ETV Bharat / state

ಲೋಕಸಮರ: ಕಾರ್ಯಚಟುವಟಿಕೆ ಇಲ್ಲದೆ ವಿಧಾನಸೌಧ ಬಿಕೋ; ನೀತಿ ಸಂಹಿತೆ ಸಡಿಲಿಕೆಗೆ ಮನವಿಗೆ ಚಿಂತನೆ - Vidhana Soudha

author img

By ETV Bharat Karnataka Team

Published : May 1, 2024, 7:40 AM IST

Updated : May 1, 2024, 9:41 AM IST

vidhana-soudha
ಲೋಕಸಮರ: ಕಾರ್ಯಚಟುವಟಿಕೆ ಇಲ್ಲದೆ ವಿಧಾನಸೌಧ ಬಿಕೋ; ನೀತಿ ಸಂಹಿತೆ ಸಡಿಲಿಕೆಗೆ ಮನವಿಗೆ ಚಿಂತನೆ

ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಯಾವುದೇ ಕಾರ್ಯಚಟುವಟಿಕೆ ಇರದೇ ವಿಧಾನಸೌಧವು ಖಾಲಿ ಖಾಲಿಯಾಗಿ ಕಂಡು ಬರುತ್ತಿದೆ.

ಲೋಕಸಮರ: ಕಾರ್ಯಚಟುವಟಿಕೆ ಇಲ್ಲದೆ ವಿಧಾನಸೌಧ ಬಿಕೋ

ಬೆಂಗಳೂರು: ಲೋಕಸಭೆ ಚುನಾವಣೆ ಘೋಷಣೆ ಆದಾಗಿನಿಂದ ರಾಜಕೀಯ ಅಖಾಡ ರಂಗೇರಿದೆ. ಬಿರು ಬಿಸಿಲಿನಲ್ಲಿಯೂ ರಾಜಕೀಯ ಪಕ್ಷಗಳಿಂದ ಅಬ್ಬರದ ಪ್ರಚಾರ ನಡೆಯುತ್ತಿದೆ. ಇತ್ತ ಶಕ್ತಿಸೌಧ ಕಾರ್ಯಚಟುವಟಿಕೆಗಳಿಲ್ಲದೇ ಕಳೆದ ಒಂದೂವರೆ ತಿಂಗಳಿಂದ ಬಹುತೇಕ ಸ್ತಬ್ಧವಾಗಿದ್ದು, ಬಿಕೋ ಅನ್ನುತ್ತಿದೆ.

ಈಗಾಗಲೇ ರಾಜ್ಯದಲ್ಲಿ ಮೊದಲ ಹಂತದ 14 ಕ್ಷೇತ್ರಗಳ ಚುನಾವಣೆ ಮುಗಿದಿದ್ದು, ಎರಡನೇ ಹಂತದ ಉಳಿದ 14 ಕ್ಷೇತ್ರಗಳ ಚುನಾವಣೆಗೆ ದಿನಗಣನೆ ಆರಂಭವಾಗಿದೆ. ಇಡೀ ಸರ್ಕಾರ, ಪ್ರತಿಪಕ್ಷಗಳು ಚುನಾವಣಾ ಮೂಡ್​​ನಲ್ಲಿವೆ. ಆದರೆ, ನೀತಿ ಸಂಹಿತೆ ಜಾರಿಯಲ್ಲಿರುವ ಹಿನ್ನೆಲೆ ರಾಜ್ಯದಲ್ಲಿ ಆಡಳಿತ ಯಂತ್ರ ಚುರುಕು ಕಳೆದುಕೊಂಡಿದೆ. ಚುನಾವಣೆ ದಿನಾಂಕ ಘೋಷಣೆಯಾದ ಬೆನ್ನಲ್ಲೇ ನೀತಿ ಸಂಹಿತೆ ಜಾರಿಯಾಗಿದ್ದು, ಸರ್ಕಾರದ ಕಾರ್ಯಚಟುವಟಿಕೆ ಬಹುತೇಕ ಸ್ಥಗಿತವಾಗಿದೆ.

ಮಾರ್ಚ್ 16ಕ್ಕೆ ಚುನಾವಣಾ ಆಯೋಗ ಲೋಕಸಭೆ ಚುನಾವಣೆಯ ದಿನಾಂಕ ಘೋಷಣೆ ಮಾಡಿತು. ಘೋಷಣೆ ಬೆನ್ನಲ್ಲೇ ನೀತಿ ಸಂಹಿತೆ ಜಾರಿಯಾಗಿದ್ದು, ಜೂನ್ 4ರವರೆಗೆ ಇರಲಿದೆ.‌ ಅದರಂತೆ, ರಾಜ್ಯದಲ್ಲಿ ಎರಡು ಹಂತದಲ್ಲಿ ಚುನಾವಣೆ ದಿನಾಂಕ ಘೋಷಣೆಯಾಗಿದೆ. ಏಪ್ರಿಲ್​ 26 ಮತ್ತು ಮೇ 7ರಂದು ಚುನಾವಣೆ ದಿನಾಂಕ ಘೋಷಣೆಯಾಗಿದೆ. ಮೊದಲ ಹಂತದ ಮತದಾನ ಮುಗಿದು, ಇದೀಗ ಎರಡನೇ ಹಂತದ ಮತದಾನಕ್ಕೆ ಕೌಂಟ್ ಡೌನ್ ಆರಂಭವಾಗಿದೆ.

