ETV Bharat / state

ದಾವಣಗೆರೆಯಲ್ಲಿ ಬರಿದಾದ ಕೊಂಡಜ್ಜಿ ಕೆರೆ: ವಲಸೆ ಹಕ್ಕಿಗಳಿಗೂ ತಟ್ಟಿದ ಜಲಕ್ಷಾಮದ ಬಿಸಿ - Water issue for migratory birds

author img

By ETV Bharat Karnataka Team

Published : Apr 14, 2024, 10:28 AM IST

ದಾವಣಗೆರೆಯ ಕೊಂಡಜ್ಜಿ ಕೆರೆಯಲ್ಲಿ ನೀರಿಲ್ಲದೆ ವಿದೇಶಿ ವಲಸೆ ಹಕ್ಕಿಗಳಿಗೆ ಜಲಕ್ಷಾಮದ ಆವರಿಸಿದೆ. ಹೀಗಾಗಿ ಕೆರೆ ಪ್ರತಿವರ್ಷ ಬರುತ್ತಿದ್ದ ಪಕ್ಷಿಗಳ ಸಂಖ್ಯೆ ಇಳಿಮುಖವಾಗಿದೆ.

ವಲಸೆ ಹಕ್ಕಿಗಳಿಗೆ ನೀರಿನ ಸಮಸ್ಯೆ
ವಲಸೆ ಹಕ್ಕಿಗಳಿಗೆ ನೀರಿನ ಸಮಸ್ಯೆ

ಕೊಂಡಜ್ಜಿ ಕೆರೆಯಲ್ಲಿ ವಲಸೆ ಹಕ್ಕಿಗಳಿಗೆ ನೀರಿನ ಸಮಸ್ಯೆ

ದಾವಣಗೆರೆ: ಕಳೆದ ವರ್ಷದಿಂದ ಬರಗಾಲ ಎಂಬ ಕಪ್ಪು ಛಾಯೆ ಕರ್ನಾಟಕವನ್ನು ಆವರಿಸಿದ್ದು, ತೀವ್ರ ಜಲಕ್ಷಾಮ ತಾಂಡವಾಡುತ್ತಿದೆ. ಪರಿಣಾಮವಾಗಿ ದಾವಣಗೆರೆ ಜಿಲ್ಲೆಯ ಬಹುತೇಕ ಕೆರೆಗಳು ನೀರಿಲ್ಲದೆ ಬತ್ತಿ ಹೋಗಿವೆ. ಹಾಗೆಯೇ ಹರಿಹರ ತಾಲೂಕಿನ ಐತಿಹಾಸಿಕ ಕೊಂಡಜ್ಜಿ ಕೆರೆ ಸಂಪೂರ್ಣ ಖಾಲಿಯಾಗಿದ್ದು, ಇಲ್ಲಿಗೆ ವಲಸೆ ಬರುತ್ತಿದ್ದ ವಿದೇಶಿ ಹಕ್ಕಿಗಳಿಗೂ ಬರಗಾಲದ ಬಿಸಿ ತಟ್ಟಿದೆ.

ನವೆಂಬರ್ ತಿಂಗಳಲ್ಲಿ ದಕ್ಷಿಣ ಭಾರತದತ್ತ ವಲಸೆ ಬರುತ್ತಿದ್ದ ವಿದೇಶಿ ಹಕ್ಕಿಗಳು ಮೇ ತಿಂಗಳ ಅಂತ್ಯದವರೆಗೂ ಕೊಂಡಜ್ಜಿ ಕೆರೆಯ ಅರಣ್ಯ ಧಾಮದಲ್ಲಿ ವಾಸವಾಗುತ್ತಿದ್ದವು.‌ ಬಳಿಕ ತಮ್ಮ ಮೂಲ ಸ್ಥಳಕ್ಕೆ ವಿದೇಶಿ ಹಕ್ಕಿಗಳು ತೆರಳುತ್ತಿದ್ದವು. ಈ ಕೆರೆಗೆ ಪ್ರತಿ ವರ್ಷ ಸುಮಾರು ಐದು ಸಾವಿರದಷ್ಟು ವಿದೇಶಿ ಹಕ್ಕಿಗಳು ಬರುತ್ತಿದ್ದು, ಈ ಬಾರಿ ಕೆರೆಯಲ್ಲಿ ನೀರಿಲ್ಲದ ಕಾರಣಕ್ಕೆ ಹಕ್ಕಿಗಳ ಸಂಖ್ಯೆ 100ರ ಗಡಿ ದಾಟಿದೆ. ಚೀನಾ, ಜಪಾನ್, ಸೈಬಿರಿಯಾ, ಆಸ್ಟ್ರೇಲಿಯಾ, ಅಫಘಾನಿಸ್ತಾನ, ರಷ್ಯಾ ಹಾಗೂ ಉತ್ತರ ಭಾರತ ಸೇರಿದಂತೆ ಯೂರೋಪಿನ ವಿವಿಧ ದೇಶಗಳಿಂದ 68 ಪ್ರಭೇದದ (ಜಾತಿಯ) ವಲಸೆ ಹಕ್ಕಿಗಳು ಆಗಮಿಸುವುದು ಇಲ್ಲಿನ ವಿಶೇಷ. ಇದೀಗ ವಲಸೆ ಹಕ್ಕಿಗಳ ಸಂಖ್ಯೆ ಕಡಿಮೆ ಆಗಿರುವುದರಿಂದ ಇಲ್ಲಿಗೆ ಭೇಟಿ ನೀಡುವ ಪ್ರವಾಸಿಗರ ಸಂಖ್ಯೆ ಕೂಡ ಇಳಿಮುಖವಾಗಿದೆ.

