ETV Bharat / state

ಕಾರವಾರದಲ್ಲಿ ಮಾಘ ಚತುರ್ಥಿ ಸಂಭ್ರಮ: ಚತುರ್ಥಿಯಂತೆ ಗಣಪತಿ ಪ್ರತಿಷ್ಠಾಪಿಸಿ ಸಂಭ್ರಮಾಚರಣೆ

author img

By ETV Bharat Karnataka Team

Published : Feb 14, 2024, 9:35 AM IST

magha-chaturthi-celebrations-in-karwar
ಕಾರವಾರದಲ್ಲಿ ಮಾಘ ಚತುರ್ಥಿ ಸಂಭ್ರಮ: ಚತುರ್ಥಿಯಂತೆ ಗಣಪತಿ ಪ್ರತಿಷ್ಠಾಪಿಸಿ ಸಂಭ್ರಮಾಚರಣೆ

ಕಾರವಾರದಲ್ಲಿ ಮಂಗಳವಾರ ಮಾಘ ಚೌತಿ ಹಬ್ಬದ ಸಂಭ್ರಮ ಮನೆಮಾಡಿತ್ತು. ಜನರು ಗಣೇಶನಿಗೆ ವಿಶೇಷ ಪೂಜೆ ಸಲ್ಲಿಸಿದರು.

ಮಾಘ ಚತುರ್ಥಿ

ಕಾರವಾರ: ಗಣೇಶ ಚತುರ್ಥಿ ಸಂದರ್ಭದಲ್ಲಿ ಗಣಪತಿ ಮೂರ್ತಿಗಳನ್ನಿಟ್ಟು ಪೂಜೆ ಮಾಡುವುದು ಸಾಮಾನ್ಯ. ಈಗಾಗಲೇ ಚೌತಿ ಹಬ್ಬ ಮುಗಿದು ಐದಾರು ತಿಂಗಳುಗಳೇ ಕಳೆದಿವೆ. ಮತ್ತೆ ಗಜಮುಖನ ಹಬ್ಬ ಬರಲು ಇನ್ನೂ ಕೆಲ ತಿಂಗಳುಗಳು ಇವೆ. ಆದರೆ, ಕರಾವಳಿ ನಗರಿ ಕಾರವಾರದಲ್ಲಿ ಮಂಗಳವಾರ ಮನೆಗಳಲ್ಲಿ ಹಾಗೂ ಸಾರ್ವಜನಿಕವಾಗಿ ಗಣಪತಿ ಮೂರ್ತಿಯನ್ನಿಟ್ಟು ವಿಶೇಷವಾಗಿ ಪೂಜೆ ಸಲ್ಲಿಸಲಾಯಿತು.

ಮಾಘ ಚೌತಿ ಹಿನ್ನೆಲೆ ಕಾರವಾರಿಗರು ನಿನ್ನೆ ಸಂಭ್ರಮದಿಂದ ಗಣೇಶ ಹಬ್ಬ ಆಚರಿಸಿದರು. ಗಣಪತಿ ಹುಟ್ಟಿದ ದಿನ ಎಂದೇ ಹೇಳಲಾಗುವ ಮಾಘ ಚೌತಿಯಂದು ಗಣೇಶ ಚತುರ್ಥಿ ಮಾದರಿಯಲ್ಲಿಯೇ ದೇವರ ಮೂರ್ತಿಯನ್ನಿಟ್ಟು ಪೂಜೆ ಸಲ್ಲಿಸುವ ಸಂಪ್ರದಾಯ ಕಾರವಾರ ತಾಲೂಕಿನಲ್ಲಿ ಹಿಂದಿನಿಂದಲೂ ನಡೆದುಕೊಂಡು ಬಂದಿದೆ. ಅಂದು ಪ್ರತಿಷ್ಠಾಪಿಸುವ ಮೂರ್ತಿಯನ್ನು ಹರಕೆ ಗಣಪತಿ ಎಂದು ಹೇಳಲಾಗುತ್ತದೆ. ಇಷ್ಟಾರ್ಥಗಳ ಈಡೇರಿಕೆಗಾಗಿ ಹರಕೆ ಹೊತ್ತವರು ಹಾಗೂ ಗಣೇಶ ಚತುರ್ಥಿಯ ಸಮಯದಲ್ಲಿ ನಾನಾ ಕಾರಣಗಳಿಂದ ಮೂರ್ತಿ ಪ್ರತಿಷ್ಠಾಪಿಸಲು ಸಾಧ್ಯವಾಗದಿರುವವರೂ ಸಹ ಈ ದಿನದಂದು ವಿಘ್ನವಿನಾಶಕನ ಮೂರ್ತಿಯನ್ನಿಟ್ಟು ಪೂಜೆ ಮಾಡುತ್ತಾರೆ.

