ETV Bharat / state

ದೇವರಿಗೆ ಪೂಜೆ ಸಲ್ಲಿಸಿದ ಬಳಿಕ ಮತ ಹಾಕಿದ ಮಾಜಿ ಪ್ರಧಾನಿ ದೇವೇಗೌಡ: ಕಾಂಗ್ರೆಸ್​​​ ವಿರುದ್ಧ ವಾಗ್ದಾಳಿ - Deve Gowda casts vote

author img

By ETV Bharat Karnataka Team

Published : Apr 26, 2024, 10:27 AM IST

Updated : Apr 26, 2024, 12:20 PM IST

ಮಾಜಿ ಪ್ರಧಾನಿ ದೇವೇಗೌಡ ಮತ ಚಲಾವಣೆ
ಮಾಜಿ ಪ್ರಧಾನಿ ದೇವೇಗೌಡ ಮತ ಚಲಾವಣೆ

ಹೊಳೆನರಸೀಪುರ ತಾಲೂಕು ಪಡುವಲಹಿಪ್ಪೆ ಮತಗಟ್ಟೆಯಲ್ಲಿ ಮಾಜಿ ಪ್ರಧಾನಿ ದೇವೇಗೌಡರು ಪತ್ನಿ ಸಮೇತ ಆಗಮಿಸಿ ಮತದಾನ ಮಾಡಿದರು.

ಮಾಜಿ ಪ್ರಧಾನಿ ದೇವೇಗೌಡ, ಪತ್ನಿ ಚನ್ನಮ್ಮ ಮತದಾನ

ಹಾಸನ: ಮಾಜಿ ಪ್ರಧಾನಿ ದೇವೇಗೌಡ ಅವರು ಪತ್ನಿ ಚನ್ನಮ್ಮ ಅವರೊಂದಿಗೆ ಹೊಳೆನರಸೀಪುರ ತಾಲೂಕು ಪಡುವಲಹಿಪ್ಪೆಗೆ ಆಗಮಿಸಿ ಮತದಾನ ಮಾಡಿದರು. ವಯಸ್ಸಾದ ಹಿನ್ನೆಲೆ ಮಾಜಿ ಪ್ರಧಾನಿ ಅವರು ಅಂಗರಕ್ಷಕರ ಸಹಾಯ ಪಡೆದು ಮತದಾನ ಮಾಡಿದ್ದಾರೆ.

ಮತದಾನಕ್ಕೂ ಮುನ್ನ ಪಡುವಲಹಿಪ್ಪೆಗೆ ಮಾಜಿ ಪ್ರಧಾನಿ ಪತ್ನಿಯೊಂದಿಗೆ ಆಗಮಿಸಿ ಕೋದಂಡರಾಮೇಶ್ವರ, ಪರಮೇಶ್ವರ ಸ್ವಾಮಿ ದೇಗುಲದಲ್ಲಿ ಪೂಜೆ ಸಲ್ಲಿಸಿದರು. ಈ ಹಿನ್ನೆಲೆ ಪಡುವಲಹಿಪ್ಪೆ ಹಾಗೂ ಮತಗಟ್ಟೆ ಬೂತ್ ಸಂಖ್ಯೆ 251ರಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿದೆ. ಇನ್ನೂ ಸಾರ್ವಜನಿಕರು ಸರದಿ ಸಾಲಿನಲ್ಲಿ ಬಂದು ಮತ ಚಲಾಯಿಸುತ್ತಿದ್ದಾರೆ.

ಪ್ರಜ್ವಲ್ ರೇವಣ್ಣ ಟೆಂಪಲ್ ರನ್​: ಹಾಸನ ಲೋಕಸಭಾ ಕ್ಷೇತ್ರದ ಚುನಾವಣೆ ಹಿನ್ನೆಲೆಯಲ್ಲಿ ಎನ್‌ಡಿಎ ಅಭ್ಯರ್ಥಿ ಪ್ರಜ್ವಲ್‌ ರೇವಣ್ಣ ದೇವರ ಮೊರೆ ಹೋಗಿದ್ದಾರೆ. ಬೆಳ್ಳಂಬೆಳಗ್ಗೆ ಟೆಂಪಲ್ ರನ್ ಮಾಡುತ್ತಿರುವ ಪ್ರಜ್ವಲ್‌ ರೇವಣ್ಣ, ಹೊಳೆನರಸೀಪುರ ತಾಲೂಕಿನ ಹರದನಹಳ್ಳಿ ಗ್ರಾಮದಲ್ಲಿರುವ ಈಶ್ವರ ದೇವಾಲಯಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿ ಪ್ರಾರ್ಥಿಸಿದರು. ಬಳಿಕ ಪಡುವಲ ಹಿಪ್ಪೆಯಲ್ಲಿರುವ ಸರ್ಕಾರಿ ಮಾಧ್ಯಮಿಕ ಶಾಲೆಯ ಮತಗಟ್ಟೆಯಲ್ಲಿ ಮತದಾನ ಮಾಡುವ ಮೂಲಕ ತಮ್ಮ ಹಕ್ಕು ಚಲಾಯಿಸಿದರು.

