ETV Bharat / state

ಇಂದೂ ಮುಂದುವರೆದ ಬಿಜೆಪಿ-ಜೆಡಿಎಸ್ ಧರಣಿ: ಕಾಗದಪತ್ರ ಹರಿದು ತೂರಿ, ಸರ್ಕಾರದ ವಿರುದ್ಧ ಘೋಷಣೆ

author img

By ETV Bharat Karnataka Team

Published : Feb 29, 2024, 2:49 PM IST

Updated : Feb 29, 2024, 6:15 PM IST

BJP-JDS protest continues in assembly: slogans against govt, Members boycott session
ಇಂದೂ ಮುಂದುವೆರೆದ ಬಿಜೆಪಿ-ಜೆಡಿಎಸ್ ಧರಣಿ: ಕಾಗದಪತ್ರ ಹರಿದು ತೂರಿ, ಸರ್ಕಾರದ ವಿರುದ್ಧ ಘೋಷಣೆ ಕೂಗಿ ಸದಸ್ಯರ ಸಭಾತ್ಯಾಗ

ಪಾಕಿಸ್ತಾನ ಪರ ಘೋಷಣೆ ಕೂಗಿದವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಬಿಜೆಪಿ ಹಾಗೂ ಜೆಡಿಎಸ್​ ಸದಸ್ಯರು ವಿಧಾನಸಭೆಯ ಬಾವಿಗಿಳಿದು ಪ್ರತಿಭಟನೆ ನಡೆಸಿದ್ದರಲ್ಲದೆ, ಸಭಾತ್ಯಾಗ ಮಾಡಿದರು.

ಬೆಂಗಳೂರು: ವಿಧಾನಸೌಧದ ದ್ವಾರದ ಬಳಿ ಪಾಕಿಸ್ತಾನದ ಪರ ಘೋಷಣೆ ಕೂಗಿದವರನ್ನು ಬಂಧಿಸಬೇಕು. ಆ ಘಟನೆಯ ನೈತಿಕ ಹೊಣೆ ಹೊತ್ತು ಸರ್ಕಾರ ರಾಜೀನಾಮೆ ನೀಡಬೇಕೆಂದು ನಿನ್ನೆಯಿಂದ ನಡೆಸಿದ ಧರಣಿಯನ್ನು ವಿಧಾನಸಭೆಯಲ್ಲಿ ಇಂದೂ ಮುಂದುವರೆಸಿದ ಬಿಜೆಪಿ ಸದಸ್ಯರು, ಕಾಗದಪತ್ರಗಳನ್ನು ಹರಿದು ತೂರಿ ಸರ್ಕಾರದ ವಿರುದ್ಧ ಕೆಲಕಾಲ ಘೋಷಣೆಗಳನ್ನು ಕೂಗಿ ಸಭಾತ್ಯಾಗ ಮಾಡಿದರು. ಬೆಳಗ್ಗೆ ಸದನ ಸೇರುತ್ತಿದ್ದಂತೆಯೇ ವಿಪಕ್ಷಗಳ ಶಾಸಕರು ಸಭಾಧ್ಯಕ್ಷರ ಪೀಠದ ಮುಂದಿನ ಬಾವಿಯಲ್ಲಿ ಧರಣಿ ಮುಂದುವರೆಸಿದರು.

ಇಂದೂ ಮುಂದುವೆರೆದ ಬಿಜೆಪಿ-ಜೆಡಿಎಸ್ ಧರಣಿ: ಕಾಗದಪತ್ರ ಹರಿದು ತೂರಿ, ಸರ್ಕಾರದ ವಿರುದ್ಧ ಘೋಷಣೆ ಕೂಗಿ ಸದಸ್ಯರ ಸಭಾತ್ಯಾಗ