ಜೊತೆಗೆ, ಚತುರ್ಥಿ ವೇಳೆ ಪ್ರತಿವರ್ಷ ಸತತವಾಗಿ ಮೂರ್ತಿಯನ್ನಿಟ್ಟು ಪೂಜೆ ಮಾಡಲು ಸಾಧ್ಯವಾಗದವರು ಮನೆಗಳಲ್ಲಿ ಗಣಪತಿ ಮೂರ್ತಿ ಪ್ರತಿಷ್ಠಾಪಿಸಿ ಪೂಜಿಸುತ್ತಾರೆ. ಮೂರ್ತಿಯನ್ನು ತಂದು ಪೂಜೆ ಸಲ್ಲಿಸಿ, ಒಂದೇ ದಿನ ಇರಿಸಿ ರಾತ್ರಿಯ ವೇಳೆಗೆ ನಿಮಜ್ಜನ ಮಾಡಲಾಗುತ್ತದೆ. ಈ ಮೂಲಕ ಮಾಘ ಚತುರ್ಥಿಯನ್ನೂ ಸಹ ವಿಜೃಂಭಣೆಯಿಂದ ಆಚರಿಸಲಾಗುತ್ತದೆ.

ಸಾರ್ವಜನಿಕ ಗಣಪತಿ: ಮಾಘ ಚೌತಿಯನ್ನು ಹೆಚ್ಚಾಗಿ ಮಹಾರಾಷ್ಟ್ರ, ಗೋವಾದಲ್ಲಿ ಆಚರಿಸುತ್ತಾರೆ. ಕಾರವಾರವು ಗೋವಾ ಗಡಿಯಾಗಿರುವುದರಿಂದ ಜೊತೆಗೆ ಮಹಾರಾಷ್ಟ್ರದ ಸಂಸ್ಕೃತಿ ಇಲ್ಲಿಯೂ ರೂಢಿಯಲ್ಲಿದೆ. ಈ ಸಂದರ್ಭದಲ್ಲಿ ಹೆಚ್ಚಿನದಾಗಿ ಮನೆಗಳಲ್ಲಿ ಮಾತ್ರ ಗಣೇಶನನ್ನು ಸ್ಥಾಪಿಸಲಾಗುತ್ತದೆ. ಆದರೆ, ಕಾರವಾರ ತಾಲೂಕಿನ ಮಾಜಾಳಿ ರಾಮನಾಥ ಮೊಂಡಾದಲ್ಲಿ ಕಳೆದ‌ 19 ವರ್ಷಗಳಿಂದಲೂ ಈ ಮಾಘ ಚೌತಿಯಂದು ಸಾರ್ವಜನಿಕವಾಗಿ ಗಣಪತಿ ಮೂರ್ತಿ ಇಟ್ಟು ಪೂಜೆ ಸಲ್ಲಿಸಲಾಗುತ್ತದೆ.

''ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿಯೇ ಹಾದುಹೋಗಿರುವ ಈ ಪ್ರದೇಶದಲ್ಲಿ ಈ ಹಿಂದೆ ಹೆಚ್ಚಿನ ಅಪಘಾತಗಳು ಆಗುತ್ತಿತ್ತು. ಕೊನೆಗೆ ಊರಿನ ಹಿರಿಯರು ಎಲ್ಲರೂ ಸೇರಿ ಈ ಪ್ರದೇಶದ ದೇವರ ಕಟ್ಟೆ ಬಳಿಯೇ ಮಾಘ ಚತುರ್ಥಿಯಂದು ಪೂಜೆ ಸಲ್ಲಿಸಲು ತೀರ್ಮಾನಿಸಿದ್ದರು. ಸಾರ್ವಜನಿಕವಾಗಿ ತಾಲೂಕಿನಲ್ಲಿ ಇದೊಂದೆಡೆ ಮಾತ್ರ ಮೂರ್ತಿ ಇಟ್ಟು ಪೂಜೆ ಸಲ್ಲಿಸುತ್ತಿದ್ದು, ಸುತ್ತಮುತ್ತಲಿನ ಊರಿನವರು ಬಂದು ಹರಕೆ ಕಟ್ಟಿಕೊಂಡು ಗಣಪತಿಗೆ ಪೂಜೆ ಸಲ್ಲಿಸಿ ತೆರಳುತ್ತಾರೆ'' ಎನ್ನುತ್ತಾರೆ ಸ್ಥಳೀಯರಾದ ಬಾಬುರಾವ್ ಸಾವಂತ ಅವರು.

ಇದನ್ನೂ ಓದಿ: ಸುತ್ತೂರು ಜಾತ್ರೆ; ಅದ್ಧೂರಿಯಾಗಿ ನೆರವೇರಿದ ರಥೋತ್ಸವ - ವಿಡಿಯೋ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.