ಹೆಚ್ವು ಸಂಸದರು ಲೋಕಸಭೆಗೆ ಆಯ್ಕೆಯಾಗಬೇಕು. ವಿಜಯಪುರ ಅಭ್ಯರ್ಥಿ ರಾಜೂ ಆಲಗೂರ ಗೆಲ್ಲಬೇಕು ಎಂದು ಸಚಿವ ರಾಮಲಿಂಗಾರೆಡ್ಡಿ ವಿಜಯಪುರದಲ್ಲಿ ಮಾತನಾಡಿದರು.

ಸಿಎಂ ಪುತ್ರ ದಿ. ರಾಕೇಶ ಮೃತಪಟ್ಟಾಗ ಮೋದಿ ಸಹಾಯ ಮಾಡಿದ್ದಾರೆ ಎಂದು ಹೆಚ್​ಡಿ ಕುಮಾರಸ್ವಾಮಿ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಅಂಥದ್ದೇನು ದಾಖಲೆ ಇದ್ದರೆ ಕೊಡಿ. ಸಿಎಂ ಅವರು ಪ್ರಧಾನಿ ಮೋದಿ ಅವರ ಸಹಾಯ ಪಡೆದಿಲ್ಲ. ಆ ವೇಳೆ, ನಾನೇ ಸಿಎಂ ಜೊತೆಗಿದ್ದೆ. ಇಂಥ ಆರೋಪ‌ ರಾಜಕೀಯದಲ್ಲಿ ಸಹಜ ಎಂದರು.

ಇನ್ನು ರಾಜ್ಯದ ಹಿತದ ದೃಷ್ಟಿಯಿಂದ ಬಿಜೆಪಿಯ ಎಲ್ಲ ಅಭ್ಯರ್ಥಿಗಳು ಸೋಲಬೇಕು. ಹುಬ್ಬಳ್ಳಿ ನೇಹಾ ಕೊಲೆ ಪ್ರಕರಣದಂತೆ ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋ ವಿಚಾರದಲ್ಲಿ ಬಿಜೆಪಿಯವರು ಪ್ರತಿರೋಧ ಮಾಡಿಲ್ಲ ಎಂಬ ವಿಚಾರವಾಗಿ ಮಾತನಾಡುತ್ತಾ, ಬಿಜೆಪಿಯವರು ಮಹಿಳಾ ವಿರೋಧಿಗಳು. ಬಿಜೆಪಿಯವರು ಮಹಿಳೆಯರಿಗೆ ಯಾವುದೇ ಶಿಕ್ಷಣ ಕೊಟ್ಟಿಲ್ಲ. ಮಾತೃ ಶಕ್ತಿ ಎನ್ನುವ ಕೇಂದ್ರ ಗೃಹ ಸಚಿವ ಅಮೀತ್ ಶಾ ಅವರು ಮಣಿಪುರದ ‌ಮಹಿಳೆಯರ ಮೇಲೆ ಅತ್ಯಾಚಾರ ಆದಾಗ ಮಾತನಾಡಿಲ್ಲ. ಉತ್ತರ ಪ್ರದೇಶದಲ್ಲಿ ಒಬ್ಬರು ತಪ್ಪು ಮಾಡಿದರೆ ಬುಲ್ಡೋಜರ್​ನಿಂದ ಮನೆ ಒಡೆಯುತ್ತಾರೆ. ಯುಪಿಯಲ್ಲಿ ಎಂಪಿಯನ್ನು ಗುಂಡಿಕ್ಕಿ ಕೊಂದರು. ಈ‌ ವಿಚಾರದಲ್ಲಿ ಅಮೀತ್ ಶಾ ಬಾಯಿ ಬಿಡಲಿಲ್ಲ. ದೆಹಲಿಯಲ್ಲಿ ರೈತರ ಹೋರಾಟದಲ್ಲಿ 700 ಜನ ರೈತರು ಮೃತಪಟ್ಟರು. ಆಗಲೂ ಮಾತನಾಡಲಿಲ್ಲ. ಪ್ರಜ್ವಲ್ ರೇವಣ್ಣ ರೀತಿ ಕಾಂಗ್ರೆಸ್​ನಲ್ಲಿ ಯಾರಾದ್ರೂ ಮಾಡಿದ್ರೆ ಬಿಜೆಪಿಯವರು ಬೊಬ್ಬೆ ಹೊಡೆಯುತ್ತಿದ್ದರು ಎಂದು ವಾಗ್ದಾಳಿ ನಡೆಸಿದರು.

ಅಶ್ಲೀಲ ವಿಡಿಯೋಗಳನ್ನು ಡಿಕೆ ಶಿವಕುಮಾರ ಬಿಡುಗಡೆ ಮಾಡಿದ್ದಾರೆ ಎಂಬ ಆರೋಪ ವಿಚಾರವಾಗಿ ಪ್ರತಿಕ್ರಿಯಿಸುತ್ತಾ, ಡಿ.ಕೆ.ಶಿವಕುಮಾರ ಹೆಸರು‌ ಹೇಳದಿದ್ದರೆ ಕೆಲವರಿಗೆ ನಿದ್ದೇ ಬರಲ್ಲ. ಡಿಕೆಶಿ ಹೆಸರನ್ನು ನೂರು ಬಾರಿ, ನೂರು ವಿಚಾರಗಳಲ್ಲಿ ಹೇಳುತ್ತಾರೆ. ಜಾರಕಿಹೋಳಿ ವಿಚಾರದಲ್ಲಿಯೂ ಡಿಕೆಶಿ ಹೆಸರು ಹೇಳಿದ್ದರು ಎಂದರು.