ಪ್ರತಿಪಕ್ಷದ ನಾಯಕ ಆರ್.ಅಶೋಕ್ ಮಾತನಾಡಿ, "ಇಡೀ ಪ್ರಪಂಚವೇ ನಮ್ಮ ಕಡೆ ನೋಡುತ್ತಿದೆ. ಆದರೂ ದೇಶದ್ರೋಹಿಗಳ ಮೇಲೆ ಯಾವ ಕ್ರಮವನ್ನೂ ಕೈಗೊಂಡಿಲ್ಲ. ಯಾರನ್ನೂ ಬಂಧಿಸಿಲ್ಲ. ಸರ್ಕಾರ ಮೌನವಾಗಿದೆ. ಹೀಗಾದರೆ ರಾಜ್ಯದ ಜನತೆಗೆ ಯಾವ ಸಂದೇಶ ರವಾನೆಯಾಗುತ್ತದೆ?. ರಕ್ಷಣೆ ಕೊಡಲಿ ಎಂಬ ಉದ್ದೇಶದಿಂದ ನಮ್ಮನ್ನು ಆಯ್ಕೆ ಮಾಡಿ ಕಳುಹಿಸಿದ್ದಾರೆ. ವಿಧಾನಸೌಧ ಉಗ್ರರ ತಾಣವಾಗಲು ಬಿಡಬೇಕಾ?" ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸ್ಪೀಕರ್ ಯು.ಟಿ.ಖಾದರ್ ಮಾತನಾಡಿ, "ಈ ವಿಚಾರದ ಬಗ್ಗೆ ನಿನ್ನೆ ಚರ್ಚೆಯಾಗಿದೆ. ಸರ್ಕಾರವು ಉತ್ತರ ಕೊಟ್ಟಿದೆ. ಘಟನೆ ಬಗ್ಗೆ ತನಿಖೆ ಕೈಗೊಂಡಿರುವುದಾಗಿ ಹೇಳಿದೆ. ಬಜೆಟ್ ಮೇಲಿನ ಚರ್ಚೆಗೆ ಮುಖ್ಯಮಂತ್ರಿಗಳು ಉತ್ತರ ಕೊಡುತ್ತಾರೆ. ಧರಣಿ ಕೈಬಿಟ್ಟು ಸುಗಮ ಕಲಾಪಕ್ಕೆ ಸಹಕಾರ ಕೊಡಬೇಕು" ಎಂದರು.

ಆಗ ಆರ್.ಅಶೋಕ್, "ಕೋಲಾರದಲ್ಲಿ ಈ ಹಿಂದೆ ದಲಿತರನ್ನು ಸುಟ್ಟು ಹಾಕಿದರು. ಆಗ ಗೃಹಸಚಿವರಾಗಿದ್ದ ಮಲ್ಲಿಕಾರ್ಜುನ ಖರ್ಗೆ ಅವರು ಸಭೆಯಲ್ಲಿ ಕಣ್ಣೀರು ಹಾಕಿದರು. ಅದು ಅವರ ಕಳಕಳಿ. ಆದರೆ ಈ ಸರ್ಕಾರಕ್ಕೆ ಯಾವುದೇ ಜವಾಬ್ದಾರಿ ಇಲ್ಲ. ನೈತಿಕ ಹೊಣೆ ಹೊತ್ತಿಲ್ಲ" ಎಂದು ಆರೋಪಿಸಿದರು.

