ETV Bharat / state

ಬಿಸಿಲಿನ ಝಳಕ್ಕೆ ಬೆಂಡಾದ ಬೆಂಗಳೂರಿಗರು: ರಾಜ್ಯಾದ್ಯಂತ ಇನ್ನೂ ಒಂದು ವಾರ ಬಿಸಿ ಗಾಳಿ - Heatwave In Karnataka

author img

By ETV Bharat Karnataka Team

Published : May 2, 2024, 7:07 AM IST

Updated : May 2, 2024, 12:02 PM IST

Etv Bharat
Etv Bharat

ನೀರಿನ ಸಮಸ್ಯೆ ಎದುರಿಸಿದ್ದ ಬೆಂಗಳೂರಿಗರು ಇದೀಗ ಬಿಸಿಳ ಝಳದಿಂದ ಬಸವಳಿದಿದ್ದಾರೆ. ನಗರದ ಉಷ್ಣಾಂಶ ದಾಖಲೆಯ ಮಟ್ಟ ಏರಿಕೆಯಾಗುತ್ತಿರುವುದು ಜನರು ಹೆಚ್ಚಾಗಿ ಮನೆಯಲ್ಲೇ ಇರುತ್ತಿದ್ದಾರೆ.

ಬೆಂಗಳೂರು: ಮಳೆ ಕೊರತೆಯಿಂದ ಅಂತರ್ಜಲ ಕುಸಿತವಾಗಿ ನೀರಿಗಾಗಿ ಪರದಾಡಿದ್ದ ಸಿಲಿಕಾನ್ ಸಿಟಿಯ ಜನ ಈಗ ಬೇಸಿಗೆಯ ಬಿಸಿಲಿನ ಝಳಕ್ಕೆ ಕಂಗಾಲಾಗಿದ್ದಾರೆ. ವರ್ಷವಿಡೀ ಕೂಲ್ ಆಗಿರುತ್ತಿದ್ದ ರಾಜಧಾನಿ ಬೆಂಗಳೂರಲ್ಲಿ ಗರಿಷ್ಠ ಮಟ್ಟದ ಉಷ್ಣಾಂಶ ದಾಖಲಾಗುತ್ತಿರುವುದರಿಂದ ಜನರು ಮನೆಬಿಟ್ಟು ಹೊರಬರಲು ಹಿಂದೇಟು ಹಾಕುತ್ತಿದ್ದಾರೆ.

ಕಳೆದ ಕೆಲ ವರ್ಷಗಳಿಂದ ಬೆಂಗಳೂರಲ್ಲಿ ವರ್ಷದಿಂದ ವರ್ಷಕ್ಕೆ ಬಿಸಿಲು ಹೆಚ್ಚಾಗುತ್ತಿದ್ದರೂ 35 ಡಿಗ್ರಿ ಉಷ್ಣಾಂಶ ಮೀರಿರಲಿಲ್ಲ. ಆದರೆ, ಈ ಬಾರಿ 40 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶದ ಹತ್ತಿರ ಹೋಗುತ್ತಿರುವುದು ಜನರ ಆತಂಕಕ್ಕೆ ಕಾರಣವಾಗಿದೆ. ಅಲ್ಲದೇ, ಶೀಘ್ರದಲ್ಲಿಯೇ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಕಳೆದೊಂದು ವಾರದಿಂದ ಹೇಳುತ್ತಿದ್ದರೂ, ಮಳೆಯಾಗುವ ಲಕ್ಷಣಗಳು ಇಲ್ಲದಿರುವುದು ಸಾರ್ವಜನಿಕರಲ್ಲಿ ಕಳವಳವನ್ನುಂಟು ಮಾಡಿದೆ.

ಕಳೆದ ಎಂಟು ವರ್ಷಗಳಲ್ಲಿ ಎರಡನೇ ಬಾರಿ ಅತೀ ಹೆಚ್ಚು ತಾಪಮಾನವನ್ನು ಬೆಂಗಳೂರು ಕಂಡಿದ್ದು, ಮುಂದಿನ ಒಂದು ವಾರಗಳ ಕಾಲ ಮತ್ತೆ ಬೆಂಗಳೂರಲ್ಲಿ ಬಿಸಿ ಗಾಳಿ ಇರಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ಏಪ್ರಿಲ್ 2016 ರಲ್ಲಿ 39.2 ಡಿಗ್ರಿ ಸೆಲ್ಸಿಯಸ್ ದಾಖಲಾಗಿತ್ತು. ಇನ್ನೂ 1996ರ ಮಾರ್ಚ್ 27 ರಂದು 37.3 ಡಿಗ್ರಿ ಸೆಲ್ಸಿಯಸ್ ಮತ್ತು 2017ರಲ್ಲಿ ಬೆಂಗಳೂರಿನಲ್ಲಿ 37.2 ಡಿಗ್ರಿ ಸೆಲ್ಸಿಯಸ್ ದಾಖಲಾಗಿತ್ತು. ಇದು ಈವರೆಗಿನ ಗರಿಷ್ಠ ತಾಪಮಾನ ಎಂದು ಹೇಳಲಾಗಿದೆ. ಆದರೆ, ಈ ಬಾರಿ ಸತತವಾಗಿ 38 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ. ಕಳೆದ ಭಾನುವಾರ 39.5 ಡಿಗ್ರಿ ಉಷ್ಣಾಂಶ ದಾಖಲಾಗಿದೆ. ಇದು ಸಾಮಾನ್ಯಕ್ಕಿಂತ 4.4 ಡಿಗ್ರಿ ಸೆಲ್ಸಿಯಸ್‌ನಷ್ಟು ಹೆಚ್ಚಿನ ಉಷ್ಣಾಂಶ ಎಂದು ಹವಾಮಾನ ಇಲಾಖೆ ಹೇಳಿದೆ.

