ETV Bharat / state

ದೇಶದ ಭವಿಷ್ಯಕ್ಕಾಗಿ ವೋಟ್ ಮಾಡಿ ಸೂಕ್ತ ಅಭ್ಯರ್ಥಿ ಗೆಲ್ಲಿಸಿ: ಹಾಸ್ಟೆಲ್ ವಿದ್ಯಾರ್ಥಿಗಳಿಂದ ಪೋಷಕರಿಗೆ ಪತ್ರ - Students Voting Awareness

author img

By ETV Bharat Karnataka Team

Published : May 5, 2024, 8:37 AM IST

ಮತದಾನ ಜಾಗೃತಿ ಮೂಡಿಸಲು ಹಾಸ್ಟೆಲ್ ವಿದ್ಯಾರ್ಥಿಗಳು ತಮ್ಮ ಪೋಷಕರಿಗೆ ಅಂಚೆ ಮೂಲಕ ಪತ್ರ ಕಳುಹಿಸಿ, ಮತ ಹಕ್ಕು ಚಲಾಯಿಸುವಂತೆ ಮನವಿ ಮಾಡಿದ್ದಾರೆ.

ಮತದಾನ ಜಾಗೃತಿ
ಮತದಾನ ಜಾಗೃತಿ (Etv Bharat)

ಕಾರವಾರ: ಪ್ರಜಾಪ್ರಭುತ್ವದ ಯಶಸ್ಸಿಗೆ ಮತದಾನ ಅತ್ಯಂತ ಪ್ರಮುಖವಾಗಿದೆ. ಪ್ರತಿಯೊಬ್ಬರೂ ಮತ ಹಕ್ಕು ಚಲಾಯಿಸುವ ಮೂಲಕ ಪ್ರಜಾಪ್ರಭುತ್ವದ ಆಶಯಗಳನ್ನು ಬಲಪಡಿಸಬೇಕು. ಈ ನಿಟ್ಟಿನಲ್ಲಿ ಜಾಗೃತಿ ಮೂಡಿಸಲು ಜಿಲ್ಲೆಯ ಹಾಸ್ಟೆಲ್ ವಿದ್ಯಾರ್ಥಿಗಳು ತಮ್ಮ ಪೋಷಕರಿಗೆ ಅಂಚೆ ಕಾರ್ಡ್​ನಲ್ಲಿ ತಮ್ಮ ಕೈ ಬರಹದಲ್ಲೇ ಪೋಷಕರಿಗೆ ಪತ್ರ ಬರೆದು, ಮತದಾನ ಮಾಡುವಂತೆ ಮನವಿ ಮಾಡಿದ್ದಾರೆ.

ಉತ್ತರ ಕನ್ನಡ ಜಿಲ್ಲೆಯ ಹಿಂದುಳಿದ ವರ್ಗಗಳ ಇಲಾಖೆ, ಸಮಾಜ ಕಲ್ಯಾಣ ಇಲಾಖೆ, ಪರಿಶಿಷ್ಠ ವರ್ಗಗಳ ಕಲ್ಯಾಣ ಇಲಾಖೆಗಳ ಅಧೀನದಲ್ಲಿ ಬರುವ ಹಾಸ್ಟೆಲ್‌ಗಳಲ್ಲಿನ ವಿದ್ಯಾರ್ಥಿಗಳು ವಿಶೇಷ ರೀತಿಯಲ್ಲಿ ಮತದಾನದ ಬಗ್ಗೆ ಅರಿವು ಮೂಡಿಸುತ್ತಿದ್ದಾರೆ.

'ಈಗ ಚುನಾವಣೆ ಇರುವುದರಿಂದ ಯಾವುದೇ ಆಮಿಷಗಳಿಗೆ ಒಳಗಾಗದೇ ಅಮೂಲ್ಯವಾದ ಮತ ನೀಡಿ, ಒಳ್ಳೆಯ ಅಭ್ಯರ್ಥಿಯನ್ನು ಆರಿಸಿ. ದೇಶದ ಭವಿಷ್ಯಕ್ಕಾಗಿ ಎಲ್ಲರೂ ಜವಾಬ್ದಾರಿಯುತವಾಗಿ ಮತ ಚಲಾಯಿಸೋಣ' ಎಂದು ಬರೆದು ವಿದ್ಯಾರ್ಥಿಗಳು ತಮ್ಮ ಮನೆಯ ವಿಳಾಸಕ್ಕೆ ಪೋಸ್ಟ್ ಮಾಡುವ ಮೂಲಕ ಗಮನ ಸೆಳೆದಿದ್ದಾರೆ.

ಜಿಲ್ಲೆಯ ಹಾಸ್ಟೆಲ್‌ಗಳಲ್ಲಿ ಸುಮಾರು 4,500ಕ್ಕೂ ಅಧಿಕ ವಿದ್ಯಾರ್ಥಿಗಳಿದ್ದು, ಬಹುತೇಕ ವಿದ್ಯಾರ್ಥಿಗಳ ಪೋಷಕರು ಇದೇ ಜಿಲ್ಲೆಯಲ್ಲಿದ್ದಾರೆ. ತಮ್ಮ ಮಕ್ಕಳು ಬರೆದ ಅಂಚೆಪತ್ರ ಈಗಾಗಲೇ ಬಹುತೇಕ ಪೋಷಕರ ಕೈ ಸೇರಿದೆ.

