ETV Bharat / state

ಮೇ 25, 26ರಂದು ಕುದುರೆ ರೇಸ್​ ನಡೆಸುವ ಕುರಿತ ನಿರ್ಧಾರ ತಿಳಿಸಲು ಸರ್ಕಾರಕ್ಕೆ ಹೈಕೋರ್ಟ್ ಸೂಚನೆ - High Court

author img

By ETV Bharat Karnataka Team

Published : May 21, 2024, 10:53 PM IST

ಬೆಂಗಳೂರು ಟರ್ಫ್‌ ಕ್ಲಬ್‌ ಮೇ.25 ಮತ್ತು 26ರಂದು ಕುದುರೆ ರೇಸ್​ ನಡೆಸಲು ಷರತ್ತುಬದ್ಧ ಅನುಮತಿ ನೀಡುವ ಸಂಬಂಧ ನಿಲುವು ತಿಳಿಸುವಂತೆ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್‌ ಸೂಚನೆ ನೀಡಿದೆ.

ಮೇ 25, 26ರಂದು ಕುದುರೆ ರೇಸ್​ ನಡೆಸುವ ಕುರಿತ ನಿರ್ಧಾರ ತಿಳಿಸಲು ಸರ್ಕಾರಕ್ಕೆ ಹೈಕೋರ್ಟ್ ಸೂಚನೆ
ಮೇ 25, 26ರಂದು ಕುದುರೆ ರೇಸ್​ ನಡೆಸುವ ಕುರಿತ ನಿರ್ಧಾರ ತಿಳಿಸಲು ಸರ್ಕಾರಕ್ಕೆ ಹೈಕೋರ್ಟ್ ಸೂಚನೆ (ETV Bharat)

ಬೆಂಗಳೂರು: ಬೆಂಗಳೂರು ಟರ್ಫ್‌ ಕ್ಲಬ್‌(ರೇಸ್ ಕೋರ್ಸ್)ನಲ್ಲಿ ಮೇ.25 ಮತ್ತು 26ರಂದು ಕುದುರೆ ರೇಸ್​ ನಡೆಸಲು ಷರತ್ತುಬದ್ಧ ಅನುಮತಿ ನೀಡುವ ಸಂಬಂಧ ನಿಲುವು ತಿಳಿಸುವಂತೆ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್‌ ಸೂಚನೆ ನೀಡಿದೆ. ಕುದುರೆ ರೇಸಿಂಗ್​ ಆಯೋಜಿಸಲು ಪರವಾನಗಿ ನವೀಕರಣ ಮಾಡುವಂತೆ ಕೋರಿ ಬೆಂಗಳೂರು ಟರ್ಫ್ ಕ್ಲಬ್, ಕುದುರೆ ಮಾಲೀಕರ ಸಂಘ ಹೈಕೋರ್ಟ್​ಗೆ ತಕರಾರು ಅರ್ಜಿ ಸಲ್ಲಿಸಿತ್ತು. ಈ ಅರ್ಜಿಗಳ ವಿಚಾರಣೆಯನ್ನು ನ್ಯಾಯಮೂರ್ತಿ ಎಂಜಿಎಸ್‌ ಕಮಲ್‌ ಅವರ ರಜಾಕಾಲದ ಪೀಠ ನಡೆಸಿತು.

ಅಲ್ಲದೆ, ಪರವಾನಗಿ ನವೀಕರಣಕ್ಕೆ ಕೋರಿ ಸಲ್ಲಿಸಿರುವ ಮನವಿಯನ್ನು ರಾಜ್ಯ ಸರ್ಕಾರ ಈವರೆಗೂ ಪರಿಗಣಿಸಿಲ್ಲ ಮತ್ತು ಮನವಿ ಪರಿಗಣಿಸದೇ ಇರುವುದಕ್ಕೆ ಯಾವುದೇ ಕಾರಣ ತಿಳಿಸಿಲ್ಲ. ಈಗಾಗಲೇ ಮೇ 18, 23, 25 ಮತ್ತು 26 ರಂದು ರೇಸಿಂಗ್‌ ಇರುವುದಾಗಿ ವೇಳಾಪಟ್ಟಿ ಪ್ರಕಟಿಸಲಾಗಿದೆ. 800 ಕುದುರೆಗಳಿದ್ದು, ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ 20 ಸಾವಿರ ಜನರು ಜೀವನೋಪಾಯ ರೇಸಿಂಗ್‌ ಚಟುವಟಿಕೆಯ ಮೇಲೆ ಅವಲಂಬಿಸಿದೆ ಎಂಬುದಾಗಿ ರ್ಟರ್ಫ್‌ ಕ್ಲಬ್‌ ಮತ್ತು ಕುದುರೆ ಮಾಲೀಕರ ಪರ ವಕೀಲರು ಮಂಡಿಸಿದ ವಾದವನ್ನು ಗಂಭೀರವಾಗಿ ಪರಿಗಣಿಸಿದ ನ್ಯಾಯಮೂರ್ತಿಗಳು ಸರ್ಕಾರಕ್ಕೆ ಈ ಸೂಚನೆ ನೀಡಿತು.