ಸದ್ಯ ಒಂದು ವಾರಗಳ ಕಾಲ ಬೆಂಗಳೂರು ಸೇರಿದಂತೆ ಬೀದರ್, ಕಲಬುರಗಿ, ವಿಜಯಪುರ, ಯಾದಗಿರಿ, ರಾಯಚೂರು, ಬಾಗಲಕೋಟೆ, ಬೆಳಗಾವಿ, ಗದಗ, ಹಾವೇರಿ, ಕೊಪ್ಪಳ, ಬಳ್ಳಾರಿ, ವಿಜಯನಗರ, ದಾವಣಗೆರೆ, ಚಿತ್ರದುರ್ಗ, ತುಮಕೂರು, ಕೋಲಾರ, ಮಂಡ್ಯ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ಬಿಸಿ ಗಾಳಿ ಹೆಚ್ಚಾಗುವ ಸಾಧ್ಯತೆ ಇದೆ. ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಬಿಸಿ ಮತ್ತು ಆರ್ದ್ರತೆ ಏರಿಕೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ನೆಚ್ಚರಿಕೆ ನೀಡಿದೆ.

ಇದನ್ನೂ ಓದಿ: ಮನೆಯಿಂದ ಹೊರ ಬರುವ ಮುನ್ನ ಯೋಚಿಸಿ: ದುರ್ಬಲಗೊಳ್ಳದ 'ಎಲ್​ ನಿನೋ' - ರಾಜ್ಯದ ಉತ್ತರ ಒಳನಾಡಿನಲ್ಲಿ ಹೀಟ್ ವೇವ್ ಎಚ್ಚರಿಕೆ - Heat Wave Alert

ನಗರದಲ್ಲಿ ಮಳೆಯ ಕೊರತೆಯುಂಟಾಗಿದ್ದು, ಬಿಸಿ ಗಾಳಿ ಹೆಚ್ಚಿನ ಸಮಸ್ಯೆಯಾಗಿ ಪರಿಣಮಿಸುತ್ತಿದೆ. ಕಳೆದ ಭಾನುವಾರ 39.5 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗುವ ಮೂಲಕ ದಾಖಲೆಯ ತಾಪಮಾನ ಹೆಚ್ಚಳವಾಗಿದೆ. ಈ ಬಿಸಿಲಿನ ಬೇಗೆಯಿಂದ ನಗರದ ಜನರು ಬೆಂಡಾಗಿದ್ದು, ಮನೆಯಿಂದ ಹೊರಗಡೆ ಬರುವುದಕ್ಕೂ ಯೋಚನೆ ಮಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.

ಬೆಂಗಳೂರಿನಲ್ಲಿ ಕಳೆದ 15 ದಿನಗಳಿಂದ 33 ರಿಂದ 39 ಸೆಲ್ಸಿಯಸ್‌ವರೆಗೆ ತಾಪಮಾನ ದಾಖಲಾಗಿದೆ. ಬೆಂಗಳೂರು ನಗರದಲ್ಲಿ ತಾಪಮಾನ 40 ಡಿಗ್ರಿ ಸೆಲ್ಸಿಯಸ್‌ ತಲುಪುವ ಸಾಧ್ಯತೆಯಿದೆ ಎಂದು ಬೆಂಗಳೂರು ಹವಾಮಾನ ಕೇಂದ್ರದ ವಿಜ್ಞಾನಿ ಡಾ.ಎಂ.ರಾಜವೇಲ್ ಹೇಳಿದ್ದಾರೆ.

ಇದನ್ನೂ ಓದಿ: ದಾವಣಗೆರೆಯಲ್ಲಿ ಬರಿದಾದ ಕೊಂಡಜ್ಜಿ ಕೆರೆ: ವಲಸೆ ಹಕ್ಕಿಗಳಿಗೂ ತಟ್ಟಿದ ಜಲಕ್ಷಾಮದ ಬಿಸಿ - Water issue for migratory birds

Last Updated :May 2, 2024, 12:02 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.