ನೀತಿ ಸಂಹಿತೆ ಜಾರಿಯಿಂದ ಆಡಳಿತ ಪಕ್ಷಕ್ಕೆ ಆಡಳಿತದಲ್ಲಿ ನಿರ್ಬಂಧ ಹೇರಲಾಗುತ್ತದೆ. ಹಾಗೆಯೇ ಆಡಳಿತ ಯಂತ್ರ ಚುರುಕು ಕಳೆದುಕೊಳ್ಳುತ್ತದೆ. ಅದರ ಪರಿಣಾಮ ಮಾರ್ಚ್ 16ರಿಂದ ರಾಜ್ಯದ ಶಕ್ತಿ ಕೇಂದ್ರ ವಿಧಾನಸೌಧ, ವಿಕಾಸಸೌಧದಲ್ಲಿ ಕಾರ್ಯಚಟುವಟಿಕೆ ಗೌಣವಾಗಿದೆ. ಸಚಿವರು, ಸಿಎಂಗೆ ನೀತಿ ಸಂಹಿತೆಯ ನಿರ್ಬಂಧ ಇರುವುದರಿಂದ ಯಾವುದೇ ಸರ್ಕಾರಿ ತೀರ್ಮಾನ ತೆಗೆದುಕೊಳ್ಳುವ ಹಾಗಿಲ್ಲ. ವಿಧಾನಸೌಧದಲ್ಲಿ ಸಚಿವರುಗಳು ಇಲ್ಲದೇ ಇರುವುದರಿಂದ ಸಾರ್ವಜನಿಕರಿಲ್ಲದೆ ಶಕ್ತಿಸೌಧ ಬಿಕೋ ಅನ್ನುತ್ತಿದೆ.

ನೀತಿ ಸಂಹಿತೆ ಬಳಿಕ ಮಾರ್ಚ್ 16ರಿಂದ ಸಚಿವ ಸಂಪುಟ ಸಭೆಗಳು ನಡೆದಿಲ್ಲ. ಕೆಡಿಪಿ ಸಭೆಯನ್ನೂ ನಡೆಸಿಲ್ಲ. ಯಾವುದೇ ನೀತಿ ರೂಪಿಸುವ, ಪ್ರಗತಿ ಪರಿಶೀಲನೆಯ ಸಭೆಗಳೂ ನಡೆಯುತ್ತಿಲ್ಲ. ಹೀಗಾಗಿ, ಆಡಳಿತ ಕೇಂದ್ರ ಸಚಿವಾಲಯದಲ್ಲಿ ಕಾರ್ಯಚಟುವಟಿಕೆ ಬಹುತೇಕ ಸ್ಥಗಿತವಾಗಿದೆ. ಜೂನ್ 4ಕ್ಕೆ ಲೋಕಸಭೆ ಫಲಿತಾಂಶ ಹೊರಬೀಳುವ ತನಕ ನೀತಿ ಸಂಹಿತೆ ಜಾರಿಯಲ್ಲಿರಲಿದೆ. ಅದರರ್ಥ ಇನ್ನೂ ಒಂದು ತಿಂಗಳು ನೀತಿ ಸಂಹಿತೆ ಮುಕ್ತಾಯಕ್ಕೆ ಕಾಯಬೇಕಾಗಿದೆ. ಅಲ್ಲಿಯವರೆಗೂ ಆಡಳಿತ ಯಂತ್ರ ಗತಿ ಕಳೆದುಕೊಳ್ಳಲಿದೆ.

ನೀತಿ ಸಂಹಿತೆ ಸಡಿಲಿಕೆಗೆ ಮನವಿ ಸಾಧ್ಯತೆ: ಇದರಿಂದ ಜನರಿಗೆ ಸಮಸ್ಯೆಯಾಗುವ ಸಾಧ್ಯತೆ ಹೆಚ್ಚಿದ್ದು, ಆಡಳಿತ ಯಂತ್ರಕ್ಕೆ ಸ್ವಲ್ಪ ಚುರುಕು ನೀಡಿ, ಬಜೆಟ್ ಘೋಷಣೆ ಅನುಷ್ಠಾನ, ಬರ ನಿರ್ವಹಣೆ, ಪರಿಹಾರ ಬಿಡುಗಡೆ ಸೇರಿ ಸಚಿವ ಸಂಪುಟ ಸಭೆ ನಡೆಸಿ ಅಗತ್ಯ ತೀರ್ಮಾನಗಳನ್ನು ಕೈಗೊಳ್ಳಲು ಅನುವು ಮಾಡಿಕೊಡುವಂತೆ ಚುನಾವಣಾ ಆಯೋಗಕ್ಕೆ ರಾಜ್ಯ ಸರ್ಕಾರ ಪತ್ರ ಬರೆಯುವ ಸಾಧ್ಯತೆ ಇದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ನೀತಿ ಸಂಹಿತೆ ಸಡಿಲಿಸುವಂತೆ ಕೋರಿ ಚುನಾವಣಾ ಆಯೋಗಕ್ಕೆ ಪತ್ರ ಬರೆಯುವ ಚಿಂತನೆಯಲ್ಲೂ ಸರ್ಕಾರ ಇದೆ ಎಂದು ಮೂಲಗಳು ತಿಳಿಸಿವೆ.

ಇದನ್ನೂ ಓದಿ: ಯುಜಿಸಿಇಟಿ-24 ಕೀ ಉತ್ತರ ಪ್ರಕಟ: ಆಕ್ಷೇಪಣೆ ಸಲ್ಲಿಸಲು ಮೇ 7ರವರೆಗೆ ಕಾಲಾವಕಾಶ - UGCET Answer Key

Last Updated :May 1, 2024, 9:41 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.