ಏಳು ಜನರಿಂದ ಹೇಳಿಕೆ ದಾಖಲು-ಗೃಹ ಸಚಿವ ಪರಮೇಶ್ವರ್: ಈ ಸಂದರ್ಭದಲ್ಲಿ ಮಧ್ಯಪ್ರವೇಶಿಸಿದ ಗೃಹ ಸಚಿವ ಡಾ.ಜಿ.ಪರಮೇಶ್ವರ್, "ಪ್ರತಿಪಕ್ಷದ ನಾಯಕರು ಪ್ರಸ್ತಾಪಿಸಿದ ವಿಚಾರದ ಬಗ್ಗೆ ನಿನ್ನೆ ಉತ್ತರ ನೀಡಲಾಗಿದೆ. ಆ ಘಟನೆಗೆ ಸಂಬಂಧಿಸಿದಂತೆ ಏಳು ಜನರನ್ನು ಕರೆದು ವಿಚಾರ ಮಾಡಿ ಅವರ ಹೇಳಿಕೆ ಪಡೆಯಲಾಗಿದೆ. ತನಿಖೆ ಮುಂದುವರೆದಿದೆ. ಒಂದೊಂದು ಮಾಧ್ಯಮ ಒಂದೊಂದು ರೀತಿ ಹೇಳಿವೆ. ಅದರ ನೈಜತೆ ತಾಂತ್ರಿಕವಾಗಿ ತಿಳಿಯಲು ವಿಧಿವಿಜ್ಞಾನ ಪ್ರಯೋಗಾಲಯದ ವರದಿ ಕೇಳಲಾಗಿದೆ. ಈ ಘಟನೆಯನ್ನು ಸರ್ಕಾರ ಗಂಭೀರವಾಗಿ ತೆಗೆದುಕೊಂಡಿದೆ. ಒಂದು ವೇಳೆ ಆರೋಪಿಸಿದಂತೆ ಪಾಕಿಸ್ತಾನದ ಪರ ಘೋಷಣೆ ಕೂಗಿದ್ದರೆ ಅಂಥವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುತ್ತೇವೆ. ಯಾರನ್ನೂ ರಕ್ಷಣೆ ಮಾಡುವ ಪ್ರಶ್ನೆಯೇ ಇಲ್ಲ" ಎಂದು ಹೇಳಿದರು.

ಇದರಿಂದ ತೃಪ್ತರಾಗದ ಬಿಜೆಪಿ ಶಾಸಕರು ಧರಣಿ ಮುಂದುವರೆಸಿ ಘೋಷಣೆ ಕೂಗಿ ಗದ್ದಲ ಎಬ್ಬಿಸಿದರು. ಸಭಾಧ್ಯಕ್ಷರು ಮಾತನಾಡಿ, "ಬಡವರು ಹಸಿದ ಹೊಟ್ಟೆಯಲ್ಲೇ ಇರಬೇಕೇ. ಜನಸಾಮಾನ್ಯರ ವಿಚಾರಗಳು ಚರ್ಚೆಯಾಗಬೇಕಲ್ಲವೇ?" ಎಂದು ಹೇಳಿದರು. ಪ್ರತಿಪಕ್ಷಗಳ ಸದಸ್ಯರು ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.

ಈ ನಡುವೆ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, "ಪಾಕಿಸ್ತಾನ ಜಿಂದಾಬಾದ್ ಎಂದು ಕೂಗಿದ್ದರೆ ಕಠಿಣ ಕ್ರಮ ಕೈಗೊಳ್ಳುತ್ತೇವೆ. ಹಿಂದೆ ಸರಿಯುವುದಿಲ್ಲ" ಎಂದು ಹೇಳಿದರು. ಒಂದೆಡೆ ಮುಖ್ಯಮಂತ್ರಿ ಬಜೆಟ್ ಮೇಲಿನ ಚರ್ಚೆಗೆ ಉತ್ತರ ನೀಡುತ್ತಿದ್ದರೆ ಮತ್ತೊಂದೆಡೆ ಬಿಜೆಪಿ ಶಾಸಕರು ಧರಣಿ ನಡೆಸಿ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಕಾಗದಪತ್ರಗಳನ್ನು ಹರಿದು ಸಭಾಧ್ಯಕ್ಷರ ಪೀಠದತ್ತ ತೂರಿ ಗದ್ದಲವನ್ನುಂಟು ಮಾಡಿದರು. ಜೆಡಿಎಸ್ ಸದಸ್ಯರು ಕೂಡ ಧರಣಿಯಲ್ಲಿ ಭಾಗಿಯಾಗಿ ಬಿಜೆಪಿ ಶಾಸಕರ ಪ್ರತಿಭಟನೆಗೆ ಬೆಂಬಲ ನೀಡಿದರು.