ಇದನ್ನೂ ಓದಿ: ಕಾಲಿನ ಹೆಬ್ಬರಳಿಗೆ ಶಾಯಿ, ಮೂಗಿನಿಂದ ಮತದಾನ: ಕೈಗಳಿಲ್ಲದಿದ್ದರೂ ಮೊದಲ ಬಾರಿಗೆ ಯುವಕನಿಂದ ಹಕ್ಕು ಚಲಾವಣೆ - Casts Vote With Nose

ವಿದ್ಯಾರ್ಥಿಗಳ ಈ ಅಂಚೆ ಕಾರ್ಡ್​ನಿಂದಾಗಿ ಸುಮಾರು 10,000ಕ್ಕೂ ಅಧಿಕ ಪೋಷಕರು ಮತದಾನ ಕೇಂದ್ರಗಳಿಗೆ ತೆರಳಿ ಮತ ಚಲಾಯಿಸಲಿದ್ದಾರೆ. ಅಲ್ಲದೇ ಹಲವು ವಿದ್ಯಾರ್ಥಿಗಳು ಪತ್ರದಲ್ಲಿ ಪೋಷಕರಿಗೆ ನೀವು ಮತದಾನ ಮಾಡುವುದರ ಜೊತೆಗೆ ತಮ್ಮ ಅಕ್ಕಪಕ್ಕದ ಮನೆಯವರಿಗೂ ಹಾಗೂ ಸಂಬಂಧಿಕರಿಗೂ ಮತದಾನ ಮಾಡುವಂತೆ ತಿಳಿಸಿ ಎಂದು ಮನವಿ ಮಾಡುವುದರ ಮೂಲಕ ತಮ್ಮ ಸಾಮಾಜಿಕ ಬದ್ಧತೆ ಮೆರೆದಿದ್ದಾರೆ.

ವಿದ್ಯಾರ್ಥಿಗಳಿಗೆ ಜಿಲ್ಲಾ ಸ್ವೀಪ್ ಸಮಿತಿಯು ಉಚಿತವಾಗಿ ಅಂಚೆ ಕಾರ್ಡ್​ಗಳನ್ನು ವಿತರಿಸಿತ್ತು. ಈಗಾಗಲೇ ಸ್ವೀಪ್ ಮೂಲಕ ಹಲವು ವೈವಿಧ್ಯಮಯ ಜಾಗೃತಿ ಕಾರ್ಯಕ್ರಮಗಳ ಮೂಲಕ ಮತದಾನದ ಮಹತ್ವ ಸಾರಲಾಗುತ್ತಿದೆ. ಜಿಲ್ಲೆಯ ವಿದ್ಯಾರ್ಥಿನಿಲಯಗಳಲ್ಲಿನ ವಿದ್ಯಾರ್ಥಿಗಳು ತಮ್ಮ ಪೋಷಕರಿಗೆ ಅಂಚೆ ಕಾರ್ಡ್ ಮೂಲಕ ಮತದಾನ ಮಾಡುವಂತೆ ಮನವಿ ಮಾಡುತ್ತಿರುವುದು ವಿದ್ಯಾರ್ಥಿಗಳಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆಯ ಆಶಯಗಳನ್ನು ಕಾಪಾಡುವ ಬಗ್ಗೆ ಇರುವ ಅವರ ಜವಾಬ್ದಾರಿಯನ್ನು ತಿಳಿಸುತ್ತದೆ. ಇದೇ ವಿದ್ಯಾರ್ಥಿಗಳ ಮೂಲಕ ಹೊರ ಜಿಲ್ಲೆ ಮತ್ತು ಹೊರ ರಾಜ್ಯದಲ್ಲಿರುವ ಜಿಲ್ಲೆಯ ಮತದಾರರಿಗೂ ಕೂಡಾ ಅಂಚೆ ಕಾರ್ಡ್ ಮೂಲಕ ಮೇ 7ರಂದು ಜಿಲ್ಲೆಗೆ ಆಗಮಿಸಿ, ತಮ್ಮ ಮತದಾನದ ಹಕ್ಕು ಚಲಾಯಿಸುವ ಕುರಿತಂತೆ ಸಂದೇಶ ನೀಡಲು ನಿರ್ಧರಿಸಲಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ ತಿಳಿಸಿದರು.

ಮಕ್ಕಳು ತಮಗೆ ಮತದಾನ ಮಾಡುವ ಕುರಿತು ಕಳುಹಿಸಿರುವ ಮನವಿಯ ಪತ್ರವನ್ನು ಪೋಷಕರು ತಪ್ಪದೇ ಪಾಲಿಸುತ್ತಾರೆ ಎಂಬ ವಿಶ್ವಾಸದಲ್ಲಿ ಸ್ವೀಪ್ ಅಧಿಕಾರಿಗಳಿದ್ದಾರೆ. ಲೋಕಸಭೆ ಚುನಾವಣೆಗೆ ರಾಜ್ಯದಲ್ಲಿ ಮೇ 7ರಂದು 14 ಕ್ಷೇತ್ರಗಳಿಗೆ ಮತದಾನ ನಡೆಯಲಿದೆ.

ಇದನ್ನೂ ಓದಿ: ಎರಡನೇ ಹಂತದ ಲೋಕಸಭೆ ಚುನಾವಣೆ: ಮನೆಯಿಂದಲೇ 34,110 ಮಂದಿ ಮತದಾನ - Vote from Home

ETV Bharat Logo

Copyright © 2024 Ushodaya Enterprises Pvt. Ltd., All Rights Reserved.