ಮತ ಚಲಾಯಿಸಿದ ಶಾಸಕ ಸ್ವರೂಪ್‌ಪ್ರಕಾಶ್: ಹಾಸನ ಕ್ಷೇತ್ರದ ಶಾಸಕ ಎಚ್‌.ಪಿ.ಸ್ವರೂಪ್‌ಪ್ರಕಾಶ್ ತಮ್ಮ ಪತ್ನಿ ಶ್ವೇತಾ ಜೊತೆ ಆಗಮಿಸಿ ಹಾಸನ ನಗರದ ರಾಯಲ್ ಅಪೊಲೋ ಶಾಲೆಯಲ್ಲಿ ಮತಗಟ್ಟೆ ಸಂಖ್ಯೆ 121 ರಲ್ಲಿ ಮತದಾನ ಮಾಡಿದರು.

ಕಾಂಗ್ರೆಸ್​ ಪ್ರಚಾರ ಕರಪತ್ರ ಹಿಡಿದು ಮಾಜಿ ಪ್ರಧಾನಿ ಟೀಕೆ

ಕಾಂಗ್ರೆಸ್​ ಪ್ರಚಾರ ಕರಪತ್ರ ಹಿಡಿದು ಮಾಜಿ ಪ್ರಧಾನಿ ಟೀಕೆ: ಮತದಾನ ಬಳಿಕ ಮಾಧ್ಯಮಕ್ಕೆ ಪ್ರತಿಕ್ರಿಯಿಸಿರುವ ದೇವೇಗೌಡರು, ಕಾಂಗ್ರೆಸ್​ ಗ್ಯಾರಂಟಿ ಕರಪತ್ರದ ಬಗ್ಗೆ ವ್ಯಂಗ್ಯವಾಡಿದರು. "ಮಹಾನುಭಾವ ರಾಹುಲ್​ ಗಾಂಧಿಗೆ ಉತ್ತರ ಪ್ರದೇಶದಲ್ಲಿ ಸ್ಪರ್ಧಿಸಲು ಯೋಗ್ಯತೆ ಇಲ್ಲದೇ ಚುನಾವಣೆಗೆ ಕೇರಳದಲ್ಲಿ ಹೋಗಿ ನಿಂತಿದ್ದಾರೆ. ಇವರು ಕೊಡುವ ಚುನಾವಣಾ ಪ್ರಚಾರದ ಕಾರ್ಡ್​ನಲ್ಲಿ ನೀಡಿರುವ ಭರವಸೆಗಳಿಗೆ ಸಿಎಂ, ಹಾಗೂ ಉಪಮುಖ್ಯಮಂತ್ರಿ ಅವರು ಸಹಿ ಮಾಡಿದರೆ ನಾನು ಒಪ್ಪುತ್ತೇನೆ. ಜನರಿಗೆ ವಂಚನೆ ಮಾಡುವ, ಮೋಸ ಮಾಡುವ ಒಂದು ದುಷ್ಕೃತ್ಯ ಈ ರಾಜ್ಯದಲ್ಲಿ ನಡೆದಿದೆ. ಕಾಂಗ್ರೆಸ್​ ಗ್ಯಾರಂಟಿ ಕಾರ್ಡ್​ ಜನರನ್ನು ತಪ್ಪುದಾರಿಗೆ ಎಳೆಯಲು ಮತ್ತು ಮೂರ್ಖರನ್ನಾಗಿಸಲು ಕರ್ನಾಟಕದಲ್ಲಿ ಕರಪತ್ರ ಹಂಚಲಾಗಿದೆ' ಎಂದು ಟೀಕಿಸಿದರು.

ಇದನ್ನೂ ಓದಿ:ಲೋಕಸಭೆ ಚುನಾವಣೆ: ಬಿಜೆಪಿ, ಕಾಂಗ್ರೆಸ್​ ಅಭ್ಯರ್ಥಿಗಳಿಂದ ಮತ ಹಕ್ಕು ಚಲಾವಣೆ - candidates voting

Last Updated :Apr 26, 2024, 12:20 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.