ಸಿದ್ದರಾಮಯ್ಯ ವಿಚಲಿತರಾಗದೆ ಉತ್ತರಿಸುವುದನ್ನು ಮುಂದುವರೆಸಿದರು. ಇದರಿಂದ ತೀವ್ರ ಅಸಮಾಧಾನಗೊಂಡ ಬಿಜೆಪಿ ಶಾಸಕರು ಸಭಾತ್ಯಾಗ ಮಾಡಿದರು. ಜೆಡಿಎಸ್ ಸದಸ್ಯರು ಕೂಡ ಅವರ ಜೊತೆಗೆ ಸಾಗಿದರು.

ಇದಕ್ಕೂ ಮುನ್ನು ರಾಜ್ಯಸಭೆ ಚುನಾವಣಾ ಫಲಿತಾಂಶದ ನಂತರ ನಡೆದ ಸಂಭ್ರಮಾಚರಣೆ ವೇಳೆ ಪಾಕಿಸ್ತಾನದ ಪರ ಘೋಷಣೆ ಕೂಗಿದವರನ್ನು ಬಂಧಿಸಿಲ್ಲವೆಂದು ಆರೋಪಿಸಿ ಸರ್ಕಾರದ ಉತ್ತರಕ್ಕೆ ತೃಪ್ತರಾಗದೆ ಬಿಜೆಪಿ ಸದಸ್ಯರು, ಚಪ್ಪಾಳೆ ಬಡಿದು ಭಜನೆ ಮಾಡುವ ರೀತಿಯಲ್ಲಿ ಪ್ರತಿರೋಧ ವ್ಯಕ್ತಪಡಿಸಿದರು. ಬಿಜೆಪಿ ಶಾಸಕರಿಗೆ ಬೆಂಬಲ ನೀಡಿ ಧರಣಿಯಲ್ಲಿ ಪಾಲ್ಗೊಂಡಿದ್ದ ಜೆಡಿಎಸ್ ಶಾಸಕರು ಮಾತ್ರ ಮೌನವಾಗಿದ್ದರು.

ಭಜನೆ ರೀತಿ ಚಪ್ಪಾಳೆ ತಟ್ಟುತ್ತಿರುವುದನ್ನು ಗಮನಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ರಾಜಸಭೆ ಚುನಾವಣೆಯಲ್ಲಿ ಅಡ್ಡ ಮತ ಹಾಕಿದ್ದನ್ನು ಮರೆಮಾಚಲು ನಾಟಕವಾಡುತ್ತಿದ್ದಾರೆ. ಇಲ್ಲಿ ಭಜನೆ ಮಾಡುತ್ತಿದ್ದಾರೆ. ಇದು ಸರಿಯಲ್ಲ. ಇವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಸಭಾಧ್ಯಕ್ಷರಲ್ಲಿ ಮನವಿ ಮಾಡಿದರು. ಸ್ಪೀಕರ್ ಯು.ಟಿ.ಖಾದರ್ ಮಾತನಾಡಿ, ಶಾಸಕರು ಬಾವಿಯಲ್ಲಿಲ್ಲ. ನಿಮ್ಹಾನ್ಸ್ ಆಸ್ಪತ್ರೆಯಲ್ಲಿದ್ದಾರೆ ಅನಿಸುತ್ತಿದೆ ಎಂದರು.

ಇದನ್ನೂ ಓದಿ: ಪಾಕ್ ಪರ ಘೋಷಣೆ ವಿಷಯದ ಚರ್ಚೆಗೆ ಪ್ರತಿಪಕ್ಷಗಳ ಪಟ್ಟು; ಸದನದ ಬಾವಿಗಿಳಿದು ಧರಣಿ

Last Updated :Feb 29, 2024, 6:15 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.