ಅಲ್ಲದೆ, ಈಗಾಗಲೇ ಮೇ.25 ಮತ್ತು 26ರಂದು ರೇಸಿಂಗಿಗೆ ವೇಳಾಪಟ್ಟಿ ಪ್ರಕಟಿಸಲಾಗಿದೆ. ಸಾಕಷ್ಟು ಜನರ ಜೀವನೋಪಾಯ ರೇಸಿಂಗ್‌ ಚಟುವಟಿಕೆ ಮೇಲೆ ಅವಲಂಬಿಸಿದೆ. ಹಾಗಾಗಿ, ಮೇ 25 ಮತ್ತು 26 ರಂದು ರೇಸಿಂಗ್‌ ಚಟುವಟಿಕೆಗೆ ಷರತ್ತುಬದ್ಧ ಅನುಮತಿ ನೀಡುವ ಸಂಬಂಧ ಸರ್ಕಾರ ಕೆಲವೊಂದು ಪ್ರಸ್ತಾವನೆ ಹಾಗೂ ಸೂಚನೆಗಳೊಂದಿಗೆ ಗುರುವಾರ (ಮೇ 23) ನ್ಯಾಯಾಲಯಕ್ಕೆ ಉತ್ತರಿಸಬೇಕು. ಯಾವ್ಯಾವ ಷರತ್ತುಗಳನ್ನು ವಿಧಿಸಬೇಕು ಎಂಬ ಸರ್ಕಾರ ಚರ್ಚಿಸಿ ನಿರ್ಧಾರ ತೆಗೆದುಕೊಳ್ಳಬಹುದು. ನಂತರ ಪರವಾನಗಿ ನವೀಕರಣಕ್ಕೆ ಕೋರಿರುವ ಅರ್ಜಿಯನ್ನು ಪರಿಗಣಿಸುವ ಅಥವಾ ಪರಿಗಣಿಸದೇ ಇರುವ ಬಗ್ಗೆ ಸರ್ಕಾರ ತೀರ್ಮಾನಿಸಲಿ ಎಂದು ಸೂಚಿಸಿದ ಪೀಠ, ಅರ್ಜಿ ವಿಚಾರಣೆಯನ್ನು ಮೇ 23ಕ್ಕೆ ಮುಂದೂಡಿದೆ.

ಇದಕ್ಕೂ ಮುನ್ನ ರಾಜ್ಯ ಸರ್ಕಾರದ ಪರ ಅಡ್ವೋಕೇಟ್‌ ಜನರಲ್‌ ಹಾಜರಾಗಿ, ಕುದುರೆ ರೇಸಿಂಗ್​ ಮತ್ತು ಬೆಟ್ಟಿಂಗ್ ನಿಂದಾಗಿ ನಗರದಲ್ಲಿ ನೂರಾರು ಆಟೋ ಚಾಲಕರು ಸೇರಿದಂತೆ ಬಡ ಜನತೆ ಹಣ ಕಳೆದು ಕೊಳ್ಳುತ್ತಿದ್ದಾರೆ. ರ್ಟಫ್‌ ಕ್ಲಬ್‌ ಅವರ ಮನವಿ ಪರಿಗಣಿಸಲು ಆರು ಅಥವಾ ನಾಲ್ಕು ವಾರ ಕಾಲಾವಕಾಶ ನೀಡಬೇಕು. ರೇಸಿಂಗ್‌ ಚುಟುವಟಿಕೆಗೆ ಮಧ್ಯಂತರ ಅನುಮತಿ ನೀಡುವ ಬದಲು ಕ್ಲಬ್‌ ಸಲ್ಲಿಸುರುವ ಇಡೀ ಮನವಿ ಪರಿಗಣಿಸಿ ನಿರ್ಧಾರ ಪ್ರಕಟಿಸಲಾಗುವುದು ಎಂದು ತಿಳಿಸಿದರು. ಅದಕ್ಕೆ ಒಪ್ಪದ ನ್ಯಾಯಪೀಠ, ಪರವಾನಗಿ ನವೀಕರಣದ ಕುರಿತು ನಂತರ ಸರ್ಕಾರ ತೀರ್ಮಾನ ಕೈಗೊಳ್ಳಲಿ. ಆದರೆ, ಮೇ 25 ಮ್ತು 26ರಂದು ಷರತ್ತು ಬದ್ಧ ಅನುಮತಿ ನೀಡಿ. ಅದಕ್ಕೆ ಯಾವ ಷರತ್ತು ವಿಧಿಸಬೇಕು ಎಂಬುದು ಸರ್ಕಾರ ತೀರ್ಮಾನಿಸಬಹುದು ಎಂದು ಮೌಖಿಕವಾಗಿ ಸೂಚನೆ ನೀಡಿತು.

