ಚಿಕ್ಕಮಗಳೂರು: ಹಾಸನ ಲೋಕಸಭಾ ಕ್ಷೇತ್ರದ ಚುನಾವಣೆ ಕಣ ದಿನದಿಂದ ದಿನಕ್ಕೆ ರಂಗೇರುತ್ತಿದೆ. ಮೈತ್ರಿ ಪಕ್ಷದ ಅಭ್ಯರ್ಥಿ ಹೆಸರು ಇನ್ನು ಘೋಷಣೆ ಆಗಿಲ್ಲ. ಹಾಗಿದ್ದರೂ ಸಂಸದ ಪ್ರಜ್ವಲ್ ರೇವಣ್ಣ ಪರ ಪ್ರಚಾರಕ್ಕೆ ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡರು ಇಂದು ಕಡೂರಿನಲ್ಲಿ ಚಾಲನೆ ನೀಡಿದ್ದು, ಕಾರ್ಯಕರ್ತರ ಸಭೆ ನಡೆಸಿದರು.
ಇದಕ್ಕೂ ಮುನ್ನ ಕಡೂರಿಗೆ ಆಗಮಿಸುತ್ತಿದ್ದಂತೆ ಕಾರ್ಯಕರ್ತರು ಹಾಗೂ ಬೆಂಬಲಿಗರು ಸಂಸದ ಪ್ರಜ್ವಲ್ ರೇವಣ್ಣ, ಮಾಜಿ ಪ್ರಧಾನಿ ದೇವೇಗೌಡರಿಗೆ ಹೂವಿನ ಮಳೆ ಸುರಿಸುವುದರ ಮೂಲಕ ಹೂವಿನ ಹಾರ ಹಾಕಿ ಸ್ವಾಗತ ಮಾಡಿದರೂ ನಂತರ ದಿ.ಕೆಂಪರಾಜು ಅವರ ಮನೆಗೆ ತೆರಳಿ ಅವರ ಮಗ ಚೇತನ್ ಅವರನ್ನು ಪಕ್ಷಕ್ಕೆ ಸೇರ್ಪಡೆ ಮಾಡಿಕೊಂಡರು. ಇದೆ ವೇಳೆ, ಮಾಜಿ ಶಾಸಕ ವೈ ಎಸ್ ವಿ ದತ್ತ ಮಾತನಾಡಿ, ಚೇತನ ಪಕ್ಷ ಸೇರ್ಪಡೆಯಿಂದ ಇನ್ನಷ್ಟು ಬಲ ಬಂದಿದೆ. ಕಡೂರು ತಾಲೂಕಿನಲ್ಲಿ ಜೆಡಿಎಸ್ ಪಕ್ಷ ಚಿರತೆ ವೇಗ ಪಡೆಯಲಿದ್ದು, ತುಂಬಾ ಅನುಕೂಲವಾಗಲಿದೆ. ಈ ಸಲವೂ ಬಹಳಷ್ಟು ಅಂತರದಿಂದ ನಮ್ಮ ಅಭ್ಯರ್ಥಿ ಚುನಾವಣೆಯಲ್ಲಿ ಜಯಭೇರಿ ಬಾರಿಸುತ್ತಾರೆ ಎಂದು ಹೇಳಿದರು.
ನಂತರ ನಗರದ ವೆಂಕಟೇಶ್ವರ ಹಾಲ್ನಲ್ಲಿ ಜೆಡಿಎಸ್ ಕಾರ್ಯಕರ್ತರ ಸಭೆ ನಡೆಯಿತು. ಈ ವೇಳೆ, ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡರು ಲೋಕಸಭೆ ಚುನಾವಣೆ ಬಗ್ಗೆ ಕಾರ್ಯಕರ್ತರ ಜೊತೆ ಸಮಾಲೋಚನೆ ನಡೆಸಿದರು. ನಂತರ ಮಾಧ್ಯಮದವರ ಜೊತೆ ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡರು ಮಾತನಾಡಿ, ಪಕ್ಷಕ್ಕೆ ಸಿದ್ದರಾಮಯ್ಯನನ್ನು ಕರ್ಕೊಂಡು ಬಂದ್ನೋ ಅವಾಗಲೇ ನನಗೂ - ಹೆಗಡೆಗೆ ಗಲಾಟೆ ಆಯ್ತು, ನೀನು ಅವನನ್ನ ಮಂತ್ರಿ ಮಾಡಬೇಡ, ಅವನು ನಿನಗೆ ಮೋಸ ಮಾಡ್ತಾನೇ ಎಂದು ಹೆಗಡೆ ಜಗಳ ಮಾಡಿದ್ದರು. ಹೆಗಡೆ ಅವರು ಸಿದ್ದರಾಮಯ್ಯ ಅವರನ್ನು ಮಂತ್ರಿ ಮಾಡಬೇಡ, ವಾಲ್ಮೀಕಿ ಸಮುದಾಯಕ್ಕೆ ಸೇರಿದ ತಿಪ್ಪೇಸ್ವಾಮಿ ಅವರನ್ನು ಮಂತ್ರಿ ಮಾಡು ಅಂತ ಮನೆಯೊಳಗೆ ಜಗಳ ನಡೆಯಿತು ಎಂದು ತಿಳಿಸಿದರು.
