ETV Bharat / state

ಚಿಕ್ಕಮಗಳೂರು: ಜಾತ್ರೆಗೆಂದು ಊರಿಗೆ ಬಂದ ಪತ್ನಿಯನ್ನು ಹೊಡೆದು ಕೊಂದ ಪತಿ - Husband Kills Wife

author img

By ETV Bharat Karnataka Team

Published : May 1, 2024, 10:28 PM IST

Updated : May 1, 2024, 11:03 PM IST

Etv Bharat
Etv Bharat

ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ತಾಲೂಕಿನಲ್ಲಿ ಪತಿಯೋರ್ವ ತನ್ನ ಪತ್ನಿಯನ್ನೇ ಹೊಡೆದು ಕೊಲೆ ಮಾಡಿದ್ದಾನೆ.

ಎಸ್​ಪಿ ವಿಕ್ರಂ ಅಮಟೆ

ಚಿಕ್ಕಮಗಳೂರು: ಕೌಟುಂಬಿಕ ಕಲಹ ಮತ್ತು ಸಂಶಯದ ಕಾರಣದಿಂದ ಪತ್ನಿಯನ್ನೇ ಪತಿಯೋರ್ವ ಕೊಲೆ ಮಾಡಿರುವ ಘಟನೆ ಜಿಲ್ಲೆಯ ತರೀಕೆರೆ ತಾಲೂಕಿನ ಗಡಿ ಗ್ರಾಮವಾದ ಕರಕುಚ್ಚಿ ಎ.ಕಾಲೊನಿಯಲ್ಲಿ ನಡೆದಿದೆ. ಮೇಘನಾ ಹತ್ಯೆಯಾದ ಮಹಿಳೆ. ಆರೋಪಿ ಚರಣ್ ಮತ್ತು ಈತನ ತಾಯಿಯನ್ನು ಪೊಲೀಸರು ಬಂಧಿಸಿದ್ದಾರೆ.

ಇತ್ತೀಚೆಗೆ ಮುಳು ಕಟ್ಟಮ್ಮ ಜಾತ್ರೆ ಹಿನ್ನೆಲೆಯಲ್ಲಿ ಮೇಘನಾ ಊರಿಗೆ ಬಂದಿದ್ದರು. ಈ ವೇಳೆ, ಮನೆಗೆಲಸದ ನಿಮಿತ್ತ ಊರಿನ ಸಮೀಪದ ಕಾಲುವೆಗೆ ಮೇಘನಾ ಹೋದಾಗ ಅಲ್ಲಿಯೇ ಪತಿ ಚರಣ್ ದಾಳಿ ಹತ್ಯೆ ಮಾಡಿದ್ದಾನೆ. ಈ ಘಟನೆ ವಿಷಯ ತಿಳಿದು ಪೊಲೀಸರು ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದ್ದರು. ಈ ವೇಳೆ, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕೊಂಡೊಯ್ಯಲು ಗ್ರಾಮಸ್ಥರು ಬಿಡಲಿಲ್ಲ. ಅಲ್ಲದೇ, ಚರಣ್ ಮನೆಯ ಗಾಜುಗಳನ್ನೂ ಪುಡಿಗಟ್ಟಿ ಜನರ ಆಕ್ರೋಶ ಹೊರಹಾಕಿದರು. ನಂತರ ಪೊಲೀಸರು ಗ್ರಾಮಸ್ಥರ ಮನವೊಲಿಸಿದರು. ಸದ್ಯ ಮೃತ ಮೇಘನಾ ತಾಯಿ ಕೋಮಲ ನೀಡಿರುವ ದೂರಿನ ಮೇಲೆ ಪ್ರಕರಣ ದಾಖಲಾಗಿದೆ.

ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ವಿಕ್ರಂ ಅಮಟೆ ಹೆಚ್ಚಿನ ಮಾಹಿತಿ ನೀಡಿ, ದೂರದಾರೆ ಕೋಮಲ ಅವರ ಪುತ್ರಿಯಾದ ಮೇಘನಾ ಅವರಿಗೆ ಎರಡು ವರ್ಷಗಳ ಹಿಂದೆ ಮದುವೆಯಾಗಿತ್ತು. ಆದರೆ, ಕೌಟುಂಬಿಕ ಸಮಸ್ಯೆ ಕಾರಣ ಕಳೆದ ಒಂದು ವರ್ಷದಿಂದ ಶಿವಮೊಗ್ಗದ ಶಂಕರ್ ಘಟ್ಟದಲ್ಲಿರುವ ಸಂಬಂಧಿಕರ ಮನೆಯಲ್ಲಿ ಮೇಘನಾ ಇರುತ್ತಿದ್ದರು. ಇದೀಗ ಜಾತ್ರೆಗೆಂದು ಊರಿಗೆ ಬಂದಿದ್ದಳು ಎಂದು ತಿಳಿಸಿದರು.

ಇದೇ ಸಂದರ್ಭದಲ್ಲಿ ಪತಿ ಚರಣ್ ಹೊಡೆದು ಮೇಘನಾ ಅವರನ್ನು ಕೊಲೆ ಮಾಡಿದ್ದಾನೆ. ಅಲ್ಲದೇ, ವರದಕ್ಷಿಣೆ ಕಿರುಕುಳ ಸಹ ನೀಡಲಾಗಿತ್ತು ಎಂದು ಮೃತಳ ತಾಯಿ ಆರೋಪಿಸಿದ್ದಾರೆ. ಸದ್ಯ ಆರೋಪಿ ಚರಣ್​ ಮತ್ತು ಆತನ ತಾಯಿ ಇಬ್ಬರನ್ನು ವಶಕ್ಕೆ ಪಡೆಯಲಾಗಿದೆ. ಮೇಲ್ನೋಟಕ್ಕೆ ಮಹಿಳೆಯ ಮೇಲೆ ಸಂಶಯ ಹಾಗೂ ವರದಕ್ಷಿಣೆ ಕಿರುಕುಳವೂ ಈ ಘಟನೆಗೆ ಕಾರಣ ಎಂದು ಕಂಡುಬಂದಿದೆ ಎಂದು ಎಸ್​ಪಿ ಮಾಹಿತಿ ನೀಡಿದರು.

ಆರೋಪಿ ವಿರುದ್ಧ ಪೋಕ್ಸೊ ಕೇಸ್: ಕೊಲೆ ಆರೋಪಿ ಚರಣ್​ ಈ ಹಿಂದೆ ಇದೇ ಮಹಿಳೆ ಅಪ್ರಾಪ್ತೆಯಾಗಿದ್ದಾಗ ಬಲಾತ್ಕಾರ ಎಸಗಿದ್ದ. ಈ ಸಂಬಂಧ ಈತನ ಮೇಲೆ ಪೋಕ್ಸೊ ಪ್ರಕರಣದಡಿ ದಾಖಲಾಗಿ, ಬಂಧನ ಕೂಡ ಆಗಿತ್ತು. ನಂತರ ಎರಡು ಕುಟುಂಬಗಳ ಒಪ್ಪಂದವಾಗಿ ಮದುವೆ ಮಾಡಿಸಲಾಗಿತ್ತು. ಆದರೆ, ನಂತರದಲ್ಲಿ ಸಂಶಯ ಮೂಡಿ, ವರದಕ್ಷಿಣೆ ಕಿರುಕುಳ ನೀಡಲು ಆರಂಭಿಸಲಾಗಿತ್ತು ಎಂದು ಆರೋಪಿಸಲಾಗಿದೆ. ಆದ್ದರಿಂದ ಇದು ಸೂಕ್ಷ್ಮ ಪ್ರಕರಣವಾಗಿದ್ದು ಹೆಚ್ಚಿನ ತನಿಖೆಗಾಗಿ ಡಿಎಸ್​ಪಿ ನೇತೃತ್ವದಲ್ಲಿ ತಂಡ ರಚಿಸಲಾಗಿದೆ ಎಂದು ವಿಕ್ರಂ ಅಮಟೆ ವಿವರಿಸಿದರು.

ಇದನ್ನೂ ಓದಿ: ದುಪ್ಪಟ್ಟು ಹಣದ ಹೆಸರಲ್ಲಿ ಮಹಿಳೆಗೆ ₹2.66 ಕೋಟಿ ಮೋಸ: ಸೈಬರ್ ವಂಚಕರಿಂದ ₹2.20 ಕೋಟಿ ರಿಕವರಿ!

Last Updated :May 1, 2024, 11:03 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.