ವಿಚಾರಣೆ ವೇಳೆ ಟರ್ಫ್‌ಕ್ಲಬ್‌ ಮತ್ತು ಕುದುರೆ ಮಾಲೀಕರ ಪರ ವಕೀಲರು ವಾದ ಮಂಡಿಸಿ, ಮಾರ್ಚ್‌ ಕೊನೆಯವರೆಗೂ ರೇಸಿಂಗ್‌ ಚಟುವಟಿಕೆ ನಡೆಸಲು ಕ್ಲಬ್‌ ಪರವಾನಗಿ ಹೊಂದಿತ್ತು. ನಂತರ ಪರವಾನಗಿ ನವೀಕರಣಕ್ಕೆ ಕೋರಿ ಮನವಿ ಪತ್ರ ಸಲ್ಲಿಸಲಾಗಿದೆ. ಮೇ , ಜೂನ್‌ ಮತ್ತು ಜುಲೈ ತಿಂಗಳಲ್ಲಿ ಆನ್‌ಲೈನ್‌ ಹಾಗೂ ಆಫ್​ಲೈನ್‌ ರೇಸಿಂಗ್‌ ಚಟುವಟಿಕೆ ನಡೆಸಲು ಅನುಮತಿ ಕೋರಿ ಸರ್ಕಾರ ಮತ್ತು ಮುಖ್ಯಮಂತ್ರಿಗಳಿಗೆ ಹಲವು ಮನವಿ ಸಲ್ಲಿಸಲಾಗಿದೆ.

ಆದರೆ, ಸರ್ಕಾರ ಈವರೆಗೂ ತಮ್ಮ ಮನವಿಯನ್ನು ಪರಿಗಣಿಸಿಲ್ಲ. ಇದರಿಂದ ರೇಸ್‌ ಚಟುವಟಿಕೆ ನಡೆಸಲಾಗುತ್ತಿಲ್ಲ. ಮತ್ತೊಂದೆಡೆ ಅದರಿಂದ ಬರುವ ಆದಾಯವೂ ನಷ್ಟವಾಗುತ್ತಿದೆ. ಸದ್ಯಕ್ಕೆ ಸುಮಾರು 10 ಕೋಟಿ ರು. ನಷ್ಟ ಉಂಟಾಗಿದೆ. ಟರ್ಫ್‌ ಕ್ಲಬ್‌ನಲ್ಲಿ 800 ಕುದುರೆಗಳಿವೆ. ಅವುಗಳ ನಿರ್ವಹಣೆ ಮಾಡಬೇಕಿದೆ. ಇನ್ನೂ ಕ್ಲಬ್‌ನಲ್ಲಿ ನೂರಾರು ಮಂದಿ ಕೆಲಸಗಾರರು ಇದ್ದಾರೆ. ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ 20 ಸಾವಿರ ಜನರ ಜೀವನೋಪಾಯವು ರೇಸಿಂಗ್‌ ಚಟುವಟಿಕೆ ಮೇಲೆ ಅಲಂಬಿಸಿದೆ. ಹೀಗಿದ್ದರೂ ಸರ್ಕಾರ ಮಾತ್ರ ಕ್ಲಬ್‌ನ ಮನವಿ ಪರಿಗಣಿಸುತ್ತಿಲ್ಲ ಎಂದು ನ್ಯಾಯಪೀಠದ ಗಮನಕ್ಕೆ ತಂದರು.

ಇದನ್ನೂ ಓದಿ: ವಾಹನಗಳಿಗೆ ಹೆಚ್ಎಸ್ಆರ್​ಪಿ ಪ್ಲೇಟ್ ಅಳವಡಿಕೆ: ಜೂನ್ 12ರವರೆಗೆ ವಿನಾಯ್ತಿ - HSRP Plate installation

ETV Bharat Logo

Copyright © 2024 Ushodaya Enterprises Pvt. Ltd., All Rights Reserved.