ರೀಡಿಂಗ್ ರೂಂನಲ್ಲಿ ಕೂರಿಸ್ಕೊಂಡು ಕೈ ಹಿಡ್ಕೊಂಡು ಅವನು ನಿನಗೆ ಮೋಸ ಮಾಡ್ತಾನೇ ಅಂದಿದ್ರು. ವಾಲ್ಮೀಕಿ ಸಮುದಾಯದ ತಿಪ್ಪೇಸ್ವಾಮಿ ಮಾಡು, ಬ್ಯಾಕ್ವರ್ಡ್ ಕಮ್ಯುನಿಟಿಗೆ ಸೇರಿದವರನ್ನು ಮಂತ್ರಿ ಮಾಡು, ಅವನಿಗೆ ಏನೂ ಮಾಡಬೇಡ ಅಂತ ಅಂದೇ ಹೆಗಡೆ ಹೇಳಿದ್ರು ಎಂದ ಅವರು, ನಾನು 91ನೇ ವಯಸ್ಸಿನಲ್ಲಿ ಈ ಮಾತನ್ನು ಹೇಳ್ತಾ ಇದ್ದೇನೆ. ಸುಳ್ಳು ಹೇಳಿದರೆ ಆ ದೇವರು ಒಳ್ಳೆಯದು ಮಾಡಲ್ಲ, ಇಂಥ ಪಾಪದ ಕೆಲ್ಸ ಮಾಡುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ಮೋದಿ ಹೊಗಳಿದ ದೇವೇಗೌಡ: ಈ ದೇಶದಲ್ಲಿ ಅತ್ಯಂತ ಎತ್ತರಕ್ಕೆ ಬೆಳೆದ ರಾಜಕಾರಣಿ ಯಾರಾದರೂ ಇದ್ದರೆ ಅದೂ ಮೋದಿಯವರು. ಮೋದಿ ಬಿಟ್ಟು ಅವರ ಮಟ್ಟಕ್ಕೆ ಬೆಳೆಯಲು ಈ ದೇಶದಲ್ಲಿ ಯಾರಿಗೂ ಸಾಧ್ಯವಿಲ್ಲ. I.N.D.I.A ಎಂದು ಕರೆದುಕೊಳ್ತಾರಲ್ಲ ಅದರಲ್ಲಿಯೂ ಯಾರೂ ಇಲ್ಲ. ಸ್ಟಾಲಿನ್, ಮಮತಾ ಬ್ಯಾನರ್ಜಿ, ಶರದ್ ಪವಾರ್, ಎಎಪಿಯಲ್ಲಿ ನಾಯಕರು ಯಾರಿದ್ದಾರೆ. ಎಲ್ಲರೂ ಮನಸ್ಸಿಗೆ ಬಂದಂತೆ ಏನೂ ಬೇಕಾದರೂ ಮಾತನಾಡಬಹುದು. ಏನಾದರೂ ಮಾತನಾಡಿಕೊಳ್ಳಲಿ, ಆದರೆ ಜನ ಮೆಚ್ಚಬೇಕು ಅಲ್ವಾ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಮಾಜಿ ಶಾಸಕ ಬೆಳ್ಳಿ ಪ್ರಕಾಶ್ ಮನೆಗೆ ತೆರಳಿ ಚರ್ಚೆ: ಮೈತ್ರಿ ಪಕ್ಷದ ಅಭ್ಯರ್ಥಿ ಹಾಸನ ಕ್ಷೇತ್ರದಲ್ಲಿ ಘೋಷಣೆ ಯಾಗುವ ಮುನ್ನವೇ ಮೊಮ್ಮಗ ಪ್ರಜ್ವಲ್ ರೇವಣ್ಣ ಪರ ಪ್ರಧಾನಿ ಹೆಚ್ ಡಿ ದೇವೇಗೌಡ ಚುನಾವಣೆ ಕಣಕ್ಕೆ ಇಳಿದಿದ್ದಾರೆ. ಇಂದು ಕಡೂರಿನಲ್ಲಿ ಕಾರ್ಯಕರ್ತರೊಂದಿಗೆ ಚರ್ಚಿಸಿದ ನಂತರ ಬಿಜೆಪಿ ಮಾಜಿ ಶಾಸಕ ಬೆಳ್ಳಿ ಪ್ರಕಾಶ್ ಮನೆಗೆ ತೆರಳಿ ಕೆಲ ಸಮಯ ಚರ್ಚೆ ಮಾಡಿದರು. ಅವರ ಮನೆಯಲ್ಲಿ ಭೋಜನ ಮಾಡಿದರು. ಅವರಿಬ್ಬರ ದೋಸ್ತಿ ಈ ಚುನಾವಣೆಯಲ್ಲಿ ಯಾವ ರೀತಿ ಮುಂದೆ ಸಾಗಲಿದೆ. ಕಡೂರಿನಲ್ಲಿ ಯಾವ ರೀತಿ ಬದಲಾವಣೆ ತರಲಿದೆ ಎಂಬುದನ್ನು ಕಾದು ನೋಡ ಬೇಕಿದೆ.
ಇದನ್ನೂಓದಿ:ಹಾವೇರಿ ಹೆಸರು ರಾಷ್ಟ್ರ ಮಟ್ಟದಲ್ಲಿ ಕೊಂಡೊಯ್ಯಲು ಸರ್ವ ಪ್ರಯತ್ನ: ಮಾಜಿ ಸಿಎಂ ಬೊಮ್ಮಾಯಿ