ರಾಜ್ಯದಲ್ಲಿ ಬಾಂಬ್ ಸ್ಫೋಟವಾಗಿದ್ದರ ಕುರಿತು ಸರ್ಕಾರದ ಮೇಲೆ ಮೋದಿ ಆರೋಪ ವಿಚಾರವಾಗಿ ಮಾತನಾಡುತ್ತಾ, 2008 ರಲ್ಲಿ ಸಿಎಂ ಯಡಿಯೂರಪ್ಪ ಇದ್ದಾಗ ಕಂಠೀರವ ಸ್ಟುಡಿಯೋ ಬಳಿ ಬಾಂಬ್ ಸ್ಪೋಟವಾಗಿತ್ತು. 2010ರಲ್ಲಿ ಸರಣಿ ಬಾಂಬ್ ಸ್ಪೋಟವಾಗಿತ್ತು. 2013 ಮಲ್ಲೇಶ್ವರಂನಲ್ಲಿ ಜಗದೀಶ್ ಶೆಟ್ಟರ್ ಸಿಎಂ ಆಗಿದ್ದಾಗ ಸ್ಪೋಟವಾಗಿತ್ತು. 2020 ರಲ್ಲಿ ಯಡಿಯೂರಪ್ಪ ಸಿಎಂ ಆಗಿದ್ದಾಗ ಬಾಂಬ್ ಬ್ಲಾಸ್ಟ್ ಆಗಿತ್ತು. 2022 ರಲ್ಲಿ ಬೊಮ್ಮಾಯಿ ಸಿಎಂ ಆಗಿದ್ದಾಗ ಆಗಿತ್ತು. 2024 ರಲ್ಲಿ ಬೆಂಗಳೂರಿನಲ್ಲಿ ರಾಮೇಶ್ವರ ಕೆಫೆ ಬ್ಲಾಸ್ಟ್ ಆಗಿದೆ. ಈಗ ಮೋದಿ ಯಾರ ಅಧಿಕಾರದಲ್ಲಿ ಹೆಚ್ಚು ಸ್ಪೋಟ ಆಗಿದೆ ಎಂದು ಹೇಳಲಿ‌ ಅಂತಾ ಸಚಿವ ರಾಮಲಿಂಗಾರೆಡ್ಡಿ ಸವಾಲು ಹಾಕಿದರು.

ಮೋದಿಯಷ್ಟು ಸುಳ್ಳು ಹೇಳೋ ವ್ಯಕ್ತಿ ಜಗತ್ತಲ್ಲೇ ಇಲ್ಲ. ಮೋದಿ ಕಾರ್ಯಕ್ರಮಕ್ಕೆ ಜನರೇ ಬರುತ್ತಿಲ್ಲ. ಖಾಲಿ ಖುರ್ಚಿಗಳು ಇರುತ್ತವೆ. ಬೆಂಗಳೂರಿಗೆ ಬಂದರೆ ಇವರು ಜನರನ್ನು ಕರೆದುಕೊಂಡು ಬರುತ್ತಾರೆ. ಮೋದಿಗೆ ಮೊದಲಿನಷ್ಟು ಜನಪ್ರಿಯತೆ ಇಲ್ಲ. ಜನರಿಗೆ ಮೋದಿ ಮೋಸ ಮಾಡುತ್ತಿದ್ದಾರೆ. ಬಿಜೆಪಿಗೆ 200 ಸ್ಥಾನಗಳು ಮಾತ್ರ ಬರುತ್ತವೆ ಎಂದರು.

ಇನ್ನು ರಾಜ್ಯದ ಗ್ಯಾರಂಟಿ ಯೋಜನೆಗಳಲ್ಲೊಂದಾದ ಶಕ್ತಿ ಯೋಜನೆಯಲ್ಲಿ 200 ಕೋಟಿ ಮಹಿಳೆಯರು ಪ್ರಯಾಣ ಮಾಡಿದ್ದಾರೆ. ಬಸ್​ನಲ್ಲಿ ಹೆಚ್ವಿನ ಮಹಿಳಾ ಪ್ರಯಾಣಿಕರು ಓಡಾಡುತ್ತಿದ್ದಾರೆ. 5,800 ಹೊಸ ಬಸ್​ಗಳನ್ನು ಖರೀದಿ ಮಾಡುತ್ತೇವೆ. ಇದರಿಂದ ಬಸ್​ನಲ್ಲಿನ ರಷ್ ಕಡಿಮೆಯಾಗಲಿದೆ ಎಂದರು.

ಇನ್ನು 5,200 ಕೋಟಿ ಸಾರಿಗೆ ಇಲಾಖೆ ಮೇಲೆ ಬಿಜೆಪಿ ಸಾಲ‌ ಇಟ್ಟಿದ್ದರು. ಆ ಕಾರಣ ಸಾರಿಗೆ ಇಲಾಖೆ ಸಿಬ್ಬಂದಿಗಳಿಗೆ ಅರಿಯರ್ಸ್ ಕೊಟ್ಟಿಲ್ಲ. ಮುಂದಿನ‌ ದಿನಗಳಲ್ಲಿ ಅರಿಯರ್ಸ್ ಕೊಡಲಾಗುತ್ತದೆ ಎಂದು ವಿಜಯಪುರ ನಗರದಲ್ಲಿ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಹೇಳಿದರು.

ಓದಿ: ಲೋಕಸಮರ: ಕಾರ್ಯಚಟುವಟಿಕೆ ಇಲ್ಲದೆ ವಿಧಾನಸೌಧ ಬಿಕೋ; ನೀತಿ ಸಂಹಿತೆ ಸಡಿಲಿಕೆಗೆ ಮನವಿಗೆ ಚಿಂತನೆ - Vidhana Soudha

ETV Bharat Logo

Copyright © 2024 Ushodaya Enterprises Pvt. Ltd., All Rights Reserved.