ಈ ಬಗ್ಗೆ ಮಾತನಾಡಿದ ವೈಲ್ಡ್ ಲೈಫ್ ಫೋಟೋಗ್ರಾಫರ್ ಮತ್ತು ಬರ್ಡ್ ವಾಚರ್​ ಆದ ಬಸವರಾಜ್ ಅವರು, ನೀರನ್ನೇ ಹರಸಿ ಬರುವ ವಿದೇಶಿ ಹಕ್ಕಿಗಳಿಗೆ ನೀರಿನ ಅಭಾವ ಎದುರಾದರೇ ಅವುಗಳು ಸಾವನ್ನಪ್ಪುವ ಸಾಧ್ಯತೆ ದಟ್ಟವಾಗಿರುತ್ತದೆ. ಯುರೋಪ್ ಬ್ಲಾಕ್ ಟೈಲ್ ಗ್ಲಾವೀಟ್, ಜಪಾನ್​​ನಿಂದ ಏಷ್ಯಾನ್ ಪ್ರೋಪ್ ಫೈಕೇಚ್, ಚೈನ್ ಹಾಗೂ ಮಂಗೋಲಿಯಾದಿಂದ ಬಾರೈಟೆಟ್ ಗೂಸ್ ಹೀಗೆ ಹಲವಾರು ಪಕ್ಷಿಗಳು ಕೊಂಡಜ್ಜಿ ಕೆರೆ ನಾಗ್ಲಾಪುರ, ಶಿಂಗ್ರಿಹಳ್ಳಿ ಕೆರೆ, ಕುಂದವಾಡ ಕೆರೆಗಳಿಗೆ ಐದು ಸಾವಿರ ಹಕ್ಕಿಗಳು ವಲಸೆ ಬರುತ್ತಿದ್ದವು. ಆದರೆ ಕೆರೆಗಳಲ್ಲಿ ನೀರಿನ ಅಭಾವ ಹಿನ್ನೆಲೆಯಲ್ಲಿ ಗದಗ ಜಿಲ್ಲೆಯ ಮರಡಿ ಕೆರೆಗೆ ವಲಸೆ ಹೋಗಿರಬಹುದೆಂದು ಅಂದಾಜಿಸಲಾಗಿದೆ. ಪ್ರತಿ ವರ್ಷ ಒಂದು ಸ್ಥಳಕ್ಕೆ ಈ ಹಕ್ಕಿಗಳು ಬರುತ್ತಿದ್ದವು. ನೀರಿಲ್ಲದ ಕಾರಣ ಬೇರೆ ಕಡೆ ವಲಸೆ ಹೋಗುತ್ತಿವೆ. ತಕ್ಷಣ ಜಿಲ್ಲಾಡಳಿತ ಬರಗಾಲದಿಂದ ನೀರಿಲ್ಲದೆ ಒಣಗಿರುವ ಕೆರೆಗಳಿಗೆ ನೀರು ಹರಿಸಿ ಹಕ್ಕಿಗಳನ್ನು ರಕ್ಷಿಸಬೇಕಾಗಿದೆ ಎಂದು ಒತ್ತಾಯಿಸಿದರು.

ಇದನ್ನೂ ಓದಿ : ಭೀಕರ ಬರಗಾಲ: ಬರಿದಾದ ಹೇಮಾವತಿ ಒಡಲು, ಕಾಫಿನಾಡಿನ ಜನರಲ್ಲಿ ಆತಂಕ - Hemavati River

ETV Bharat Logo

Copyright © 2024 Ushodaya Enterprises Pvt. Ltd., All Rights Reserved.